4
ದೇವಾಲಯವನ್ನು ಪುನಃ ಕಟ್ಟುವುದಕ್ಕೆ ಅಡ್ಡಿ ಮಾಡಿದ್ದು
ಸೆರೆಯಿಂದ ಬಂದವರು ಇಸ್ರಾಯೇಲ್ ದೇವರಾದ ಯೆಹೋವ ದೇವರಿಗಾಗಿ ಆಲಯವನ್ನು ಕಟ್ಟುತ್ತಾರೆಂಬುದಾಗಿ ಯೆಹೂದದ ಮತ್ತು ಬೆನ್ಯಾಮೀನನ ಶತ್ರುಗಳು ಕೇಳಿದಾಗ ಅವರು ಜೆರುಬ್ಬಾಬೆಲನ ಬಳಿಗೂ, ಕುಟುಂಬಗಳ ಮುಖ್ಯಸ್ಥರ ಬಳಿಗೂ ಬಂದು ಅವರಿಗೆ, “ನಾವು ನಿಮ್ಮ ಹಾಗೆ ನಿಮ್ಮ ದೇವರನ್ನು ಹುಡುಕುತ್ತೇವೆ. ನಮ್ಮನ್ನು ಇಲ್ಲಿಗೆ ಬರಮಾಡಿದ ಅಸ್ಸೀರಿಯದ ಅರಸನಾದ ಏಸರ್‌ಹದ್ದೋನ್ ಎಂಬವನ ದಿವಸಗಳು ಮೊದಲುಗೊಂಡು, ಅವರಿಗೆ ನಾವೂ ಬಲಿಯನ್ನು ಅರ್ಪಿಸುತ್ತಾ ಇದ್ದೇವೆ, ಕಟ್ಟುವುದರಲ್ಲಿ ನಾವು ಸಹಾಯ ಮಾಡುತ್ತೇವೆ,” ಎಂದರು.
ಆದರೆ ಜೆರುಬ್ಬಾಬೆಲನೂ, ಯೇಷೂವನೂ, ಮಿಕ್ಕಾದ ಇಸ್ರಾಯೇಲಿನ ಕುಟುಂಬಗಳ ಮುಖ್ಯಸ್ಥರೂ ಅವರಿಗೆ, “ನಮ್ಮ ದೇವರಿಗೆ ಆಲಯವನ್ನು ಕಟ್ಟುವುದರಲ್ಲಿ ನಿಮಗೆ ಭಾಗವಿಲ್ಲ. ಪಾರಸಿಯ ಅರಸನಾದ ಕೋರೆಷನು ನಮಗೆ ಆಜ್ಞಾಪಿಸಿದ ಹಾಗೆ, ನಾವು ಇಸ್ರಾಯೇಲ್ ದೇವರಾಗಿರುವ ಯೆಹೋವ ದೇವರಿಗೆ ಅದನ್ನು ಕಟ್ಟುವೆವು,” ಎಂದರು.
ಆಗ ಸುತ್ತಲಿದ್ದ ಜನಾಂಗಗಳವರು ಯೆಹೂದದ ಜನರನ್ನು ನಿರಾಶರನ್ನಾಗಿ ಮಾಡಲು ಮತ್ತು ಕಟ್ಟುವುದನ್ನು ಮುಂದುವರಿಸುವ ವಿಷಯದಲ್ಲಿ ಭಯಪಡಿಸಲು ಮುಂದಿದ್ದರು. ಪಾರಸಿಯ ಅರಸನಾದ ಕೋರೆಷನ ದಿನಗಳಿಂದ ಹಿಡಿದು, ಪಾರಸಿಯ ಅರಸನಾದ ದಾರ್ಯಾವೆಷನ ಆಳ್ವಿಕೆಯವರೆಗೂ, ಅವರ ಯೋಚನೆಯನ್ನು ವ್ಯರ್ಥಮಾಡುವುದಕ್ಕೆ ಅವರ ವಿರೋಧವಾಗಿ ವಕೀಲರನ್ನು ಹಣಕೊಟ್ಟು ಇಟ್ಟುಕೊಂಡರು.
ಅಹಷ್ವೇರೋಷನ ಮತ್ತು ಅರ್ತಷಸ್ತನ ಆಳ್ವಿಕೆಯಲ್ಲಿ ವಿರೋಧ
ಆದರೆ ಅಹಷ್ವೇರೋಷನು ಆಳುವಾಗ, ಅವನ ಆಳ್ವಿಕೆಯ ಪ್ರಾರಂಭದಲ್ಲಿ, ಅವರು ಯೆಹೂದ ಮತ್ತು ಯೆರೂಸಲೇಮಿನ ನಿವಾಸಿಗಳಿಗೆ ವಿರೋಧವಾಗಿ ದೂರು ಸಲ್ಲಿಸಿದರು.
ಅರ್ತಷಸ್ತನ ದಿವಸಗಳಲ್ಲಿ ಬಿಷ್ಲಾಮನೂ, ಮಿತ್ರದಾತನೂ, ಟಾಬೆಯೇಲನೂ, ಮಿಕ್ಕಾದ ಅವರ ಜೊತೆಗಾರರೂ ಪಾರಸಿಯ ಅರಸನಾದ ಅರ್ತಷಸ್ತನಿಗೆ ಒಂದು ಪತ್ರ ಬರೆದರು. ಬರೆದ ಆ ಪತ್ರವು ಅರಾಮ್ಯ ಭಾಷೆಯಲ್ಲಿಯೂ, ಅರಾಮ್ಯ ಲಿಪಿಯಲ್ಲಿಯೂ ಇತ್ತು.
ದೇಶಾಧಿಪತಿಯಾದ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ, ಯೆರೂಸಲೇಮಿಗೆ ವಿರೋಧವಾಗಿ ಈ ಕೆಳಗೆ ಕಂಡಂತೆ ಕಾಗದವನ್ನು ಬರೆದು ಅರ್ತಷಸ್ತನಿಗೆ ಕಳುಹಿಸಿದ್ದರು.
ದೇಶಾಧಿಪತಿಯಾದ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ, ಪರ್ಷಿಯಾ, ಯೆರೆಕ್ ಹಾಗೂ ಬಾಬೆಲಿನವರು, ಶೂಷನಿನವರ ಮತ್ತು ಏಲಾಮ್ಯರ ನ್ಯಾಯಾಧೀಶರು, ಅಧಿಕಾರಿಗಳು ಮತ್ತು ಆಡಳಿತಗಾರರು, 10 ಮತ್ತು ಮಹಾ ಶ್ರೀಮತ್ ಆಸೆನಪ್ಪರನು ಕರೆದುತಂದು ಸಮಾರ್ಯ ಪಟ್ಟಣದಲ್ಲಿ ಮತ್ತು ಯೂಫ್ರೇಟೀಸ್ ನದಿಯ ಈಚೆಗಿರುವ ಬೇರೆ ಊರುಗಳಲ್ಲಿ ಇರಿಸಿದ ಇತರ ಜನರು, ಬರೆಯುವುದು ಏನೆಂದರೆ:
11 ಅವರು ಅರಸನಿಗೆ ಕಳುಹಿಸಿದ ಪತ್ರದ ಪ್ರತಿ ಈ ರೀತಿಯಿತ್ತು:
ಅರ್ತಷಸ್ತ ರಾಜರಿಗೆ,
ತಮ್ಮ ಸೇವಕರಾದ ಯೂಫ್ರೇಟೀಸ್ ನದಿಯ ಈಚೆಯವರು:
12 ಅದಾಗಿ, ತಮ್ಮ ಸನ್ನಿಧಿಯಿಂದ ನಮ್ಮ ಬಳಿಗೆ ಬಂದ ಯೆಹೂದ್ಯರು, ಯೆರೂಸಲೇಮನ್ನು ಸೇರಿ, ರಾಜಕಂಟಕವಾದ ಆ ದುಷ್ಟ ಪಟ್ಟಣವನ್ನೂ, ಅದರ ಪೌಳಿಗೋಡೆಯನ್ನೂ ಮತ್ತೆ ಕಟ್ಟುವುದಕ್ಕೆ ಪ್ರಾರಂಭಿಸಿ, ಪೌಳಿಗೋಡೆಯ ಅಸ್ತಿವಾರವನ್ನು ಮುಗಿಸಿದ್ದಾರೆ ಎಂಬುದಾಗಿ ನಾವು ರಾಜರಿಗೆ ಅರಿಕೆ ಮಾಡಿಕೊಳ್ಳುತ್ತೇವೆ.
13 ಆ ಪಟ್ಟಣವನ್ನೂ, ಅದರ ಗೋಡೆಗಳನ್ನೂ ಕಟ್ಟುವುದು ಮುಗಿದರೆ, ಅವರು ಕಪ್ಪ, ತೆರಿಗೆ, ಸುಂಕಗಳನ್ನು ಕೊಡುವುದಿಲ್ಲ. ಕಡೆಯಲ್ಲಿ ಅರಸರಿಗೆ ನಷ್ಟವುಂಟಾಗುವುದೆಂದು ತಮಗೆ ತಿಳಿದಿರಲಿ. 14 ನಾವಾದರೋ ಅರಮನೆಯ ಉಪ್ಪನ್ನು ತಿನ್ನುವವರು, ಅರಸರಿಗೆ ಅಪಮಾನವಾಗುವುದನ್ನು ಕಂಡು ಸುಮ್ಮನೆ ಇರುವುದು ಉಚಿತವಲ್ಲವೆಂದು ತಿಳಿದು, ತಮಗೆ ಈ ಪತ್ರದ ಮೂಲಕ ಸುದ್ದಿ ಕಳುಹಿಸಿದ್ದೇವೆ. 15 ಈ ವಿಷಯವಾಗಿ ತಾವು ತಮ್ಮ ತಂದೆತಾತಂದಿರ ಚರಿತ್ರ ಗ್ರಂಥದಲ್ಲಿ ಪರಿಶೋಧಿಸಬೇಕೆಂಬುದು ನಮ್ಮ ಅಭಿಪ್ರಾಯ. ಆ ಪಟ್ಟಣ ರಾಜಕಂಟಕವಾದ ಪಟ್ಟಣ. ಅರಸರಿಗೂ, ಸಂಸ್ಥಾನಗಳಿಗೂ ತೊಂದರೆ ಹುಟ್ಟಿಸುವಂಥ ಪಟ್ಟಣ. ಇದು ಪೂರ್ವಕಾಲದಿಂದಲೂ ದೇಶದ್ರೋಹ ಮಾಡುತ್ತಾ ಬಂದಿದೆ ಎಂದೂ ಹಾಗು ಆ ಕಾರಣದಿಂದಲೇ ನೆಲಸಮವಾಯಿತೆಂದೂ ಆ ಚರಿತ್ರ ಗ್ರಂಥದಲ್ಲಿ ಕಂಡುಬರುತ್ತದೆ. 16 ಆ ಪಟ್ಟಣವನ್ನೂ, ಅದರ ಗೋಡೆಗಳನ್ನೂ ಪುನಃ ಕಟ್ಟುವುದಾದರೆ, ತಮಗೆ ಯೂಫ್ರೇಟೀಸ್ ನದಿಯ ಈಚೆಯಲ್ಲಿ ಒಂದು ಅಂಗುಲವೂ ಉಳಿಯದು ಎಂಬುದಾಗಿ ಅರಸನಿಗೆ ಅರಿಕೆ ಮಾಡಿಕೊಳ್ಳುತ್ತೇವೆ.
17 ಈ ಪತ್ರಕ್ಕೆ ಅರಸನು ಅವರಿಗೆ ಕೊಟ್ಟ ಉತ್ತರ:
ದೇಶಾಧಿಪತಿಯಾದ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ ಅವರಿಗೂ, ಸಮಾರ್ಯದಲ್ಲಿರುವವರಿಗೂ ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಇತರರಿಗೂ,
ಕ್ಷೇಮಾಭಿಲಾಶೆಗಳು.
18 ನೀವು ಕಳುಹಿಸಿದ್ದ ಪತ್ರವನ್ನು ನನ್ನ ಸನ್ನಿಧಿಯಲ್ಲಿ ಸ್ಪಷ್ಟವಾಗಿ ಓದಿ ಅನುವಾದ ಮಾಡಲಾಯಿತು. 19 ನನ್ನ ಆಜ್ಞಾನುಸಾರ ವಿಚಾರಣೆಯಾದಾಗ, ಆ ಪಟ್ಟಣದವರು ಪೂರ್ವಕಾಲದಿಂದಲೇ ಅರಸರಿಗೆ ವಿರೋಧವಾಗಿ ಪ್ರತಿಭಟಿಸುತ್ತಾ, ದೇಶದ್ರೋಹ ಮಾಡುತ್ತಾ ಬಂದಿದ್ದಾರೆ. 20 ಇದಲ್ಲದೆ ಯೆರೂಸಲೇಮಿನಲ್ಲಿ ಬಲಿಷ್ಠ ರಾಜರು ಆಳುತ್ತಾ, ಯೂಫ್ರೇಟೀಸ್ ನದಿಯಾಚೆಯ ಎಲ್ಲಾ ಪ್ರದೇಶಗಳಲ್ಲಿ ಅಧಿಕಾರ ನಡೆಸುತ್ತಾ, ಕಪ್ಪ, ತೆರಿಗೆ, ಸುಂಕಗಳನ್ನು ತೆಗೆದುಕೊಳ್ಳುತ್ತಿದ್ದರೆಂದು ಕಂಡುಬಂದಿದೆ. 21 ಆದ್ದರಿಂದ ಆ ಜನರನ್ನು ತಡೆಯಬೇಕೆಂತಲೂ, ನನ್ನ ಅಪ್ಪಣೆಯಾಗುವವರೆಗೆ ಆ ಪಟ್ಟಣವನ್ನು ಕಟ್ಟಲು ಅವಕಾಶ ಕೊಡಬಾರದೆಂತಲೂ ಪ್ರಕಟಿಸಿರಿ. 22 ರಾಜರಿಗೆ ಹಾನಿಯುಂಟಾಗದ ಹಾಗೆ ಜಾಗರೂಕತೆಯಿಂದ ಇರಿ, ಉದಾಸೀನರಾಗಿರಬೇಡಿರಿ.
23 ಅರಸನಾದ ಅರ್ತಷಸ್ತನ ಪತ್ರದ ಪ್ರತಿಯು ರೆಹೂಮನಿಗೂ, ಕಾರ್ಯದರ್ಶಿ ಶಿಂಷೈಯಿಗೂ, ಅವರ ಜೊತೆಗಾರರಿಗೂ ಓದಿದ ತರುವಾಯ, ಅವರು ಯೆರೂಸಲೇಮಿನಲ್ಲಿ ಇರುವ ಯೆಹೂದ್ಯರ ಬಳಿಗೆ ತ್ವರೆಯಾಗಿ ಹೋಗಿ, ಒತ್ತಾಯದಿಂದ ಮತ್ತು ಅಧಿಕಾರದಿಂದ ಅವರನ್ನು ನಿಲ್ಲಿಸುವಂತೆ ಮಾಡಿದರು.
 
24 ಅಂದಿನಿಂದ ಪರ್ಷಿಯ ದೇಶದ ರಾಜ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದವರೆಗೂ ಯೆರೂಸಲೇಮಿನ ದೇವಾಲಯವನ್ನು ಕಟ್ಟುವ ಕೆಲಸವು ನಿಂತುಹೋಯಿತು.