19
ಸೀನಾಯಿ ಬೆಟ್ಟದ ಬಳಿಯಲ್ಲಿ
ಇಸ್ರಾಯೇಲರು ಈಜಿಪ್ಟನ್ನು ಬಿಟ್ಟ ಮೂರನೆಯ ತಿಂಗಳಿನ ಅದೇ ದಿನದಲ್ಲಿ ಸೀನಾಯಿ ಮರುಭೂಮಿಗೆ ಬಂದರು. ಅವರು ರೆಫೀದೀಮಿನಿಂದ ಹೊರಟು, ಸೀನಾಯಿ ಮರುಭೂಮಿಗೆ ಬಂದು, ಮರುಭೂಮಿಯಲ್ಲಿ ಡೇರೆ ಹಾಕಿ, ಬೆಟ್ಟಕ್ಕೆದುರಾಗಿ ಇಳಿದುಕೊಂಡರು.
ಮೋಶೆಯು ದೇವರ ಸನ್ನಿಧಿಗೆ ಬೆಟ್ಟದ ಮೇಲೆ ಹೋದನು. ಆಗ ಯೆಹೋವ ದೇವರು ಸೀನಾಯಿ ಪರ್ವತದ ಮೇಲಿನಿಂದ ಅವನನ್ನು ಕರೆದು ಅವನಿಗೆ, “ನೀನು ಯಾಕೋಬನ ಮನೆತನದವರಾದ ಇಸ್ರಾಯೇಲರಿಗೆ ಇದನ್ನು ತಿಳಿಸು: ‘ನಾನು ಈಜಿಪ್ಟಿನವರಿಗೆ ಮಾಡಿದ್ದನ್ನೂ, ಹದ್ದು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಮೇಲೆ ಹೊತ್ತು ಬರುವಂತೆ ನಿಮ್ಮನ್ನು ಈ ಸ್ಥಳಕ್ಕೆ ಬರಮಾಡಿದ್ದನ್ನೆಲ್ಲಾ ನೀವು ನೋಡಿದ್ದೀರಿ. ಆದ್ದರಿಂದ ಈಗ ನೀವು ನನ್ನ ಮಾತನ್ನು ಕೇಳಿ, ನನ್ನ ಒಡಂಬಡಿಕೆಯನ್ನು ಕಾಪಾಡಿದರೆ, ಸಮಸ್ತ ಜನರಲ್ಲಿ ನೀವು ನನ್ನ ಸಂಗ್ರಹಿಸಿದ ಸೊತ್ತಾಗಿರುವಿರಿ. ಏಕೆಂದರೆ ಭೂಮಿಯೆಲ್ಲಾ ನನ್ನದೇ. ನೀವು ನನಗೆ ಯಾಜಕ ರಾಜ್ಯವೂ ಪರಿಶುದ್ಧ ಜನಾಂಗವೂ ಆಗಿರುವಿರಿ.’ ಇಸ್ರಾಯೇಲರಿಗೆ ನೀನು ಹೇಳಬೇಕಾದ ಮಾತುಗಳು ಇವೇ,” ಎಂದರು.
ಆಗ ಮೋಶೆಯು ಇಳಿದುಬಂದು ಜನರ ಹಿರಿಯರನ್ನು ಕರೆದು, ಯೆಹೋವ ದೇವರು ತನಗೆ ಆಜ್ಞಾಪಿಸಿದ ಈ ಮಾತುಗಳನ್ನೆಲ್ಲಾ ಅವರ ಮುಂದೆ ಇಟ್ಟನು. ಜನರೆಲ್ಲಾ ಒಂದಾಗಿ ಉತ್ತರಕೊಟ್ಟು, “ಯೆಹೋವ ದೇವರು ಹೇಳಿದ್ದನ್ನೆಲ್ಲಾ ಮಾಡುತ್ತೇವೆ,” ಎಂದು ಹೇಳಿದರು. ಆಗ ಮೋಶೆಯು ಜನರ ಮಾತುಗಳನ್ನು ಯೆಹೋವ ದೇವರಿಗೆ ಹೇಳಿದನು.
ಯೆಹೋವ ದೇವರು ಮೋಶೆಗೆ, “ನಾನು ನಿನ್ನ ಸಂಗಡ ಮಾತನಾಡುವುದನ್ನು ಜನರು ಕೇಳುವ ಹಾಗೆಯೂ ಅವರು ಸದಾಕಾಲ ನಿನ್ನನ್ನು ನಂಬುವಂತೆಯೂ ದಟ್ಟವಾದ ಮೇಘದಲ್ಲಿ ನಾನು ನಿನ್ನ ಬಳಿಗೆ ಬರುತ್ತೇನೆ,” ಎಂದರು. ಮೋಶೆಯು ಜನರ ಮಾತುಗಳನ್ನು ಯೆಹೋವ ದೇವರಿಗೆ ತಿಳಿಸಿದನು.
10 ಆಗ ಯೆಹೋವ ದೇವರು ಮೋಶೆಗೆ, “ಜನರ ಬಳಿಗೆ ಹೋಗಿ ಈ ಹೊತ್ತೂ ನಾಳೆಯೂ ಅವರನ್ನು ಶುದ್ಧಮಾಡು. ಅವರು ತಮ್ಮ ವಸ್ತ್ರಗಳನ್ನು ತೊಳೆದುಕೊಳ್ಳಲಿ. 11 ಮೂರನೆಯ ದಿನದಲ್ಲಿ ಅವರು ಸಿದ್ಧವಾಗಿರಲಿ. ಏಕೆಂದರೆ ಮೂರನೆಯ ದಿನದಲ್ಲಿ ಯೆಹೋವ ದೇವರು ಸಮಸ್ತ ಜನರ ಕಣ್ಣೆದುರಿನಲ್ಲಿ ಸೀನಾಯಿ ಪರ್ವತಕ್ಕೆ ಇಳಿದು ಬರುವರು. 12 ಜನರಿಗೋಸ್ಕರ ಸುತ್ತಲೂ ಮೇರೆಗಳನ್ನು ಮಾಡಿಸಿ, ‘ಅವರು ಬೆಟ್ಟವನ್ನು ಏರದಂತೆಯೂ ಅದರ ಮೇರೆಯನ್ನು ಮುಟ್ಟದಂತೆಯೂ ಜಾಗ್ರತೆಯಾಗಿರಬೇಕು. ಬೆಟ್ಟವನ್ನು ಮುಟ್ಟಿದವರೆಲ್ಲಾ ಖಂಡಿತವಾಗಿ ಸತ್ತು ಹೋಗುವರು. 13 ಯಾರೂ ಅಂಥವರನ್ನು ಮುಟ್ಟಬಾರದು. ಮುಟ್ಟಿದ ಪಶುವಾಗಲಿ, ಮನುಷ್ಯನಾಗಲಿ ನಿಶ್ಚಯವಾಗಿ ಕಲ್ಲೆಸೆದು ಕೊಲ್ಲಬೇಕು. ಇಲ್ಲವೆ ಈಟಿಯಿಂದ ತಿವಿಯಬೇಕು.’ ದೀರ್ಘವಾಗಿ ತುತೂರಿ ಊದುವ ಸಮಯದಲ್ಲಿ ಅವರು ಬೆಟ್ಟದ ಬಳಿಗೆ ಬರಬೇಕು,” ಎಂದರು.
14 ಆಗ ಮೋಶೆಯು ಬೆಟ್ಟದಿಂದಿಳಿದು ಜನರನ್ನು ಶುದ್ಧಿಮಾಡಿದನು. ಅವರು ತಮ್ಮ ವಸ್ತ್ರಗಳನ್ನು ತೊಳೆದುಕೊಂಡರು. 15 ಅವನು ಜನರಿಗೆ, “ಮೂರನೆಯ ದಿನಕ್ಕಾಗಿ ಸಿದ್ಧರಾಗಿರಿ, ನೀವು ಲೈಂಗಿಕ ಸಂಬಂಧದಿಂದ ದೂರವಾಗಿರಿ,” ಎಂದನು.
16 ಮೂರನೆಯ ದಿನದಲ್ಲಿ ಉದಯವಾದಾಗ, ಬೆಟ್ಟದ ಮೇಲೆ ಗುಡುಗು, ಮಿಂಚು, ದಟ್ಟವಾದ ಮೇಘ ಮತ್ತು ತುತೂರಿಯ ಮಹಾ ಧ್ವನಿ ಉಂಟಾದವು. ಪಾಳೆಯದಲ್ಲಿದ್ದ ಜನರೆಲ್ಲರೂ ನಡುಗಿದರು. 17 ಆಗ ಮೋಶೆಯು ದೇವರನ್ನು ಸಂಧಿಸುವುದಕ್ಕೆ ಜನರನ್ನು ಪಾಳೆಯದೊಳಗಿಂದ ಹೊರಗೆ ಬರಮಾಡಿದನು. ಆಗ ಅವರು ಬೆಟ್ಟದ ಕೆಳಗೆ ನಿಂತುಕೊಂಡರು. 18 ಯೆಹೋವ ದೇವರು ಅಗ್ನಿಯೊಳಗೆ ಬೆಟ್ಟದ ಮೇಲೆ ಇಳಿದಿದ್ದರಿಂದ ಸೀನಾಯಿ ಬೆಟ್ಟದಲ್ಲೆಲ್ಲಾ ಹೊಗೆ ಹಾಯುತ್ತಿತ್ತು. ಅದರ ಹೊಗೆಯು ಆವಿಗೆಯ ಹೊಗೆಯಂತೆ ಏರಿ ಬರುತ್ತಾ ಇತ್ತು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು. 19 ತುತೂರಿಯ ಧ್ವನಿಯು ಬರಬರುತ್ತಾ ಹೆಚ್ಚಾಗುತ್ತಾ ಇತ್ತು. ಆಗ ಮೋಶೆಯು ದೇವರೊಡನೆ ಮಾತನಾಡಿದನು. ಅವನಿಗೆ ದೇವರು ಉತ್ತರಕೊಟ್ಟರು.
20 ಯೆಹೋವ ದೇವರು ಸೀನಾಯಿ ಬೆಟ್ಟದ ತುದಿಯಲ್ಲಿ ಇಳಿದುಬಂದು ಮೋಶೆಯನ್ನು ಬೆಟ್ಟದ ತುದಿಗೆ ಕರೆದರು. ಮೋಶೆಯು ಮೇಲೆ ಹೋದನು. 21 ಯೆಹೋವ ದೇವರು ಮೋಶೆಗೆ, “ನೀನು ಇಳಿದು ಹೋಗಿ ಜನರನ್ನು ಎಚ್ಚರಿಸಬೇಕು. ಅವರು ಯೆಹೋವ ದೇವರನ್ನು ನೋಡುವದಕ್ಕಾಗಿ ಮುಂದೆ ಬಂದರೆ, ಅವರಲ್ಲಿ ಬಹಳ ಜನರು ಸಾಯುವರು. 22 ಯೆಹೋವ ದೇವರ ಸಮೀಪಕ್ಕೆ ಬರುವ ಯಾಜಕರು ಸಹ ಯೆಹೋವ ದೇವರು ಅವರನ್ನು ಸಾಯಿಸದಂತೆ ತಮ್ಮನ್ನು ಶುದ್ಧಿಮಾಡಿಕೊಳ್ಳಲಿ, ಇಲ್ಲವಾದರೆ ಅವರನ್ನೂ ನಾನು ತಟ್ಟನೆ ನಾಶಮಾಡುವೆನು,” ಎಂದರು.
23 ಮೋಶೆಯು ಯೆಹೋವ ದೇವರಿಗೆ, “ಜನರು ಸೀನಾಯಿ ಬೆಟ್ಟವನ್ನು ಏರಲಾರರು. ಬೆಟ್ಟಕ್ಕೆ ಮೇರೆಗಳನ್ನು ಹಾಕಿ ಅದನ್ನು ಶುದ್ಧಮಾಡೆಂದು ನೀವೇ ನಮ್ಮನ್ನು ಎಚ್ಚರಿಸಿದ್ದೀರಿ,” ಎಂದನು.
24 ಆಗ ಯೆಹೋವ ದೇವರು ಅವನಿಗೆ, “ನೀನು ಇಳಿದು ಹೋಗಿ, ಆರೋನನನ್ನು ಕರೆದುಕೊಂಡು ಇಲ್ಲಿಗೆ ಬಾ. ಆದರೆ ಯೆಹೋವ ದೇವರಿಂದ ಸಂಹಾರವಾಗದಂತೆ ಯಾಜಕರೂ ಜನರೂ ಮುಂದೆ ಯೆಹೋವ ದೇವರ ಬಳಿಗೆ ಬಾರದೇ ಇರಲಿ,” ಎಂದರು.
25 ಮೋಶೆಯು ಜನರ ಬಳಿಗೆ ಇಳಿದು ಹೋಗಿ ಅವರಿಗೆ ಇದನ್ನೆಲ್ಲಾ ಹೇಳಿದನು.