14
ಯೆಹೋವ ದೇವರು ಯಾಕೋಬ್ಯರನ್ನು ಕರುಣಿಸುವರು.
ಇಸ್ರಾಯೇಲರನ್ನು ಪುನಃ ಆಯ್ದುಕೊಳ್ಳುವರು.
ಅವರನ್ನು ಅವರ ಸ್ವಂತ ದೇಶದಲ್ಲಿ ಸೇರಿಸುವರು.
ಪರದೇಶದವರು ಅವರೊಂದಿಗೆ ಕೂಡಿಬಂದು,
ಯಾಕೋಬನ ಮನೆತನಕ್ಕೆ ಸೇರಿಕೊಳ್ಳುವರು.
ದೇಶಗಳು ಇನ್ನೊಮ್ಮೆ ಅವರನ್ನು ತೆಗೆದುಕೊಂಡು
ಅವನ ಸ್ಥಳಕ್ಕೆ ಅವರನ್ನು ಬರಮಾಡುವರು.
ಆಗ ಇಸ್ರಾಯೇಲಿನ ಮನೆತನದವರು ಯೆಹೋವ ದೇವರ ದೇಶದಲ್ಲಿ,
ಆ ಜನಾಂಗದವರನ್ನು ಗಂಡು ಹೆಣ್ಣುಗಳನ್ನಾಗಿ ದಾಸದಾಸಿಯರನ್ನಾಗಿ ಇಟ್ಟುಕೊಳ್ಳುವರು.
ತಮ್ಮನ್ನು ಸೆರೆಹಿಡಿದವರನ್ನು ಸೆರೆಹಿಡಿಯುವರು.
ತಮ್ಮನ್ನು ದಬ್ಬಾಳಿಕೆಗಾರರ ಮೇಲೆ ಅಧಿಕಾರ ನಡೆಸುವರು.
ಯೆಹೋವ ದೇವರು ನಿಮ್ಮ ಸಂಕಟದಿಂದಲೂ, ಕಳವಳದಿಂದಲೂ ಕಠಿಣವಾದ ಬಿಟ್ಟಿಯ ಸೇವೆಯಿಂದಲೂ ನಿಮ್ಮನ್ನು ವಿಶ್ರಾಂತಿಗೊಳಿಸುವ ದಿನದಲ್ಲಿ ಬಾಬಿಲೋನಿನ ರಾಜನಿಗೆ ವಿರುದ್ಧವಾದ ಈ ಪದ್ಯವನ್ನು ನೀವು ಹೀಗೆ ಸ್ವರವೆತ್ತಿ ಹಾಡಬೇಕು:
ಹೀಗೆ ದಬ್ಬಾಳಿಕೆಗಾರನು ಕೊನೆಗೊಂಡನು.
ಅವನ ಕೋಪ ಹೀಗೆ ಮುಗಿಯಿತು.
ಆಳುತ್ತಿದ್ದ ದುಷ್ಟರ ಕೋಲನ್ನೂ,
ಅಧಿಪತಿಗಳ ದಂಡವನ್ನೂ ಯೆಹೋವ ದೇವರು ಮುರಿದುಬಿಟ್ಟರು.
ಆ ಅಧಿಪತಿಗಳು ಕಡುಕೋಪದಿಂದ
ಎಡೆಬಿಡದೆ ಜನರನ್ನು ದಂಡಿಸಿ,
ನಿಲ್ಲದ ದಬ್ಬಾಳಿಕೆಯಿಂದ
ರಾಷ್ಟ್ರಗಳನ್ನು ಅಧೀನಪಡಿಸಿಕೊಂಡಿದ್ದರು.
ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿಗೊಂಡಿದೆ.
ಅವರು ಉಲ್ಲಾಸದ ಧ್ವನಿಯಿಂದ ಹಾಡುತ್ತಾರೆ.
ತುರಾಯಿ ಮರಗಳೂ, ಲೆಬನೋನಿನ ದೇವದಾರು ಮರಗಳೂ,
“ಈಗ ನೀನು ಬಿದ್ದದ್ದರಿಂದ ನಮ್ಮನ್ನು ಕಡಿಯಲು
ಯಾರೂ ಬರುವುದಿಲ್ಲ,”
ಎಂದು ನಿನ್ನ ವಿಷಯವಾಗಿ ಉಲ್ಲಾಸಗೊಳ್ಳುತ್ತವೆ.
 
ನಿನಗೋಸ್ಕರ ನಿನ್ನ ಬರೋಣವನ್ನು ಎದುರುಗೊಳ್ಳುವುದಕ್ಕೆ
ಪಾತಾಳವು ಕೆಳಗಿನಿಂದ ತಳಮಳಪಡುತ್ತದೆ.
ಸತ್ತವರನ್ನು ಎಂದರೆ, ಭೂಲೋಕದಲ್ಲಿ ಮುಖಂಡರಾಗಿದ್ದವರೆಲ್ಲರ
ಆತ್ಮಗಳನ್ನು ಕಲಕಿ ಎಚ್ಚರಿಸಿ,
ಜನಾಂಗಗಳ ಎಲ್ಲಾ ರಾಜರನ್ನು
ಅವರ ಸಿಂಹಾಸನಗಳಿಂದ ಎಬ್ಬಿಸುತ್ತದೆ.
10 ಅವರೆಲ್ಲರು, “ನಮ್ಮ ಹಾಗೆ ನೀನು ಸಹ ಬಲಹೀನನಾಗಿದ್ದೀ.
ನೀನು ನಮ್ಮ ಸಮಾನನಾಗಿದ್ದೀ,”
ಎಂದು ಮಾತನಾಡಿ ಹೇಳುವರು.
11 ನಿನ್ನ ವೈಭವವೂ,
ನಿನ್ನ ವೀಣೆಗಳ ಸ್ವರವೂ ಸಮಾಧಿಗೆ ಇಳಿದಿವೆ.
ನಿನಗೆ ಹುಳುಗಳೇ ಹಾಸಿಗೆ,
ನಿನ್ನ ಹೊದಿಕೆಯು ಕ್ರಿಮಿಗಳೇ.
 
12 ಮುಂಜಾನೆಯ ನಕ್ಷತ್ರವೇ, ಉದಯ ಪುತ್ರನೇ,
ಆಕಾಶದಿಂದ ನೀನು ಹೇಗೆ ಬಿದ್ದೆ?
ಜನಾಂಗಗಳನ್ನು ಬಲಹೀನ ಮಾಡಿದ ನೀನು
ಭೂಮಿಗೆ ಹೇಗೆ ಬಿದ್ದೆ?
13 ನೀನು ನಿನ್ನ ಹೃದಯದಲ್ಲಿ ಹೀಗೆ ಎಂದುಕೊಂಡಿಯಲ್ಲಾ,
“ನಾನು ಆಕಾಶಕ್ಕೆ ಏರಿ,
ದೇವರ ನಕ್ಷತ್ರಗಳ ಮೇಲೆ
ನನ್ನ ಸಿಂಹಾಸನವನ್ನು ಘನತೆಗೇರಿಸುವೆನು.
ಉತ್ತರ ದಿಕ್ಕಿನ ಕಡೆಗಿರುವ ಜಫೋನ್ ಪರ್ವತದ ಮೇಲೆಯೂ
ನಾನು ಆಸೀನನಾಗುವೆನು.
14 ಉನ್ನತವಾದ ಮೇಘ ಮಂಡಲದ ಮೇಲೆ ಏರಿ,
ಮಹೋನ್ನತರಿಗೆ ಸಮಾನನಾಗುವೆನು.”
15 ಆದರೆ ಪಾತಾಳದ ಕುಣಿಯ ಕಡೆಗೂ,
ಸಮಾಧಿಗೂ ಇಳಿಯುವೆ.
 
16 ನಿನ್ನನ್ನು ಕಂಡವರು ದಿಟ್ಟಿಸಿ ನೋಡಿ,
ನಿನ್ನ ಗತಿಯನ್ನು ಯೋಚಿಸುತ್ತಾ,
“ಭೂಮಿಯನ್ನು ನಡುಗಿಸಿ, ರಾಜ್ಯಗಳನ್ನು ಕದಲಿಸಿ,
17 ಲೋಕವನ್ನು ಕಾಡನ್ನಾಗಿ ಮಾಡಿ,
ನಗರಗಳನ್ನು ಕೆಡವಿ,
ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದವನು
ಇವನೋ?” ಎಂದುಕೊಳ್ಳುವರು.
 
18 ಜನಾಂಗಗಳ ಅರಸರೆಲ್ಲಾ ವೈಭವದಿಂದ
ತಮ್ಮ ತಮ್ಮ ಸಮಾಧಿಗಳಲ್ಲಿ ಮಲಗುತ್ತಾರೆ.
19 ಆದರೆ ನೀನು ತಿರಸ್ಕರಿಸಿದ ಕೊಂಬೆಯಂತೆಯೂ,
ಖಡ್ಗ ತಿವಿದು
ಕಲ್ಲುಗುಂಡಿಗೆ ಪಾಲಾದ
ಹೆಣಗಳ ಹೊದಿಕೆಯಂತೆಯೂ,
ಪರರ ತುಳಿತಕ್ಕೆ ಈಡಾಗಿ,
ಸಮಾಧಿಯೊಳಗಿಂದ ಹೊರಗೆ ಬಿಸಾಡಿರುವ ಶವದ ಹಾಗಿದ್ದೀ.
20 ನೀನು ಆ ರಾಜರಂತೆ ಸಮಾಧಿಗೆ ಸೇರದಿರುವಿ.
ಏಕೆಂದರೆ ನಿನ್ನ ದೇಶವನ್ನು ನೀನು ನಾಶಮಾಡಿ,
ನಿನ್ನ ಜನರನ್ನು ಕೊಂದುಹಾಕಿದಿ.
 
 
ದುಷ್ಟರ ಸಂತಾನವು
ನಿರಂತರವೂ ನಿರ್ನಾಮವಾಗಲಿ.
21 ಅವರು ಏಳದೆ ಇಲ್ಲವೆ ದೇಶವನ್ನು ವಶಪಡಿಸಿಕೊಳ್ಳದೆ
ಇಲ್ಲವೆ ಲೋಕವನ್ನು ಪಟ್ಟಣಗಳಿಂದ ತುಂಬಿಸದಂತೆ,
ಅವರ ತಂದೆಗಳ ಅಪರಾಧದ ನಿಮಿತ್ತ,
ಅವನ ಮಕ್ಕಳ ಕೊಲೆಗೆ ಸಿದ್ಧಮಾಡಿರಿ.
 
22 “ಅವರಿಗೆ ವಿರುದ್ಧವಾಗಿ ಏಳುತ್ತೇನೆ,”
ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
“ಬಾಬಿಲೋನಿನಿಂದ ಆಕೆಯ ಹೆಸರನ್ನೂ, ಉಳಿದ ಜನರನ್ನೂ,
ಆಕೆಯ ಮಕ್ಕಳನ್ನೂ ಅದರ ಸಂತತಿಯವರನ್ನೂ ನಿರ್ಮೂಲ ಮಾಡುವೆನು,”
ಎಂದು ಯೆಹೋವ ದೇವರು ಹೇಳುತ್ತಾರೆ.
23 “ಅದನ್ನು ಮುಳ್ಳುಹಂದಿಗಳ ನಿವಾಸವಾಗಿಯೂ,
ಕೊಳಚೆ ಪ್ರದೇಶವನ್ನಾಗಿಯೂ ಪರಿವರ್ತಿಸುವೆನು.
ನಾಶನದ ಕಸಬರಿಗೆಯಿಂದ ಅದನ್ನು ಗುಡಿಸುವೆನು,”
ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
24 ಸೇನಾಧೀಶ್ವರ ಯೆಹೋವ ದೇವರು ಆಣೆ ಇಟ್ಟು ಹೇಳುವುದೇನೆಂದರೆ,
“ನಾನು ಯೋಚಿಸಿದ ರೀತಿಯಲ್ಲಿ ಖಂಡಿತವಾಗಿ ಆಗುವುದು.
ನಾನು ಉದ್ದೇಶಿಸಿದ ರೀತಿಯಲ್ಲಿಯೇ ನೆರವೇರುವುದು.
25 ಅಸ್ಸೀರಿಯವನ್ನು ನನ್ನ ದೇಶದಲ್ಲಿ ಮುರಿದುಬಿಡುವೆನು.
ನನ್ನ ಪರ್ವತಗಳ ಮೇಲೆ ಅವರನ್ನು ತುಳಿದುಬಿಡುವೆನು.
ಅವನ ನೊಗವು ನನ್ನ ಜನರ ಮೇಲಿಂದ ತೊಲಗಿ,
ಅವರ ಭಾರವು ಅವರ ಭುಜಗಳ ಮೇಲಿನಿಂದ ತೊಲಗುವುದು.”
 
26 ಇದೇ ಸಮಸ್ತ ಭೂಮಿಯ ವಿಷಯ ಆಲೋಚಿಸಿದ ಉದ್ದೇಶ.
ಇದೇ ಜನಾಂಗಗಳ ಮೇಲೆಲ್ಲಾ ಚಾಚಿದ ನನ್ನ ಕೈ.
27 ಏಕೆಂದರೆ ಸೇನಾಧೀಶ್ವರ ಯೆಹೋವ ದೇವರು ಉದ್ದೇಶಿಸಿದ್ದಾರೆ.
ಅದನ್ನು ಯಾರು ವ್ಯರ್ಥಪಡಿಸುವರು?
ಅವರು ಎತ್ತಿದ ಕೈಯನ್ನು, ಹಿಂದಕ್ಕೆ ತಳ್ಳುವವರು ಯಾರು? ಎಂಬುದೇ.
ಫಿಲಿಷ್ಟಿಯರಿಗೆ ವಿರೋಧವಾದ ಪ್ರವಾದನೆ
28 ಅರಸನಾದ ಆಹಾಜನು ಸತ್ತ ವರುಷದಲ್ಲಿ ಈ ದೈವೋಕ್ತಿ ಬಂದಿತು:
29 ಸಮಸ್ತ ಫಿಲಿಷ್ಟಿಯರೇ,
ನಿಮ್ಮನ್ನು ಹೊಡೆದ ಕೋಲು ಮುರಿದು ಹೋಯಿತೆಂದು ನೀವು ಉಲ್ಲಾಸಿಸಬೇಡಿರಿ.
ಏಕೆಂದರೆ ಹಾವಿನ ಸಂತಾನದಿಂದ ವಿಷಸರ್ಪವು ಉಂಟಾಗುವುದು.
ಅದರ ಫಲವು ಹಾರುವ ವಿಷಸರ್ಪವೇ.
30 ಬಡವರಲ್ಲಿ ಬಡವರಾದವರು ಆಹಾರ ಕಂಡುಕೊಳ್ಳುವರು.
ಕೊರತೆಯಲ್ಲಿರುವವರು ಸುರಕ್ಷಿತವಾಗಿ ನಿದ್ರಿಸುವರು.
ಆದರೆ ನಿನ್ನ ಸಂತಾನದವರೋ ಕ್ಷಾಮದಿಂದ ಹತರಾಗುವರು.
ನಿನ್ನಲ್ಲಿ ಉಳಿದವರನ್ನು ಅದು ಹತಮಾಡುವುದು.
 
31 ದ್ವಾರವೇ, ಗೋಳಾಡು! ಪಟ್ಟಣವೇ, ಕೂಗು!
ಫಿಲಿಷ್ಟಿಯರೇ ಕರಗಿ ಹೋಗಿರಿ.
ಹೊಗೆಯು ಉತ್ತರದಿಂದ ಬರುತ್ತದೆ.
ಅದರಲ್ಲಿ ಅತ್ತಿತ್ತ ನಡೆಯುವವರು ಯಾರೂ ಇಲ್ಲ.
32 ಜನಾಂಗಗಳ ದೂತರಿಗೆ
ಯಾವ ಉತ್ತರವನ್ನು ಕೊಡಬೇಕು?
“ಯೆಹೋವ ದೇವರು ಚೀಯೋನನ್ನು ಸ್ಥಾಪಿಸಿದ್ದಾರೆ.
ಬಾಧೆಪಟ್ಟ ಅವರ ಜನರು
ಅದನ್ನು ಆಶ್ರಯಿಸಿಕೊಳ್ಳುವರು.”