8
ವಿಗ್ರಹಗಳಿಗೆ ಸಮರ್ಪಿಸಿದ ನೈವೇದ್ಯ
ಈಗ ವಿಗ್ರಹಕ್ಕೆ ನೈವೇದ್ಯ ಮಾಡಿದ ಆಹಾರ ಪದಾರ್ಥಗಳ ವಿಷಯ: “ನಮ್ಮೆಲ್ಲರಿಗೂ ತಿಳುವಳಿಕೆಯಿದೆ,” ಎಂದು ಬಲ್ಲೆವು. ತಿಳುವಳಿಕೆಯು ಅಹಂಕಾರಿಗಳನ್ನಾಗಿ ಮಾಡುತ್ತದೆ. ಆದರೆ ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ. ಯಾರಾದರೂ ತಾನು ಏನನ್ನಾದರೂ ತಿಳಿದಿರುವುದಾಗಿ ಭಾವಿಸಿದರೆ, ಅಂಥವನು ತಿಳಿಯಬೇಕಾದ ರೀತಿಯಲ್ಲಿ ಇನ್ನೂ ತಿಳಿದುಕೊಂಡಿರುವುದಿಲ್ಲ. ಆದರೆ ದೇವರನ್ನು ಪ್ರೀತಿಸುವವರನ್ನು ದೇವರು ತಿಳಿದುಕೊಂಡಿರುತ್ತಾರೆ.
ಹಾಗಾದರೆ, ವಿಗ್ರಹಗಳಿಗೆ ನೈವೇದ್ಯ ಮಾಡಿದ ಆಹಾರ ಪದಾರ್ಥಗಳನ್ನು ತಿನ್ನುವುದರ ವಿಷಯ: “ಲೋಕದಲ್ಲಿ ವಿಗ್ರಹವು ಏನೂ ಅಲ್ಲ. ಒಬ್ಬ ದೇವರೇ ಹೊರತು ಬೇರೆ ದೇವರಿಲ್ಲ,” ಎಂದು ನಮಗೆ ಗೊತ್ತಿದೆ. ಆಕಾಶದಲ್ಲಾಗಲಿ, ಭೂಮಿಯ ಮೇಲೆ ಆಗಲಿ, ದೇವರುಗಳು ಎಂದು ಎನ್ನಿಸಿಕೊಳ್ಳುವವರು ಉಂಟು. ಅನೇಕರಿಗೆ ಅಂಥ “ದೇವರುಗಳು” ಹಾಗೂ “ಸ್ವಾಮಿಗಳು” ಇದ್ದಾರೆ. ನಮಗಾದರೋ ತಂದೆ ದೇವರು ಒಬ್ಬರೇ ಇರುತ್ತಾರೆ. ಅವರಿಂದಲೇ ಸಮಸ್ತವೂ ಉಂಟಾಯಿತು. ಅವರಿಗಾಗಿಯೇ ನಾವು ಜೀವಿಸುತ್ತೇವೆ. ನಮಗಿರುವ ಕರ್ತದೇವರು ಒಬ್ಬರೇ. ಅವರೇ ಕ್ರಿಸ್ತ ಯೇಸು. ಅವರಿಂದಲೇ ಸಮಸ್ತವೂ ಉಂಟಾಯಿತು. ಅವರ ಮುಖಾಂತರವೇ ನಾವು ಜೀವಿಸುತ್ತೇವೆ.
ಆದರೆ ಈ ತಿಳುವಳಿಕೆಯು ಎಲ್ಲರಲ್ಲಿಯೂ ಇಲ್ಲ. ಕೆಲವರು ಇದುವರೆಗೂ ವಿಗ್ರಹಕ್ಕೆ ಅರ್ಪಿತವಾದದ್ದನ್ನು ತಿನ್ನುವ ರೂಢಿಯಲ್ಲಿದ್ದು, ಅವರು ವಿಗ್ರಹಕ್ಕೆ ನೈವೇದ್ಯ ಮಾಡಿ ತಿನ್ನುವುದಾಗಿ ಭಾವಿಸಿಕೊಳ್ಳುತ್ತಾರೆ. ಹೀಗೆ ಅವರ ಮನಸ್ಸಾಕ್ಷಿ ಬಲಹೀನವಾಗಿರುವುದರಿಂದ, ಅದು ಅಶುದ್ಧವಾಗಿರುತ್ತದೆ. ಆದರೆ ಆಹಾರವು ನಮ್ಮನ್ನು ದೇವರ ಸಮೀಪಕ್ಕೆ ಸೇರಿಸಲಾರದು. ಅದನ್ನು ತಿನ್ನದಿದ್ದರೆ ನಮಗೆ ನಷ್ಟವಿಲ್ಲ, ತಿಂದರೆ ನಮಗೆ ಲಾಭವಿಲ್ಲ.
ಆದರೆ ಈ ನಿಮ್ಮ ಸ್ವಾತಂತ್ರ್ಯವು ಬಲಹೀನರಿಗೆ ವಿಘ್ನವಾಗದಂತೆ ಜಾಗರೂಕರಾಗಿರಿ. 10 ಎಲ್ಲಾ ತಿಳುವಳಿಕೆಯಿರುವ ನೀನು ವಿಗ್ರಹದ ಗುಡಿಯಲ್ಲಿ ತಿನ್ನುವುದನ್ನು ನೋಡಿದರೆ ಬಲಹೀನ ಮನಸ್ಸಾಕ್ಷಿಯುಳ್ಳ ಸಹೋದರನು, ತಾನೂ ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನು ತಿನ್ನುವುದಕ್ಕೆ ಧೈರ್ಯಗೊಳ್ಳುವನಲ್ಲವೇ? 11 ಆ ಬಲಹೀನನು ನಿನ್ನ ತಿಳುವಳಿಕೆಯಿಂದ ನಾಶವಾಗುತ್ತಾನೆ. ಆ ಸಹೋದರನಿಗಾಗಿಯೂ ಕ್ರಿಸ್ತ ಯೇಸುವು ತಮ್ಮ ಪ್ರಾಣವನ್ನು ಕೊಟ್ಟರಲ್ಲವೇ? 12 ಹೀಗೆ ನಿನ್ನ ಸಹೋದರರ ವಿರುದ್ಧ ಪಾಪಮಾಡಿ, ಬಲಹೀನವಾದ ಅವರ ಮನಸ್ಸನ್ನು ನೋಯಿಸಿ, ಕ್ರಿಸ್ತ ಯೇಸುವಿಗೆ ವಿರುದ್ಧವಾಗಿ ಪಾಪಮಾಡುವವನಾಗಿರುತ್ತಿ. 13 ಆದ್ದರಿಂದ ನಾನು ತಿನ್ನುವಂಥದ್ದು ನನ್ನ ಸಹೋದರನನ್ನು ಪಾಪದಲ್ಲಿ ಬೀಳುವಂತೆ ಮಾಡುವುದಾದರೆ, ಎಂದಿಗೂ ನಾನು ಮಾಂಸವನ್ನು ತಿನ್ನುವುದೇ ಇಲ್ಲ. ಅವನ ಬೀಳುವಿಕೆಗೆ ಕಾರಣವಾಗುವುದೂ ಇಲ್ಲ.