4
ಯೆರೂಸಲೇಮಿನ ಮುತ್ತಿಗೆಯ ಸೂಚನೆಗಳು
“ಮನುಷ್ಯಪುತ್ರನೇ, ನೀನು ಒಂದು ಇಟ್ಟಿಗೆಯನ್ನು ತೆಗೆದುಕೊಂಡು, ನಿನ್ನ ಮುಂದಿಟ್ಟುಕೊಂಡು, ಅದರ ಮೇಲೆ ಯೆರೂಸಲೇಮ್ ನಗರದ ನಕ್ಷೆಯನ್ನು ಬರೆ. ಆ ನಕ್ಷೆಯ ಸುತ್ತಲು ದಿಬ್ಬ ಹಾಕಿ, ಒಡ್ಡು ಕಟ್ಟಿ, ಪಾಳೆಯಗಳನ್ನು ಮಾಡಿ, ಭಿತ್ತಿಭೇದಕ ಯಂತ್ರಗಳನ್ನು ನಿಲ್ಲಿಸಿ, ಅದನ್ನು ಮುತ್ತಿಗೆ ಹಾಕು. ಆಮೇಲೆ ಕಬ್ಬಿಣದ ಹಂಚನ್ನು ತೆಗೆದುಕೊಂಡು, ಅದನ್ನು ನಿನಗೂ, ಆ ಪಟ್ಟಣಕ್ಕೂ ಮಧ್ಯೆ ಕಬ್ಬಿಣದ ಗೋಡೆಯನ್ನಾಗಿ ನಿಲ್ಲಿಸಿ, ಆ ಪಟ್ಟಣದ ಮೇಲೆ ದೃಷ್ಟಿಯಿಡು, ಅದು ಮುತ್ತಲಾಗುವುದು. ನೀನು ಅದನ್ನು ಮುತ್ತಿದಂತಾಗುವುದು. ಇದು ಇಸ್ರಾಯೇಲಿನ ಜನರಿಗೆ ಒಂದು ಸಂಕೇತ.
“ನೀನು ನಿನ್ನ ಎಡಗಡೆಯಲ್ಲಿ ಮಲಗಿ, ಇಸ್ರಾಯೇಲಿನ ಜನರ ಅಕ್ರಮಗಳನ್ನು ನಿಮ್ಮ ಮೇಲಿಡಬೇಕು. ನೀನು ಎಡಗಡೆಯಲ್ಲಿ ಮಲಗುವ ದಿವಸಗಳ ಲೆಕ್ಕದ ಪ್ರಕಾರ ಅವರ ಅಕ್ರಮಗಳನ್ನು ನಿಮ್ಮ ಮೇಲೆ ಹೊತ್ತುಕೊಂಡಿರಬೇಕು. ನಾನು ದಿವಸಗಳ ಲೆಕ್ಕದ ಪ್ರಕಾರ ಅವರ ಅಕ್ರಮದ ವರ್ಷಗಳನ್ನು ನಿನಗೆ ನೇಮಿಸಿದ್ದೇನೆ. ಅವು ಮುನ್ನೂರ ತೊಂಬತ್ತು ದಿವಸಗಳಾಗಿವೆ. ಹೀಗೆ ನೀನು ಇಸ್ರಾಯೇಲಿನ ಜನರ ಅಕ್ರಮಗಳನ್ನು ಹೊರಬೇಕು.
“ನೀನು ಇವುಗಳನ್ನು ಮಾಡಿದ ಮೇಲೆ ಇನ್ನೊಂದು ಸಾರಿ ಬಲಗಡೆಯಲ್ಲಿ ಮಲಗಿ, ಯೆಹೂದ ಜನರ ಅಕ್ರಮವನ್ನು ನಲವತ್ತು ದಿವಸ ಹೊರಬೇಕು. ನಾನು ನಿನಗೆ ಒಂದೊಂದು ದಿನವನ್ನು ಒಂದೊಂದು ವರ್ಷಕ್ಕೆ ನೇಮಿಸಿದ್ದೇನೆ. ನೀನು ಯೆರೂಸಲೇಮಿನ ಮುತ್ತಿಗೆಯ ಕಡೆಗೆ ನಿನ್ನ ಮುಖವನ್ನು ಇಡಬೇಕು. ನಿನ್ನ ಭುಜವನ್ನು ನೀನು ಬರಿದುಮಾಡಿಕೊಂಡು, ಅದಕ್ಕೆ ವಿರೋಧವಾಗಿ ಪ್ರವಾದಿಸಬೇಕು. ನಾನು ನಿನ್ನ ಮೇಲೆ ಹಗ್ಗಗಳನ್ನು ಇಡುತ್ತೇನೆ. ನೀನು ನಿನ್ನ ಮುತ್ತಿಗೆಯ ದಿವಸಗಳು ಮುಗಿಯುವವರೆಗೂ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೊರಳದಂತೆ ನಿನ್ನನ್ನು ಬಂಧಿಸುವೆನು.
“ನೀನು ಗೋಧಿ, ಜವೆಗೋಧಿ, ಅವರೆ, ಅಲಸಂದಿ, ನವಣೆ, ಸಜ್ಜೆಗಳನ್ನು ತೆಗೆದುಕೊಂಡು, ಅವುಗಳನ್ನು ಒಂದು ಮಡಿಕೆಯಲ್ಲಿಟ್ಟು, ನೀನು ಒಂದು ಕಡೆಯಲ್ಲಿ ಮಲಗುವ ದಿವಸಗಳ ಲೆಕ್ಕದ ಪ್ರಕಾರ ನಿನಗಾಗಿ ರೊಟ್ಟಿಯನ್ನು ಮಾಡಿಕೊಂಡು, ಮುನ್ನೂರ ತೊಂಬತ್ತು ದಿನಗಳು ಅವರಿಂದಲೇ ತಿನ್ನಬೇಕು. 10 ನೀನು ತಿನ್ನುವ ಆಹಾರದ ತೂಕದ ಪ್ರಕಾರ ಅದು ಒಂದು ದಿನಕ್ಕೆ 230 ಗ್ರಾಂ ಇರಲಿ, ನೀನು ಅದನ್ನು ಆಗಾಗ್ಗೆ ತಿನ್ನಬೇಕು. 11 ನೀನು ನೀರನ್ನು ಸಹ ಅಳತೆಯ ಪ್ರಕಾರ ಸುಮಾರು ಅರ್ಧ ಲೀಟರ್ ಕಾಲಕಾಲಕ್ಕೆ ಸರಿಯಾಗಿ ಕುಡಿಯಬೇಕು. 12 ಇದಲ್ಲದೆ ನೀನು ಆಹಾರವನ್ನು ಜವೆಗೋಧಿಯ ರೊಟ್ಟಿಗಳಂತೆ ತಿನ್ನಬೇಕು. ಅದನ್ನು ಸೌದೆಗೆ ಬದಲಾಗಿ ಮನುಷ್ಯರ ಮಲವನ್ನು ಉರಿಸಿ ಅವರ ಕಣ್ಣುಗಳ ಮುಂದೆ ಅಡಿಗೆ ಮಾಡಬೇಕು.” 13 ಯೆಹೋವ ದೇವರು ಹೇಳಿದ್ದೇನೆಂದರೆ, “ಈ ರೀತಿಯಾಗಿ ಇಸ್ರಾಯೇಲಿನ ಜನರು ನಾನು ಅವರನ್ನು ಓಡಿಸುವ ಜನಾಂಗಗಳ ನಡುವೆ ಅಶುದ್ಧ ಆಹಾರವನ್ನು ತಿನ್ನುವರು.”
14 ಅದಕ್ಕೆ ನಾನು, “ಅಯ್ಯೋ, ಸಾರ್ವಭೌಮ ಯೆಹೋವ ದೇವರೇ, ನಾನು ಹೊಲಸನ್ನು ಮುಟ್ಟಿದವನಲ್ಲ, ನಾನು ಹುಟ್ಟಿದ ದಿನದಿಂದ ಇಂದಿನವರೆಗೂ ಸತ್ತ ಪಶುವಿನ ಮಾಂಸವನ್ನಾಗಲಿ, ಕಾಡುಮೃಗ ಕೊಂದ ಪಶುವಿನ ಮಾಂಸವನ್ನಾಗಲಿ ತಿಂದವನೇ ಅಲ್ಲ. ಯಾವ ಅಸಹ್ಯ ಪದಾರ್ಥವೂ ನನ್ನ ಬಾಯೊಳಗೆ ಸೇರಲಿಲ್ಲ,” ಎಂದು ಅರಿಕೆಮಾಡಿದೆ.
15 ಆಗ ಅವರು ನನಗೆ, “ಇಗೋ, ಮನುಷ್ಯನ ಮಲಕ್ಕೆ ಬದಲಾಗಿ ಹಸುವಿನ ಸಗಣಿಯನ್ನು ಬಳಸಲು ನಿನಗೆ ಅನುಮತಿಸಿದ್ದೇನೆ. ಅದರಿಂದ ನೀನು ರೊಟ್ಟಿಯನ್ನು ತಯಾರಿಸಬಹುದು,” ಎಂದನು.
16 ಇದಾದ ಮೇಲೆ ಅವರು ನನಗೆ, “ಮನುಷ್ಯಪುತ್ರನೇ, ಇಗೋ, ನಾನು ಯೆರೂಸಲೇಮಿನಲ್ಲಿ ಆಹಾರ ಸರಬರಾಜನ್ನು ಮುರಿಯುವೆನು. ಅವರು ತೂಕದ ಪ್ರಕಾರ ಚಿಂತೆಯಿಂದ ರೊಟ್ಟಿಯನ್ನು ತಿನ್ನುವರು. ನೀರನ್ನು ಅಳತೆಯ ಪ್ರಕಾರ ನಿರಾಶೆಯಿಂದ ಕುಡಿಯುವರು. 17 ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಸ್ತಬ್ಧರಾಗಿ, ಒಬ್ಬರ ಸಂಗಡ ಒಬ್ಬರು ತಮ್ಮ ಪಾಪಗಳಿಗಾಗಿ ಕ್ಷಯಿಸಿ ಹೋಗುವರು.