21
ಹಂತಕನು ಪತ್ತೆಯಿಲ್ಲದಾಗ ಮಾಡುವ ಕಾರ್ಯ
ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ದೇಶದಲ್ಲಿ ಹತನಾದ ಒಬ್ಬ ವ್ಯಕ್ತಿಯ ಶವವು ಹೊಲದಲ್ಲಿ ಬಿದ್ದಿರುವುದನ್ನು ನೀವು ಕಂಡಾಗ ಮತ್ತು ಅವನನ್ನು ಯಾರು ಹೊಡೆದರೆಂದು ತಿಳಿಯದೆ ಹೋದರೆ, ನಿಮ್ಮ ಹಿರಿಯರೂ ನ್ಯಾಯಾಧಿಪತಿಗಳೂ ಹೊರಗೆ ಹೋಗಿ, ಆ ಹತನಾದವನ ಸುತ್ತಲಿರುವ ಪಟ್ಟಣಗಳಲ್ಲಿ ಯಾವುದು ಹತ್ತಿರವೆಂದು ತಿಳಿದುಕೊಳ್ಳಲು ಅಳತೆಮಾಡಬೇಕು. ಹತನಾದವನಿಗೆ ಸಮೀಪವಾದ ಊರು ಯಾವುದೋ, ಆ ಊರಿನ ಹಿರಿಯರು ಇನ್ನೂ ಕೆಲಸ ಮಾಡದಂಥ, ನೊಗ ಎಳೆಯದಂಥ, ಒಂದು ಕಡಸನ್ನು ತೆಗೆದುಕೊಳ್ಳಬೇಕು. ಆಮೇಲೆ ಆ ಊರಿನ ಹಿರಿಯರು ಆ ಕಡಸನ್ನು ನಿತ್ಯ ಹರಿಯುವ ಹಳ್ಳದ ಬಳಿಗೆ ಬೇಸಾಯವಾಗದಂಥ, ಬೀಜ ಹಾಕದಂಥ ಸ್ಥಳಕ್ಕೆ ತೆಗೆದುಕೊಂಡುಹೋಗಿ, ಅಲ್ಲಿ ಹಳ್ಳದಲ್ಲಿ ಕಡಸನ್ನು ವಧಿಸಬೇಕು. ಲೇವಿಯ ಪುತ್ರರಾದ ಯಾಜಕರು ಹತ್ತಿರ ಇರಬೇಕು. ಏಕೆಂದರೆ ಅವರನ್ನೇ ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಸೇವೆ ಮಾಡುವುದಕ್ಕೂ ಯೆಹೋವ ದೇವರ ಹೆಸರಿನಲ್ಲಿ ಆಶೀರ್ವಾದ ಕೊಡುವುದಕ್ಕೂ ಎಲ್ಲಾ ವಿವಾದ ಹೊಡೆದಾಟಗಳ ವಿಷಯದಲ್ಲಿ ತೀರ್ಮಾನಿಸುವುದಕ್ಕೂ ಆಯ್ದುಕೊಂಡಿದ್ದಾರೆ. ಆಮೇಲೆ ಹತನಾದವನ ಶವಕ್ಕೆ ಸಮೀಪವಾಗಿರುವ ಆ ಊರಿನ ಹಿರಿಯರೆಲ್ಲರೂ ತಗ್ಗಿನಲ್ಲಿ ವಧಿಸಿದ ಕಡಸಿನ ಮೇಲೆ ಕೈಗಳನ್ನು ತೊಳೆದುಕೊಳ್ಳಬೇಕು. ಅನಂತರ, “ನಮ್ಮ ಕೈಗಳು ಈ ರಕ್ತವನ್ನು ಚೆಲ್ಲಲಿಲ್ಲ. ನಮ್ಮ ಕಣ್ಣುಗಳು ನಡೆದದ್ದನ್ನು ನೋಡಲಿಲ್ಲ. ಯೆಹೋವ ದೇವರೇ, ನೀವು ವಿಮೋಚಿಸಿದ ನಿಮ್ಮ ಜನರಾದ ಇಸ್ರಾಯೇಲರಿಗೆ ಕರುಣೆ ಹೊದಿಸಿರಿ. ನಿಮ್ಮ ಜನರಾದ ಇಸ್ರಾಯೇಲರ ಮೇಲೆ ನಿರ್ದೋಷವಾದ ರಕ್ತಾಪರಾಧವನ್ನು ಹೊರಿಸಬೇಡಿರಿ,” ಎಂದು ಹೇಳಬೇಕು. ಆ ರಕ್ತಾಪರಾಧವು ಅವರಿಗೆ ಮುಚ್ಚಲಾಗುವುದು. ಈ ಪ್ರಕಾರ ನೀವು ಯೆಹೋವ ದೇವರ ಮುಂದೆ ಸರಿಯಾದದ್ದನ್ನು ಮಾಡಿದರೆ, ರಕ್ತಾಪರಾಧವನ್ನು ನಿಮ್ಮಲ್ಲಿಂದ ತೆಗೆದುಹಾಕುವಿರಿ.
ಸೆರೆಯವಳಾದ ಸ್ತ್ರೀಯನ್ನು ಮದುವೆಮಾಡಿಕೊಳ್ಳುವ ವಿಷಯ
10 ನೀವು ಶತ್ರುಗಳ ವಿರುದ್ಧ ಯುದ್ಧಮಾಡಿ, ನಿಮ್ಮ ದೇವರಾದ ಯೆಹೋವ ದೇವರಿಂದ, ನೀವು ಅವರನ್ನು ಸೋಲಿಸಿದರೆ, 11 ಸೆರೆ ಹಿಡಿದವರಲ್ಲಿ ಒಬ್ಬ ಸುಂದರ ಸ್ತ್ರೀಯನ್ನು ನಿಮ್ಮಲ್ಲಿ ಯಾರಾದರೂ ಕಂಡು ಇಷ್ಟಪಟ್ಟರೆ, ಅವಳನ್ನು ಮದುವೆ ಮಾಡಿಕೊಳ್ಳಬಹುದು. 12 ಅವಳು ತಲೆ ಕ್ಷೌರಮಾಡಿಸಿಕೊಂಡು, ಉಗುರುಗಳನ್ನು ಕತ್ತರಿಸಿಕೊಂಡು, 13 ಸೆರೆಯ ಬಟ್ಟೆಗಳನ್ನು ತೆಗೆದಿಟ್ಟು, ಅವನ ಮನೆಯಲ್ಲಿ ಒಂದು ತಿಂಗಳವರೆಗೆ ತನ್ನ ತಾಯಿ ತಂದೆಯರನ್ನು ಸ್ಮರಿಸಿ ಹಂಬಲಿಸಲಿ. ಆಮೇಲೆ ಅವನು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬಹುದು. 14 ತರುವಾಯ ಅವಳು ಅವನಿಗೆ ಇಷ್ಟವಾಗದೆ ಹೋದರೆ, ಅವನು ಅವಳನ್ನು ಅವಳು ಬಯಸಿದ ಸ್ಥಳಕ್ಕೆ ಕಳುಹಿಸಿಬಿಡಬೇಕು. ಅವಳನ್ನು ಅವಮಾನಪಡಿಸಿದ್ದರಿಂದ ದಾಸತ್ವಕ್ಕೆ ಮಾರಲೂಬಾರದು, ದಾಸಿಯಂತೆ ನಡೆಸಲೂಬಾರದು.
ಚೊಚ್ಚಲ ಮಗನ ಹಕ್ಕು
15 ಒಬ್ಬ ಮನುಷ್ಯನಿಗೆ ಇಬ್ಬರು ಹೆಂಡತಿಯರಿದ್ದು, ಒಬ್ಬಳನ್ನು ಪ್ರೀತಿಸುತ್ತಲೂ, ಮತ್ತೊಬ್ಬಳನ್ನು ದ್ವೇಷಿಸುತ್ತಲೂ ಇದ್ದರೆ, ಅವರಿಬ್ಬರೂ ಅವನಿಗೆ ಮಕ್ಕಳನ್ನು ಹೆತ್ತಿರುವಲ್ಲಿ, ಚೊಚ್ಚಲು ಮಗನು ತಿರಸ್ಕಾರ ಹೊಂದುತ್ತಿರುವ ಹೆಂಡತಿಯಲ್ಲಿಯೇ ಹುಟ್ಟಿದ್ದರೆ, 16 ಅವನು ತನ್ನ ಪುತ್ರರಿಗೆ ತನ್ನ ಆಸ್ತಿಯನ್ನು ಹಂಚಿ ಕೊಡುವಾಗ, ತಾನು ಪ್ರೀತಿಮಾಡದ ಹೆಂಡತಿಯ ಚೊಚ್ಚಲ ಮಗನಿಗೆ ಬದಲಾಗಿ ಅವನು ಪ್ರೀತಿಸುವವಳ ಮಗನನ್ನು ಹಿರಿಯನೆಂದು ಮಾಡಕೂಡದು. 17 ಅವನು ಪ್ರೀತಿಮಾಡದವಳ ಮಗನಿಗೆ ತನ್ನ ಬಳಿಯಲ್ಲಿರುವ ಎಲ್ಲವುಗಳಲ್ಲಿ ಎರಡು ಪಾಲುಗಳನ್ನು ಕೊಟ್ಟು, ಅವನೇ ಜೇಷ್ಠ ಪುತ್ರನೆಂದು ಒಪ್ಪಿಕೊಳ್ಳಬೇಕು. ಏಕೆಂದರೆ ಅವನೇ ಅವನ ಪ್ರಥಮ ಫಲ. ಅವನಿಗೆ ಜೇಷ್ಠ ಪುತ್ರನ ಹಕ್ಕು ಉಂಟು.
ದುಷ್ಟ ಪುತ್ರನ ಶಿಕ್ಷಾಕ್ರಮ
18 ಒಬ್ಬ ಮನುಷ್ಯನಿಗೆ ಮೊಂಡನೂ, ತಿರುಗಿ ಬೀಳುವವನೂ ಆದ ಮಗನಿದ್ದರೆ, ಅವನು ತಂದೆತಾಯಿಯ ಮಾತನ್ನೂ ಕೇಳದೆ, ಅವರು ಅವನನ್ನು ಶಿಸ್ತುಪಡಿಸಲು ಹೇಳುವ ಮಾತನ್ನೂ ಕೇಳದೆ ಹೋದರೆ, 19 ಅವನ ತಂದೆತಾಯಿಗಳು ಅವನನ್ನು ಹಿಡಿದು, ಪಟ್ಟಣದ ಹಿರಿಯರ ಬಳಿಗೂ ಅವನ ಊರಿನ ಬಾಗಿಲಿನ ಬಳಿಗೂ ತಂದು, 20 ಪಟ್ಟಣದ ಹಿರಿಯರಿಗೆ, “ಈ ನಮ್ಮ ಮಗನು ಮೊಂಡನೂ, ತಿರುಗಿ ಬೀಳುವವನೂ, ನಮ್ಮ ಮಾತು ಕೇಳದವನೂ, ಹೊಟ್ಟೆ ಬಾಕನೂ, ಕುಡುಕನೂ ಆಗಿದ್ದಾನೆ,” ಎಂದು ಹೇಳಬೇಕು. 21 ಆಗ ಅವನ ಪಟ್ಟಣದ ಜನರೆಲ್ಲರೂ ಅವನು ಸಾಯುವಂತೆ ಅವನ ಮೇಲೆ ಕಲ್ಲೆಸೆಯಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಬೇಕು. ಇಸ್ರಾಯೇಲರಲ್ಲಿ ಇದನ್ನು ಕೇಳಿ ಭಯಪಡುವರು.
ವಿವಿಧ ಶಾಸನಗಳು
22 ಒಬ್ಬನು ಮರಣದಂಡನೆಗೆ ಯೋಗ್ಯವಾದ ಅಪರಾಧ ಮಾಡಿದ್ದರಿಂದ, ನೀವು ಅವನಿಗೆ ಮರಣದಂಡನೆಯನ್ನು ವಿಧಿಸಿ, ಅವನ ಶವವನ್ನು ಮರಕ್ಕೆ ತೂಗುಹಾಕಿದ್ದಾದರೆ, 23 ಅವನ ಶವ ರಾತ್ರಿಯಲ್ಲಿ ಮರದ ಮೇಲಿರಬಾರದು. ಅವನನ್ನು ಅದೇ ದಿವಸದಲ್ಲಿ ಹೂಣಬೇಕು. ಏಕೆಂದರೆ ಮರಕ್ಕೆ ತೂಗಹಾಕಲಾದವನು ದೇವರ ಶಾಪವನ್ನು ಹೊಂದಿದವನು. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ಭೂಮಿಯು ಅಶುದ್ಧವಾಗಬಾರದು.