43
ಇಸ್ರಾಯೇಲರ ಒಬ್ಬನೇ ರಕ್ಷಕ
ಈಗಲಾದರೋ ಯಾಕೋಬನ ವಂಶವೇ,
ಇಸ್ರಾಯೇಲ್ ಸಂತಾನವೇ, ನಿನ್ನನ್ನು ಸೃಷ್ಟಿಸಿ,
ರೂಪಿಸಿದ ಯೆಹೋವ ದೇವರು ಹೇಳುವುದೇನೆಂದರೆ:
“ಹೆದರಬೇಡ, ಏಕೆಂದರೆ ನಾನು ನಿನ್ನನ್ನು ವಿಮೋಚಿಸಿದೆನಲ್ಲಾ,
ನಿನ್ನ ಹೆಸರು ಹಿಡಿದು ಕರೆದೆನಲ್ಲಾ, ನೀನು ನನ್ನವನೇ.
ನೀನು ಜಲರಾಶಿಯನ್ನು ದಾಟಿಹೋಗುವಾಗ,
ನಾನು ನಿನ್ನೊಂದಿಗಿರುವೆನು;
ನದಿಗಳನ್ನು ನೀನು ದಾಟುವಾಗ,
ಅವು ನಿನ್ನನ್ನು ಮುಳುಗಿಸುವುದಿಲ್ಲ;
ಬೆಂಕಿಯಲ್ಲಿ ನಡೆಯುವಾಗ,
ನೀನು ಸುಟ್ಟುಹೋಗುವುದಿಲ್ಲ;
ಜ್ವಾಲೆಯು ನಿನ್ನನ್ನು ದಹಿಸದು.
ಏಕೆಂದರೆ ನಾನೇ ನಿನ್ನ ಯೆಹೋವ ದೇವರೂ
ನಿನ್ನ ದೇವರಾದ ಇಸ್ರಾಯೇಲಿನ ಪರಿಶುದ್ಧನೂ, ನಿನ್ನ ರಕ್ಷಕನೂ ಆಗಿದ್ದೇನೆ.
ಈಜಿಪ್ಟನ್ನು ನಿನ್ನ ವಿಮೋಚನೆಗೂ,
ಇಥಿಯೋಪಿಯ ಮತ್ತು ಸೆಬಾ ಸೀಮೆಗಳನ್ನು ನಿನಗೋಸ್ಕರ ಕೊಟ್ಟಿದ್ದೇನೆ.
ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ, ಮಾನ್ಯನೂ,
ಪ್ರಿಯನೂ ಆಗಿರುವುದರಿಂದ
ನಾನು ನಿನಗೋಸ್ಕರ ಮನುಷ್ಯರನ್ನೂ,
ನಿನ್ನ ಪ್ರಾಣಕ್ಕೆ ಜನಾಂಗಗಳನ್ನೂ ಕೊಡುವೆನು.
ಭಯಪಡಬೇಡ, ಏಕೆಂದರೆ ನಾನೇ ನಿನ್ನೊಂದಿಗೆ ಇದ್ದೇನೆ.
ನಿನ್ನ ಸಂತತಿಯವರನ್ನು ಪೂರ್ವದಿಂದ ತರುವೆನು.
ಪಶ್ಚಿಮದಿಂದ ನಿನ್ನನ್ನು ಕೂಡಿಸುವೆನು.
‘ನಾನು ಒಪ್ಪಿಸಿಬಿಡು,’ ಎಂದು ಉತ್ತರದಿಕ್ಕಿಗೂ
‘ತಡೆಯಬೇಡ,’ ಎಂದು ದಕ್ಷಿಣದಿಕ್ಕಿಗೂ ಹೇಳಿ,
ದೂರದಲ್ಲಿರುವ ನನ್ನ ಪುತ್ರರನ್ನೂ,
ದಿಗಂತಗಳಲ್ಲಿರುವ ನನ್ನ ಪುತ್ರಿಯರನ್ನೂ,
ನನ್ನ ಹೆಸರಿನಿಂದ ಕರೆಯಲಾದ ಪ್ರತಿಯೊಬ್ಬನನ್ನೂ ಬರಮಾಡುವೆನು.
ಏಕೆಂದರೆ ಅವರನ್ನು ನನ್ನ ಮಹಿಮೆಗಾಗಿ ಸೃಷ್ಟಿಸಿದ್ದೇನೆ.
ನಾನು ಅವರನ್ನು ನಿರ್ಮಿಸಿದ್ದೇನೆ. ಹೌದು, ನಾನು ಅವರನ್ನು ಉಂಟುಮಾಡಿದ್ದೇನೆ.”
 
ಕಣ್ಣಿದ್ದರೂ ಕುರುಡರಾದ,
ಕಿವಿಯಿದ್ದರೂ ಕಿವುಡರಾದ ಜನರನ್ನು ಕರೆ.
ಎಲ್ಲಾ ಜನಾಂಗಗಳು ಒಟ್ಟಿಗೆ ಕೂಡಿಕೊಳ್ಳಲಿ.
ಎಲ್ಲಾ ಜನರೂ ಸೇರಿಕೊಳ್ಳಲಿ.
ಅವರ ದೇವರುಗಳಲ್ಲಿ ಭವಿಷ್ಯವನ್ನು ನುಡಿಯಬಲ್ಲವರು ಯಾರು?
ಗತಿಸಿದ ಸಂಗತಿಗಳನ್ನು ಮುಂತಿಳಿಸುವವರು ಯಾರು?
ನಾವು ನೀತಿವಂತರೆಂದು ಸ್ಥಾಪಿಸುವುದಕ್ಕೆ
ಸಾಕ್ಷಿಗಳನ್ನು ಕರೆತರಲಿ.
ಆ ಸಾಕ್ಷಿಗಳು ಇದನ್ನು ಕೇಳಿ, ನಿಜವೆಂದು ಹೇಳಲಿ.
10 ಯೆಹೋವ ದೇವರು ಹೇಳುವುದೇನೆಂದರೆ, “ನೀವು ನನಗೆ ಸಾಕ್ಷಿಗಳಾಗಿದ್ದೀರಿ,”
“ನಾನು ಇರುವಾತನೇ ಆಗಿದ್ದೇನೆಂದು, ನೀವು ತಿಳಿದು,
ನಂಬಿ, ಗ್ರಹಿಸಿರಿ;
ನಾನು ನಿನ್ನನ್ನು ಸೇವಕನನ್ನಾಗಿ ಆರಿಸಿಕೊಂಡಿದ್ದೇನೆ.
ನನಗಿಂತ ಮುಂಚೆಯೂ,
ನನ್ನ ಅನಂತರದಲ್ಲಿಯೂ ಯಾವ ದೇವರೂ ಇರುವುದಿಲ್ಲ.
11 ನಾನೇ, ನಾನೇ, ಯೆಹೋವ ದೇವರು ಆಗಿದ್ದೇನೆ.
ನನ್ನ ಹೊರತು ಯಾವ ರಕ್ಷಕನೂ ಇಲ್ಲ.
12 ನಿಮ್ಮಲ್ಲಿ ಅನ್ಯದೇವರು ಇಲ್ಲದಿರುವಾಗಲೇ,
ನಾನೇ ರಕ್ಷಣೆಯನ್ನು ಪ್ರಕಟಿಸಿ, ತೋರಿಸಿದ್ದೇನೆ. ಆದ್ದರಿಂದ ನೀವು ನನ್ನ ಸಾಕ್ಷಿಗಳು,”
“ನಾನೇ ದೇವರು ಎಂದು ಯೆಹೋವ ದೇವರು ನುಡಿಯುತ್ತಾರೆ.
13 ಹೌದು, ಅಂದಿನಿಂದಲೇ ನಾನಿದ್ದೇನೆ.
ನನ್ನ ಕೈಯಿಂದ ಬಿಡಿಸುವವರು ಯಾರೂ ಇಲ್ಲ.
ನನ್ನ ಕೆಲಸಕ್ಕೆ ಅಡ್ಡಿ ಬರುವವನಾರು?”
ದೇವರ ಕರುಣೆ ಹಾಗೂ ಇಸ್ರಾಯೇಲಿನ ಅಪನಂಬಿಕೆ
14 ನಿಮ್ಮ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಆಗಿರುವ
ಯೆಹೋವ ದೇವರು ಹೇಳುವುದೇನೆಂದರೆ:
ನಾನು ನಿಮಗೋಸ್ಕರ ಬಾಬಿಲೋನಿಗೆ ಕಳುಹಿಸಿ,
ಅವರ ಘನವಂತರನ್ನೆಲ್ಲಾ
ಮತ್ತು ಹಡಗುಗಳಲ್ಲಿ ಆರ್ಭಟಿಸುವ ಕಸ್ದೀಯರನ್ನು ತಗ್ಗಿಸಿದೆನು.
15 ಯೆಹೋವನಾದ ನಾನು ನಿಮ್ಮ ಪರಿಶುದ್ಧನೂ,
ಇಸ್ರಾಯೇಲನ್ನು ಸೃಷ್ಟಿಸಿದವನೂ, ನಿಮ್ಮ ಅರಸನೂ ಆಗಿದ್ದೇನೆ.
 
16 ಯೆಹೋವ ದೇವರು ಇಂತೆನ್ನುತ್ತಾರೆ:
ಸಮುದ್ರದ ಮುಖಾಂತರವಾಗಿ ಮಾರ್ಗಮಾಡಿದವನೂ;
ಬಲವಾದ ನೀರಿನಲ್ಲಿ ದಾರಿ ಮಾಡಿದವನೂ;
17 ರಥಗಳನ್ನು, ಕುದುರೆಗಳನ್ನು,
ದಂಡನ್ನು, ಪರಾಕ್ರಮಶಾಲಿಗಳನ್ನು ಹೊರಡಿಸಿ,
ಅವು ಒಟ್ಟಿಗೆ ಬಿದ್ದು ಏಳಲಾರದಂತೆಯೂ,
ದೀಪದ ಬತ್ತಿ ನಂದಿ ಆರಿಹೋಗುವಂತೆಯೂ ಮಾಡಿದಾತನು ಇಂತೆನ್ನುತ್ತಾನೆ:
18 “ಹಿಂದಿನ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ.
ಹಳೆಯ ಸಂಗತಿಗಳನ್ನು ಯೋಚಿಸಬೇಡಿರಿ.
19 ಇಗೋ, ನಾನು ಒಂದು ಹೊಸ ಕಾರ್ಯವನ್ನು ಮಾಡುವೆನು.
ಅದು ಈಗಲೇ ತಲೆದೋರುತ್ತಲಿದೆ. ಇದು ನಿಮಗೆ ಕಾಣುವುದಿಲ್ಲವೋ?
ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸುವೆನು.
ಮರುಭೂಮಿಯಲ್ಲಿ ನದಿಗಳನ್ನೂ ಉಂಟುಮಾಡುವೆನು.
20 ಕಾಡುಮೃಗಗಳು, ನರಿಗಳು,
ಗೂಬೆಗಳು ನನ್ನನ್ನು ಸನ್ಮಾನಿಸುತ್ತವೆ.
ಅಡವಿಯಲ್ಲಿ ನೀರನ್ನು,
ಮರುಭೂಮಿಯಲ್ಲಿ ನದಿಗಳನ್ನು
ನಾನು ಆಯ್ದುಕೊಂಡ ನನ್ನ ಪ್ರಜೆಗಳಿಗೆ ಕುಡಿಯುವುದಕ್ಕೆ ಕೊಟ್ಟೆನು.
21 ನನ್ನ ಸ್ತೋತ್ರವನ್ನು ಪ್ರಚುರಪಡಿಸಲಿ ಎಂದು ನಾನು
ಈ ಜನರನ್ನು ನನಗೋಸ್ಕರ ರೂಪಿಸಿದ್ದೇನೆ.
 
22 “ಆದರೂ ಯಾಕೋಬೇ, ನೀನು ನನ್ನನ್ನು ಪ್ರಾರ್ಥಿಸಲಿಲ್ಲ.
ಇಸ್ರಾಯೇಲೇ, ನನ್ನ ವಿಷಯದಲ್ಲಿ ನೀನು ಬೇಸರಗೊಂಡಿದ್ದೀ!
23 ನಿನ್ನ ದಹನಬಲಿಯ ಎಳೆಯ ಕುರಿಗಳನ್ನು ನನಗೆ ತರಲಿಲ್ಲ.
ನಿನ್ನ ಯಜ್ಞಗಳಿಂದ ನನ್ನನ್ನು ಸನ್ಮಾನಿಸಲಿಲ್ಲ.
ನೀನು ಕಾಣಿಕೆಯನ್ನು ಅರ್ಪಿಸದೆ ಇದ್ದದ್ದಕ್ಕೆ ನಿನ್ನನ್ನು ನಾನು ತೊಂದರೆಪಡಿಸಲಿಲ್ಲ,
ಧೂಪಕ್ಕಾಗಿ ನಿನ್ನನ್ನು ಬೇಸರಗೊಳಿಸಲಿಲ್ಲ.
24 ನೀನು ನನಗೋಸ್ಕರ ಹಣದಿಂದ
ಪರಿಮಳ ತೈಲವನ್ನು ಕೊಂಡುಕೊಳ್ಳಲಿಲ್ಲ.
ನಿನ್ನ ಯಜ್ಞಪಶುಗಳ ಕೊಬ್ಬಿನಿಂದ ನನ್ನನ್ನು ತೃಪ್ತಿಪಡಿಸಲಿಲ್ಲ.
ಆದರೆ ನಿನ್ನ ಪಾಪಗಳಿಂದ ನನ್ನನ್ನು ನೀನು ತೊಂದರೆಗೆ ಗುರಿಮಾಡಿರುವೆ.
ನಿನ್ನ ಅಕ್ರಮಗಳಿಂದ ನನ್ನನ್ನು ಬೇಸರಗೊಳಿಸಿದ್ದೀ.
 
25 “ನಾನಾಗಿ ನಾನೇ, ನನಗೋಸ್ಕರ
ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ.
ನಿನ್ನ ಪಾಪಗಳನ್ನು ನನ್ನ ನೆನಪಿನಲ್ಲಿಡೆನು.
26 ನನಗೆ ಜ್ಞಾಪಕಪಡಿಸು,
ನಾವಿಬ್ಬರೂ ವಾದಿಸುವಾ,
ನೀನು ನೀತಿವಂತನೆಂದು ತೋರಿಸು.
27 ನಿನ್ನ ಮೂಲಪಿತೃ ಪಾಪಮಾಡಿದ್ದಾನೆ.
ನಿನ್ನ ಬೋಧಕರು ನನಗೆ ವಿರೋಧವಾಗಿ ದ್ರೋಹ ಮಾಡಿದ್ದಾರೆ.
28 ಆದಕಾರಣ ಪವಿತ್ರಾಲಯದ ಪ್ರಧಾನರನ್ನು ನಾಚಿಕೆಪಡಿಸಿ,
ಯಾಕೋಬನ್ನು ಶಾಪಕ್ಕೂ,
ಇಸ್ರಾಯೇಲನ್ನು ದೂಷಣೆಗಳಿಗೂ ಒಪ್ಪಿಸಿಬಿಟ್ಟಿದ್ದೇನೆ.