6
ಮೊರ್ದೆಕೈಗೆ ಅರಸನಿಂದ ಗೌರವ
ಆ ರಾತ್ರಿ ಅರಸನಿಗೆ ನಿದ್ರೆ ಬರಲಿಲ್ಲ. ಆದ್ದರಿಂದ ಅರಸನು ಇತಿಹಾಸ ಘಟನೆಗಳನ್ನು ಬರೆದಿಟ್ಟಿದ್ದ ಗ್ರಂಥವನ್ನು ತೆಗೆದುಕೊಂಡು ಬರಲು ಹೇಳಿದನು. ಅದನ್ನು ಅರಸನ ಮುಂದೆ ತಂದು ಓದಿಸಿದಾಗ, ದ್ವಾರಪಾಲಕರಾಗಿದ್ದ ರಾಜಕಂಚುಕಿಯರಲ್ಲಿ ಇಬ್ಬರಾದ ಬಿಗೆತಾನನೂ ತೆರೆಷನೂ ಅರಸನಾದ ಅಹಷ್ವೇರೋಷನನ್ನು ಕೊಲ್ಲಬೇಕೆಂದು ಒಳಸಂಚುಮಾಡಿದ ಘಟನೆಯು ಬರೆದಿತ್ತು. ಮೊರ್ದೆಕೈಯು ಹೇಗೆ ಅದನ್ನು ಅರಸನಿಗೆ ತಿಳಿಸಿದನೆಂದು ಸಹ ಅದರಲ್ಲಿ ಬರೆದಿತ್ತು.
ಆಗ ಅರಸನು, “ಈ ಸತ್ಕಾರ್ಯಕ್ಕಾಗಿ ಮೊರ್ದೆಕೈಯನಿಗೆ ಯಾವ ಸನ್ಮಾನ ಮಾಡಲಾಯಿತು?” ಎಂದು ವಿಚಾರಿಸಿದನು.
ಅರಸನ ಸೇವಕರು, “ಮೊರ್ದೆಕೈಯನಿಗೆ ಏನೂ ಮಾಡಿಲ್ಲ,” ಎಂದು ಹೇಳಿದರು.
ಆಗ ಅರಸನು, “ಯಾರು ಅಂಗಳದಲ್ಲಿ?” ಎಂದನು. ಅಷ್ಟರಲ್ಲಿ ಹಾಮಾನನು ತಾನು ಸಿದ್ಧಮಾಡಿಸಿದ ಗಲ್ಲುಮರಕ್ಕೆ ಮೊರ್ದೆಕೈಯನ್ನು ನೇಣುಹಾಕಿಸಲು ಅರಸನ ಸಂಗಡ ಮಾತನಾಡಲು ಅರಮನೆಯ ಹೊರಗಿನ ಅಂಗಳಕ್ಕೆ ಬಂದಿದ್ದನು.
ಆದ್ದರಿಂದ ಅರಸನ ಸೇವಕರು, “ಇಗೋ, ಹಾಮಾನನು ಅಂಗಳದಲ್ಲಿ ನಿಂತಿದ್ದಾನೆ,” ಎಂದರು.
ಅದಕ್ಕೆ ಅರಸನು, “ಅವನು ಒಳಗೆ ಬರಲಿ,” ಎಂದನು.
ಹಾಮಾನನು ಒಳಕ್ಕೆ ಬಂದಾಗ ಅರಸನು ಅವನಿಗೆ, “ಅರಸನು ಒಬ್ಬ ವ್ಯಕ್ತಿಯನ್ನು ಸನ್ಮಾನಿಸಲು ಬಯಸಿದರೆ ಮನುಷ್ಯನಿಗೆ ಅಂಥ ವ್ಯಕ್ತಿಗೆ ಮಾಡಬೇಕಾದದ್ದೇನು?” ಎಂದು ವಿಚಾರಿಸಿದನು.
ಆಗ ಹಾಮಾನನು ತನ್ನನ್ನು ಅಲ್ಲದೆ ಅರಸನು ಬೇರೆ ಯಾರನ್ನು ಸನ್ಮಾನಿಸಬೇಕೆಂದಿರುವನು ಎಂದುಕೊಂಡನು. ಆದ್ದರಿಂದ ಹಾಮಾನನು ಅರಸನಿಗೆ, “ಅರಸನು ಸನ್ಮಾನಿಸಬೇಕೆಂದಿರುವ ಮನುಷ್ಯನಿಗೆ ಮಾಡಬೇಕಾದದ್ದೇನೆಂದರೆ, ಅರಸನು ಧರಿಸಿಕೊಳ್ಳುವ ರಾಜವಸ್ತ್ರಗಳನ್ನೂ, ಅರಸನು ಸವಾರಿ ಮಾಡುವ ಕುದುರೆಯನ್ನೂ, ಅರಸನ ತಲೆಯ ಮೇಲೆ ಧರಿಸಿಕೊಳ್ಳುವ ರಾಜಕಿರೀಟವನ್ನೂ ತರಿಸಬೇಕು. ಆ ವಸ್ತ್ರಗಳನ್ನೂ ಕುದುರೆಯನ್ನೂ ಅರಸನ ಪ್ರಧಾನರಲ್ಲಿ ಒಬ್ಬನ ವಶಕ್ಕೆ ಕೊಡಬೇಕು. ಇವನು ಅರಸನು ಸನ್ಮಾನಿಸಬೇಕೆಂದಿರುವ ವ್ಯಕ್ತಿಗೆ ರಾಜವಸ್ತ್ರಗಳನ್ನು ತೊಡಿಸಿದ ತರುವಾಯ, ಅವನನ್ನು ಕುದುರೆಯ ಮೇಲೆ ಕೂರಿಸಿ ಪಟ್ಟಣ ಬೀದಿಗಳಲ್ಲಿ ಮೆರವಣಿಗೆ ಮಾಡಿಸುತ್ತಾ, ಅವನ ಮುಂದೆ, ‘ಅರಸನು ಸನ್ಮಾನಿಸಬೇಕೆಂದಿರುವ ಮನುಷ್ಯನಿಗೆ ಗೌರವಿಸುವ ರೀತಿ ಇದೇ!’ ಎಂದು ಪ್ರಕಟಿಸಬೇಕು,” ಎಂದನು.
10 ಆಗ ಅರಸನು ಹಾಮಾನನಿಗೆ, “ನೀನು ಹೇಳಿದ ಪ್ರಕಾರವೇ ಬೇಗನೆ ಹೋಗಿ ರಾಜವಸ್ತ್ರಗಳನ್ನೂ ಪಟ್ಟದ ಕುದುರೆಯನ್ನೂ ತೆಗೆದುಕೊಂಡು ಅರಮನೆಯ ಹೆಬ್ಬಾಗಿಲಲ್ಲಿ ಕುಳಿತಿರುವ ಯೆಹೂದ್ಯನಾದ ಮೊರ್ದೆಕೈಗೆ ಹಾಗೆಯೇ ಮಾಡು. ನೀನು ಸಲಹೆಮಾಡಿದ್ದರಲ್ಲಿ ಒಂದನ್ನೂ ಬಿಡದೆ, ಎಲ್ಲವನ್ನೂ ಮಾಡು,” ಎಂದು ಹಾಮಾನನಿಗೆ ಆಜ್ಞಾಪಿಸಿದನು.
11 ಆದ್ದರಿಂದ ಹಾಮಾನನು ರಾಜವಸ್ತ್ರಗಳನ್ನೂ ಪಟ್ಟದ ಕುದುರೆಯನ್ನೂ ತೆಗೆದುಕೊಂಡು ಮೊರ್ದೆಕೈಗೆ ಆ ವಸ್ತ್ರಗಳನ್ನು ತೊಡಿಸಿ, ಅವನನ್ನು ಕುದುರೆಯ ಮೇಲೆ ಕೂರಿಸಿ ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿ ಅವನ ಮುಂದೆ, “ಅರಸನು ಸನ್ಮಾನಿಸಬೇಕೆಂದಿರುವ ಮನುಷ್ಯನಿಗೆ ಗೌರವಿಸುವ ರೀತಿ ಇದೇ!” ಎಂದು ಸಾರಿದನು.
12 ಅನಂತರ ಮೊರ್ದೆಕೈ ಪುನಃ ಅರಮನೆಯ ಬಾಗಿಲಿಗೆ ಬಂದನು. ಆದರೆ ಹಾಮಾನನು ದುಃಖಪಟ್ಟು ತಲೆಯನ್ನು ಮುಚ್ಚಿಕೊಂಡು ತನ್ನ ಮನೆಗೆ ಶೀಘ್ರವಾಗಿ ಹೋದನು. 13 ಆಗ ಹಾಮಾನನು ತನ್ನ ಹೆಂಡತಿಯಾದ ಜೆರೆಷಳಿಗೂ ತನ್ನ ಸಮಸ್ತ ಸ್ನೇಹಿತರಿಗೂ ತನಗೆ ಆದದ್ದನ್ನೆಲ್ಲಾ ವಿವರವಾಗಿ ಹೇಳಿದನು.
ಆಗ ಅವನ ಸಲಹೆಗಾರರೂ ಹೆಂಡತಿಯಾದ ಜೆರೆಷಳೂ ಅವನಿಗೆ, “ಯಾವನ ಮುಂದೆ ನಿನ್ನ ಬೀಳುವಿಕೆ ಪ್ರಾರಂಭವಾಯಿತೋ, ಆ ಮೊರ್ದೆಕೈ ಯೆಹೂದ್ಯನಾಗಿದ್ದರೆ ನೀನು ಅವನನ್ನು ಜಯಿಸಲಾರೆ. ನಿಶ್ಚಯವಾಗಿ, ನೀನು ಅವನಿಂದ ನಾಶವಾಗುವಿ,” ಎಂದರು. 14 ಅವರು ಇನ್ನೂ ಅವನ ಸಂಗಡ ಮಾತನಾಡುತ್ತಿರುವಾಗಲೇ ರಾಜಕಂಚುಕಿಯವರು ಬಂದು, ಎಸ್ತೇರಳು ಏರ್ಪಡಿಸಿದ ಔತಣಕ್ಕೆ ಬೇಗನೆ ಬರಬೇಕೆಂದು ಹಾಮಾನನನ್ನು ಕರೆದರು.