9
ವಿಗ್ರಹಾರಾಧಕರ ಮೇಲೆ ತೀರ್ಪು
ಆಗ ಅವರು ದೊಡ್ಡ ಧ್ವನಿಯಿಂದ, “ನಗರದ ಜನರಿಗೆ ನ್ಯಾಯತೀರಿಸಲು ನೇಮಕವಾಗಿರುವವರೇ, ನಿಮ್ಮ ಆಯುಧಗಳನ್ನು ಹಿಡಿದವರಾಗಿ ಸಮೀಪಿಸಿರಿ,” ಎಂದು ಹೇಳುವುದನ್ನು ನಾನು ಕೇಳಿದೆನು. ಕೂಡಲೇ ಗದೆಗಳನ್ನು ಹಿಡಿದುಕೊಂಡ ಆರು ಮಂದಿ ಪುರುಷರು ಉತ್ತರಾಭಿಮುಖವಾಗಿರುವ ಮೇಲಣ ಹೆಬ್ಬಾಗಿಲಿನ ಮಾರ್ಗವಾಗಿ ಬಂದರು. ನಾರಿನ ಬಟ್ಟೆಯನ್ನು ಹೊದ್ದುಕೊಂಡು ಲೇಖಕನ ಮಸಿಕುಡಿಕೆಯನ್ನು ನಡುವಿಗೆ ಕಟ್ಟಿಕೊಂಡಿರುವ ಮತ್ತೊಬ್ಬ ಪುರುಷನು ಅವರ ಮಧ್ಯದಲ್ಲಿದ್ದನು. ಇವರೆಲ್ಲರೂ ಒಳಕ್ಕೆ ಸೇರಿ ಕಂಚಿನ ಬಲಿಪೀಠದ ಪಕ್ಕದಲ್ಲಿ ನಿಂತುಕೊಂಡರು.
ಇಷ್ಟರಲ್ಲಿ ಇಸ್ರಾಯೇಲಿನ ದೇವರ ತೇಜಸ್ಸು ತನ್ನ ವಾಹನವಾದ ಕೆರೂಬಿಯನ್ನು ಬಿಟ್ಟು ಮೇಲಕ್ಕೇರಿ, ಆಲಯದ ಹೊಸ್ತಿಲಿನ ಮೇಲ್ಗಡೆ ನಿಂತಿತ್ತು. ಆಗ ನಾರಿನ ಬಟ್ಟೆಯನ್ನು ಹೊದ್ದುಕೊಂಡು, ಲೇಖಕನ ಮಸಿಕೊಂಬನ್ನು ನಡುವಿಗೆ ಕಟ್ಟಿಕೊಂಡಿದ್ದ ಪುರುಷನನ್ನು ಯೆಹೋವ ದೇವರು ಕೂಗಿ ಅವನಿಗೆ, “ಯೆರೂಸಲೇಮಿನ ಪಟ್ಟಣದ ಮಧ್ಯೆ ಹಾದು ಹೋಗಿ, ಅವರ ಮಧ್ಯೆ ನಡೆಯುವ ಎಲ್ಲಾ ಅಸಹ್ಯವಾದವುಗಳ ನಿಮಿತ್ತ ನಿಟ್ಟುಸಿರು ಬಿಡುತ್ತಾ ಅಳುತ್ತಿರುವವರೆಲ್ಲರ ಹಣೆಯ ಮೇಲೆ ಗುರುತು ಹಾಕು,” ಎಂದರು.
ಮಿಕ್ಕವರಿಗೆ, “ನೀವು ಪಟ್ಟಣದಲ್ಲೆಲ್ಲಾ ಇವನ ಹಿಂದೆ ಸಂಚರಿಸುತ್ತಾ ಹತಿಸಿರಿ, ಯಾರನ್ನೂ ಕಟಾಕ್ಷಿಸದಿರಿ, ಉಳಿಸದಿರಿ, ವೃದ್ಧ, ಯುವಕ, ಯುವತಿಯರನ್ನು ಮತ್ತು ಎಳೆಗೂಸುಗಳನ್ನು ಮತ್ತು ಹೆಂಗಸರನ್ನು ಕೊಂದುಹಾಕಿರಿ. ಆದರೆ ಗುರುತು ಯಾವನ ಮೇಲೆ ಇದೆಯೋ, ಅವನನ್ನು ಮುಟ್ಟಬೇಡಿರಿ. ನನ್ನ ಪರಿಶುದ್ಧ ಸ್ಥಳದಿಂದಲೇ ಪ್ರಾರಂಭಿಸಿರಿ” ಎಂದಾಗ, ಅವರು ಆಲಯದ ಮುಂದೆ ಇದ್ದ ಹಿರಿಯರಿಂದ ಪ್ರಾರಂಭಿಸಿದರು.
ದೇವರು ಅವರಿಗೆ, “ಆಲಯವನ್ನು ಅಶುದ್ಧ ಮಾಡಿರಿ, ಹತರಾದವರಿಂದ ಅಂಗಳಗಳನ್ನು ತುಂಬಿರಿ, ಹೊರಡಿರಿ,” ಎಂದು ಹೇಳಿದರು. ಆಗ ಅವರು ಹೊರಟು ನಗರದಲ್ಲಿದ್ದವರನ್ನು ಕೊಂದರು. ಅವರು ಹೊಡೆಯುತ್ತಿರುವಾಗ ಅಲ್ಲಿ ಒಂಟಿಗನಾಗಿ ಉಳಿದ ನಾನು ಅಡ್ಡಬಿದ್ದು, “ಅಯ್ಯೋ, ಸಾರ್ವಭೌಮ ಯೆಹೋವ ದೇವರೇ, ನೀವು ಯೆರೂಸಲೇಮಿನ ಮೇಲೆ ನಿಮ್ಮ ಕೋಪಾಗ್ನಿಯನ್ನು ಸುರಿದು, ಇಸ್ರಾಯೇಲರಲ್ಲಿ ಉಳಿದವರನ್ನೆಲ್ಲಾ ನಾಶಮಾಡುವಿರಾ?” ಎಂದೆನು.
ಆಗ ಅವರು ನನಗೆ, “ಇಸ್ರಾಯೇಲಿನ ಮತ್ತು ಯೆಹೂದ ಮನೆತನದವರ ಅಕ್ರಮವು ಅತಿ ದೊಡ್ಡದಾಗಿದೆ. ದೇಶವು ರಕ್ತದಿಂದ ತುಂಬಿದೆ, ಪಟ್ಟಣವು ಅಧರ್ಮದಿಂದ ತುಂಬಿದೆ. ‘ಯೆಹೋವ ದೇವರು ದೇಶವನ್ನು ತೊರೆದುಬಿಟ್ಟಿದ್ದಾರೆ, ಯೆಹೋವ ದೇವರು ನೋಡುವುದಿಲ್ಲ,’ ಎಂದು ಅವರು ಹೇಳುತ್ತಾರೆ. 10 ನಾವಂತು ಅವರನ್ನು ಕಟಾಕ್ಷಿಸೆನು, ಉಳಿಸೆನು, ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು,” ಎಂದು ಹೇಳಿದರು.
11 ನಾರುಮಡಿಯನ್ನು ಧರಿಸಿಕೊಂಡು ದೌತಿಯನ್ನು ತನ್ನ ನಡುವಿಗೆ ಕಟ್ಟಿಕೊಂಡಂಥ ಆ ಮನುಷ್ಯನು, “ವರ್ತಮಾನವನ್ನು ತಂದು ಆಜ್ಞಾಪಿಸಿದ ಹಾಗೆ ಮಾಡಿದ್ದೇನೆ,” ಎಂದನು.