18
ಕೊರಿಂಥದಲ್ಲಿ
ಇದಾದನಂತರ, ಪೌಲನು ಅಥೇನೆಯನ್ನು ಬಿಟ್ಟು ಕೊರಿಂಥ ಪಟ್ಟಣಕ್ಕೆ ಹೋದನು. ಅಲ್ಲಿ ಅಕ್ವಿಲ ಎಂಬ ಯೆಹೂದ್ಯನನ್ನು ಕಂಡನು. ಅವನು ಪೊಂತ ಎಂಬ ಊರಿನ ನಿವಾಸಿ. ಎಲ್ಲಾ ಯೆಹೂದ್ಯರು ರೋಮ್ ಪಟ್ಟಣ ಬಿಟ್ಟು ಹೊರಟುಹೋಗಬೇಕೆಂದು ಚಕ್ರವರ್ತಿ ಕ್ಲೌದ್ಯನು ಆಜ್ಞೆ ಹೊರಡಿಸಿದ್ದರಿಂದ, ಅವನು ತನ್ನ ಹೆಂಡತಿ ಪ್ರಿಸ್ಕಿಲ್ಲಳೊಂದಿಗೆ ಇತ್ತೀಚೆಗೆ ಇಟಲಿಯನ್ನು ಬಿಟ್ಟು ಬಂದಿದ್ದನು. ಪೌಲನು ಅವರನ್ನು ನೋಡಲು ಹೋದನು. ಅವರು ತನ್ನಂತೆಯೇ ಗುಡಾರಮಾಡುವ ಕೆಲಸದವರಾದ್ದರಿಂದ ಪೌಲನು ಅವರೊಂದಿಗಿದ್ದು ಅವರೊಂದಿಗೆ ಗುಡಾರ ಕೆಲಸ ಮಾಡುತ್ತಿದ್ದನು. ಪ್ರತಿ ಸಬ್ಬತ್ ದಿನ ಸಭಾಮಂದಿರಕ್ಕೆ ಹೋಗಿ ಯೆಹೂದ್ಯರನ್ನೂ ಗ್ರೀಕರನ್ನೂ ವಿಶ್ವಾಸಿಗಳನ್ನಾಗಿಸಲು ಪ್ರೇರೇಪಿಸುತ್ತಿದ್ದನು.
ಮಕೆದೋನ್ಯದಿಂದ ಸೀಲ ಮತ್ತು ತಿಮೊಥೆ ಬಂದ ತರುವಾಯ, ಪೌಲನು ವಾಕ್ಯವನ್ನು ಬೋಧಿಸುವುದರಲ್ಲಿಯೇ ಸಮರ್ಪಿಸಿಕೊಂಡವನಾಗಿ ಯೇಸುವೇ ಕ್ರಿಸ್ತ ಎಂದು ಯೆಹೂದ್ಯರಿಗೆ ಖಚಿತವಾಗಿ ಸಾಕ್ಷಿಕೊಟ್ಟನು. ಆದರೆ ಯೆಹೂದ್ಯರು ಪೌಲನನ್ನು ವಿರೋಧಿಸಿ ದೂಷಿಸಿದಾಗ, ಅವನು ಅವರನ್ನು ಪ್ರತಿಭಟಿಸುವಂತೆ ತನ್ನ ಬಟ್ಟೆಗಳನ್ನು ಝಾಡಿಸಿ, “ನಿಮ್ಮ ರಕ್ತವು ನಿಮ್ಮ ತಲೆಯ ಮೇಲೆ ಇರಲಿ. ನಿಮ್ಮ ವಿನಾಶಕ್ಕೆ ನೀವೇ ಹೊಣೆ. ಅದಕ್ಕೆ ನಾನು ಜವಾಬ್ದಾರನಲ್ಲ, ಇಂದಿನಿಂದ ನಾನು ಶುದ್ಧಮನಸ್ಸುಳ್ಳವನಾಗಿ ಯೆಹೂದ್ಯರಲ್ಲದವರ ಬಳಿಗೆ ಹೋಗುತ್ತೇನೆ,” ಎಂದನು.
ಆಮೇಲೆ ಪೌಲನು ಸಭಾಮಂದಿರವನ್ನು ಬಿಟ್ಟು ಹೊರಗೆ ಬಂದು ಪಕ್ಕದಲ್ಲಿಯೇ ಇದ್ದ ದೇವಭಕ್ತನಾದ ತೀತಯುಸ್ತ ಎಂಬುವನ ಮನೆಗೆ ಹೋದನು. ಸಭಾಮಂದಿರದ ನಾಯಕ ಕ್ರಿಸ್ಪ ಎಂಬುವನು ತನ್ನ ಮನೆಯವರೆಲ್ಲರೊಂದಿಗೆ ಕರ್ತ ಯೇಸುವಿನಲ್ಲಿ ವಿಶ್ವಾಸವನ್ನಿಟ್ಟನು. ಪೌಲನ ಬೋಧನೆ ಕೇಳಿದ ಕೊರಿಂಥದವರಲ್ಲಿ ಇನ್ನೂ ಅನೇಕರು ವಿಶ್ವಾಸವನ್ನಿಟ್ಟು ದೀಕ್ಷಾಸ್ನಾನ ಪಡೆದುಕೊಂಡರು.
ಒಂದು ರಾತ್ರಿ ಕರ್ತ ಯೇಸು ದರ್ಶನದಲ್ಲಿ ಪೌಲನೊಂದಿಗೆ ಮಾತನಾಡಿ: “ಭಯಪಡಬೇಡ, ಮಾತನಾಡುತ್ತಲೇ ಇರು, ಸುಮ್ಮನಿರಬೇಡ. 10 ನಾನೇ ನಿನ್ನೊಂದಿಗಿದ್ದೇನೆ. ಯಾರೂ ನಿನ್ನ ಮೇಲೆ ಬಿದ್ದು ನಿನಗೆ ಕೇಡನ್ನುಂಟುಮಾಡುವುದಿಲ್ಲ. ಏಕೆಂದರೆ ನನಗಾಗಿ ಈ ಪಟ್ಟಣದಲ್ಲಿ ಅನೇಕ ಜನರಿದ್ದಾರೆ,” ಎಂದರು. 11 ಆದ್ದರಿಂದ ಪೌಲನು ಅಲ್ಲಿ ಒಂದೂವರೆ ವರ್ಷವಿದ್ದು ಅವರಿಗೆ ದೇವರ ವಾಕ್ಯವನ್ನು ಬೋಧಿಸಿದನು.
12 ಗಲ್ಲಿಯೋನ ಎಂಬುವನು ಅಖಾಯದ ರಾಜ್ಯಪಾಲನಾಗಿದ್ದನು. ಯೆಹೂದ್ಯರು ಒಟ್ಟುಗೂಡಿ ಪೌಲನನ್ನು ವಿರೋಧಿಸಿ, ಅವನನ್ನು ನ್ಯಾಯಸ್ಥಾನಕ್ಕೆ ಕರೆದುಕೊಂಡು ಬಂದು, 13 “ಮೋಶೆಯ ನಿಯಮಕ್ಕೆ ವಿರುದ್ಧವಾದ ರೀತಿಯಲ್ಲಿ ದೇವರನ್ನು ಆರಾಧಿಸಬೇಕೆಂದು ಈ ಮನುಷ್ಯನು ಜನರನ್ನು ಪ್ರೇರೇಪಿಸುತ್ತಿದ್ದಾನೆ,” ಎಂದು ದೂರು ಹೇಳಿದರು.
14 ಪೌಲನು ಮಾತನಾಡಬೇಕೆಂದಿದ್ದಾಗ, ಗಲ್ಲಿಯೋನನು ಯೆಹೂದ್ಯರಿಗೆ, “ಯೆಹೂದ್ಯರೇ, ಅಪರಾಧ ಇಲ್ಲವೆ ದುಷ್ಕಾರ್ಯದ ಬಗ್ಗೆ ನಿಮಗೇನಾದರು ಹೇಳುವುದು ಇದ್ದರೆ, ಅದನ್ನು ಸಹನೆಯಿಂದ ಕೇಳುವುದು ನನಗೆ ಯೋಗ್ಯವಾದದ್ದು. 15 ಆದರೆ ವಾಕ್ಯ, ಹೆಸರುಗಳ ಮತ್ತು ನಿಮ್ಮ ನಿಯಮದ ವಿಷಯವಾಗಿರುವ ಪ್ರಶ್ನೆಗಳಾಗಿದ್ದರೆ, ಈ ಸಂಗತಿಯನ್ನು ನೀವೇ ಬಗೆಹರಿಸಿಕೊಳ್ಳಿ, ಅಂಥ ವಿಷಯಗಳಿಗೆ ನಾನು ನ್ಯಾಯಾಧೀಶನಾಗಿರಲಾರೆ,” ಎಂದನು. 16 ಹೀಗೆ ಅವನು ಅವರನ್ನು ನ್ಯಾಯಸ್ಥಾನದಿಂದ ಹೊರಗೆ ಕಳುಹಿಸಿಬಿಟ್ಟನು. 17 ಆದರೆ ಅವರು ಸಭಾಮಂದಿರದ ಅಧಿಕಾರಿ ಸೋಸ್ಥೆನನನ್ನು ಹಿಡಿದು ನ್ಯಾಯಸ್ಥಾನದ ಎದುರಿನಲ್ಲಿಯೇ ಹೊಡೆದರು. ಗಲ್ಲಿಯೋನನು ಅವುಗಳಲ್ಲಿ ಒಂದನ್ನೂ ಲಕ್ಷಿಸಲಿಲ್ಲ.
ಪ್ರಿಸ್ಕಿಲ್ಲ, ಅಕ್ವಿಲ ಮತ್ತು ಅಪೊಲ್ಲೋಸನು
18 ಇನ್ನು ಕೆಲವು ದಿನ ಪೌಲನು ಅಲ್ಲಿಯೇ ಉಳಿದುಕೊಂಡನು. ಅನಂತರ ಸಹೋದರರಿಂದ ಅಪ್ಪಣೆ ತೆಗೆದುಕೊಂಡು ಕೆಂಖ್ರೆಯ ಎಂಬ ಸ್ಥಳದಲ್ಲಿ ತಲೆ ಕೂದಲನ್ನು ಕ್ಷೌರಮಾಡಿಸಿಕೊಂಡು ತಾನು ಹೊತ್ತ ಹರಕೆ ಪೂರೈಸಿದ ಮೇಲೆ ಸಿರಿಯಕ್ಕೆ ನೌಕೆ ಪ್ರಯಾಣಮಾಡಿದನು. ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಅವನ ಜೊತೆಯಲ್ಲಿ ಹೊರಟರು. 19 ಎಫೆಸಕ್ಕೆ ತಲುಪಿದಾಗ, ಪೌಲನು ಅವರನ್ನು ಅಲ್ಲಿಯೇ ಬಿಟ್ಟು ಸಭಾಮಂದಿರಕ್ಕೆ ಹೋಗಿ ಯೆಹೂದ್ಯರೊಂದಿಗೆ ಚರ್ಚೆ ನಡೆಸಿದನು. 20 ಹೆಚ್ಚು ಸಮಯ ತಮ್ಮೊಂದಿಗಿರಬೇಕೆಂದು ಅವರು ಕೇಳಿದಾಗ, ಪೌಲನು ಅದಕ್ಕೆ ಸಮ್ಮತಿಸಲಿಲ್ಲ. 21 ಆದರೆ ಅವನು ಅಲ್ಲಿಂದ ಹೊರಟು ಹೋಗಲಿಕ್ಕಿದ್ದಾಗ, “ದೇವರ ಚಿತ್ತವಾದರೆ, ನಾನು ಹಿಂದಿರುಗಿ ಬರುವೆ,” ಎಂದನು. ಆಮೇಲೆ ಎಫೆಸದಿಂದ ನೌಕೆಯಲ್ಲಿ ಪ್ರಯಾಣಮಾಡಿದನು. 22 ಅನಂತರ ಅವನು ಕೈಸರೈಯವನ್ನು ಸೇರಿದಾಗ, ಅಲ್ಲಿದ್ದ ಸಭೆಯನ್ನು ವಂದಿಸಿ ಅಂತಿಯೋಕ್ಯಕ್ಕೆ ಹೊರಟುಹೋದನು.
23 ಅಲ್ಲಿ ಸ್ವಲ್ಪ ಸಮಯ ಕಳೆದನಂತರ ಅವನು ಅಲ್ಲಿಂದ ಹೊರಟು ಕ್ರಮವಾಗಿ ಗಲಾತ್ಯ ಮತ್ತು ಫ್ರುಗ್ಯ ಪ್ರದೇಶದಲ್ಲೆಲ್ಲಾ ಸಂಚರಿಸುತ್ತಾ ಶಿಷ್ಯರಲ್ಲಿ ವಿಶ್ವಾಸವನ್ನು ಬಲಪಡಿಸಿದನು.
24 ಅಲೆಕ್ಸಾಂದ್ರಿಯ ನಿವಾಸಿ ಅಪೊಲ್ಲೋಸ ಎಂಬ ಹೆಸರಿನ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದಿದ್ದನು. ಅವನು ವಾಕ್ಚಾತುರ್ಯವುಳ್ಳವನೂ ಪವಿತ್ರ ವೇದದಲ್ಲಿ ಪ್ರವೀಣನೂ ಆಗಿದ್ದನು. 25 ಇವನು ಕರ್ತ ಯೇಸುವಿನ ಮಾರ್ಗದ ಬಗ್ಗೆ ಉಪದೇಶ ಹೊಂದಿದ್ದನು. ಯೋಹಾನನ ದೀಕ್ಷಾಸ್ನಾನವನ್ನು ಮಾತ್ರವೇ ತಿಳಿದವನಾಗಿದ್ದನು. ಇವನು ಆತ್ಮದಲ್ಲಿ ಉತ್ಸಾಹಭರಿತನಾಗಿ ಯೇಸುವಿನ ವಿಷಯದಲ್ಲಿ ಧೈರ್ಯವಾಗಿ ಬೋಧಿಸುತ್ತಿದ್ದನು. 26 ಇವನು ಸಭಾಮಂದಿರದಲ್ಲಿ ಧೈರ್ಯದಿಂದ ಬೋಧಿಸಲು ಪ್ರಾರಂಭಿಸಿದನು. ಆಗ ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಅವನು ಮಾತನಾಡುವುದನ್ನು ಕೇಳಿ, ಅವನನ್ನು ತಮ್ಮ ಮನೆಗೆ ಆಮಂತ್ರಿಸಿದರು. ಅವರು ದೇವರ ಮಾರ್ಗವನ್ನು ಇನ್ನೂ ಹೆಚ್ಚಾದ ರೀತಿಯಲ್ಲಿ ಅಪೊಲ್ಲೋಸನಿಗೆ ವಿವರಿಸಿ ಹೇಳಿದರು.
27 ಅಪೊಲ್ಲೋಸನು ಅಖಾಯಕ್ಕೆ ಹೋಗಲು ಬಯಸಿದಾಗ, ಸಹೋದರರು ಅವನನ್ನು ಪ್ರೋತ್ಸಾಹಿಸಿ, ಅವನನ್ನು ಸ್ವೀಕರಿಸುವಂತೆ ಅಲ್ಲಿಯ ಶಿಷ್ಯರಿಗೆ ಪತ್ರವನ್ನು ಬರೆದುಕೊಟ್ಟರು. ಅವನು ಅಲ್ಲಿಗೆ ತಲುಪಿದಾಗ ದೇವರ ಕೃಪೆಯಿಂದ ವಿಶ್ವಾಸವಿಟ್ಟವರಿಗೆ ಅವನು ಬಹಳ ಸಹಾಯಮಾಡಿದನು. 28 ಯೇಸುವೇ ಬರತಕ್ಕ ಕ್ರಿಸ್ತ ಆಗಿದ್ದಾರೆ ಎಂದು ಪವಿತ್ರ ವೇದಗಳಿಂದ ಸಿದ್ಧಾಂತಪಡಿಸಿ ತೋರಿಸುತ್ತಾ ಅಲ್ಲಿಯ ಯೆಹೂದ್ಯರೊಂದಿಗೆ ಬಹಿರಂಗವಾಗಿ ಚರ್ಚೆ ಮಾಡಿದನು.