9
ಹನ್ನೆರಡನೆಯ ತಿಂಗಳಾದ ಆದಾರ್ ತಿಂಗಳೆಂಬ ಹದಿಮೂರನೆಯ ದಿನದಲ್ಲಿ ಅರಸನ ಆಜ್ಞೆಯು ನೆರವೇರುವುದಕ್ಕೆ ನಿರ್ಣಯವಾಗಿತ್ತು. ಯೆಹೂದ್ಯರ ಶತ್ರುಗಳು ಅದೇ ದಿನದಲ್ಲಿ ಅವರ ಮೇಲೆ ದೊರೆತನ ಮಾಡುವುದಾಗಿ ಎದುರುನೋಡಿದ್ದರು. ಅದಕ್ಕೆ ಬದಲಾಗಿ ಯೆಹೂದ್ಯರೇ ತಮ್ಮನ್ನು ಹಗೆಮಾಡುವವರ ಮೇಲೆ ದೊರೆತನ ಮಾಡಲಾರಂಭಿಸಿದರು. ಅದೇ ದಿನದಲ್ಲಿ ಅರಸನಾದ ಅಹಷ್ವೇರೋಷನ ಸಮಸ್ತ ಪ್ರಾಂತಗಳಲ್ಲಿರುವ ತಮ್ಮ ತಮ್ಮ ಪಟ್ಟಣಗಳಲ್ಲಿ ಯೆಹೂದ್ಯರು ತಮ್ಮನ್ನು ಕೊಲ್ಲಲು ಹುಡುಕುವವರ ಮೇಲೆ ದಾಳಿಮಾಡಲು ಒಟ್ಟಾಗಿ ಸೇರಿದರು. ಆಗ ಯೆಹೂದ್ಯರ ಭಯವು ಸಮಸ್ತ ಜನರ ಮೇಲೆ ಇದ್ದುದರಿಂದ ಅವರ ಮುಂದೆ ನಿಲ್ಲುವವನು ಒಬ್ಬನೂ ಇರಲಿಲ್ಲ. ಇದಲ್ಲದೆ ಪ್ರಾಂತಗಳ ಉಪರಾಜರೂ, ಪ್ರತಿನಿಧಿಗಳೂ, ಅಧಿಪತಿಗಳೂ, ಅರಸನ ಕೆಲಸದವರೂ ಯೆಹೂದ್ಯರಿಗೆ ಸಹಾಯ ಮಾಡಿದರು. ಏಕೆಂದರೆ ಮೊರ್ದೆಕೈಯ ಭಯ ಅವರಿಗಿತ್ತು. ಏಕೆಂದರೆ ಮೊರ್ದೆಕೈ ಅರಮನೆಯಲ್ಲಿ ಪ್ರಮುಖನಾಗಿದ್ದನು. ಅವನ ಕೀರ್ತಿಯು ಸಮಸ್ತ ಪ್ರಾಂತಗಳಿಗೂ ಹರಡಿತು. ಈ ಮೊರ್ದೆಕೈ ಅಧಿಕವಾಗಿ ಅಧಿಕಾರವಂತನಾದನು.
ಹೀಗೆ ಯೆಹೂದ್ಯರು ತಮ್ಮ ಶತ್ರುಗಳೆಲ್ಲರನ್ನು ಸೋಲಿಸಿ, ಖಡ್ಗದಿಂದ ಸಂಹರಿಸಿದರು. ತಮ್ಮನ್ನು ಹಗೆಮಾಡುತ್ತಿದ್ದವರಿಗೆ ತಮ್ಮ ಇಷ್ಟ ಬಂದ ಹಾಗೆ ಮಾಡಿದರು. ಶೂಷನಿನ ಅರಮನೆಯಲ್ಲಿ ಯೆಹೂದ್ಯರು ಐನೂರು ಮಂದಿಗೆ ಮರಣದಂಡನೆ ವಿಧಿಸಿದರು. ಇದಲ್ಲದೆ ಪರ್ಷಂದಾತನು ದಲ್ಫೋನನು, ಅಸ್ಪಾತನು, ಪೊರಾತನು, ಅದಲ್ಯನು, ಅರಿದಾತನು, ಪರ್ಮಷ್ಟನು, ಅರಿಸಾಯನು, ಅರಿದಾಯನು, ವೈಜಾತನು ಎಂಬವರನ್ನು ಕೊಂದರು. 10 ಇವರು ಯೆಹೂದ್ಯರ ವೈರಿಯಾದ ಹಮ್ಮೆದಾತನ ಮಗ ಹಾಮಾನನ ಹತ್ತು ಮಂದಿ ಪುತ್ರರು. ಆದರೆ ಅವರು ಇವರ ಸುಲಿಗೆಯನ್ನು ತೆಗೆದುಕೊಳ್ಳಲಿಲ್ಲ.
11 ಅದೇ ದಿವಸ ಶೂಷನಿನ ಅರಮನೆಯಲ್ಲಿ ಮರಣದಂಡನೆಯಾದವರ ಲೆಕ್ಕವು ಅರಸನ ಮುಂದೆ ಒಪ್ಪಿಸಲಾಯಿತು. 12 ಆಗ ಅರಸನು ಎಸ್ತೇರ್ ರಾಣಿಗೆ, “ಯೆಹೂದ್ಯರು ಶೂಷನಿನ ಅರಮನೆಯಲ್ಲಿ ಐನೂರು ಮಂದಿಯನ್ನೂ ಹಾಮಾನನ ಹತ್ತು ಮಕ್ಕಳನ್ನೂ ಸಂಹರಿಸಿದ್ದಾರೆ. ಅವರು ಅರಸನ ಮಿಕ್ಕಾದ ಪ್ರಾಂತಗಳಲ್ಲಿ ಏನು ಮಾಡಿರಬಹುದೋ? ಈಗ ನಿನ್ನ ವಿಜ್ಞಾಪನೆ ಏನು? ಅದು ನಿನಗೆ ಕೊಡಲಾಗುವುದು. ಇನ್ನೂ ನಿನ್ನ ಬೇಡಿಕೆ ಏನು? ಅದು ಮಾಡಲಾಗುವುದು,” ಎಂದು ಹೇಳಿದನು.
13 ಅದಕ್ಕೆ ಎಸ್ತೇರಳು, “ಅರಸನಿಗೆ ಸಮ್ಮತಿಯಾದರೆ, ಇಂದಿನಂತೆಯೇ ರಾಜಾಜ್ಞೆಯು ನಾಳೆಯೂ ಶೂಷನ್ ಪಟ್ಟಣದಲ್ಲಿ ಜಾರಿಗೆ ಬರಲು ಯೆಹೂದ್ಯರಿಗೆ ಅಪ್ಪಣೆ ಆಗಲಿ. ಹಾಮಾನನ ಹತ್ತು ಮಂದಿ ಮಕ್ಕಳ ಶವಗಳನ್ನು ಗಲ್ಲಿಗೇರಿಸುವಂತೆ ಅಪ್ಪಣೆಯಾಗಲಿ,” ಎಂದಳು.
14 ಆಗ ಅರಸನು ಹಾಗೆಯೇ ಮಾಡಲು ಆಜ್ಞಾಪಿಸಿದನು. ಆ ಆಜ್ಞೆಯು ಶೂಷನಿನಲ್ಲಿ ಜಾರಿಗೆಬಂದಾಗ ಅವರು ಹಾಮಾನನ ಹತ್ತು ಮಂದಿ ಪುತ್ರರ ಶವವನ್ನು ಗಲ್ಲಿಗೆ ಹಾಕಿದರು. 15 ಇದಲ್ಲದೆ ಶೂಷನಿನಲ್ಲಿರುವ ಯೆಹೂದ್ಯರು ಆದಾರ್ ಎಂಬ ಫಾಲ್ಗುನಮಾಸದ ಹದಿನಾಲ್ಕನೆಯ ದಿವಸದಲ್ಲಿ ಶೂಷನಿನಲ್ಲಿ ಒಟ್ಟಾಗಿ ಸೇರಿ ಮುನ್ನೂರು ಮಂದಿಗೆ ಮರಣದಂಡನೆಯನ್ನು ವಿಧಿಸಿದರು. ಆದರೆ ಅವರು ಸುಲಿಗೆಯನ್ನು ತೆಗೆದುಕೊಳ್ಳಲಿಲ್ಲ.
16 ಅರಸನ ಪ್ರಾಂತಗಳಲ್ಲಿರುವ ಮಿಕ್ಕ ಯೆಹೂದ್ಯರು ತಮ್ಮ ಪ್ರಾಣ ರಕ್ಷಣೆಗಾಗಿ ಎದ್ದು ನಿಂತು, ತಮ್ಮ ಶತ್ರುಗಳ ಕಾಟದಿಂದ ವಿಶ್ರಾಂತಿ ಪಡೆಯುವಂತೆ ಒಟ್ಟಾಗಿ ಸೇರಿದರು. ಅವರು ತಮ್ಮ ವೈರಿಗಳಲ್ಲಿ 75,000 ಮಂದಿಗೆ ಮರಣದಂಡನೆ ವಿಧಿಸಿದರು. ಆದರೆ ಅವರ ಸುಲಿಗೆಯನ್ನು ತೆಗೆದುಕೊಳ್ಳಲಿಲ್ಲ. 17 ಆದಾರ್ ಮಾಸದ ಹದಿಮೂರನೆಯ ದಿನ ಈ ಘಟನೆ ನಡೆಯಿತು. ಹದಿನಾಲ್ಕನೆಯ ದಿನದಂದು ಅವರು ವಿಶ್ರಮಿಸಿಕೊಂಡು, ಅದನ್ನು ಸಂಭ್ರಮದ ಉತ್ಸವದಿನವನ್ನಾಗಿ ಆಚರಿಸಿದರು.
18 ಆದರೆ ಶೂಷನಿನಲ್ಲಿದ್ದ ಯೆಹೂದ್ಯರು ಹದಿಮೂರನೆಯ ಹಾಗೂ ಹದಿನಾಲ್ಕನೆಯ ದಿನಗಳಲ್ಲಿ ಒಟ್ಟಾಗಿ ಸೇರಿಬಂದದ್ದರಿಂದ, ಹದಿನೈದನೆಯ ದಿನದಲ್ಲಿ ಅವರು ವಿಶ್ರಮಿಸಿಕೊಂಡು, ಅದೇ ದಿನವನ್ನು ಸಂಭ್ರಮದ ಉತ್ಸವದಿನವನ್ನಾಗಿ ಆಚರಿಸಿದರು.
19 ಆದಕಾರಣ ಗ್ರಾಮಗಳಲ್ಲಿಯೂ ಬಯಲು ಪ್ರಾಂತಗಳ ಪಟ್ಟಣಗಳಲ್ಲಿಯೂ ವಾಸವಾಗಿರುವ ಯೆಹೂದ್ಯರು ಆದಾರ್ ಮಾಸದ ಹದಿನಾಲ್ಕನೆಯ ದಿನವನ್ನು ಶುಭದಿನವಾಗಿಯೂ, ಸಂಭ್ರಮದ ದಿನವಾಗಿಯೂ, ಒಬ್ಬರಿಗೊಬ್ಬರು ಭೋಜನ ಕೊಡುಗೆಗಳನ್ನು ಕಳುಹಿಸುವ ದಿನವಾಗಿಯೂ ಆಚರಿಸಿದರು.
ಪೂರಿಮ್ ಹಬ್ಬ
20 ಮೊರ್ದೆಕೈಯು ಈ ಘಟನೆಗಳನ್ನು ಬರೆದು ಅರಸನಾದ ಅಹಷ್ವೇರೋಷನ ಸಕಲ ಪ್ರಾಂತಗಳಲ್ಲಿ ಸಮೀಪದಲ್ಲಿಯೂ ದೂರದಲ್ಲಿಯೂ ಇದ್ದ ಯೆಹೂದ್ಯರು ಎಲ್ಲರಿಗೂ ಪತ್ರಗಳ ಮುಖಾಂತರ ಕಳುಹಿಸಿದನು. 21 ಯೆಹೂದ್ಯರು ಆದಾರ್ ಮಾಸದ ಹದಿನಾಲ್ಕನೆ ಮತ್ತು ಹದಿನೈದನೆ ದಿನಗಳನ್ನೂ ಪ್ರತಿವರ್ಷ ಹಬ್ಬದ ದಿನಗಳಾಗಿ ಆಚರಿಸುವುದು ಶಾಶ್ವತ ನಿಯಮವೆಂದು ಭಾವಿಸುವಂತೆ ಆ ಪತ್ರದಲ್ಲಿ ಬರೆಯಲಾಗಿತ್ತು. 22 ಆ ದಿನಗಳಲ್ಲಿ ಯೆಹೂದ್ಯರು ತಮ್ಮ ಶತ್ರುಗಳ ಕಾಟದಿಂದ ವಿಶ್ರಾಂತಿ ಪಡೆದ ಕಾಲವಾಗಿಯೂ, ಅವರ ದುಃಖ ಸಂತೋಷವೂ, ಗೋಳಾಟ ಉತ್ಸವವೂ ಬದಲಾದ ದಿನವಾಗಿಯೂ ಕೊಂಡಾಡುವಂತೆ ಆ ಪತ್ರದಲ್ಲಿ ಬರೆದಿತ್ತು. ಆದ್ದರಿಂದ ಆ ದಿನ ಸಂಭ್ರಮದ ದಿನವಾಗಿಯೂ, ಒಬ್ಬರಿಗೊಬ್ಬರು ಭೋಜನ ಕೊಡುಗೆಗಳನ್ನು ಕಳುಹಿಸುವ ದಿನವಾಗಿಯೂ, ಬಡವರಿಗೆ ದಾನಗಳನ್ನು ಮಾಡುವ ದಿನವಾಗಿಯೂ ಪಾಲಿಸಬೇಕೆಂದೂ ಆ ಪತ್ರದಲ್ಲಿ ಬರೆದಿತ್ತು.
23 ಆದ್ದರಿಂದ ಯೆಹೂದ್ಯರು ಮೊರ್ದೆಕೈಯು ತಮಗೆ ಬರೆದ ಪ್ರಕಾರವಾಗಿ, ತಾವು ಆರಂಭಮಾಡಿದ್ದ ಸಂಭ್ರಮವನ್ನು ಮುಂದುವರಿಸಲು ಒಪ್ಪಿಕೊಂಡರು. 24 ಏಕೆಂದರೆ ಸಮಸ್ತ ಯೆಹೂದ್ಯರಿಗೂ ಕಡು ವೈರಿಯಾದ, ಅಗಾಗನ ವಂಶದ, ಹಮ್ಮೆದಾತನ ಮಗನಾದ ಹಾಮಾನನು ಯೆಹೂದ್ಯರನ್ನು ಸಂಹರಿಸಬೇಕೆಂದು ತೀರ್ಮಾನಿಸಿಕೊಂಡು ಅವರನ್ನು ಹಾಳುಮಾಡಲು, ನಿರ್ನಾಮಗೊಳಿಸಲು ಪೂರ್ ಅಂದರೆ, ಚೀಟನ್ನು ಹಾಕಿದ್ದನು. 25 ಆದರೆ ಈ ಒಳಸಂಚು ಅರಸನಿಗೆ ತಿಳಿದುಬಂದಾಗ ಹಾಮಾನನು ಯೆಹೂದ್ಯರಿಗೆ ವಿರೋಧವಾಗಿ ಯೋಚಿಸಿದ ದುರಾಲೋಚನೆಯು ಅವನ ತಲೆಯ ಮೇಲೆ ಬರುವಂತೆ ಅರಸನು ಆಜ್ಞೆಯನ್ನು ಹೊರಡಿಸಿದನು. ಅದರೊಂದಿಗೆ ಅವನ ಮಕ್ಕಳನ್ನೂ ಗಲ್ಲಿಗೇರಿಸಲು ಅರಸನು ಆಜ್ಞಾಪಿಸಿದ್ದನು; 26 ಆದ್ದರಿಂದ ಪೂರ್ ಎಂಬ ಪದದ ಆಧಾರದ ಮೇಲೆ ಆ ದಿನಗಳಿಗೆ ಪೂರಿಮ್ ಎಂಬ ಹೆಸರಾಯಿತು. ಅರಸನು ಪತ್ರದಲ್ಲಿ ಬರೆದ ಎಲ್ಲಾ ಮಾತುಗಳನ್ನೂ, ಅವುಗಳ ಸಂಬಂಧವಾಗಿ ತಾವು ಅನುಭವಿಸಿದ್ದನ್ನೂ, ತಮಗೆ ಸಂಭವಿಸಿದ್ದನ್ನೂ 27 ಯೆಹೂದ್ಯರು ಸ್ಮರಿಸಿಕೊಂಡು ಪ್ರತಿವರ್ಷವೂ ಆ ಎರಡು ದಿನಗಳನ್ನು, ಅವುಗಳಿಗೆ ಸಂಬಂಧಪಟ್ಟ ಶಾಸನದ ಪ್ರಕಾರ, ನಿಯಮಿತ ಕಾಲದಲ್ಲಿ ಆಚರಿಸುವಂತೆ ತಮ್ಮಲ್ಲಿಯೂ ತಮ್ಮ ಸಂತಾನದವರಲ್ಲಿಯೂ ತಮ್ಮೊಂದಿಗೆ ಸೇರಿಕೊಳ್ಳುವವರಲ್ಲಿಯೂ ಯಾವ ವಿಧದಲ್ಲಿಯೂ ಮೀರಕೂಡದ ಪದ್ಧತಿಯನ್ನಾಗಿ ಪಾಲಿಸಲು ತೀರ್ಮಾನಿಸಿದರು. 28 ಇದಲ್ಲದೆ ಈ ಎರಡು ದಿನಗಳನ್ನು ಪ್ರತಿ ಪ್ರಾಂತದಲ್ಲಿಯೂ ಪ್ರತಿ ಪಟ್ಟಣದಲ್ಲಿಯೂ, ಪ್ರತಿ ತಲೆಮಾರಿನಲ್ಲಿಯೂ, ಪ್ರತಿ ಕುಟುಂಬದಲ್ಲಿಯೂ ಸ್ಮರಿಸಿ ಆಚರಿಸಬೇಕು. ಈ ಪೂರಿಮ್ ದಿನಗಳು ಯೆಹೂದ್ಯರಲ್ಲಿ ಎಂದಿಗೂ ನಿಂತುಹೋಗಬಾರದು. ಅವರ ಸಂತಾನದವರಲ್ಲಿ ಅವುಗಳ ಜ್ಞಾಪಕವು ಅಳಿದು ಹೋಗಬಾರದು ಎಂದೂ ತೀರ್ಮಾನಿಸಿಕೊಂಡರು.
29 ಆಗ ಅಬೀಹೈಲನ ಮಗಳಾದ ಎಸ್ತೇರ್ ರಾಣಿಯೂ, ಈ ಪೂರಿಮ್ ದಿನವನ್ನು ಸ್ಥಿರಪಡಿಸುವುದಕ್ಕಾಗಿ ಯೆಹೂದ್ಯನಾದ ಮೊರ್ದೆಕೈಯ ಸಹಾಯದಿಂದ ಎರಡನೆಯ ಪತ್ರವನ್ನು ಪೂರ್ಣ ಅಧಿಕಾರದಿಂದ ಬರೆದಳು. 30 ಮೊರ್ದೆಕೈಯೂ ದಯೆ ಹಾಗೂ ಭರವಸೆಯ ಮಾತುಗಳಿಂದ ಅಹಷ್ವೇರೋಷನ ರಾಜ್ಯದ ನೂರ ಇಪ್ಪತ್ತೇಳು ಪ್ರಾಂತಗಳಲ್ಲಿರುವ ಸಮಸ್ತ ಯೆಹೂದ್ಯರಿಗೆ ಪತ್ರಗಳನ್ನು ಕಳುಹಿಸಿದನು. 31 ಇದಲ್ಲದೆ ಈ ಪೂರಿಮ್ ದಿನಗಳನ್ನು ಯೆಹೂದ್ಯನಾದ ಮೊರ್ದೆಕೈಯೂ ರಾಣಿಯಾದ ಎಸ್ತೇರಳೂ ಎಲ್ಲಾ ಯೆಹೂದ್ಯರಿಗೂ, ಅವರ ಸಂತಾನದವರಿಗೂ ಉಪವಾಸ ಮಾಡಿ, ದುಃಖಿಸುವ ಕಾಲವನ್ನು ಸ್ಥಿರಪಡಿಸಿದ ಪ್ರಕಾರವೇ ಈ ಪೂರಿಮ್ ದಿನವನ್ನು ಸ್ಥಿರಪಡಿಸುವುವಂತೆ ಆಜ್ಞಾಪಿಸಿದ್ದರು. 32 ಹೀಗೆಯೇ ಎಸ್ತೇರಳ ಆಜ್ಞೆಯು ಈ ಪೂರಿಮ್ ದಿವಸಗಳ ಕಾರ್ಯಗಳನ್ನು ಸ್ಥಿರಪಡಿಸಿದ್ದರಿಂದ ಅದು ಗ್ರಂಥದಲ್ಲಿ ಬರೆಯಲಾಯಿತು.