29
ಈಜಿಪ್ಟಿನ ವಿರೋಧವಾದ ಪ್ರವಾದನೆ
ಫರೋಹನ ವಿರೋಧ ತೀರ್ಪು
ಹತ್ತನೆಯ ವರ್ಷದ ಹತ್ತನೆಯ ತಿಂಗಳಿನ, ಹನ್ನೆರಡನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು, “ನರಪುತ್ರನೇ, ನೀನು ಈಜಿಪ್ಟಿನ ಅರಸನಾದ ಫರೋಹನ ಕಡೆಗೆ ಮುಖಮಾಡಿ ಅವನಿಗೂ ಸಮಸ್ತ ಈಜಿಪ್ಟಿಗೂ ವಿರೋಧವಾಗಿ ಪ್ರವಾದಿಸು. ನೀನು ಮಾತನಾಡಿ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:
“ ‘ಈಜಿಪ್ಟಿನ ಅರಸನಾದ ಫರೋಹನೇ,
ತನ್ನ ನದಿಗಳ ಮಧ್ಯದಲ್ಲಿ ಮಲಗಿಕೊಂಡು ಈ ನೈಲ್ ನದಿ ನನ್ನದು,
ನಾನೇ ಅದನ್ನು ನನಗೋಸ್ಕರ ಮಾಡಿಕೊಂಡಿದ್ದೇನೆಂದು ಹೇಳಿಕೊಂಡ ದೊಡ್ಡ ಘಟಸರ್ಪವೇ,
ಇಗೋ, ನಾನು ನಿನಗೆ ವಿರುದ್ಧವಾಗಿದ್ದೇನೆ.
ಆದರೆ ನಿನ್ನ ದವಡೆಗಳಲ್ಲಿ ಗಾಳಗಳನ್ನು ಹಾಕಿ,
ನಿನ್ನ ನದಿಗಳ ಮೀನುಗಳನ್ನು ನಿನ್ನ ಬೆನ್ನು ಚಿಪ್ಪುಗಳಿಗೆ ಅಂಟಿಕೊಳ್ಳುವಂತೆ ಮಾಡಿ
ನಿನ್ನನ್ನು ನಿನ್ನ ನದಿಯೊಳಗಿಂದ ಮೇಲೆ ಎಳೆದು
ನಿನ್ನ ಮೀನುಗಳು ಚಿಪ್ಪುಗಳಿಗೆ ಅಂಟಿಕೊಳ್ಳುವಂತೆ ಮಾಡುವೆನು.
ನಿನ್ನನ್ನೂ ನಿನ್ನ ನದಿಗಳ ಮೀನುಗಳನ್ನೂ ಅರಣ್ಯದಲ್ಲಿ ಹಾಕುವೆನು.
ನೀನು ಬಯಲುಗಳ ಮೇಲೆ ಬಿದ್ದಿರುವೆ;
ನಿನ್ನನ್ನು ಯಾರೂ ಹೊರುವುದೂ ಇಲ್ಲ, ಸೇರಿಸುವುದೂ ಇಲ್ಲ.
ನಿನ್ನನ್ನೂ ನಿನ್ನ ನದಿಯ ಎಲ್ಲಾ ಮೀನುಗಳನ್ನೂ ಕಾಡಿನ ಪಾಲುಮಾಡುವೆನು.
ಭೂಮಿಯ ಮೇಲಿರುವ ಮೃಗಗಳಿಗೂ ಆಕಾಶದ ಪಕ್ಷಿಗಳಿಗೂ
ನಿನ್ನನ್ನು ಆಹಾರವನ್ನಾಗಿ ಕೊಟ್ಟಿದ್ದೇನೆ.
ಆಗ ಎಲ್ಲಾ ಈಜಿಪ್ಟಿನ ನಿವಾಸಿಗಳು ನಾನೇ ಯೆಹೋವನೆಂದು ತಿಳಿಯುವರು.
 
“ ‘ಅವರು ಇಸ್ರಾಯೇಲರ ಮನೆತನದವರಿಗೆ ದಂಟಿನ ಊರುಗೋಲಾಗಿದ್ದರು. ಇಸ್ರಾಯೇಲರು ನಿನ್ನ ಮೇಲೆ ಕೈಯಿಡಲು ನೀನು ಮುರಿದು ಅವರ ಹೆಗಲನ್ನು ಚುಚ್ಚಿದೆ; ಅವರು ನಿನ್ನನ್ನು ಆದರಿಸಿಕೊಂಡಾಗ ನೀನು ಮುರಿದು ಅದರ ನಡುವುಗಳನ್ನೆಲ್ಲಾ ನಿಲ್ಲಿಸಿಬಿಟ್ಟೆ.
“ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾನೆ: ಇಗೋ, ನಾನು ನಿನ್ನ ಮೇಲೆ ಖಡ್ಗವನ್ನು ತರುತ್ತೇನೆ. ಮನುಷ್ಯರನ್ನೂ ಮೃಗಗಳನ್ನೂ ನಿನ್ನೊಳಗಿಂದ ಕಡಿದುಬಿಡುತ್ತೇನೆ. ನೀನು, “ಆ ನೈಲ್ ನದಿಯು ನನ್ನದೇ, ನಾನೇ ಅದನ್ನು ನಿರ್ಮಿಸಿದವನೆಂದು,” ಹೇಳಿಕೊಂಡದ್ದರಿಂದ,
“ ‘ಈಜಿಪ್ಟ್ ದೇಶವು ಹಾಳು ಮರುಭೂಮಿಯಾಗುವುದು. ಆಗ ನಾನೇ ಯೆಹೋವ ದೇವರೆಂದು ಅವರು ತಿಳಿಯುವರು. 10 ಆದ್ದರಿಂದ ಇಗೋ, ನಾನು ನಿನಗೂ ನಿನ್ನ ನದಿಗಳಿಗೂ ವಿರುದ್ಧವಾಗಿದ್ದೇನೆ. ಈಜಿಪ್ಟ್ ದೇಶವನ್ನು ಮಿಗ್ದೋಲಿನಿಂದ ಸೆವೇನೆಯ ಗೋಪುರ ಮೊದಲುಗೊಂಡು ಕೂಷಿನ ಪ್ರಾಂತದವರೆಗೂ ಸಂಪೂರ್ಣವಾಗಿ ಕಾಡಾಗಿಯೂ ಹಾಳಾಗಿಯೂ ಮಾಡುತ್ತೇನೆ. 11 ಯಾವ ಮನುಷ್ಯನ ಪಾದವಾದರೂ ಅದರಲ್ಲಿ ಹಾದು ಹೋಗುವುದಿಲ್ಲ. ಮೃಗಗಳ ಪಾದವೂ ಅದರಲ್ಲಿ ಹಾದು ಹೋಗುವುದಿಲ್ಲ ಅಥವಾ ನಲವತ್ತು ವರ್ಷಗಳ ಕಾಲ ಅದರಲ್ಲಿ ವಾಸಮಾಡುವವರೇ ಇರುವುದಿಲ್ಲ. 12 ನಾನು ಈಜಿಪ್ಟ್ ದೇಶವನ್ನು ಹಾಳುಬಿದ್ದಿರುವ ದೇಶಗಳಲ್ಲಿ ಸೇರಿಸುವೆನು. ಅದರ ಪಟ್ಟಣಗಳು ಕಾಡಾಗಿರುವ ಪಟ್ಟಣಗಳ ನಡುವೆ ನಲವತ್ತು ವರ್ಷಗಳು ಹಾಳಾಗಿರುವುವು. ನಾನು ಈಜಿಪ್ಟಿನವರನ್ನು ಜನಾಂಗಗಳಲ್ಲಿ ಚದುರಿಸಿ ದೇಶಗಳಲ್ಲಿ ಹರಡಿಸಿಬಿಡುವೆನು.
13 “ ‘ಆದರೂ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಲವತ್ತು ವರ್ಷಗಳ ಕೊನೆಯಲ್ಲಿ ನಾನು ಈಜಿಪ್ಟಿನವರನ್ನು ಚದುರಿರುವ ರಾಷ್ಟ್ರಗಳಿಂದ ಒಟ್ಟುಗೂಡಿಸುವೆನು. 14 ನಾನು ಈಜಿಪ್ಟಿನವರನ್ನು ಸೆರೆಯಿಂದ ತಿರುಗಿ ಬಿಡಿಸಿ ಅವರನ್ನು ಪತ್ರೋಸ್ ದೇಶಕ್ಕೆ ಅಂದರೆ ಅವರ ಜನ್ಮದೇಶಕ್ಕೆ ಮತ್ತೆ ಬರಮಾಡುವೆನು. ಅಲ್ಲಿ ಅವರು ಕನಿಷ್ಠ ರಾಜ್ಯದವರಾಗಿರುವರು. 15 ಆ ರಾಜ್ಯವು ಸಮಸ್ತ ರಾಜ್ಯಗಳಲ್ಲಿ ಕನಿಷ್ಠ ರಾಜ್ಯವೆನಿಸಿಕೊಳ್ಳುವುದು. ಮಿಕ್ಕ ಜನಾಂಗಗಳಿಗಿಂತ ತಾನು ದೊಡ್ಡದೆಂದು ಅದು ಇನ್ನು ತಲೆ ಎತ್ತದು. ಅದು ಜನಾಂಗಗಳ ಮೇಲೆ ದೊರೆತನ ಮಾಡಲಾಗದಂತೆ ಅದನ್ನು ಕ್ಷೀಣಗತಿಗೆ ತರುವೆನು. 16 ಇನ್ನು ಅದು ಇಸ್ರಾಯೇಲ್ ವಂಶದವರ ಭರವಸೆಯಾಗದೆ, ಇವರು ಅವರ ಕಡೆಗೆ ನೋಡಿದಾಗ ಪಾಪವನ್ನು ಜ್ಞಾಪಕಕ್ಕೆ ತರುವರು. ಆಗ ನಾನೇ ಸಾರ್ವಭೌಮ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ”
17 ಇಪ್ಪತ್ತೇಳನೆಯ ವರ್ಷದಲ್ಲಿ, ಮೊದಲನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು, 18 “ಮನುಷ್ಯಪುತ್ರನೇ, ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಟೈರಿಗೆ ಮುತ್ತಿಗೆ ಹಾಕಿ ತನ್ನ ಸೈನಿಕರಿಂದ ಅತಿಶ್ರಮವಾದ ಸೇವೆಯನ್ನು ಮಾಡಿಸಿದನು. ಪ್ರತಿಯೊಬ್ಬನ ತಲೆ ಬೋಳಾಗಿದೆ, ಪ್ರತಿಯೊಬ್ಬನ ಹೆಗಲೂ ಸುಲಿದು ಹೋಗಿದೆ. ಆದರೆ ಅವನು ಆ ಮುತ್ತಿಗೆಯಲ್ಲಿ ಅವನು ಪಟ್ಟ ಶ್ರಮಕ್ಕೆ ಅವನಿಗಾಗಲಿ ಅವನ ಸೈನಿಕರಿಗಾಗಲಿ ಟೈರನಿಂದ ಪ್ರತಿಫಲವೇನೂ ದೊರೆಯಲಿಲ್ಲ. 19 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಗೆ ಈಜಿಪ್ಟ್ ದೇಶವನ್ನು ಕೊಡುತ್ತೇನೆ, ಅವನು ಅದರ ಜನಸಮೂಹವನ್ನೂ ಅದರ ಕೊಳ್ಳೆಯನ್ನೂ ಅದರ ಸುಲಿಗೆಯನ್ನೂ ಸೂರೆಮಾಡುವನು. ಇದೇ ಅವನ ದಂಡು ಪಟ್ಟ ಶ್ರಮಕ್ಕೆ ಪ್ರತಿಫಲವಾಗುವುದು. 20 ಅವನು ಅದಕ್ಕೆ ವಿರುದ್ಧವಾಗಿ ಪಟ್ಟ ಕಷ್ಟಗಳಿಗೋಸ್ಕರ ನಾನು ಅವನಿಗೆ ಈಜಿಪ್ಟ್ ದೇಶವನ್ನು ಕೊಟ್ಟಿದ್ದೇನೆ; ನನಗೋಸ್ಕರ ಸೇವೆಮಾಡಿದ್ದಾರೆ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
21 “ಆ ದಿನದಲ್ಲಿ ನಾನು ಇಸ್ರಾಯೇಲರ ಮನೆತನದವರ ಕೊಂಬನ್ನು ಚಿಗುರಿಸುವೆನು. ಅವರ ಮಧ್ಯದಲ್ಲಿ ನಿನ್ನ ಬಾಯನ್ನು ತೆರೆಯುವಂತೆ ಮಾಡುವೆನು. ಆಗ ಅವರು ನಾನೇ ಯೆಹೋವ ದೇವರೆಂದು ತಿಳಿಯುವರು.”