8
ಟಗರಿನ ಮತ್ತು ಹೋತದ ವಿಷಯವಾದ ದರ್ಶನ
ಮೊದಲು ನನಗೆ ಕಾಣಿಸಿದ ದರ್ಶನವಲ್ಲದೆ ಅರಸನಾದ ಬೇಲ್ಯಚ್ಚರನ ಆಳ್ವಿಕೆಯ ಮೂರನೆಯ ವರ್ಷದಲ್ಲಿಯೂ, ಮೊದಲಿನ ದರ್ಶನದಂಥ ಇನ್ನೊಂದು ದರ್ಶನವೂ ದಾನಿಯೇಲನಾದ ನನಗೆ ಕಾಣಿಸಿತು. ಈ ದರ್ಶನದಲ್ಲಿ ನಾನು ನೋಡಿದ್ದೇನೆಂದರೆ: ನಾನು ಏಲಾಮ್ ಸೀಮೆಯಲ್ಲಿರುವ ಶೂಷನಿನ ಅರಮನೆಯಲ್ಲಿದ್ದೆನು. ಆ ದರ್ಶನದಲ್ಲಿ ನಾನು ಊಲಾ ನದಿಯ ದಡದ ಬಳಿಯಲ್ಲಿ ನಿಂತಿರುವ ಹಾಗೆ ತೋರಿತು. ಆಗ ನಾನು ಕಣ್ಣೆತ್ತಿ ನೋಡಿದಾಗ, ಆ ನದಿಯ ಮುಂದೆ ಎರಡು ಕೊಂಬುಗಳುಳ್ಳ ಒಂದು ಟಗರು ನಿಂತಿತ್ತು. ಅದರ ಎರಡು ಕೊಂಬುಗಳು ಉದ್ದವಾಗಿದ್ದರೂ, ಇನ್ನೊಂದಕ್ಕಿಂತ ಒಂದು ಉದ್ದವಾಗಿದ್ದವು. ಆ ದೊಡ್ಡ ಕೊಂಬು ಚಿಕ್ಕ ಕೊಂಬು ಮೊಳೆತ ಮೇಲೆ ಮೊಳೆತದ್ದು. ಆ ಟಗರು ಪಶ್ಚಿಮಕ್ಕೂ, ಉತ್ತರಕ್ಕೂ, ದಕ್ಷಿಣಕ್ಕೂ ಕಾದಾಡುತ್ತಿರುವುದನ್ನು ನಾನು ನೋಡಿದೆನು. ಮೃಗಗಳಲ್ಲಿ ಯಾವುದೂ ಅದರೆದುರಿಗೆ ನಿಲ್ಲಲಾರದೇ ಹೋಯಿತು. ಅದರ ಕೈಯಿಂದ ತಪ್ಪಿಸಿಕೊಳ್ಳಲು ಯಾವುದಕ್ಕೂ ಸಾಧ್ಯವಾಗುವಂತಿರಲಿಲ್ಲ. ಆದರೆ ಅದು ತನ್ನ ಮನಸ್ಸಿಗೆ ಬಂದಂತೆ ಮಾಡಿ, ತನ್ನನ್ನು ಹೆಚ್ಚಿಸಿಕೊಂಡಿತು.
ನಾನು ಇದರ ಬಗ್ಗೆ ಆಲೋಚಿಸಲಾಗಿ ಕೂಡಲೆ, ಪಶ್ಚಿಮದಿಂದ ಒಂದು ಹೋತವು ನೆಲವನ್ನು ಸೋಕದೆ ಭೂಮಂಡಲವನ್ನೆಲ್ಲಾ ದಾಟಿಕೊಂಡು ಬಂದಿತು. ಆ ಹೋತಕ್ಕೆ ಕಣ್ಣುಗಳ ಮಧ್ಯೆ ವಿಶೇಷವಾದ ಕೊಂಬು ಇತ್ತು. ನಾನು ನದಿಯ ಹತ್ತಿರ ಕಂಡ ಆ ಎರಡು ಕೊಂಬಿನ ಟಗರಿನ ಬಳಿಗೆ ಬಂದು ಪರಾಕ್ರಮದಿಂದ ರೋಷಗೊಂಡು ಅದರ ಮೇಲೆ ಬೀಳಬೇಕೆಂದು ಓಡಿತು. ಅದು ಟಗರಿನ ಹತ್ತಿರ ಬರುವುದನ್ನು ನಾನು ನೋಡಿದೆನು. ಅದರ ಮೇಲಿನ ಕ್ರೋಧದಿಂದ ಅದನ್ನು ಹಾದು, ಅದರ ಎರಡು ಕೊಂಬುಗಳನ್ನು ಮುರಿದು ಬಿಟ್ಟಿತು. ಅದರ ಮುಂದೆ ನಿಲ್ಲುವುದಕ್ಕೆ ಟಗರಿಗೆ ಏನೂ ಶಕ್ತಿಯಿರಲಿಲ್ಲ. ಆದರೆ ಹೋತವು ಟಗರನ್ನು ನೆಲಕ್ಕೆ ಉರುಳಿಸಿ ತುಳಿಯಿತು. ಟಗರನ್ನು ಹೋತದ ಹಿಡಿತದಿಂದ ಬಿಡಿಸುವವರು ಯಾರೂ ಇರಲಿಲ್ಲ. ಆದ್ದರಿಂದ ಆ ಹೋತವು ಬಹಳವಾಗಿ ಬಲಗೊಂಡಿತು. ಆದರೆ ಅದು ಪ್ರಾಬಲ್ಯಕ್ಕೆ ಬಂದ ಮೇಲೆ ಅದರ ದೊಡ್ಡ ಕೊಂಬು ಮುರಿದುಹೋಯಿತು. ಅದರ ಸ್ಥಾನದಲ್ಲಿ ನಾಲ್ಕು ಅದ್ಭುತವಾದ ಕೊಂಬುಗಳು ಮೊಳೆತು, ಆಕಾಶದ ಚತುರ್ದಿಕ್ಕಿಗೆ ಚಾಚಿಕೊಂಡವು.
ಅವುಗಳ ಒಂದರೊಳಗಿಂದ ಚಿಕ್ಕ ಕೊಂಬು ಮೊಳೆತು, ಬಹಳ ದೊಡ್ಡದಾಗಿ ಬೆಳೆದು, ದಕ್ಷಿಣದ ಕಡೆಗೂ, ಪೂರ್ವದ ಕಡೆಗೂ, ರಮ್ಯ ದೇಶದ ಕಡೆಗೂ ಪ್ರಬಲವಾಯಿತು. 10 ಅದು ಆಕಾಶದ ಸೈನ್ಯದ ಎತ್ತರಕ್ಕೂ ಬೆಳೆದು, ಆ ಸೈನ್ಯದಲ್ಲಿಯೂ, ನಕ್ಷತ್ರಗಳಲ್ಲಿಯೂ ಕೆಲವನ್ನು ನೆಲಕ್ಕೆ ತಳ್ಳಿ, ಅವುಗಳನ್ನು ತುಳಿದು ಹಾಕಿತು. 11 ಅದು ಯೆಹೋವ ದೇವರ ಸೈನ್ಯದ ಅಧಿಪತಿಗೆ ವಿರೋಧವಾಗಿ ಬಲಗೊಂಡು, ನಿತ್ಯ ಯಜ್ಞವನ್ನು ಯೆಹೋವ ದೇವರಿಗೆ ಸಲ್ಲದಂತೆ ಮಾಡಿ, ಅವನ ಪವಿತ್ರ ಸ್ಥಾನವನ್ನು ಕೆಡವಿ ಹಾಕಲಾಯಿತು. 12 ಪ್ರತಿದಿನ ಯಜ್ಞದ ಸಂಗಡ ಯೆಹೋವ ದೇವರ ಸೈನ್ಯವೂ ಸಹ ಅಪರಾಧದ ನಿಮಿತ್ತವಾಗಿ ಅದಕ್ಕೆ ಕೊಡಲಾಯಿತು. ಅದು ಸತ್ಯವನ್ನು ನೆಲಕ್ಕೆ ಕೆಡವಿ, ಇಷ್ಟಾರ್ಥವನ್ನು ಪೂರೈಸಿಕೊಂಡು ಅನುಕೂಲ ಪಡೆಯಿತು, ವೃದ್ಧಿಗೆ ಬಂದಿತು.
13 ಆಮೇಲೆ ಒಬ್ಬ ಪರಿಶುದ್ಧನು ಮಾತನಾಡುವುದನ್ನು ಕೇಳಿದೆನು. ಮಾತನಾಡಿದ ಆತನಿಗೆ ಮತ್ತೊಬ್ಬ ಪರಿಶುದ್ಧನು, “ನಿತ್ಯ ಯಜ್ಞವನ್ನು ನಿಲ್ಲಿಸುವುದೂ, ಹಾಳುಮಾಡುವ ಅಪರಾಧವನ್ನು ತಡೆಯುವುದೂ, ಪರಿಶುದ್ಧ ಸ್ಥಳವನ್ನೂ, ಯೆಹೋವ ದೇವರ ಸೈನ್ಯವನ್ನೂ ಕಾಲಡಿಯಲ್ಲಿ ತುಳಿಯುವ ಈ ದರ್ಶನ ನೆರವೇರಲು ಎಷ್ಟು ಕಾಲ ಬೇಕಾಗುವುದು?” ಎಂದು ಕೇಳಿದನು.
14 ಅವನು ನನಗೆ, “ಎರಡು ಸಾವಿರದ ಮುನ್ನೂರು ಸಾಯಂಕಾಲ ಹಾಗೂ ಪ್ರಾತಃಕಾಲದವರೆಗೂ ನಡೆಯುವುವು. ಅನಂತರ ಪರಿಶುದ್ಧ ಸ್ಥಳವು ಪುನಃ ನ್ಯಾಯಸ್ಥಾಪನೆಯಾಗುವುದು,” ಎಂದು ಹೇಳಿದನು.
ದರ್ಶನದ ವಿವರಣೆ
15 ದಾನಿಯೇಲನೆಂಬ ನಾನು ಆ ದರ್ಶನವನ್ನು ನೋಡಿ, ಅದರ ಅರ್ಥವನ್ನು ಗ್ರಹಿಸಲು ಪ್ರಯತ್ನಿಸುತ್ತಿರುವಾಗ, ಮನುಷ್ಯನ ರೂಪದಂತಿರುವ ಒಬ್ಬನು ನನ್ನ ಮುಂದೆ ನಿಂತಿದ್ದನು. 16 ನಾನು ಊಲಾ ನದಿಯ ಮಧ್ಯದಲ್ಲಿದ್ದಾಗ, “ಗಬ್ರಿಯೇಲನೇ, ಈ ಮನುಷ್ಯನು ದರ್ಶನವನ್ನು ಅರ್ಥಮಾಡಿಕೊಳ್ಳುವಂತೆ ಮಾಡು,” ಎಂದು ಹೇಳುವ ಮನುಷ್ಯನ ಧ್ವನಿಯನ್ನು ಕೇಳಿದೆನು.
17 ಅದರಂತೆ ಅವನು ನನ್ನ ಬಳಿಗೆ ಬಂದನು. ಅವನು ಬಂದಾಗ ನಾನು ಭಯಪಟ್ಟು ಮುಖ ಕೆಳಗಾಗಿ ಬಿದ್ದೆನು. ಆದರೆ ಅವನು ನನಗೆ, “ಮನುಷ್ಯಪುತ್ರನೇ, ಅಂತ್ಯಕಾಲದಲ್ಲಿ ನೆರವೇರುವ ದರ್ಶನವು ಎಂಬುದು ನಿನಗೆ ಮನದಟ್ಟಾಗಿರಲಿ,” ಎಂದನು.
18 ಈಗ ಅವನು ನನ್ನ ಸಂಗಡ ಮಾತನಾಡುತ್ತಿರುವಾಗ, ನಾನು ಮುಖ ಕೆಳಗಾಗಿ ನೆಲದ ಮೇಲೆ ಗಾಢನಿದ್ರೆಯಲ್ಲಿ ಬಿದ್ದಿದ್ದೆನು. ಆದರೆ ಅವನು ನನ್ನನ್ನು ಮುಟ್ಟಿ, ಎದ್ದು ನಿಲ್ಲುವಂತೆ ಮಾಡಿದನು.
19 ಅವನು, “ದೇವರು ತನ್ನ ಕೋಪವನ್ನು ತೀರಿಸುವ ಮುಂದಿನ ಕಾಲದಲ್ಲಿ ನಡೆಯತಕ್ಕದ್ದನ್ನು ನಿನಗೆ ತಿಳಿಸುತ್ತೇನೆ ಕೇಳು, ಆ ದರ್ಶನವು ನಿಯಮಿತ ಅಂತ್ಯಕಾಲಕ್ಕೆ ಸಂಬಂಧಪಟ್ಟದ್ದು. 20 ನೀನು ಕಂಡ ಆ ಎರಡು ಕೊಂಬುಗಳುಳ್ಳ ಟಗರು, ಮೇದ್ಯ ಮತ್ತು ಪಾರಸಿಯ ರಾಜರು. 21 ಆ ಒರಟು ಹೋತವು ಗ್ರೀಕಿನ ಅರಸನು ಮತ್ತು ಕಣ್ಣುಗಳ ಮಧ್ಯೆ ಇದ್ದ ಆ ದೊಡ್ಡ ಕೊಂಬು ಮೊದಲನೆಯ ಅರಸನು. 22 ಆ ಕೊಂಬು ಮುರಿದುಹೋದ ಮೇಲೆ, ಅದಕ್ಕೆ ಬದಲಾಗಿ ನಾಲ್ಕು ಕೊಂಬುಗಳು ಎದ್ದಂತೆಯೇ, ಆ ಜನಾಂಗದಿಂದ ನಾಲ್ಕು ರಾಜ್ಯಗಳು ಉದಯಿಸುವುವು. ಆದರೆ ಮೊದಲನೆಯ ಅರಸನಿಗೆ ಇದ್ದಷ್ಟು ಅಧಿಕಾರ ಅವರಿಗೆ ಇರುವುದಿಲ್ಲ.
23 “ಅವರ ರಾಜ್ಯದ ಕಡೆಯ ಕಾಲದಲ್ಲಿ ಯಾವಾಗ ಅಪರಾಧಿಗಳು ತುಂಬಿ ಬರುವರೋ, ಆಗ ಕ್ರೂರ ಮುಖವುಳ್ಳವನೂ, ತಂತ್ರವುಳ್ಳವನೂ ಆದ ಒಬ್ಬ ಅರಸನು ಏಳುವನು. 24 ಅವನ ಶಕ್ತಿಯು ಬಲವಾಗಿರುವುದು. ಆದರೆ ಅದು ಸ್ವಂತ ಶಕ್ತಿಯಲ್ಲ. ಅವನು ಆಶ್ಚರ್ಯದ ರೀತಿಯಲ್ಲಿ ನಾಶಮಾಡಿ ಅಭಿವೃದ್ಧಿಯಾಗುವನು. ಅವನು ತನ್ನ ಇಷ್ಟಾರ್ಥವನ್ನು ತೀರಿಸಿಕೊಳ್ಳುವನು. ಬಲವಾದ, ಪರಿಶುದ್ಧ ಜನರನ್ನು ನಾಶಮಾಡುವನು. 25 ಅವನು ತನ್ನ ಶಕ್ತಿಯಿಂದಲೇ ತನ್ನ ಕಪಟತನವನ್ನು ಸಿದ್ಧಿಗೆ ತರುವನು. ಅವನು ಹೃದಯದಲ್ಲಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ಸುರಕ್ಷಿತರಾಗಿದ್ದೇವೆಂದು ಹೇಳುವಾಗಲೇ ಅನೇಕರನ್ನು ನಾಶಮಾಡುವನು. ಅಲ್ಲದೆ ಅವನು ರಾಜಕುಮಾರರ ರಾಜಕುಮಾರನಿಗೆ ವಿರುದ್ಧವಾಗಿ ನಿಲ್ಲುವನು. ಆದರೂ ಮಾನವ ಶಕ್ತಿಯ ಬಳಕೆ ಇಲ್ಲದೆಯೂ ನಾಶವಾಗುವನು.
26 “ನಿಮಗೆ ನೀಡಲಾದ ಸಂಜೆ ಮತ್ತು ಮುಂಜಾನೆಗಳ ದರ್ಶನವು ಸತ್ಯವಾದದ್ದು. ಆದರೆ ಆ ದರ್ಶನವು ಗುಟ್ಟಾಗಿರಲಿ. ಏಕೆಂದರೆ ಅದು ಬಹು ದೂರದ ಭವಿಷ್ಯಕ್ಕೆ ಸಂಬಂಧಿಸಿದ್ದು.”
27 ದಾನಿಯೇಲನಾದ ನಾನು ಬಳಲಿ ಕೆಲವು ದಿನಗಳವರೆಗೂ ಅಸ್ವಸ್ಥನಾದೆನು. ಅನಂತರ ನಾನು ಎದ್ದು, ಅರಸನ ಕೆಲಸ ಕಾರ್ಯಗಳನ್ನು ಮಾಡಿದೆನು. ನಾನು ಆ ದರ್ಶನದ ಬಗ್ಗೆ ಬೆಚ್ಚಿಬೆರಗಾದೆನು. ಅದರ ಅರ್ಥವನ್ನೇ ಗ್ರಹಿಸಿಕೊಳ್ಳಲಾಗಲಿಲ್ಲ.