5
ಗೋಡೆಯ ಮೇಲಿನ ಬರಹ
ಅರಸನಾದ ಬೇಲ್ಯಚ್ಚರನು ತನ್ನ ಪ್ರಧಾನರಲ್ಲಿ ಸಾವಿರ ಮಂದಿಗೆ ದೊಡ್ಡ ಔತಣವನ್ನು ಮಾಡಿಸಿ, ಅವರೊಂದಿಗೆ ಅವನು ದ್ರಾಕ್ಷಾರಸವನ್ನು ಕುಡಿದನು. ಬೇಲ್ಯಚ್ಚರನು ತನ್ನ ದ್ರಾಕ್ಷಾರಸವನ್ನು ಕುಡಿಯುತ್ತಿರುವಾಗ, ತನ್ನ ತಂದೆ ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯದೊಳಗಿಂದ ತಂದ ಬೆಳ್ಳಿ ಬಂಗಾರಗಳ ಪಾತ್ರೆಗಳನ್ನು ತಂದು, ಅದರಲ್ಲಿ ಅರಸನು ಮತ್ತು ಪ್ರಧಾನರು, ಅವನ ಪತ್ನಿ ಮತ್ತು ಉಪಪತ್ನಿಯರು ಅವುಗಳಲ್ಲಿ ಕುಡಿಯುವಂತೆ ಆಜ್ಞಾಪಿಸಿದನು. ಆಗ ಅವರು ಯೆರೂಸಲೇಮಿನ ದೇವರ ಆಲಯದೊಳಗಿಂದ ತಂದಿದ್ದ ಬಂಗಾರದ ಪಾತ್ರೆಗಳನ್ನು ತಂದರು. ಅರಸನೂ ಅವರ ಪ್ರಧಾನರೂ ಪತ್ನಿ ಮತ್ತು ಉಪಪತ್ನಿಯರೂ ಅವುಗಳಲ್ಲಿ ಕುಡಿದರು. ಅವರು ದ್ರಾಕ್ಷಾರಸವನ್ನು ಕುಡಿದು ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಸ್ತುತಿಸಿದರು.
ಕೂಡಲೇ ಒಬ್ಬ ಮನುಷ್ಯನ ಕೈಬೆರಳುಗಳು ಬಂದು ದೀಪಸ್ತಂಭಕ್ಕೆ ಎದುರಾಗಿ ಅರಮನೆಯ ಗೋಡೆಯ ಮೇಲೆ ಬರೆಯಲಾರಂಭಿಸಿದವು. ಅರಸನು ಆ ಬರೆಯುವ ಕೈಭಾಗವನ್ನು ನೋಡಿದನು. ಆಗ ಅರಸನ ಮುಖವು ಕಳೆಗುಂದಿತು. ಅವನು ತುಂಬಾ ಭಯಭೀತನಾದನು. ಅವನ ಸೊಂಟದ ಕೀಲುಗಳು ಸಡಿಲಗೊಂಡವು. ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು.
ಅರಸನು ಗಟ್ಟಿಯಾಗಿ ಕಿರುಚಿ ಜ್ಯೋತಿಷ್ಯರನ್ನೂ, ಪಂಡಿತರನ್ನೂ, ಶಕುನ ಹೇಳುವವರನ್ನೂ ಕರೆಸಿ, ಬಾಬಿಲೋನಿನ ಜ್ಞಾನಿಗಳಿಗೆ, “ಯಾರು ಈ ಬರಹವನ್ನು ಓದಿ, ಅದರ ಅರ್ಥವನ್ನು ನನಗೆ ತಿಳಿಸುವರೋ, ಅವರಿಗೆ ಧೂಮ್ರವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿ, ರಾಜ್ಯದ ಮೂರನೆಯ ಅಧಿಕಾರಿಯಾಗಿ ಮಾಡುವೆನು,” ಎಂದು ಹೇಳಿದನು.
ಆಗ ಅರಸನ ಎಲ್ಲಾ ಜ್ಞಾನಿಗಳು ಒಳಗೆ ಬಂದರು. ಆದರೆ ಆ ಬರಹವನ್ನು ಓದಲೂ, ಅದರ ಅರ್ಥವನ್ನು ಅರಸನಿಗೆ ತಿಳಿಸಲೂ ಅವರಿಗೆ ಆಗದೆ ಹೋಯಿತು. ಆಗ ಅರಸನಾದ ಬೇಲ್ಯಚ್ಚರನು ಬಹಳವಾಗಿ ಕಳವಳಪಟ್ಟನು. ಅವನ ಮುಖವು ಕಳೆಗುಂದಿತು. ಅವನ ಪ್ರಧಾನರು ಭಯಗೊಂಡರು.
10 ಆಗ ಅರಸನ ಮತ್ತು ಅವನ ಪ್ರಧಾನರ ಮಾತುಗಳನ್ನು ಕೇಳಿ ರಾಣಿಯು ಔತಣದ ಮನೆಗೆ ಬಂದಳು. ಆಗ ಮಾತನಾಡಿ, “ಅರಸನೇ, ನಿರಂತರವಾಗಿ ಬಾಳು! ನಿನ್ನ ಆಲೋಚನೆಗಳು ನಿನ್ನನ್ನು ಕಳವಳಪಡಿಸದಿರಲಿ. ನಿನ್ನ ಮುಖವು ಕಳೆಗುಂದದಿರಲಿ! 11 ನಿನ್ನ ರಾಜ್ಯದಲ್ಲಿ ಪರಿಶುದ್ಧ ದೇವರುಗಳ ಆತ್ಮವುಳ್ಳ ಒಬ್ಬ ಮನುಷ್ಯನಿದ್ದಾನೆ. ದೇವರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ, ವಿವೇಕವೂ, ಬುದ್ಧಿಯೂ, ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆ ನೆಬೂಕದ್ನೆಚ್ಚರ ಅರಸನು ಅವನನ್ನು ಮಂತ್ರಗಾರರಿಗೂ, ಜ್ಯೋತಿಷ್ಯರಿಗೂ, ಪಂಡಿತರಿಗೂ, ಶಕುನಗಾರರಿಗೂ ಅಧಿಕಾರಿಯನ್ನಾಗಿ ನೇಮಿಸಿದನು. 12 ಏಕೆಂದರೆ ಬೇಲ್ತೆಶಚ್ಚರನೆಂಬ ಹೆಸರನ್ನು ಅರಸನಿಂದ ಪಡೆದ ಆ ದಾನಿಯೇಲನಲ್ಲಿ ಕನಸುಗಳ ಅರ್ಥವನ್ನು ಹೇಳುವುದಕ್ಕೂ, ಕಠಿಣವಾದ ಸಂಗತಿಗಳನ್ನು ತಿಳಿಸುವುದಕ್ಕೂ, ಒಗಟುಗಳನ್ನು ವಿವರಿಸುವುದಕ್ಕೂ ಕಷ್ಟಕರವಾದ ಸಮಸ್ಯೆಗಳನ್ನು ಪರಿಹರಿಸುವುದಕ್ಕೂ ಉತ್ತಮ ಆತ್ಮವೂ, ಜ್ಞಾನವೂ, ವಿವೇಕವೂ ಸಿಕ್ಕಿದವು. ಈಗ ಆ ದಾನಿಯೇಲನನ್ನು ಕರೆಯಿಸಿದರೆ, ಅವನು ಈ ಬರಹದ ಅರ್ಥವನ್ನು ವಿವರಿಸುವನು,” ಎಂದಳು.
13 ಆಗ ದಾನಿಯೇಲನನ್ನು ಅರಸನ ಮುಂದೆ ತಂದರು. ಅರಸನು ದಾನಿಯೇಲನಿಗೆ, “ಅರಸನಾದ ನನ್ನ ತಂದೆಯು ಯೆಹೂದದಿಂದ ತಂದ ಯೆಹೂದದ ಸೆರೆಯವರಲ್ಲಿ ಒಬ್ಬನಾದ ದಾನಿಯೇಲನು ನೀನೋ? 14 ನಿನ್ನಲ್ಲಿ ದೇವರುಗಳ ಆತ್ಮ ಉಂಟೆಂದೂ, ಒಳನೋಟ, ಬುದ್ಧಿಯೂ, ಉತ್ತಮ ಜ್ಞಾನವೂ ನಿನ್ನಲ್ಲಿ ಇವೆ ಎಂದೂ ನಿನ್ನ ವಿಷಯವಾಗಿ ಕೇಳಿದ್ದೇನೆ. 15 ಈಗ ಈ ಬರಹವನ್ನು ಓದುವುದಕ್ಕೂ, ಅದರ ಅರ್ಥವನ್ನು ತಿಳಿಸುವುದಕ್ಕೂ ಜ್ಯೋತಿಷ್ಯರಾದ ಜ್ಞಾನಿಗಳು ನನ್ನ ಮುಂದೆ ಬಂದಿದ್ದಾರೆ. ಆದರೆ ಇದರ ಅರ್ಥವನ್ನು ಹೇಳಲಾರದೆ ಹೋದರು. 16 ಈಗ ನೀನು ಅರ್ಥಗಳನ್ನು ವಿವರಿಸಿ, ಕಷ್ಟಕರವಾದ ಸಮಸ್ಯೆಗಳನ್ನು ಬಗೆಹರಿಸಲು ಸಮರ್ಥನೆಂದು ನಾನು ನಿನ್ನ ವಿಷಯವಾಗಿ ಕೇಳಿದ್ದೇನೆ. ಹೀಗಾದರೆ ಈ ಬರಹವನ್ನು ಓದುವುದಕ್ಕೂ, ಅದರ ಅರ್ಥವನ್ನು ತಿಳಿಸುವುದಕ್ಕೂ ನಿನ್ನಿಂದ ಸಾಧ್ಯವಾದರೆ, ನಿನಗೆ ಧೂಮ್ರವಸ್ತ್ರವನ್ನು ಹೊದಿಸಿ, ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ರಾಜ್ಯದ ಮೂರನೆಯ ಅಧಿಕಾರಿಯನ್ನಾಗಿ ನೇಮಿಸುವೆನು,” ಎಂದು ಹೇಳಿದನು.
17 ಆಗ ದಾನಿಯೇಲನು ಅರಸನ ಮುಂದೆ, “ನಿನ್ನ ದಾನಗಳು ನಿನಗಿರಲಿ, ನಿನ್ನ ಬಹುಮಾನಗಳು ಮತ್ತೊಬ್ಬರಿಗೆ ದೊರಕಲಿ. ಆದರೂ ನಾನು ಅರಸನಿಗಾಗಿ ಬರಹವನ್ನು ಓದಿ, ಅದರ ಅರ್ಥವನ್ನು ಅರಸನಿಗೆ ತಿಳಿಸುವೆನು,” ಎಂದನು.
18 “ಅರಸನೇ, ಮಹೋನ್ನತರಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ಸಾರ್ವಭೌಮತ್ವವನ್ನೂ, ಮಹತ್ತನ್ನೂ, ಕೀರ್ತಿಯನ್ನೂ, ಘನವನ್ನೂ ಕೊಟ್ಟರು. 19 ಅವರು ಅವನಿಗೆ ಕೊಟ್ಟ ಮಹತ್ತಿನ ನಿಮಿತ್ತ ಸಕಲ ಪ್ರಜೆಗಳೂ, ಜನಾಂಗಗಳೂ, ಭಾಷೆಯವರೂ ಅವನ ಮುಂದೆ ಹೆದರಿ ನಡುಗಿದರು. ತನಗೆ ಬೇಕಾದವರನ್ನು ಬದುಕಿಸಿ ಬೇಡವಾದವರನ್ನು ಕೊಂದನು. ಇಷ್ಟವಿದ್ದವರನ್ನು ಸುಸ್ಥಿತಿಗೆ ಏರಿಸಿ, ಇಷ್ಟವಿಲ್ಲದವರನ್ನು ಕೆಳಕ್ಕಿಳಿಸಿದನು. 20 ಆದರೆ ಅವನ ಹೃದಯವು ಹೆಮ್ಮೆಯಿಂದ ಉಬ್ಬಿಕೊಂಡಾಗ ಮತ್ತು ಅವನ ಹೃದಯವು ಗಟ್ಟಿಯಾದಾಗ, ಅವನನ್ನು ಸಿಂಹಾಸನದಿಂದ ತೆಗೆದುಹಾಕಲಾಯಿತು ಮತ್ತು ಅವನ ಪ್ರತಿಷ್ಠೆಯನ್ನು ಕಿತ್ತುಕೊಳ್ಳಲಾಯಿತು. 21 ಅವನು ಮಾನವ ಸಮಾಜದಿಂದ ಬಹಿಷ್ಕೃತನಾದನು. ಮಹೋನ್ನತರಾದ ದೇವರು ಮನುಷ್ಯರ ರಾಜ್ಯವನ್ನು ಆಳುತ್ತಾರೆಂದೂ, ಅವರು ತಮಗೆ ಬೇಕಾದವರನ್ನು ಅದಕ್ಕೆ ನೇಮಿಸುತ್ತಾರೆಂದೂ ತಿಳಿಯುವ ತನಕ ಅವನು ಮೃಗಬುದ್ಧಿಯುಳ್ಳವನಾಗಿದ್ದನು. ಅವನ ನಿವಾಸವು ಕಾಡುಕತ್ತೆಗಳ ಸಂಗಡ ಇತ್ತು. ಅವನು ದನಗಳಂತೆ ಹುಲ್ಲನ್ನು ಮೇಯುತ್ತಿದ್ದನು. ಅವನ ಶರೀರ ಆಕಾಶದ ಮಂಜಿನಿಂದ ತೇವವಾಯಿತು.
22 “ಅವನ ಮಗ ಬೇಲ್ಯಚ್ಚರನೇ, ನೀನು ಇದನ್ನೆಲ್ಲಾ ತಿಳಿದುಕೊಂಡಿದ್ದರೂ ತಗ್ಗಿಸಿಕೊಳ್ಳದೆ 23 ಪರಲೋಕದ ಒಡೆಯನಿಗೆ ವಿರೋಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ. ಅವರ ಆಲಯದ ಪಾತ್ರೆಗಳನ್ನು ನಿನ್ನ ಸನ್ನಿಧಿಗೆ ತಂದರು. ಆಗ ನೀನು ನಿನ್ನ ಪ್ರಧಾನರು ಮತ್ತು ಪತ್ನಿಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು, ಬುದ್ಧಿ, ಕಣ್ಣು ಕಿವಿಗಳಿಲ್ಲದ ಬೆಳ್ಳಿಬಂಗಾರ ಕಂಚು ಕಬ್ಬಿಣ ಮರ ಕಲ್ಲುಗಳ ದೇವರುಗಳನ್ನು ಸ್ತುತಿಸಿದಿರಿ. ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗತಿಗಳು ಯಾರ ಅಧೀನದಲ್ಲಿವೆಯೋ, ಆ ದೇವರನ್ನು ಘನಪಡಿಸಲೇ ಇಲ್ಲ. 24 ಅದಕ್ಕಾಗಿಯೇ ಆತನು ಕಳುಹಿಸಿದ ಕೈಯ ಭಾಗವು ಬಂದು ಆ ಬರಹವನ್ನು ಬರೆದಿದೆ.
25 “ಆ ಬರಹವು ಏನೆಂದರೆ:
ಮೆನೇ ಮೆನೇ, ತೆಕೇಲ್, ಉಫರ್ಸಿನ್.
26 “ಇದರ ಅರ್ಥವು ಹೀಗಿದೆ:
ಮೆನೇ ಎಂದರೆ ದೇವರು ನಿನ್ನ ಆಳ್ವಿಕೆಯ ಕಾಲಾವಧಿಯನ್ನು ಲೆಕ್ಕಿಸಿ ಕೊನೆಗಾಣಿಸಿದ್ದಾರೆ.
27 ತೆಕೇಲ್ ಎಂದರೆ ನಿನ್ನನ್ನು ತಕ್ಕಡಿಯಲ್ಲಿ ಹಾಕಿ ನೋಡಲು ನೀನು ಕೊರತೆಯುಳ್ಳವನಾಗಿ ಕಂಡುಬಂದಿರುವೆ.
28 “ಫರ್ಸಿನ್ ಎಂದರೆ ನಿನ್ನ ರಾಜ್ಯವು ವಿಭಿನ್ನವಾಗಿ ಮೇದ್ಯರಿಗೂ, ಪಾರಸಿಯರಿಗೂ ಕೊಡಲಾಗಿದೆ,” ಎಂಬದಾಗಿ ಅರಿಕೆಮಾಡಿದನು.
29 ಆಗ ಬೇಲ್ಯಚ್ಚರನು ಆಜ್ಞಾಪಿಸಲು ದಾನಿಯೇಲನಿಗೆ ಧೂಮ್ರವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿ, ಇವನು ರಾಜ್ಯದ ಮೂರನೇ ಉನ್ನತ ಅಧಿಕಾರಿಗಳಲ್ಲಿ ಒಬ್ಬನೆಂದು ಸಾರಿದನು.
30 ಅದೇ ರಾತ್ರಿಯಲ್ಲಿ ಕಸ್ದೀಯರ ಅರಸನಾದ ಬೇಲ್ಯಚ್ಚರನು ಹತನಾದನು. 31 ಮೇದ್ಯನಾದ ದಾರ್ಯಾವೆಷನು ತನ್ನ ಅರವತ್ತೆರಡು ವಯಸ್ಸಿನಲ್ಲಿ ರಾಜ್ಯವನ್ನು ವಶಪಡಿಸಿಕೊಂಡನು.