50
ಆಗ ಯೋಸೇಫನು ತನ್ನ ತಂದೆಯ ಶವದ ಮೇಲೆ ಬಿದ್ದು, ಅವನಿಗಾಗಿ ಕಣ್ಣೀರು ಸುರಿಸುತ್ತಾ ಅವನಿಗೆ ಮುದ್ದಿಟ್ಟನು. ಯೋಸೇಫನು ತನ್ನ ತಂದೆ ಇಸ್ರಾಯೇಲನಿಗೆ ಸುಗಂಧದ್ರವ್ಯವನ್ನು ಹಾಕಬೇಕೆಂದು ತನ್ನ ದಾಸರಾದ ವೈದ್ಯರಿಗೆ ಅಪ್ಪಣೆಕೊಟ್ಟನು. ವೈದ್ಯರು ಇಸ್ರಾಯೇಲನಿಗೆ ನಲವತ್ತು ದಿನಗಳವರೆಗೆ ಸುಗಂಧದ್ರವ್ಯಗಳ ಲೇಪನ ಮಾಡಿದರು. ಅದಕ್ಕಾಗಿ ಅಷ್ಟು ಸಮಯ ಬೇಕಾಗಿತ್ತು. ಇದಲ್ಲದೆ ಈಜಿಪ್ಟಿನವರು ಅವನಿಗಾಗಿ ಎಪ್ಪತ್ತು ದಿವಸ ದುಃಖಪಟ್ಟರು.
ಅವನಿಗಾಗಿ ದುಃಖಿಸುವ ದಿನಗಳು ಮುಗಿದ ಮೇಲೆ ಯೋಸೇಫನು ಫರೋಹನ ಆಸ್ಥಾನದವರಿಗೆ, “ನಾನು ನಿಮ್ಮ ಕಣ್ಣುಗಳ ಮುಂದೆ ದಯೆ ಹೊಂದಿದ್ದೇಯಾದರೆ, ಫರೋಹನ ಕಿವಿಗಳಲ್ಲಿ ಈ ಮಾತು ಹೇಳಬೇಕು. ‘ನನಗೆ ನನ್ನ ತಂದೆ, “ನಾನು ಸಾಯುತ್ತೇನೆ, ನಾನು ಕಾನಾನ್ ದೇಶದಲ್ಲಿ ನನಗೋಸ್ಕರ ಅಗೆದ ನನ್ನ ಸಮಾಧಿಯಲ್ಲಿಯೇ ನನ್ನನ್ನು ಸಮಾಧಿಮಾಡಬೇಕು,” ಎಂದು ನನ್ನಿಂದ ಪ್ರಮಾಣ ಮಾಡಿಸಿದ್ದಾನೆ.’ ಹೀಗಿರುವುದರಿಂದ ನಾನು ಹೋಗಿ ನನ್ನ ತಂದೆಯನ್ನು ಹೂಳಿ, ತಿರುಗಿ ಬರುವ ಹಾಗೆ ಅಪ್ಪಣೆಯಾಗಬೇಕು,” ಎಂದನು.
ಆಗ ಫರೋಹನು, “ನಿನ್ನ ತಂದೆಯು ನಿನ್ನಿಂದ ಪ್ರಮಾಣ ಮಾಡಿಸಿದಂತೆ, ನೀನು ಹೋಗಿ ನಿನ್ನ ತಂದೆಯನ್ನು ಹೂಳಿಡು,” ಎಂದನು.
ಹೀಗೆ ಯೋಸೇಫನು ತನ್ನ ತಂದೆಯನ್ನು ಸಮಾಧಿಮಾಡುವದಕ್ಕೆ ಹೊರಟುಹೋದನು. ಅವನ ಸಂಗಡ ಫರೋಹನ ದಾಸರೆಲ್ಲರೂ ಅರಮನೆಯ ಹಿರಿಯರೆಲ್ಲರೂ ಈಜಿಪ್ಟ್ ದೇಶದ ಮುಖ್ಯಸ್ಥರೆಲ್ಲರೂ, ಯೋಸೇಫನ ಮನೆಯವರೆಲ್ಲರೂ ಅವನ ಸಹೋದರರೂ ಅವನ ತಂದೆಯ ಮನೆಯವರೆಲ್ಲರೂ ಹೋದರು. ಅವರ ಮಕ್ಕಳನ್ನೂ, ಕುರಿದನಗಳನ್ನೂ ಮಾತ್ರ ಗೋಷೆನ್ ಪ್ರಾಂತದಲ್ಲಿ ಬಿಟ್ಟರು. ರಥಗಳೂ, ರಾಹುತರೂ ಅವನ ಸಂಗಡ ಹೊರಟು ಹೋದರು. ಸಮೂಹವು ಬಹಳ ದೊಡ್ಡದಾಗಿತ್ತು.
10 ಅವರು ಯೊರ್ದನಿನ ಆಚೆ ಇರುವ ಆಟಾದ್ ಕಣಕ್ಕೆ ಬಂದಾಗ, ಅಲ್ಲಿ ಅಧಿಕವಾದ ಮತ್ತು ಮಹಾ ಘೋರವಾದ ಗೋಳಾಟದಿಂದ ದುಃಖಪಟ್ಟರು. 11 ದೇಶದ ನಿವಾಸಿಗಳಾದ ಕಾನಾನ್ಯರು ಆಟಾದ್ ಕಣದಲ್ಲಿ ಆಗುತ್ತಿದ್ದ ದುಃಖವನ್ನು ಕಂಡಾಗ, “ಇದು ಈಜಿಪ್ಟಿನವರಿಗೆ ಘೋರವಾದ ದುಃಖ,” ಎಂದು ಹೇಳಿದರು. ಆದ್ದರಿಂದ ಅದಕ್ಕೆ ಆಬೇಲ್ ಮಿಚ್ರಯೀಮ್ ಎಂದು ಹೆಸರಾಯಿತು. ಅದು ಯೊರ್ದನಿನ ಆಚೆ ಇದೆ.
12 ಯಾಕೋಬನು ತನ್ನ ಪುತ್ರರಿಗೆ ಆಜ್ಞಾಪಿಸಿದ ಪ್ರಕಾರ ಅವನಿಗೆ ಮಾಡಿದರು. 13 ಅವನ ಪುತ್ರರು ಅವನನ್ನು ಕಾನಾನ್ ದೇಶಕ್ಕೆ ತೆಗೆದುಕೊಂಡುಹೋಗಿ, ಅಬ್ರಹಾಮನು ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನಿನಿಂದ ಕೊಂಡುಕೊಂಡಿದ್ದ ಮಮ್ರೆಗೆ ಎದುರಾಗಿರುವಂಥ ಮಕ್ಪೇಲ ಹೊಲದ ಗವಿಯಲ್ಲಿ ಹೂಳಿದರು. 14 ಯೋಸೇಫನು ತನ್ನ ತಂದೆಯನ್ನು ಹೂಳಿದ ಮೇಲೆ, ತನ್ನ ಸಹೋದರರ ಸಂಗಡವೂ, ತನ್ನ ತಂದೆಯನ್ನು ಹೂಳುವುದಕ್ಕಾಗಿ ಅವನ ಸಂಗಡ ಹೋದವರೆಲ್ಲರೂ ಈಜಿಪ್ಟಿಗೆ ತಿರುಗಿ ಬಂದರು.
ಯೋಸೇಫನು ತನ್ನ ಸಹೋದರರನ್ನು ಕ್ಷಮಿಸಿದ್ದು
15 ತಮ್ಮ ತಂದೆ ಸತ್ತು ಹೋದ ಮೇಲೆ ಯೋಸೇಫನ ಸಹೋದರರು, “ಒಂದು ವೇಳೆ ಯೋಸೇಫನು ನಮ್ಮನ್ನು ಹಗೆಮಾಡಿ, ನಾವು ಅವನಿಗೆ ಮಾಡಿದ್ದ ಎಲ್ಲಾ ಕೇಡಿಗಾಗಿ ನಿಶ್ಚಯವಾಗಿ ಪ್ರತೀಕಾರಮಾಡಬಹುದು,” ಎಂದುಕೊಂಡು, 16 ಅವರು ಒಬ್ಬ ಸೇವಕನನ್ನು ಕಳುಹಿಸಿ ಯೋಸೇಫನಿಗೆ, “ನಿನ್ನ ತಂದೆಯು ಮರಣ ಹೊಂದುವುದಕ್ಕಿಂತ ಮುಂಚೆ, 17 ‘ನಿನ್ನ ಸಹೋದರರ ಅಪರಾಧವನ್ನೂ ಅವರ ಪಾಪವನ್ನೂ ಮನ್ನಿಸು,’ ಎಂಬುದಾಗಿ ಯೋಸೇಫನಿಗೆ ಹೇಳಿರಿ, ಎಂದು ತಿಳಿಸಿದ್ದಾನೆ. ಹೀಗಿರುವುದರಿಂದ ನಿನ್ನ ತಂದೆಯ ದೇವರ ದಾಸರಾದ ನಾವು ಮಾಡಿದ ಅಪರಾಧವನ್ನು ದಯಮಾಡಿ ಕ್ಷಮಿಸು,” ಎಂದು ತಿಳಿಸಿದರು. ಈ ಸಂದೇಶ ಅವನಿಗೆ ಬಂದಾಗ, ಅವನು ಅತ್ತನು.
18 ಆಮೇಲೆ ಅವನ ಸಹೋದರರು ಬಂದು ಅವನ ಮುಂದೆ ಅಡ್ಡಬಿದ್ದು, “ನಿನ್ನ ದಾಸರಾಗಿದ್ದೇವೆ,” ಎಂದರು.
19 ಯೋಸೇಫನು ಅವರಿಗೆ, “ಭಯಪಡಬೇಡಿರಿ, ನಾನು ದೇವರ ಸ್ಥಾನದಲ್ಲಿ ಇದ್ದೇನೋ? 20 ನೀವು ನನಗೆ ವಿರೋಧವಾಗಿ ಕೇಡನ್ನು ಕಲ್ಪಿಸಿದ್ದೀರಿ, ಆದರೆ ದೇವರು ಒಳ್ಳೆಯದಕ್ಕಾಗಿಯೇ ಸಂಕಲ್ಪಿಸಿದರು. ಈಗ ಬಹುಜನರ ಪ್ರಾಣ ಉಳಿಯುವಂತೆ ನಡೆಯುತ್ತಿದೆ. 21 ಹೀಗಿರುವುದರಿಂದ ನೀವು ಭಯಪಡಬೇಡಿರಿ. ನಾನು ನಿಮ್ಮನ್ನೂ, ನಿಮ್ಮ ಮಕ್ಕಳನ್ನೂ ಸಂರಕ್ಷಿಸುತ್ತೇನೆ,” ಎಂದು ಹೇಳಿ, ಅವರನ್ನು ಸಂತೈಸಿ, ದಯೆಯಿಂದ ಮಾತನಾಡಿದನು.
ಯೋಸೇಫನ ಮರಣ
22 ಹೀಗೆ ಯೋಸೇಫನೂ, ಅವನ ತಂದೆಯ ಮನೆಯವರೂ ಸಹಿತವಾಗಿ ಈಜಿಪ್ಟಿನಲ್ಲಿ ವಾಸಮಾಡಿದರು. ಯೋಸೇಫನು ನೂರಹತ್ತು ವರ್ಷ ಬದುಕಿದನು. 23 ಯೋಸೇಫನು ಎಫ್ರಾಯೀಮನ ಮರಿಮೊಮ್ಮಕ್ಕಳನ್ನೂ ಕಂಡನು. ಮನಸ್ಸೆಯ ಮಗ ಮಾಕೀರನ ಮಕ್ಕಳೂ ಸಹ ಯೋಸೇಫನ ತೊಡೆಯ ಮೇಲೆಯೇ ಬೆಳೆದರು.
24 ಇದಲ್ಲದೆ ಯೋಸೇಫನು ತನ್ನ ಸಹೋದರರಿಗೆ, “ನಾನು ಸತ್ತಮೇಲೆ ದೇವರು ನಿಶ್ಚಯವಾಗಿ ನಿಮ್ಮನ್ನು ಕಾಪಾಡಿ, ಈ ದೇಶದೊಳಗಿಂದ ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣ ಮಾಡಿದ ದೇಶಕ್ಕೆ ಸೇರುವಂತೆ ಮಾಡುವರು,” ಎಂದನು. 25 ಯೋಸೇಫನು ಇಸ್ರಾಯೇಲನ ಮಕ್ಕಳಿಗೆ, “ದೇವರು ನಿಶ್ಚಯವಾಗಿ ನಿಮಗೆ ಸಹಾಯ ಮಾಡುವರು. ಆಗ ನನ್ನ ಎಲುಬುಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಬೇಕು,” ಎಂದು ಪ್ರಮಾಣ ಮಾಡಿಸಿದನು.
26 ಯೋಸೇಫನು ನೂರಹತ್ತು ವರ್ಷದವನಾಗಿ ಈಜಿಪ್ಟ್ ದೇಶದಲ್ಲಿ ಸತ್ತನು. ಅವರು ಅವನಿಗೆ ಸುಗಂಧದ್ರವ್ಯವನ್ನು ಹಾಕಿ, ಈಜಿಪ್ಟಿನಲ್ಲಿ ಪೆಟ್ಟಿಗೆಯೊಳಗೆ ಇಟ್ಟರು.