2
ಯೆಹೋವ ದೇವರ ಬೆಟ್ಟವು
ಆಮೋಚನ ಮಗ ಯೆಶಾಯನಿಗೆ ಯೆಹೂದದ ಮತ್ತು ಯೆರೂಸಲೇಮಿನ ವಿಷಯವಾಗಿ ಕಂಡು ಬಂದ ದೈವೋಕ್ತಿ:
 
ಆ ಅಂತ್ಯಕಾಲದಲ್ಲಿ,
ಯೆಹೋವ ದೇವರ ಮಂದಿರದ ಪರ್ವತವು ಎಲ್ಲಾ ಗುಡ್ಡಬೆಟ್ಟಗಳಿಗಿಂತ
ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವುದು.
ಆಗ ಎಲ್ಲಾ ಜನಾಂಗಗಳು ಅದರ ಬಳಿಗೆ ಪ್ರವಾಹದಂತೆ ಬರುವವು.
ಅನೇಕ ಪ್ರಜೆಗಳು ಬಂದು ಹೀಗೆ ಹೇಳುವರು,
“ಬನ್ನಿರಿ, ಯೆಹೋವ ದೇವರ ಪರ್ವತಕ್ಕೂ,
ಯಾಕೋಬನ ದೇವರ ಆಲಯಕ್ಕೂ ಏರಿಹೋಗೋಣ.
ದೇವರು ತಮ್ಮ ಮಾರ್ಗಗಳನ್ನು ನಮಗೆ ಬೋಧಿಸುವರು,
ನಾವು ಅವರ ದಾರಿಗಳಲ್ಲಿ ನಡೆಯುವೆವು.”
ಏಕೆಂದರೆ ಚೀಯೋನಿನಿಂದ ದೇವರ ನಿಯಮವೂ,
ಯೆರೂಸಲೇಮಿನಿಂದ ಯೆಹೋವ ದೇವರ ವಾಕ್ಯವೂ ಹೊರಡುವುವು.
ಅವರು ಅನೇಕ ಜನಾಂಗಗಳ ಮಧ್ಯದಲ್ಲಿ ನ್ಯಾಯತೀರಿಸಿ,
ಅನೇಕ ಪ್ರಜೆಗಳನ್ನು ಗದರಿಸುವರು.
ಅವರು ತಮ್ಮ ಖಡ್ಗಗಳನ್ನು ನೇಗಿಲಿನ ಗುಳಗಳನ್ನಾಗಿಯೂ
ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು.
ಜನಾಂಗಕ್ಕೆ ವಿರೋಧವಾಗಿ ಜನಾಂಗವು ಖಡ್ಗವನ್ನು ಪ್ರಯೋಗಿಸುವುದಿಲ್ಲ,
ಇನ್ನು ಮೇಲೆ ಯುದ್ಧಾಭ್ಯಾಸದ ಅಗತ್ಯ ಇರುವುದೇ ಇಲ್ಲ.
 
ಯಾಕೋಬಿನ ಮನೆತನದವರೇ ಬನ್ನಿರಿ,
ಯೆಹೋವ ದೇವರ ಬೆಳಕಿನಲ್ಲಿ ನಡೆಯೋಣ.
ಯೆಹೋವ ದೇವರ ದಿನ
ಯಾಕೋಬಿನ ಮನೆತನದವರು
ಪೂರ್ವದೇಶಗಳ ಮಂತ್ರತಂತ್ರಗಳಲ್ಲಿ ಮಗ್ನರಾಗಿ,
ಫಿಲಿಷ್ಟಿಯರಂತೆ ಕಣಿ ಹೇಳುವವರಾಗಿಯೂ,
ಬೇರೆ ದೇಶಗಳವರ ಮಧ್ಯದಲ್ಲಿ ಮೆಚ್ಚಿಕೆಯುಳ್ಳವರಾಗಿಯೂ ಇರುವುದರಿಂದ
ಈ ನಿನ್ನ ಜನರನ್ನು ತಳ್ಳಿಬಿಟ್ಟಿದ್ದೀರಿ.
ಅವರ ದೇಶವು ಬೆಳ್ಳಿ ಬಂಗಾರಗಳಿಂದ ತುಂಬಿದೆ.
ಅವರ ಬೊಕ್ಕಸಗಳಿಗೆ ಮಿತಿಯಿಲ್ಲ.
ಅವರ ದೇಶವು ಕುದುರೆಗಳಿಂದ ತುಂಬಿದೆ,
ಅವರ ರಥಗಳಿಗೆ ಮಿತಿಯೇ ಇಲ್ಲ.
ಅವರ ದೇಶವು ವಿಗ್ರಹಗಳಿಂದ ತುಂಬಿದೆ.
ತಮ್ಮ ಬೆರಳುಗಳಿಂದ ಮಾಡಿದ
ತಮ್ಮ ಕೈಕೆಲಸವನ್ನು ಆರಾಧಿಸುವರು.
ಆದ್ದರಿಂದ ಮನುಷ್ಯರು ನಮ್ರರಾಗುತ್ತಾರೆ;
ಎಲ್ಲರೂ ತಲೆಬಾಗುತ್ತಾರೆ;
ಅವರನ್ನು ಕ್ಷಮಿಸಬೇಡಿ.
 
10 ಯೆಹೋವ ದೇವರ ಭಯಕ್ಕೂ,
ಅವರ ಮಹಿಮೆಯ ಘನತೆಗೂ ಬಂಡೆಗಳಲ್ಲಿ ಸೇರಿಕೋ.
ಧೂಳಿನಲ್ಲಿ ನೀನು ಅಡಗಿಕೋ.
11 ಮನುಷ್ಯನ ಅಹಂಭಾವದ ದೃಷ್ಟಿಯು ಕುಗ್ಗುವುದು.
ಮನುಷ್ಯರ ಗರ್ವವು ತಗ್ಗುವುದು.
ಆಗ ಯೆಹೋವ ದೇವರೊಬ್ಬರೇ ಆ ದಿನದಲ್ಲಿ ಉನ್ನತವಾಗಿರುವರು.
 
12 ಸೇನಾಧೀಶ್ವರ ಯೆಹೋವ ದೇವರ ದಿನವು
ಗರ್ವ ಹಾಗೂ ಅಹಂಭಾವದಿಂದ ತುಂಬಿರುವವರ ಮೇಲೆಯೂ,
ತನ್ನನ್ನು ಹೆಚ್ಚಿಸಿಕೊಂಡಿರುವ ಪ್ರತಿಯೊಬ್ಬನ ಮೇಲೆಯೂ ಬರುವುದು,
ದೇವರು ಅವರನ್ನು ತಗ್ಗಿಸುವರು.
13 ಎತ್ತರವಾಗಿ ಬೆಳೆದಿರುವ ಲೆಬನೋನಿನ ಎಲ್ಲಾ ದೇವದಾರು ವೃಕ್ಷಗಳೂ
ಹಾಗೂ ಬಾಷಾನಿನ ಎಲ್ಲಾ ಏಲಾ ಮರಗಳ ಮೇಲೆಯೂ
14 ಎಲ್ಲಾ ಉನ್ನತವಾಗಿರುವ ಪರ್ವತಗಳು,
ಎತ್ತರವಾದ ಗುಡ್ಡಗಳು,
15 ಎಲ್ಲಾ ಎತ್ತರವಾದ ಗೋಪುರಗಳು,
ಭದ್ರವಾದ ಎಲ್ಲಾ ಗೋಡೆಗಳ ಮೇಲೆಯೂ,
16 ಎಲ್ಲಾ ತಾರ್ಷೀಷಿನ ಹಡಗುಗಳು
ನೋಡತಕ್ಕ ಮನೋಹರವಾದ ಪ್ರತಿಯೊಂದು ನೌಕೆಗಳ ಮೇಲೆಯೂ
ಆ ದಿನವು ತಪ್ಪದೇ ಬರುವುದು.
17 ಜನರ ಅಟ್ಟಹಾಸವು ತಗ್ಗಿಹೋಗುವುದು.
ಆ ದಿನದಲ್ಲಿ ಯೆಹೋವ ದೇವರೊಬ್ಬರೇ ಉನ್ನತವಾಗಿರುವರು.
18 ವಿಗ್ರಹಗಳು ಸಂಪೂರ್ಣವಾಗಿ ಹೋಗಿಬಿಡುವುವು.
 
19 ಯೆಹೋವ ದೇವರು ಭೂಮಿಯನ್ನು ನಡುಗಿಸಲು ಎದ್ದಾಗ,
ಯೆಹೋವ ದೇವರಿಗೂ ಅವರ ಮಹಿಮೆಗೂ,
ಅವರ ಘನಕ್ಕೂ ಹೆದರಿ,
ಬಂಡೆಗಳ ಸಂದುಗಳಿಗೂ,
ಭೂಮಿಯ ಗವಿಗಳಿಗೂ ಜನರು ಸೇರಿಕೊಳ್ಳುವರು.
20 ಆ ದಿನದಲ್ಲಿ ಮನುಷ್ಯರು ಪೂಜಿಸುವುದಕ್ಕೋಸ್ಕರ ಮಾಡಿಕೊಂಡ
ಬೆಳ್ಳಿಯ ಬೊಂಬೆಗಳನ್ನೂ ಚಿನ್ನದ ವಿಗ್ರಹಗಳನ್ನೂ
ಇಲಿ ಬಾವಲಿಗಳಿಗಾಗಿ ಬಿಸಾಡಿಬಿಡುವರು.
21 ಯೆಹೋವ ದೇವರು ಭೂಮಿಯನ್ನು
ನಡುಗಿಸಲು ಎದ್ದಾಗ,
ಯೆಹೋವ ದೇವರ ಭಯಕ್ಕೂ,
ಅವರ ಮಹಿಮೆಯ ಘನಕ್ಕೂ ಹೆದರಿ ಬಂಡೆಗಳ ಸಂದುಗಳಿಗೂ,
ಎತ್ತರವಾಗಿರುವ ಬಂಡೆಗಳ ಕಡಿದಾದ ಸ್ಥಳಗಳಿಗೂ ಜನರು ನುಗ್ಗುವರು.
 
22 ಉಸಿರು ಇರುವವರೆಗೆ ಬದುಕುವ
ನರಮಾನವನ ಮೇಲಿನ ಭರವಸೆಯನ್ನು ಬಿಟ್ಟುಬಿಡಿರಿ.
ಏಕೆಂದರೆ ಅವನ ಗಣನೆ ಎಷ್ಟರವರೆಗೆ?