10
ಸತ್ತ ನೊಣಗಳು ಸುಗಂಧ ತೈಲವನ್ನು ದುರ್ವಾಸನೆಗೆ ಒಳಪಡಿಸುತ್ತದೆ.
ಹಾಗೆಯೇ ಸ್ವಲ್ಪ ಮೂಢತನವು ಜ್ಞಾನ ಮಾನಗಳನ್ನು ಕೆಡಿಸಿಬಿಡುತ್ತದೆ.
ಜ್ಞಾನಿಯ ಹೃದಯವು ಬಲಗಡೆ ಸಾಗಿದರೆ,
ಮೂರ್ಖನ ಹೃದಯವು ಎಡಗಡೆ ಸಾಗುವುದು.
ಮೂರ್ಖನು ಮಾರ್ಗದಲ್ಲಿ ನಡೆಯುವಾಗಲೂ,
ತಾನು ಅರಿವಿಲ್ಲದ ಮೂರ್ಖನೆಂದು
ಪ್ರತಿಯೊಬ್ಬರಿಗೂ ಪ್ರಕಟಿಸುತ್ತಾನೆ.
ಅಧಿಕಾರಿಯು ನಿನಗೆ ವಿರುದ್ಧವಾಗಿ ಸಿಟ್ಟುಗೊಂಡರೆ,
ನಿನ್ನ ಉದ್ಯೋಗವನ್ನು ಬಿಟ್ಟುಬಿಡಬೇಡ.
ಏಕೆಂದರೆ ತಾಳ್ಮೆಯು ದೊಡ್ಡ ಅಪರಾಧಗಳನ್ನು ಶಾಂತಪಡಿಸುತ್ತದೆ.
 
ಮತ್ತೊಂದು ವ್ಯಸನವನ್ನು ನಾನು ಸೂರ್ಯನ ಕೆಳಗೆ ನೋಡಿದ್ದೇನೆ.
ಅದು ಆಳುವವರಿಂದ ಬರುವ ತಪ್ಪಿನಿಂದಾದದ್ದು.
ಅದು ಯಾವುದೆಂದರೆ, ಮೂರ್ಖರನ್ನು ಉನ್ನತ ಪದವಿಗೆ ನೇಮಿಸುವುದು.
ಘನವಂತರನ್ನು ಕೆಳಗಿನ ಸ್ಥಳದಲ್ಲಿ ಕೂತುಕೊಳ್ಳುವಂತೆ ಮಾಡುವುದು.
ಕುದುರೆಗಳ ಮೇಲೆ ಸವಾರಿ ಮಾಡುವ ಸೇವಕರನ್ನೂ
ಅಧಿಕಾರಿಗಳು ಸೇವಕರ ಹಾಗೆ ನಡೆದುಕೊಂಡು ಹೋಗುವುದನ್ನೂ ನಾನು ನೋಡಿದ್ದೇನೆ.
 
ಗುಂಡಿಯನ್ನು ಅಗೆಯುವವನೇ ಅದರಲ್ಲಿ ಬೀಳುವನು.
ಗೋಡೆಯನ್ನು ಒಡೆಯುವವನನ್ನು ಹಾವು ಕಡಿಯುವುದು.
ಗಣಿಯಿಂದ ಬಂಡೆಗಳನ್ನು ಸೀಳುವವನು ಗಾಯಗೊಳ್ಳುವನು.
ಮರಕಡಿಯುವವನು ಅದರಿಂದಲೇ ಅಪಾಯಕ್ಕೊಳಗಾಗುವನು.
 
10 ಮೊಂಡುಕೊಡಲಿಯ ಬಾಯನ್ನು ಮೊನೆಮಾಡದಿದ್ದರೆ,
ಹೆಚ್ಚು ಬಲವನ್ನು ಪ್ರಯೋಗಿಸಬೇಕಾಗುವುದು,
ಆದರೆ ಜ್ಞಾನವೇ ಯಶಸ್ಸನ್ನು ತರುತ್ತದೆ.
 
11 ಹಾವಾಡಿಸುವುದರೊಳಗೆ ಹಾವು ಕಚ್ಚಿದರೆ,
ಹಾವಾಡಿಗನಿಗೆ ಏನು ಪ್ರಯೋಜನ?
 
12 ಜ್ಞಾನಿಯ ಮಾತುಗಳು ಹಿತಕರ.
ಆದರೆ ಬುದ್ಧಿಹೀನನ ಮಾತುಗಳು ಅವನಿಗೆ ವಿನಾಶಕರ.
13 ಅವನ ಮಾತುಗಳು ಆರಂಭದಲ್ಲಿ ಮೂಢತನವಾಗಿರುವುದು.
ಅವನ ಮಾತಿನ ಅಂತ್ಯವು ಹುಚ್ಚುತನವಾಗಿರುವುದು.
14 ಮೂಢನು ಮಾತುಗಳನ್ನು ಹೆಚ್ಚಿಸುತ್ತಾನೆ.
 
ಆದರೂ ಅವನು ಭವಿಷ್ಯ ಏನೆಂದು ತಿಳಿಯನು.
ಅವನ ತರುವಾಯ ಆಗುವುದನ್ನೂ ಅವನಿಗೆ ತಿಳಿಸುವವರು ಇಲ್ಲ.
 
15 ಮೂಢರ ಕಷ್ಟವು ಅವರನ್ನು ದಣಿಸುತ್ತದೆ.
ನಗರಕ್ಕೆ ಹೇಗೆ ಹೋಗಬೇಕೆಂದು ಸಹ ಅವನಿಗೆ ತಿಳಿಯದು.
 
16 ಬಾಲಕನಾಗಿದ್ದವನು ದೇಶಕ್ಕೆ ಅರಸನಾಗಿದ್ದರೆ,
ನಾಯಕರೆಲ್ಲರು ಬೆಳಿಗ್ಗೆಯೇ ಔತಣಕ್ಕೆ ಕೂತುಕೊಂಡರೆ ಅಯ್ಯೋ ಕಷ್ಟ!
17 ಶ್ರೇಷ್ಠ ಹಿನ್ನೆಲೆಯವನು ದೇಶಕ್ಕೆ ಅರಸನಾದರೆ,
ರಾಜಕುಮಾರರು ಕುಡುಕರಾಗುವುದಕ್ಕೆ ಬದಲು,
ಸರಿಯಾದ ಸಮಯದಲ್ಲಿ ಶಕ್ತಿಗಾಗಿ ಊಟ ಮಾಡಿದರೆ ಅದು ದೇಶಕ್ಕೆ ಆಶೀರ್ವಾದ.
 
18 ಸೋಮಾರಿತನದಿಂದ ಮನೆ ಕುಸಿಯುತ್ತದೆ.
ಜೋಲುಗೈಯಿಂದ ಮನೆ ಸೋರುತ್ತದೆ.
 
19 ವಿನೋದಕ್ಕಾಗಿ ಔತಣ ಮಾಡುತ್ತಾರೆ,
ಆನಂದಕ್ಕಾಗಿ ದ್ರಾಕ್ಷಾರಸ ಕುಡಿಯುತ್ತಾರೆ;
ಎಲ್ಲವನ್ನೂ ಒದಗಿಸಿಕೊಡುವುದಕ್ಕಾಗಿ ಹಣವು.
 
20 ನಿನ್ನ ಆಲೋಚನೆಯಲ್ಲಿಯೂ ಅರಸನನ್ನು ನಿಂದಿಸಬೇಡ.
ನೀನು ಮಲಗುವ ಕೋಣೆಯಲ್ಲಿ ಐಶ್ವರ್ಯವಂತರನ್ನು ಶಪಿಸಬೇಡ.
ಏಕೆಂದರೆ ಆಕಾಶದ ಪಕ್ಷಿಗಳು ನಿನ್ನ ಮಾತನ್ನು ತೆಗೆದುಕೊಂಡು ಹೋಗಬಹುದು.
ಹಾರುವ ಪಕ್ಷಿ ನಿನ್ನ ಸುದ್ದಿಯನ್ನು ತಿಳಿಸಬಹುದು.