9
ಪಶುಗಳ ಉಪದ್ರವ
ಅನಂತರ ಯೆಹೋವ ದೇವರು ಮೋಶೆಗೆ ಹೇಳಿದ್ದೇನಂದರೆ, “ಫರೋಹನ ಬಳಿಗೆ ಹೋಗಿ ಅವನಿಗೆ, ‘ಹಿಬ್ರಿಯರ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನನ್ನನ್ನು ಆರಾಧಿಸುವಂತೆ ನನ್ನ ಜನರನ್ನು ಕಳುಹಿಸು.” ಅವರನ್ನು ಕಳುಹಿಸುವುದಕ್ಕೆ ನಿರಾಕರಿಸಿ ಇನ್ನೂ ತಡೆದರೆ, ಯೆಹೋವ ದೇವರ ಕೈ ಹೊಲದಲ್ಲಿರುವ ನಿನ್ನ ಪಶುಗಳ ಮೇಲೆ ಇರುವುದು. ಕುದುರೆ, ಕತ್ತೆ, ಒಂಟೆ, ಎತ್ತು, ಕುರಿ, ಆಡು ಇವುಗಳ ಮೇಲೆ ಕಠಿಣವಾದ ಉಪದ್ರವ ಬರುವುದು. ಯೆಹೋವ ದೇವರು ಇಸ್ರಾಯೇಲರ ಪಶುಗಳನ್ನೂ ಈಜಿಪ್ಟಿನವರ ಪಶುಗಳನ್ನೂ ವಿಂಗಡಿಸುವರು. ಇಸ್ರಾಯೇಲರ ಪಶುಗಳಲ್ಲಿ ಒಂದೂ ಸಾಯುವುದಿಲ್ಲ,’ ” ಎಂದರು.
ಇದಲ್ಲದೆ ಯೆಹೋವ ದೇವರು, “ನಿರ್ದಿಷ್ಟವಾದ ಒಂದು ಸಮಯವನ್ನು ನೇಮಿಸಿ, ನಾಳೆ ಯೆಹೋವ ದೇವರು ಈ ಕಾರ್ಯವನ್ನು ಈ ದೇಶದಲ್ಲಿ ಮಾಡುವರು, ಎಂದು ಹೇಳು,” ಎಂದರು. ಮಾರನೆಯ ದಿನವೇ ಯೆಹೋವ ದೇವರು ಆ ಕಾರ್ಯವನ್ನು ಮಾಡಲಾರಂಭಿಸಿದರು. ಈಜಿಪ್ಟಿನ ಪಶುಗಳೆಲ್ಲಾ ಸತ್ತು ಹೋದವು. ಆದರೆ ಇಸ್ರಾಯೇಲರ ಪಶುಗಳಲ್ಲಿ ಒಂದೂ ಸಾಯಲಿಲ್ಲ. ಫರೋಹನು ಆಳುಗಳನ್ನು ಕಳುಹಿಸಿ ನೋಡಿದಾಗ, ಇಸ್ರಾಯೇಲರ ಪಶುಗಳಲ್ಲಿ ಒಂದೂ ಸತ್ತಿರಲಿಲ್ಲ. ಆದರೆ ಫರೋಹನ ಹೃದಯವು ಕಠಿಣವಾಗಿದ್ದುದರಿಂದ ಅವನು ಜನರನ್ನು ಹೋಗಗೊಡಿಸಲಿಲ್ಲ.
ಹುಣ್ಣುಗಳ ಉಪದ್ರವ
ಆಗ ಯೆಹೋವ ದೇವರು ಮೋಶೆ ಆರೋನರಿಗೆ, “ಕೈತುಂಬಾ ಒಲೆಯ ಬೂದಿಯನ್ನು ತೆಗೆದುಕೊಳ್ಳಿರಿ. ಅದನ್ನು ಮೋಶೆಯು ಫರೋಹನ ಮುಂದೆ ಆಕಾಶದ ಕಡೆಗೆ ತೂರಲಿ. ಆಗ ಅದು ಈಜಿಪ್ಟ್ ದೇಶದಲ್ಲೆಲ್ಲಾ ಪುಡಿಯಾಗುವುದು. ಅದು ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಹುಣ್ಣುಗಳಾಗುವ ಬೊಕ್ಕೆಗಳು ಏಳುವಂತೆ ಮಾಡುವುದು,” ಎಂದು ಹೇಳಿದರು.
10 ಆಗ ಅವರು ಒಲೆಯ ಬೂದಿಯನ್ನು ತೆಗೆದುಕೊಂಡು ಫರೋಹನ ಮುಂದೆ ನಿಂತರು. ಮೋಶೆಯು ಅದನ್ನು ಆಕಾಶದ ಕಡೆಗೆ ತೂರಿದನು. ಆಗ ಅದು ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಹರಡಿ ಹುಣ್ಣುಗಳಾಗುವಂಥ ಬೊಕ್ಕೆಗಳಾದವು. 11 ಇದಲ್ಲದೆ ಮಂತ್ರಗಾರರು ಹುಣ್ಣಿನ ನಿಮಿತ್ತ ಮೋಶೆಯ ಮುಂದೆ ನಿಂತುಕೊಳ್ಳಲಾರದೆ ಹೋದರು. ಏಕೆಂದರೆ ಹುಣ್ಣುಗಳು ಮಂತ್ರಗಾರರ ಮೇಲೆಯೂ ಈಜಿಪ್ಟಿನವರ ಮೇಲೆಯೂ ಇದ್ದವು. 12 ಆದರೆ ಯೆಹೋವ ದೇವರು ಫರೋಹನ ಹೃದಯವನ್ನು ಕಠಿಣ ಮಾಡಿದರು. ಯೆಹೋವ ದೇವರು ಮೋಶೆಗೆ ಹೇಳಿದಂತೆಯೇ ಅವನು ಅವರ ಮಾತನ್ನು ಕೇಳಲಿಲ್ಲ.
ಆಲಿಕಲ್ಲಿನ ಮಳೆಯ ಉಪದ್ರವ
13 ಯೆಹೋವ ದೇವರು ಮೋಶೆಗೆ, “ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೊಂಡು ಅವನಿಗೆ, ‘ಹಿಬ್ರಿಯರ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನನ್ನು ಅವರು ಆರಾಧಿಸುವ ಹಾಗೆ ನನ್ನ ಜನರನ್ನು ಕಳುಹಿಸು. 14 ಭೂಲೋಕದಲ್ಲೆಲ್ಲಾ ನನ್ನ ಹಾಗೆ ಯಾರೂ ಇಲ್ಲವೆಂದು ನೀನು ತಿಳಿದುಕೊಳ್ಳುವ ಹಾಗೆ, ಈ ಸಾರಿ ನಾನು ಎಲ್ಲಾ ಉಪದ್ರವಗಳನ್ನು ನಿನ್ನ ಮೇಲೆಯೂ ನಿನ್ನ ಸೇವಕರ ಮೇಲೆಯೂ ನಿನ್ನ ಜನರ ಮೇಲೆಯೂ ಬರಮಾಡುವೆನು. 15 ಈಗ ನನ್ನ ಕೈಚಾಚಿ ನಿನ್ನನ್ನೂ, ನಿನ್ನ ಜನರನ್ನೂ ಉಪದ್ರವದಿಂದ ಬಾಧಿಸುವೆನು. ನಿನ್ನನ್ನು ಭೂಮಿಯೊಳಗಿಂದ ನಿರ್ಮೂಲ ಮಾಡುವೆನು. 16 ಆದರೆ ನಿಶ್ಚಯವಾಗಿ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ, ನನ್ನ ಹೆಸರನ್ನು ಭೂಮಿಯ ಮೇಲೆಲ್ಲಾ ಪ್ರಸಿದ್ಧಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದ್ದೇನೆ. 17 ನೀನು ಇನ್ನೂ ಅವರನ್ನು ಕಳುಹಿಸದೆ ನನ್ನ ಜನರಿಗೆ ವಿರೋಧವಾಗಿ ನಿನ್ನನ್ನು ನೀನೇ ಹೆಚ್ಚಿಸಿಕೊಳ್ಳುತ್ತೀಯೋ? 18 ಹಾಗಾದರೆ ನಾಳೆ ಇಷ್ಟು ಹೊತ್ತಿಗೆ ಮಹಾ ಕಠಿಣವಾದ ಆಲಿಕಲ್ಲಿನ ಮಳೆಯನ್ನು ಬೀಳುವಂತೆ ಮಾಡುವೆನು. ಅಂಥದ್ದು ಈಜಿಪ್ಟಿನಲ್ಲಿ, ಅದರ ರಾಜ್ಯವು ಸ್ಥಾಪಿತವಾದಂದಿನಿಂದ ಇಲ್ಲಿಯವರೆಗೂ ಆಗಿಲ್ಲ. 19 ಹೀಗಿರುವುದರಿಂದ ಯಾರನ್ನಾದರೂ ಕಳುಹಿಸಿ ನಿನ್ನ ಪಶುಗಳನ್ನೂ, ಹೊಲದಲ್ಲಿ ನಿನಗಿರುವವುಗಳನ್ನೂ ಭದ್ರಪಡಿಸು. ಏಕೆಂದರೆ ಮನೆಗಳಿಗೆ ಬಾರದೆ ಹೊಲದಲ್ಲಿ ಸಿಕ್ಕುವ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಆಲಿಕಲ್ಲಿನ ಮಳೆಯು ಸುರಿದು ಕೊಲ್ಲುವುದು,’ ಎಂದು ಹೇಳು,” ಎಂದರು.
20 ಆಗ ಫರೋಹನ ಸೇವಕರಲ್ಲಿ ಯೆಹೋವ ದೇವರ ವಾಕ್ಯಕ್ಕೆ ಭಯಪಟ್ಟವರೆಲ್ಲರೂ ತಮ್ಮ ದಾಸರನ್ನೂ ಪಶುಗಳನ್ನೂ ಮನೆಗಳಿಗೆ ಓಡಿ ಬರುವಂತೆ ಮಾಡಿದರು. 21 ಆದರೆ ಯೆಹೋವ ದೇವರ ವಾಕ್ಯಕ್ಕೆ ಮನಸ್ಸು ಕೊಡದವರು, ತಮ್ಮ ದಾಸರನ್ನೂ ಪಶುಗಳನ್ನೂ ಹೊಲದಲ್ಲಿ ಬಿಟ್ಟರು.
22 ಆಗ ಯೆಹೋವ ದೇವರು ಮೋಶೆಗೆ, “ಆಕಾಶದ ಕಡೆಗೆ ನಿನ್ನ ಕೈಚಾಚು. ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಮತ್ತು ಈಜಿಪ್ಟ್ ದೇಶದಲ್ಲಿ ಇರುವ ಎಲ್ಲಾ ಹೊಲದ ಬೆಳೆಯ ಮೇಲೆಯೂ ಆಲಿಕಲ್ಲಿನ ಮಳೆ ಸುರಿಯುವುದು,” ಎಂದು ಪ್ರಕಟಪಡಿಸಿದರು. 23 ಮೋಶೆಯು ಆಕಾಶದ ಕಡೆಗೆ ತನ್ನ ಕೋಲನ್ನು ಚಾಚಿದನು. ಆಗ ಯೆಹೋವ ದೇವರು ಗುಡುಗುಗಳನ್ನೂ ಆಲಿಕಲ್ಲಿನ ಮಳೆಯನ್ನೂ ಸುರಿಸಿದರು. ಸಿಡಿಲು ನೆಲಕ್ಕೆ ಬಡಿಯಿತು. ಸಿಡಿಲಿನ ಆರ್ಭಟದೊಂದಿಗೆ ಯೆಹೋವ ದೇವರು ಈಜಿಪ್ಟ್ ದೇಶದ ಮೇಲೆ ಆಲಿಕಲ್ಲಿನ ಮಳೆಯನ್ನು ಸುರಿಸಿದರು. 24 ಸಿಡಿಲಿನ ಆರ್ಭಟದೊಂದಿಗೆ ಕಠಿಣವಾದ ಆಲಿಕಲ್ಲಿನ ಮಳೆಯೂ ಸುರಿಯಿತು. ಈಜಿಪ್ಟ್ ಒಂದು ರಾಷ್ಟ್ರವಾದಂದಿನಿಂದ ಅಂಥ ಘೋರವಾದ ಆಲಿಕಲ್ಲಿನ ಮಳೆಯೂ ಆ ದೇಶದಲ್ಲಿ ಆಗಿರಲಿಲ್ಲ. 25 ಆ ಆಲಿಕಲ್ಲಿನ ಮಳೆಯು ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರು ಮೊದಲುಗೊಂಡು ಪಶುಗಳವರೆಗೂ ಹೊಲದಲ್ಲಿ ಇದ್ದದ್ದನ್ನೆಲ್ಲಾ ಹಾಳುಮಾಡಿತು. ಹೊಲದ ಎಲ್ಲಾ ಸೊಪ್ಪನ್ನೂ ಹಾಳು ಮಾಡಿ, ಎಲ್ಲಾ ಮರಗಳನ್ನು ಮುರಿದುಹಾಕಿತು. 26 ಇಸ್ರಾಯೇಲರು ಇದ್ದ ಗೋಷೆನ್ ಪ್ರಾಂತದಲ್ಲಿ ಆಲಿಕಲ್ಲಿನ ಮಳೆಯು ಇರಲಿಲ್ಲ.
27 ಆಗ ಫರೋಹನು ಮೋಶೆ ಆರೋನರನ್ನು ಕರೆಕಳುಹಿಸಿ ಅವರಿಗೆ, “ಈ ಸಲ ನಾನು ಪಾಪಮಾಡಿದ್ದೇನೆ, ಯೆಹೋವ ದೇವರು ನೀತಿವಂತನು. ಆದರೆ ನಾನೂ, ನನ್ನ ಜನರೂ ತಪ್ಪಿತಸ್ಥರು. 28 ಆದ್ದರಿಂದ ಈ ಬಲವಾದ ಗುಡುಗುಗಳೂ ಆಲಿಕಲ್ಲಿನ ಮಳೆಯೂ ಇನ್ನು ಸಾಕು. ಇವುಗಳು ನಿಂತುಹೋಗುವಂತೆ ಯೆಹೋವ ದೇವರನ್ನು ಬೇಡಿಕೊಳ್ಳಿರಿ, ನೀವು ಇನ್ನು ಇಲ್ಲಿ ಇರದಂತೆ ನಾನು ನಿಮ್ಮನ್ನು ಕಳುಹಿಸಿಬಿಡುವೆನು,” ಎಂದನು.
29 ಮೋಶೆಯು ಅವನಿಗೆ, “ನಾನು ಪಟ್ಟಣವನ್ನು ಬಿಟ್ಟುಹೋದ ಕೂಡಲೇ, ಯೆಹೋವ ದೇವರ ಕಡೆಗೆ ನನ್ನ ಕೈಗಳನ್ನು ಚಾಚಿ ಪ್ರಾರ್ಥಿಸುವೆನು. ಭೂಮಿಯು ಯೆಹೋವ ದೇವರದೇ ಎಂದು ನೀನು ತಿಳಿದುಕೊಳ್ಳುವಂತೆ ಗುಡುಗುಗಳು ನಿಂತುಹೋಗುವುವು. ಆಲಿಕಲ್ಲಿನ ಮಳೆಯು ಇನ್ನು ಇರದು. 30 ಆದರೂ ನೀನು ಮತ್ತು ನಿನ್ನ ಅಧಿಕಾರಿಗಳು ದೇವರಾದ ಯೆಹೋವ ದೇವರಿಗೆ ಭಯಪಡುವುದಿಲ್ಲವೆಂದು ನಾನು ಬಲ್ಲೆನು,” ಎಂದನು.
31 ಜವೆಗೋಧಿಗೆ ತೆನೆಯೂ ಅಗಸೆಯ ಮೊಗ್ಗುಗಳೂ ಇದ್ದುದರಿಂದ ಅಗಸೆಯೂ ಜವೆಗೋಧಿಯೂ ಹಾಳಾದವು. 32 ಆದರೆ ಗೋಧಿ ಮತ್ತು ಕಡಲೆ ಬೆಳೆದಿಲ್ಲವಾದ್ದರಿಂದ ಹಾಳಾಗಲಿಲ್ಲ.
33 ತರುವಾಯ ಮೋಶೆಯು ಫರೋಹನನ್ನು ಬಿಟ್ಟು ಪಟ್ಟಣದ ಹೊರಗೆ ಬಂದಾಗ, ತನ್ನ ಕೈಗಳನ್ನು ಯೆಹೋವ ದೇವರ ಕಡೆಗೆ ಚಾಚಿದನು. ಆಗ ಗುಡುಗುಗಳೂ ಆಲಿಕಲ್ಲಿನ ಮಳೆಯೂ ನಿಂತುಹೋದವು. ಇನ್ನು ಮಳೆಯು ಭೂಮಿಯ ಮೇಲೆ ಬೀಳಲಿಲ್ಲ. 34 ಮಳೆ, ಆಲಿಕಲ್ಲಿನ ಮಳೆ, ಗುಡುಗುಗಳು ನಿಂತುಹೋದದ್ದನ್ನು ಫರೋಹನು ನೋಡಿದಾಗ, ಅವನು ಪುನಃ ಪಾಪಮಾಡಿದನು. ತನ್ನ ಅಧಿಕಾರಿಗಳ ಸಹಿತವಾಗಿ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು. 35 ಫರೋಹನ ಹೃದಯವು ಕಠಿಣವಾಯಿತು. ಯೆಹೋವ ದೇವರು ಮೋಶೆಗೆ ಹೇಳಿದಂತೆ, ಅವನು ಇಸ್ರಾಯೇಲರನ್ನು ಕಳುಹಿಸಲೇ ಇಲ್ಲ.