34
ಹೊಸ ಕಲ್ಲಿನ ಹಲಗೆಗಳು
ಯೆಹೋವ ದೇವರು ಮೋಶೆಗೆ, “ಮೊದಲಿನವುಗಳ ಹಾಗೆ ಎರಡು ಕಲ್ಲಿನ ಹಲಗೆಗಳನ್ನು ಕೆತ್ತಿಸಿಕೋ. ಆಗ ನೀನು ಒಡೆದ ಆ ಮೊದಲನೆಯ ಹಲಗೆಗಳ ಮೇಲೆ ಇದ್ದ ವಾಕ್ಯಗಳನ್ನು ಈ ಹಲಗೆಗಳ ಮೇಲೆ ನಾನು ಬರೆಯುವೆನು. ಬೆಳಿಗ್ಗೆ ನೀನು ಸಿದ್ಧನಾಗಿ ಸೀನಾಯಿ ಬೆಟ್ಟವನ್ನೇರಿ, ಆ ಬೆಟ್ಟದ ತುದಿಯ ಮೇಲೆ ನನ್ನ ಸನ್ನಿಧಿಯಲ್ಲಿ ನಿಂತಿರಬೇಕು. ಆದರೆ ಯಾರೂ ನಿನ್ನ ಸಂಗಡ ಮೇಲಕ್ಕೆ ಬರಬಾರದು. ಬೆಟ್ಟದ ಮೇಲೆ ಎಲ್ಲಿಯೂ ಯಾರೂ ಕಾಣಿಸಬಾರದು, ಆ ಬೆಟ್ಟದ ಎದುರಿನಲ್ಲಿ ದನಕುರಿಗಳು ಸಹ ಮೇಯಬಾರದು,” ಎಂದು ಹೇಳಿದರು.
ಆಗ ಮೋಶೆಯು ಮೊದಲಿನವುಗಳಂತೆ ಎರಡು ಕಲ್ಲಿನ ಹಲಗೆಗಳನ್ನು ಕೆತ್ತಿಸಿಕೊಂಡನು. ಬೆಳಿಗ್ಗೆ ಎದ್ದು ಯೆಹೋವ ದೇವರು ತನಗೆ ಆಜ್ಞಾಪಿಸಿದಂತೆ ಕಲ್ಲಿನ ಎರಡು ಹಲಗೆಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಸೀನಾಯಿ ಬೆಟ್ಟದ ಮೇಲೆ ಹೋದನು. ಆಗ ಯೆಹೋವ ದೇವರು ಮೇಘದಲ್ಲಿ ಇಳಿದುಬಂದು ಅಲ್ಲಿ ಅವನ ಸಂಗಡ ನಿಂತುಕೊಂಡು, ಯೆಹೋವ ದೇವರು ತಮ್ಮ ಹೆಸರನ್ನು ಪ್ರಕಟಮಾಡಿದರು. ಯೆಹೋವ ದೇವರು ಅವನೆದುರಿಗೆ ಹಾದು ಹೋಗಿ, “ಯೆಹೋವ ದೇವರು, ಯೆಹೋವ ದೇವರು, ಕರುಣಾಳುವು, ಕೃಪಾಳುವು, ದೀರ್ಘಶಾಂತನು, ಮಹಾ ಪ್ರೀತಿಯುಳ್ಳವನು ಮತ್ತು ಸತ್ಯದಲ್ಲಿ ಸಮೃದ್ಧಿಯಾದಾತನೂ ಸಾವಿರ ತಲೆಗಳವರೆಗೂ ಕರುಣೆ ತೋರಿಸುವಾತನು. ದೋಷವನ್ನು, ಅಪರಾಧವನ್ನು, ಪಾಪವನ್ನು ಕ್ಷಮಿಸುವಾತನು ಆದರೂ ಅಪರಾಧಿಯನ್ನು ಶಿಕ್ಷಿಸದೆ ಬಿಡದವನೂ ತಂದೆಗಳ ದೋಷವನ್ನು ಮಕ್ಕಳ ಮೇಲೆಯೂ ಮೊಮ್ಮಕ್ಕಳ ಮೇಲೆಯೂ ಮೂರನೆಯ ಮತ್ತು ನಾಲ್ಕನೆಯ ತಲೆಗಳವರೆಗೂ ಶಿಕ್ಷಿಸುವಾತನು,” ಎಂದು ಪ್ರಕಟಿಸಿಕೊಂಡರು.
ಆಗ ಮೋಶೆಯು ತ್ವರೆಪಟ್ಟು ನೆಲಕ್ಕೆ ಬಾಗಿ ಅವರನ್ನು ಆರಾಧಿಸಿದನು. ಅವನು, ಕರ್ತನೇ, “ಈಗ ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಿದರೆ, ನನ್ನ ಕರ್ತನೇ ತಾವೇ ನಮ್ಮ ಸಂಗಡ ಬರಬೇಕು. ಇದು ಮಾತು ಕೇಳದ ಹಟಮಾರಿ ಜನಾಂಗವೇ ಹೌದು. ಆದರೂ ನಮ್ಮ ದೋಷವನ್ನೂ ಪಾಪವನ್ನೂ ಮನ್ನಿಸಿ ನಮ್ಮನ್ನು ನಿಮ್ಮ ಸೊತ್ತಾಗಿ ತೆಗೆದುಕೊಳ್ಳಿ,” ಎಂದನು.
10 ಅದಕ್ಕೆ ಯೆಹೋವ ದೇವರು, “ನಾನು ಒಂದು ಒಡಂಬಡಿಕೆಯನ್ನು ಮಾಡುತ್ತೇನೆ. ಸಮಸ್ತ ಭೂಮಿಯಲ್ಲಿಯೂ ಯಾವ ಜನಾಂಗದಲ್ಲಿಯೂ ಹಿಂದೆಂದಿಗೂ ಮಾಡದಿರುವಂಥ ಅದ್ಭುತಗಳನ್ನು ನಿನ್ನ ಎಲ್ಲಾ ಜನರ ಮುಂದೆ ಮಾಡುವೆನು. ನೀನು ಯಾರ ಮಧ್ಯದಲ್ಲಿ ಇರುವೆಯೋ ಆ ಜನರೂ ಯೆಹೋವ ದೇವರ ಕಾರ್ಯವನ್ನು ನೋಡುವರು ಏಕೆಂದರೆ ನಾನು ನಿಮಗೆ ಮಾಡುವಂಥದ್ದು ಭಯಂಕರವಾಗಿರುವುದು. 11 ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವುದನ್ನು ಅನುಸರಿಸಿ ನಡೆಯಬೇಕು. ಹಿತ್ತಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ, ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ನಿಮ್ಮ ಮುಂದೆಯೇ ಹೊರಡಿಸಿಬಿಡುತ್ತೇನೆ. 12 ನೀನು ಹೋಗುವ ದೇಶದ ನಿವಾಸಿಗಳ ಸಂಗಡ ಒಪ್ಪಂದವನ್ನು ಮಾಡದಂತೆ ನೋಡಿಕೋ. ಒಂದು ವೇಳೆ ಮಾಡಿದರೆ ಅದು ನಿಮ್ಮ ಮಧ್ಯದಲ್ಲಿ ಉರುಲಾಗಿರುವುದು. 13 ಆದರೆ ಅವರ ಬಲಿಪೀಠಗಳನ್ನು ಒಡೆದುಹಾಕಬೇಕು. ಅವರ ಪವಿತ್ರ ಕಲ್ಲುಕಂಬಗಳನ್ನು ಒಡೆದು, ಅಶೇರವೆಂಬ ವಿಗ್ರಹಸ್ತಂಭಗಳನ್ನು* ಕಡಿದುಹಾಕಬೇಕು. 14 ಏಕೆಂದರೆ, ‘ರೋಷವುಳ್ಳವನು,’ ಎಂದು ಹೆಸರುಳ್ಳ ಯೆಹೋವ ದೇವರು ರೋಷವುಳ್ಳ ದೇವರಾಗಿರುವುದರಿಂದ ನೀನು ಬೇರೆ ದೇವರುಗಳನ್ನು ಆರಾಧಿಸಬಾರದು.
15 “ನೀನು ಆ ದೇಶದ ನಿವಾಸಿಗಳ ಸಂಗಡ ಒಪ್ಪಂದ ಮಾಡಿಕೊಳ್ಳದಂತೆ ಎಚ್ಚರದಿಂದಿರು. ಅವರು ಅನ್ಯದೇವರುಗಳನ್ನು ಆರಾಧಿಸಿ, ಅವುಗಳಿಗೆ ಯಜ್ಞ ಅರ್ಪಿಸುವ ಸಮಯದಲ್ಲಿ ಒಬ್ಬನು ನಿನ್ನನ್ನು ಕರೆದಾನು, ನೀನು ಅವನ ಯಜ್ಞಭೋಜನವನ್ನು ಮಾಡಬೇಕಾದೀತು. 16 ಇದಲ್ಲದೆ ಅವರ ಪುತ್ರಿಯರನ್ನು ನಿನ್ನ ಪುತ್ರರಿಗೋಸ್ಕರ ತೆಗೆದುಕೊಳ್ಳಬೇಕಾಗಬಹುದು. ತೆಗೆದುಕೊಂಡರೆ ಅವರ ಪುತ್ರಿಯರು ತಮ್ಮ ದೇವರುಗಳನ್ನು ಆರಾಧಿಸಿ, ನಿಮ್ಮ ಪುತ್ರರನ್ನೂ ಅನ್ಯದೇವರುಗಳ ಆರಾಧನೆಯೆಂಬ ವ್ಯಭಿಚಾರಕ್ಕೆ ಎಳೆಯಬಹುದು.
17 “ನಿಮಗಾಗಿ ದೇವರುಗಳ ಎರಕ ಹೊಯ್ದ ವಿಗ್ರಹಗಳನ್ನು ಮಾಡಿಕೊಳ್ಳಬಾರದು.
18 “ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಬೇಕು. ನಾನು ನಿಮಗೆ ಆಜ್ಞಾಪಿಸಿದಂತೆ ಚೈತ್ರ ಮಾಸದ ಏಳು ದಿವಸ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಕೆಂದರೆ ಅಬೀಬ ತಿಂಗಳಿನಲ್ಲಿ ನೀವು ಈಜಿಪ್ಟ್ ದೇಶವನ್ನು ಬಿಟ್ಟು ಬಂದಿದ್ದೀರಿ.
19 “ಪ್ರಥಮ ಗರ್ಭಫಲವೆಲ್ಲಾ ಅಂದರೆ ನಿಮ್ಮ ಪಶುಗಳಾಗಲಿ, ಎತ್ತುಗಳಾಗಲಿ, ಟಗರುಗಳಾಗಲಿ ಮೊದಲು ಹುಟ್ಟುವವುಗಳೆಲ್ಲಾ ಗಂಡಾಗಿದ್ದರೆ ಅವು ನನ್ನವೇ. 20 ಕತ್ತೆಮರಿಗೆ ಬದಲಾಗಿ ಕುರಿಮರಿಯನ್ನು ವಿಮೋಚಿಸಬೇಕು. ನೀನು ವಿಮೋಚಿಸದೆ ಹೋದರೆ, ಕುತ್ತಿಗೆಯನ್ನು ಮುರಿಯಬೇಕು. ನಿನ್ನ ಪುತ್ರರಲ್ಲಿ ಚೊಚ್ಚಲಾದವರನ್ನೆಲ್ಲಾ ವಿಮೋಚಿಸಬೇಕು.
“ನನ್ನ ಮುಂದೆ ಯಾರೂ ಬರಿಗೈಯಿಂದ ಕಾಣಿಸಿಕೊಳ್ಳಬಾರದು.
21 “ಆರು ದಿನಗಳು ಕೆಲಸಮಾಡಿ, ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಬೇಕು. ಬಿತ್ತುವ ಕಾಲದಲ್ಲಿಯೂ ಕೊಯ್ಯುವ ಕಾಲದಲ್ಲಿಯೂ ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಬೇಕು.
22 “ಪ್ರಥಮ ಗೋಧಿ ಸುಗ್ಗಿಯ ವಾರಗಳ ಹಬ್ಬವನ್ನು ಮತ್ತು ವರ್ಷದ ಕೊನೆಯಲ್ಲಿ ಬೆಳೆ ಸಂಗ್ರಹದ ಹಬ್ಬವನ್ನು ಆಚರಿಸಬೇಕು. 23 ವರುಷಕ್ಕೆ ಮೂರು ಸಾರಿ ನಿಮ್ಮ ಗಂಡು ಮಕ್ಕಳೆಲ್ಲಾ ಸಾರ್ವಭೌಮ ಯೆಹೋವ ದೇವರ ಮುಂದೆ ಅಂದರೆ ಇಸ್ರಾಯೇಲಿನ ದೇವರ ಮುಂದೆ ಬರಬೇಕು. 24 ಏಕೆಂದರೆ ನಾನು ಜನಾಂಗಗಳನ್ನು ನಿಮ್ಮ ಸನ್ನಿಧಿಯಿಂದ ಹೊರಡಿಸಿಬಿಟ್ಟು, ನಿಮ್ಮ ಮೇರೆಗಳನ್ನು ವಿಸ್ತಾರ ಮಾಡುವೆನು. ವರ್ಷಕ್ಕೆ ಮೂರು ಸಾರಿ ನೀವು ನಿಮ್ಮ ಯೆಹೋವ ದೇವರ ಮುಂದೆ ಬರುವ ಸಮಯದಲ್ಲಿ ಯಾರೂ ನಿಮ್ಮ ಭೂಮಿಯನ್ನು ಅಪಹರಿಸಲು ಆಶೆಪಡುವುದಿಲ್ಲ.
25 “ಬಲಿ ಅರ್ಪಣೆಯ ರಕ್ತವನ್ನು ಹುಳಿಯಿರುವ ರೊಟ್ಟಿಯ ಸಂಗಡ ಅರ್ಪಿಸಬಾರದು. ಇಲ್ಲವೆ ಪಸ್ಕಹಬ್ಬದ ಬಲಿಯಲ್ಲಿ ಯಾವುದೂ ಬೆಳಗಿನವರೆಗೆ ಉಳಿಸಬಾರದು.
26 “ನಿಮ್ಮ ಭೂಮಿಯ ಪ್ರಥಮ ಫಲಗಳಲ್ಲಿ ಅತ್ಯುತ್ತಮವಾದದ್ದನ್ನು ನಿಮ್ಮ ಯೆಹೋವ ದೇವರ ಆಲಯಕ್ಕೆ ತರಬೇಕು.
“ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು,” ಎಂದು ಹೇಳಿದರು.
27 ಯೆಹೋವ ದೇವರು ಮೋಶೆಗೆ ಹೀಗೆ ಹೇಳಿದರು, “ನೀನು ಈ ವಾಕ್ಯಗಳನ್ನು ಬರೆ. ಏಕೆಂದರೆ ಈ ವಾಕ್ಯಗಳ ಪ್ರಕಾರವೇ ನಾನು ನಿನ್ನ ಮತ್ತು ಇಸ್ರಾಯೇಲಿನ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ.” 28 ಮೋಶೆಯು ಹಗಲಿರುಳು ನಲವತ್ತು ದಿವಸ ರೊಟ್ಟಿಯನ್ನು ತಿನ್ನದೇ, ನೀರನ್ನು ಕುಡಿಯದೇ ಅಲ್ಲಿ ಯೆಹೋವ ದೇವರ ಸಂಗಡ ಇದ್ದನು. ದೇವರು ಒಡಂಬಡಿಕೆಯ ವಾಕ್ಯಗಳಾದ ಹತ್ತು ಆಜ್ಞೆಗಳನ್ನು ಹಲಗೆಗಳ ಮೇಲೆ ಬರೆದರು.
ಮೋಶೆಯ ಮುಖವು ಪ್ರಕಾಶಿಸಿದ್ದು
29 ಮೋಶೆಯು ಸಾಕ್ಷಿಯ ಎರಡು ಹಲಗೆಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಸೀನಾಯಿ ಬೆಟ್ಟದಿಂದ ಇಳಿದಾಗ, ಅವನು ಯೆಹೋವ ದೇವರ ಸಂಗಡ ಬೆಟ್ಟದಲ್ಲಿ ಮಾತನಾಡಿದ್ದರಿಂದ ಅವನ ಮುಖವು ಪ್ರಕಾಶಿಸುತ್ತದೆಂದು ಬೆಟ್ಟದಿಂದ ಇಳಿದಾಗ ಮೋಶೆಗೆ ತಿಳಿಯಲಿಲ್ಲ. 30 ಆದರೆ ಆರೋನನು ಮತ್ತು ಇಸ್ರಾಯೇಲರೆಲ್ಲರೂ ಮೋಶೆಯನ್ನು ನೋಡಿದಾಗ, ಇಗೋ, ಅವನ ಮುಖವು ಪ್ರಕಾಶಿಸುತ್ತಿತ್ತು. ಆದ್ದರಿಂದ ಅವರು ಅವನ ಹತ್ತಿರ ಬರುವುದಕ್ಕೆ ಭಯಪಟ್ಟರು. 31 ಮೋಶೆಯು ಅವರನ್ನು ಕರೆದಾಗ, ಆರೋನನು ಮತ್ತು ಸಭೆಯ ಮುಖ್ಯಸ್ಥರೆಲ್ಲರೂ ಅವನ ಬಳಿಗೆ ತಿರುಗಿ ಬಂದರು. ಆಗ ಮೋಶೆಯು ಅವರ ಸಂಗಡ ಮಾತನಾಡಿದನು. 32 ತರುವಾಯ ಇಸ್ರಾಯೇಲರೆಲ್ಲರೂ ಹತ್ತಿರ ಬಂದರು. ಆಗ ಅವನು ಅವರಿಗೆ, ಯೆಹೋವ ದೇವರು ತನಗೆ ಸೀನಾಯಿ ಬೆಟ್ಟದಲ್ಲಿ ಹೇಳಿದವುಗಳನ್ನೆಲ್ಲಾ ಆಜ್ಞಾಪಿಸಿ ಹೇಳಿದನು.
33 ಮೋಶೆಯು ಅವರ ಸಂಗಡ ಮಾತನಾಡಿ ಮುಗಿಸುವವರೆಗೂ ಅವನು ತನ್ನ ಮುಖದ ಮೇಲೆ ಮುಸುಕು ಹಾಕಿಕೊಂಡನು. 34 ಆದರೆ ಮೋಶೆಯು ಯೆಹೋವ ದೇವರ ಸನ್ನಿಧಿಯಲ್ಲಿ ಆತನ ಸಂಗಡ ಮಾತನಾಡುವುದಕ್ಕೆ ಒಳಗೆ ಪ್ರವೇಶಿಸಿ ಹೊರಗೆ ಬರುವವರೆಗೆ ಆ ಮುಸುಕನ್ನು ತೆಗೆದು ಬಿಡುತ್ತಿದ್ದನು. ಅವನು ಹೊರಗೆ ಬಂದು ತನಗೆ ಆಜ್ಞಾಪಿಸಿದ್ದನ್ನು ಇಸ್ರಾಯೇಲರಿಗೆ ಹೇಳಿದನು. 35 ಆಗ ಮೋಶೆಯ ಮುಖವು ಪ್ರಕಾಶಿಸುವುದನ್ನು ಇಸ್ರಾಯೇಲರು ನೋಡಿದ್ದರು. ಮೋಶೆ ದೇವರ ಸಂಗಡ ಮಾತನಾಡುವುದಕ್ಕೆ ಹೋಗುವವರೆಗೆ ಅವನು ತನ್ನ ಮುಖದ ಮೇಲೆ ತಿರುಗಿ ಮುಸುಕನ್ನು ಹಾಕಿಕೊಳ್ಳುತ್ತಿದ್ದನು.
* 34:13 34:13 ಅಶೇರಾ ದೇವಿಯ ಕಟ್ಟಿಗೆಯ ಸ್ತಂಭಗಳ ಚಿಹ್ನೆಗಳು