10
ಮತ್ತೆ ಪಡೆದ ಆಜ್ಞೆಗಳು
ಆ ಕಾಲದಲ್ಲಿ ಯೆಹೋವ ದೇವರು ನನಗೆ, “ಮೊದಲಿನವುಗಳ ಹಾಗೆ ಎರಡು ಕಲ್ಲಿನ ಹಲಗೆಗಳನ್ನು ನೀನು ಕೆತ್ತಿಕೊಂಡು, ಬೆಟ್ಟವನ್ನೇರಿ ನನ್ನ ಬಳಿಗೆ ಬಾ. ಒಂದು ಮರದ ಮಂಜೂಷವನ್ನು ಮಾಡಿಕೊಳ್ಳಬೇಕು. ಆಗ ನೀನು ಒಡೆದ ಆ ಮೊದಲಿನ ಹಲಗೆಗಳ ಮೇಲಿದ್ದ ಮಾತುಗಳನ್ನು ಈ ಹಲಗೆಗಳ ಮೇಲೆ ಬರೆಯುವೆನು. ಆಮೇಲೆ ನೀನು ಅವುಗಳನ್ನು ಮಂಜೂಷದಲ್ಲಿ ಇಡಬೇಕು,” ಎಂದು ಹೇಳಿದರು.
ಈ ಪ್ರಕಾರ ನಾನು ಜಾಲಿ ಮರದ ಮಂಜೂಷವನ್ನು ಮಾಡಿ, ಕಲ್ಲಿನ ಎರಡು ಹಲಗೆಗಳನ್ನು ಮುಂಚಿನವುಗಳಂತೆ ಕೆತ್ತಿ, ಆ ಎರಡು ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬೆಟ್ಟವನ್ನೇರಿದೆನು. ಆ ಹಲಗೆಗಳ ಮೇಲೆ ಯೆಹೋವ ದೇವರು ಮುಂಚೆ ಬರೆದಿದ್ದ ಪ್ರಕಾರ ಬರೆದರು. ಅವರು ನಿಮಗೆ ಬೆಟ್ಟದಲ್ಲಿ ಬೆಂಕಿಯೊಳಗಿಂದ ಸಭೆಕೂಡಿದ ದಿವಸದಲ್ಲಿ ಹೇಳಿದ ಆ ಹತ್ತು ಆಜ್ಞೆಗಳನ್ನು ಬರೆದು ನನಗೆ ಕೊಟ್ಟರು. ತರುವಾಯ ನಾನು ಬೆಟ್ಟದಿಂದ ಇಳಿದುಬಂದು, ಆ ಹಲಗೆಗಳನ್ನು ಯೆಹೋವ ದೇವರು ನನಗೆ ಆಜ್ಞಾಪಿಸಿದ ಹಾಗೆ ನಾನು ಮಾಡಿದ ಮಂಜೂಷದಲ್ಲಿ ಇಟ್ಟೆನು. ಅವು ಅಲ್ಲಿಯೇ ಇರುತ್ತವೆ.
ಇಸ್ರಾಯೇಲರು ಯಾಕಾನನ ಮಕ್ಕಳ ಬಾವಿಗಳ ಬಳಿಯಿಂದ ಬೇರೋತದಿಂದ ಮೋಸೇರಕ್ಕೆ ಹೊರಟಾಗ, ಆರೋನನು ಅಲ್ಲಿ ಮರಣಹೊಂದಿದನು. ಅಲ್ಲೇ ಅವನನ್ನು ಹೂಳಿಟ್ಟೆವು. ಅವನ ಮಗ ಎಲಿಯಾಜರನು ಅವನ ಬದಲಿಗೆ ಯಾಜಕನಾದನು. ಅಲ್ಲಿಂದ ಅವರು ಗುದ್ಗೋದಕ್ಕೂ, ಗುದ್ಗೋದದಿಂದ ನೀರಿನ ಪ್ರವಾಹಗಳುಳ್ಳ ದೇಶವಾದ ಯೊಟ್ಬಾತಕ್ಕೂ ಪ್ರಯಾಣಮಾಡಿದರು. ಆ ಕಾಲದಲ್ಲಿ ಯೆಹೋವ ದೇವರು ಲೇವಿ ಗೋತ್ರವನ್ನು ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವುದಕ್ಕೂ, ಯೆಹೋವ ದೇವರ ಮುಂದೆ ನಿಂತುಕೊಂಡು ಅವರಿಗೆ ಸೇವೆಮಾಡಿ, ಅವರ ಹೆಸರಿನಲ್ಲಿ ಜನರನ್ನು ಆಶೀರ್ವದಿಸುವುದಕ್ಕೂ ಅವರನ್ನು ನೇಮಿಸಿದರು. ಅವರು ಈ ದಿನದವರೆಗೂ ಆ ಕೆಲಸವನ್ನು ನಡೆಸುತ್ತಿದ್ದಾರೆ. ಆದ್ದರಿಂದ ಲೇವಿಯರಿಗೆ ಅವರ ಸಹೋದರರ ಸಂಗಡ ಸ್ವಂತವಾದ ಭೂಸ್ವಾಸ್ತ್ಯವು ದೊರೆಯಲಿಲ್ಲ. ನಿಮ್ಮ ಯೆಹೋವ ದೇವರು ಅವರಿಗೆ ವಾಗ್ದಾನ ಮಾಡಿದಂತೆ ಯೆಹೋವ ದೇವರೇ ಅವರ ಸೊತ್ತು.
10 ಇದಲ್ಲದೆ ನಾನು ಮೊದಲಿನಂತೆ ನಲವತ್ತು ದಿವಸ ಹಗಲುರಾತ್ರಿ ಬೆಟ್ಟದಲ್ಲಿ ನಿಂತೆನು. ಯೆಹೋವ ದೇವರು ಆ ಕಾಲದಲ್ಲಿ ನನ್ನ ಪ್ರಾರ್ಥನೆಯನ್ನು ಕೇಳಿ, ನಿಮ್ಮನ್ನು ನಾಶಮಾಡುವುದಕ್ಕೆ ಇಷ್ಟಪಡಲಿಲ್ಲ. 11 ಯೆಹೋವ ದೇವರು ನನಗೆ, “ಜನರ ಮುಂದೆ ಹೋಗು, ನಾನು ಇವರ ಪಿತೃಗಳಿಗೆ ಪ್ರಮಾಣ ಮಾಡಿಕೊಟ್ಟ ದೇಶವನ್ನು ಇವರು ಸೇರಿ ಸ್ವಾಧೀನಮಾಡಿಕೊಳ್ಳಲಿ,” ಎಂದು ಆಜ್ಞಾಪಿಸಿದರು.
ಯೆಹೋವ ದೇವರಿಗೆ ಭಯಪಡಿರಿ
12 ಈಗ ಇಸ್ರಾಯೇಲರೇ, ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಟ್ಟು, ಅವರ ಎಲ್ಲಾ ಮಾರ್ಗಗಳಲ್ಲಿ ನಡೆದುಕೊಂಡು, ಅವರನ್ನು ಪ್ರೀತಿಸಿ, ನಿಮ್ಮ ದೇವರಾದ ಯೆಹೋವ ದೇವರಿಗೆ ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ಸೇವೆಮಾಡಿರಿ. 13 ನಾನು ಈ ಹೊತ್ತು ನಿಮ್ಮ ಮೇಲಿಗಾಗಿ ನಿಮಗೆ ಆಜ್ಞಾಪಿಸುವ ಯೆಹೋವ ದೇವರ ಆಜ್ಞೆಗಳನ್ನೂ ಅವರ ನಿಮಯಗಳನ್ನೂ ಕಾಪಾಡುವುದೇ ಹೊರತು, ಮತ್ತೇನೂ ನಮ್ಮ ದೇವರಾಗಿರುವ ಯೆಹೋವ ದೇವರು ನಿಮ್ಮಿಂದ ಕೇಳುತ್ತಾರೆ?
14 ಆಕಾಶವೂ ಉನ್ನತಾಕಾಶವೂ ಭೂಮಿಯೂ ಅದರಲ್ಲಿರುವಂಥಾದ್ದೆಲ್ಲವೂ ನಿಮ್ಮ ದೇವರಾಗಿರುವ ಯೆಹೋವ ದೇವರವುಗಳೇ. 15 ನಿಮ್ಮ ಪಿತೃಗಳ ಮೇಲೆ ಯೆಹೋವ ದೇವರು ತಾವೇ ಮನಸ್ಸಿಟ್ಟು, ಅವರನ್ನು ಪ್ರೀತಿಸಿ, ಅವರ ಸಂತಾನವಾಗಿರುವ ನಿಮ್ಮನ್ನು ಈ ಹೊತ್ತು ಇರುವ ಪ್ರಕಾರ ಎಲ್ಲಾ ಜನರೊಳಗಿಂದ ಆರಿಸಿಕೊಂಡರು. 16 ಹೀಗಿರುವುದರಿಂದ ನಿಮ್ಮ ಹೃದಯದ ಸುನ್ನತಿ ಮಾಡಿಕೊಳ್ಳಿರಿ. ಇನ್ನು ಮೇಲೆ ಹಟಮಾರಿಗಳಾಗಿರಬೇಡಿರಿ. 17 ಏಕೆಂದರೆ ನಿಮ್ಮ ದೇವರಾಗಿರುವ ಯೆಹೋವ ದೇವರು ದೇವರುಗಳ ದೇವರು, ಕರ್ತರ ಕರ್ತರು, ದೇವಾಧಿದೇವರು, ಪರಾಕ್ರಮಿಯೂ, ಭಯಭಕ್ತಿಗೆ ಪಾತ್ರರೂ ಆಗಿದ್ದಾರೆ. ಅವರು ಮುಖದಾಕ್ಷಿಣ್ಯ ನೋಡುವುದಿಲ್ಲ. ಲಂಚ ತೆಗೆದುಕೊಳ್ಳುವುದಿಲ್ಲ. 18 ಅವರು ತಂದೆ ಇಲ್ಲದವರಿಗೂ, ವಿಧವೆಯರಿಗೂ ನ್ಯಾಯ ದೊರಕಿಸುತ್ತಾರೆ. ಪರದೇಶಿಯರನ್ನು ಪ್ರೀತಿಸಿ ಅನ್ನ, ವಸ್ತ್ರ ಕೊಡುತ್ತಾರೆ. 19 ಹೀಗಿರುವುದರಿಂದ ನೀವು ಪರದೇಶಿಯರನ್ನು ಪ್ರೀತಿಸಿರಿ. ಏಕೆಂದರೆ ನೀವು ಈಜಿಪ್ಟಿನಲ್ಲಿ ಪರದೇಶಿಗಳಾಗಿದ್ದೀರಿ. 20 ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಡಬೇಕು. ಅವರ ಸೇವೆಮಾಡಿ ಅವರಿಗೆ ಅಂಟಿಕೊಂಡು, ಅವರ ಹೆಸರಿನಲ್ಲಿ ಪ್ರಮಾಣಮಾಡಬೇಕು. 21 ನೀವು ನೋಡಿದ ಆ ಮಹಾ ಭಯಂಕರವಾದ ಕಾರ್ಯಗಳನ್ನು ನಿಮಗೆ ಮಾಡಿದ ಅವರೇ ನಿಮ್ಮ ಸ್ತೋತ್ರವು. ಅವರೇ ನಿಮ್ಮ ದೇವರು. 22 ಎಪ್ಪತ್ತು ಮಂದಿಯಾಗಿ ನಿಮ್ಮ ಪಿತೃಗಳು ಈಜಿಪ್ಟಿಗೆ ಇಳಿದು ಹೋದರು. ಈಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಆಕಾಶದ ನಕ್ಷತ್ರಗಳಂತೆ ಅಸಂಖ್ಯವಾಗಿ ಮಾಡಿದ್ದಾರೆ.