57
ನೀತಿವಂತನು ನಾಶವಾಗುವನು
ಆದರೆ ಯಾರೂ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ.
ಭಕ್ತಿಯುಳ್ಳ ಮನುಷ್ಯರು ಕಣ್ಮರೆಯಾಗುವರು.
ನೀತಿವಂತನು ಮುಂದೆ ಬರುವ
ಕೇಡಿನಿಂದ ಪಾರಾದರು ಎಂಬುದನ್ನು
ಯಾರೂ ಯೋಚಿಸರು.
ಅವರು ಸಮಾಧಾನಕ್ಕೆ ಪ್ರವೇಶಿಸುತ್ತಾರೆ.
ಅವರಲ್ಲಿ ನೆಟ್ಟಗೆ ನಡೆಯುವ ಪ್ರತಿಯೊಬ್ಬರೂ ತಮ್ಮ
ಮರಣದ ಹಾಸಿಗೆಗಳಲ್ಲಿ ವಿಶ್ರಮಿಸಿಕೊಳ್ಳುತ್ತಾರೆ.
 
“ಆದರೆ ನೀವು ಮಾಟಗಾತಿಯ ಮಕ್ಕಳೇ,
ವೇಶ್ಯೆ ಮತ್ತು ವ್ಯಭಿಚಾರಿಗಳ ಸಂತಾನದವರೇ, ಇಲ್ಲಿಗೆ ಬನ್ನಿರಿ.
ಯಾರನ್ನು ಹಾಸ್ಯಮಾಡುತ್ತೀರಿ?
ಯಾರ ವಿಷಯವಾಗಿ ನೀವು ಬಾಯಿ ಅಗಲಿಸಿ,
ನಾಲಿಗೆಯನ್ನು ಚಾಚುತ್ತೀರಿ?
ಹಸಿರಾದ ಏಲಾ ಮರಗಳ ಕೆಳಗೆ
ವಿಗ್ರಹಗಳಿಂದ ಮದವೇರಿಸಿಕೊಂಡು,
ಹಳ್ಳಗಳಲ್ಲಿ ಬಂಡೆಗಳ ಬಿರುಕುಗಳಲ್ಲಿ ಮಕ್ಕಳನ್ನು ಕೊಂದುಹಾಕುವ ನೀವು
ದ್ರೋಹದ ಮಕ್ಕಳೂ, ಸುಳ್ಳಿನ ಸಂತತಿಯೂ ಅಲ್ಲವೋ?
ಹಳ್ಳದ ನುಣುಪಾದ ಕಲ್ಲುಗಳು ನಿಮ್ಮ ಪಾಲು.
ಅವುಗಳೇ ಹೌದು, ಅವೇ ನಿನ್ನ ಪಾಲು.
ಅವುಗಳಿಗೆ ನೀನು ಪಾನದ್ರವ್ಯವನ್ನು
ಮತ್ತು ಧಾನ್ಯ ಸಮರ್ಪಣೆಯನ್ನು ಅರ್ಪಿಸಿದ್ದೀಯೆ.
ನಾನು ಇದನ್ನೆಲ್ಲಾ ಕಂಡು ನನ್ನ ಕೋಪವನ್ನು ಅಡಗಿಸಿಕೊಳ್ಳಲು ಆಗುವುದೇ?
ಮಹೋನ್ನತ ಪರ್ವತದಲ್ಲಿ ನೀನು ಹಾಸಿಗೆಯನ್ನು ಹಾಕಿಕೊಂಡಿದ್ದೀಯೆ,
ಬಲಿಯನ್ನರ್ಪಿಸಲು ಆ ಬೆಟ್ಟವನ್ನೇರಿದ್ದೀ.
ಕದಗಳ ಮತ್ತು ನಿಲುವಿನ ಹಿಂಭಾಗದಲ್ಲಿ
ನಿನ್ನ ಜ್ಞಾಪಕದ ಚಿಹ್ನೆಯನ್ನು ಇಟ್ಟಿದ್ದೀಯೆ.
ಏಕೆಂದರೆ ನನ್ನನ್ನು ಬಿಟ್ಟು ಬೇರೊಬ್ಬನಿಗೆ
ನಿನ್ನನ್ನು ತೋರ್ಪಡಿಸಿಕೊಂಡಿದ್ದೀ.
ಏರಿಹೋಗಿ ನಿನ್ನ ಮಂಚವನ್ನು ಅಗಲಮಾಡಿಕೊಂಡು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀ.
ಅವರ ಮಂಚವನ್ನು ಕಂಡಲ್ಲಿ ಅದನ್ನು ಪ್ರೀತಿ ಮಾಡಿದ್ದೀಯೆ.
ಬಹು ಸುಗಂಧದ್ರವ್ಯಗಳನ್ನು ಕೂಡಿಸಿ,
ತೈಲದೊಂದಿಗೆ ರಾಜನ ಬಳಿಗೆ ಹೋಗಿದ್ದೀ.
ದೂರಕ್ಕೆ ನಿನ್ನ ರಾಯಭಾರಿಗಳನ್ನು ಕಳುಹಿಸಿದ್ದೀ.
ಪಾತಾಳದಷ್ಟು ನೀಚಸ್ಥಿತಿಗೆ ಇಳಿದಿದ್ದೀಯೆ.
10 ನಿನ್ನ ಮಾರ್ಗದಲ್ಲಿ ಬಹಳವಾಗಿ ದಣಿದಿದ್ದರೂ,
‘ಏನೂ ಪ್ರಯೋಜನವಿಲ್ಲ,’ ಎಂದುಕೊಳ್ಳಲಿಲ್ಲ.
ನೀನು ಹೊಸ ಬಲವನ್ನು ತಂದುಕೊಂಡು,
ಬೇಸರಗೊಳ್ಳದೆ ಮುಂದುವರೆದಿರುವೆ.
 
11 “ನೀನು ಯಾರಿಗೆ ಹೆದರಿ, ಬೆದರಿ,
ನನ್ನನ್ನು ಮರೆತು, ನನಗೆ ಸುಳ್ಳಾಡಿ
ಮೋಸ ಮಾಡಿರುವೆ.
ಇಂಥ ದ್ರೋಹಕ್ಕೂ ನೀನು ಹಿಂಜರಿಯಲಿಲ್ಲವಲ್ಲಾ!
ಬಹುಕಾಲದಿಂದ ನಾನು ಸುಮ್ಮನೆ ಇದ್ದುದರಿಂದಲೇ,
ನೀನು ನನ್ನನ್ನು ಗೌರವಿಸದೆ ಇರುವುದಕ್ಕೆ ಕಾರಣವಲ್ಲವೆ?
12 ನಾನೇ ನಿನ್ನ ನೀತಿಯನ್ನೂ, ನಿನ್ನ ಕ್ರಿಯೆಗಳನ್ನೂ ತಿಳಿಯ ಮಾಡುವೆನು.
ಏಕೆಂದರೆ ಅವು ನಿನಗೆ ಪ್ರಯೋಜನವಾಗುವುದಿಲ್ಲ.
13 ನೀನು ಸಹಾಯಕ್ಕಾಗಿ ಕೂಗುವಾಗ
ನಿನ್ನ ವಿಗ್ರಹಗಳು ನಿನ್ನನ್ನು ರಕ್ಷಿಸಲಿ.
ಇವುಗಳನ್ನೆಲ್ಲಾ ಗಾಳಿಯು ಬಡಿದುಕೊಂಡು ಹೋಗುವುದು.
ವ್ಯರ್ಥವಾದದ್ದು ಅವುಗಳನ್ನು ತೆಗೆದುಕೊಂಡು ಹೋಗುವುದು.
ಆದರೆ ನನ್ನಲ್ಲಿ ಆಶ್ರಯಿಸುವವನು,
ದೇಶವನ್ನು ವಶಮಾಡಿಕೊಂಡು,
ನನ್ನ ಪರಿಶುದ್ಧ ಪರ್ವತವನ್ನು ಬಾಧ್ಯವಾಗಿ ಹೊಂದುವನು.”
ಮಾನಸಾಂತರಪಟ್ಟವರಿಗೆ ಆದರಣೆ
14 ನಂತರ ಹೀಗೆ ಹೇಳಲಾಗುವುದು:
ಮಣ್ಣು ಹಾಕಿರಿ, ಹಾಕಿರಿ, ಮಾರ್ಗವನ್ನು ಸರಿಮಾಡಿರಿ,
ನನ್ನ ಜನರ ದಾರಿಯೊಳಗಿಂದ ಆತಂಕವನ್ನು ಎತ್ತಿ ಹಾಕಿರಿ,
15 ಏಕೆಂದರೆ ಉನ್ನತನೂ, ಮಹೋನ್ನತನೂ,
ನಿತ್ಯವಾಗಿ ವಾಸಿಸುವವನೂ, ಪರಿಶುದ್ಧನು ಎಂಬ ಹೆಸರುಳ್ಳಾತನೂ ಹೇಳುವುದೇನೆಂದರೆ:
“ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿಸುವ ನಾನಾದರೂ,
ಪಶ್ಚಾತ್ತಾಪ ಪಡುವ ದೀನಮನದೊಂದಿಗೆ ನಾನಿದ್ದೇನೆ.
ದೀನನ ಆತ್ಮವನ್ನು ಹಾಗು ಪಶ್ಚಾತ್ತಾಪ ಪಡುವ
ಮನಸ್ಸನ್ನು ಉಜ್ಜೀವಗೊಳಿಸುವವನಾಗಿದ್ದೇನೆ.
16 ನಾನು ಎಂದೆಂದಿಗೂ ವ್ಯಾಜ್ಯವಾಡುವುದಿಲ್ಲ.
ಯಾವಾಗಲೂ ಕೋಪಿಸಿಕೊಳ್ಳೆನು.
ಏಕೆಂದರೆ ಆತ್ಮವೂ, ನಾನು ಉಂಟುಮಾಡಿದ ಜೀವವೂ
ನನ್ನಿಂದ ಕುಂದಿ ಹೋದಾವು.
17 ಅವನ ದುರಾಶೆಯ ಅನ್ಯಾಯಕ್ಕೆ ನಾನು ಕೋಪಗೊಂಡು,
ಅವನನ್ನು ಹೊಡೆದೆನು. ನನ್ನ ಮುಖವನ್ನು ಮುಚ್ಚಿಕೊಂಡು ರೋಷಭರಿತನಾದೆನು.
ಅವನು ಮೊಂಡುತನದಿಂದ ತನ್ನ ಮನಸ್ಸಿಗೆ ಬಂದ ಹಾಗೆಯೇ ನಡೆಯುತ್ತಾ ಬಂದಿದ್ದಾನೆ.
18 ನಾನು ಅವನ ಮಾರ್ಗವನ್ನು ನೋಡಿದ್ದೇನೆ. ಅವನನ್ನು ಸ್ವಸ್ಥಮಾಡಿ,
ಅವನನ್ನು ನಡೆಸುತ್ತೇನೆ. ಅವನಿಗೂ, ಅವನ ದುಃಖಿತರಿಗೂ ಆದರಣೆಗಳನ್ನು ಪುನಃಸ್ಥಾಪಿಸುವೆನು.
19 ನಾನು ತುಟಿಗಳಿಗೆ ಸ್ತೋತ್ರವನ್ನು ಉಂಟುಮಾಡುವೆನು;
ದೂರವಾದವನಿಗೂ ಸಮೀಪವಾದವನಿಗೂ ಸಮಾಧಾನವಿರಲಿ, ಸಮಾಧಾನವಿರಲಿ.
ನಾನು ಅವರನ್ನು ಸ್ವಸ್ಥ ಮಾಡುವೆನು,”
ಎಂದು ಯೆಹೋವ ದೇವರು ಹೇಳುತ್ತಾರೆ.
20 ಆದರೆ ದುಷ್ಟರು ಸುಮ್ಮನಿರಲಾರದಂಥ,
ಅದರ ನೀರುಗಳು ಕೆಸರನ್ನೂ,
ಮೈಲಿಗೆಯನ್ನೂ ಕಾರುವಂಥ ಅಲ್ಲಕಲ್ಲೋಲವಾಗಿರುವ ಸಮುದ್ರದ ಹಾಗಿದ್ದಾರೆ.
21 “ದುಷ್ಟರಿಗೆ ಸಮಾಧಾನವೇ ಇಲ್ಲ,”
ಎಂದು ನನ್ನ ದೇವರು ಹೇಳುತ್ತಾರೆ.