59
ಪಾಪ, ಮಾನಸಾಂತರ ಮತ್ತು ಬಿಡುಗಡೆ
ಯೆಹೋವ ದೇವರ ಕೈ ರಕ್ಷಿಸಲಾರದ ಹಾಗೆ ಮೋಟುಗೈಯಲ್ಲ.
ಆತನ ಕಿವಿ ಕೇಳಲಾರದ ಹಾಗೆ ಮಂದವಾಗಿಲ್ಲ.
ನಿಮ್ಮ ಅಕ್ರಮಗಳೇ, ನಿಮ್ಮನ್ನು
ನಿಮ್ಮ ದೇವರಿಂದ ಅಗಲಿಸಿವೆ.
ನಿಮ್ಮ ಪಾಪಗಳೇ, ಆತನು ಹೇಳಿದ ಹಾಗೆ
ಆತನ ಮುಖವನ್ನು ನಿಮಗೆ ಮರೆಮಾಡಿಸಿವೆ.
ಏಕೆಂದರೆ ನಿಮ್ಮ ಕೈಗಳು ರಕ್ತದಿಂದಲೂ,
ನಿಮ್ಮ ಬೆರಳುಗಳು ಅಕ್ರಮದಿಂದಲೂ ಮೈಲಿಗೆಯಾಗಿವೆ.
ನಿಮ್ಮ ತುಟಿಗಳು ಸುಳ್ಳನ್ನು ಆಡುತ್ತವೆ.
ನಿಮ್ಮ ನಾಲಿಗೆ ಅನ್ಯಾಯವನ್ನು ನುಡಿಯುತ್ತದೆ.
ನೀತಿಗೋಸ್ಕರ ಕರೆಯುವವನು ಯಾವನೂ ಇಲ್ಲ,
ಸತ್ಯಕ್ಕೋಸ್ಕರ ನ್ಯಾಯ ವಿಚಾರಿಸುವವನು ಒಬ್ಬನೂ ಇಲ್ಲ.
ವ್ಯರ್ಥತ್ವದಲ್ಲಿ ವಿಶ್ವಾಸ ಇಡುತ್ತಾರೆ. ಸುಳ್ಳನ್ನು ಮಾತನಾಡುತ್ತಾರೆ.
ಕೇಡನ್ನು ಗರ್ಭಧರಿಸಿ, ಅಕ್ರಮವನ್ನು ಹೆರುತ್ತಾರೆ.
ಹಾವಿನಂತೆ ಮೊಟ್ಟೆಗಳನ್ನು ಮರಿಮಾಡುತ್ತಾರೆ.
ಜೇಡರ ಹುಳದಂತೆ ಬಲೆಯನ್ನು ನೇಯುತ್ತಾರೆ.
ಅದರ ಮೊಟ್ಟೆಗಳನ್ನು ತಿನ್ನುವವನು ಸಾಯುವನು.
ಒಡೆದುಬಿಡುವವನಿಗೆ ವಿಷದ ಮರಿ ಹೊರಡುವುದು.
ಅವರ ನೂಲು ವಸ್ತ್ರಕ್ಕಾಗದು.
ತಮ್ಮ ಕೆಲಸಗಳಿಂದ ತಮ್ಮನ್ನು ಹೊದ್ದುಕೊಳ್ಳರು.
ಅವರ ಕೆಲಸಗಳು ಅಕ್ರಮದ ಕೆಲಸಗಳೇ.
ಅವರ ಕೈಗಳಲ್ಲಿ ಹಿಂಸೆಯ ಕ್ರಿಯೆಗಳು ಇವೆ.
ಅವರ ಕಾಲುಗಳು ಪಾಪಕ್ಕೆ ಓಡುತ್ತವೆ.
ಅಪರಾಧವಿಲ್ಲದ ರಕ್ತವನ್ನು ಚೆಲ್ಲುವುದಕ್ಕೆ ತ್ವರೆ ಪಡುತ್ತವೆ.
ಅವರ ಆಲೋಚನೆಗಳು ಅಧರ್ಮದ ಆಲೋಚನೆಗಳೇ.
ನಷ್ಟವೂ ನಾಶವೂ ಅವರ ಮಾರ್ಗಗಳಲ್ಲಿವೆ.
ಸಮಾಧಾನದ ಮಾರ್ಗವನ್ನೇ ಅವರು ಅರಿಯರು.
ಅವರ ದಾರಿಗಳಲ್ಲಿ ನ್ಯಾಯವಿಲ್ಲ.
ತಮ್ಮ ಹಾದಿಗಳನ್ನು ವಕ್ರಮಾಡಿಕೊಂಡಿದ್ದಾರೆ.
ಅವುಗಳಲ್ಲಿ ನಡೆಯುವವರೆಲ್ಲರೂ ಸಮಾಧಾನವನ್ನರಿಯರು.
 
ಆದಕಾರಣ ನ್ಯಾಯ ನಿರ್ಣಯವು
ನಮಗೆ ದೂರವಾಗಿದೆ.
ನೀತಿಯು ನಮ್ಮನ್ನು ತಲುಪುವುದಿಲ್ಲ,
ಬೆಳಕನ್ನು ಎದುರು ನೋಡುತ್ತಿರುವ ನಮ್ಮನ್ನು ಕತ್ತಲೆಯೇ ಆವರಿಸಿದೆ;
ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಾವು
ಅಂಧಕಾರದಲ್ಲಿಯೇ ನಡೆಯುತ್ತೇವೆ.
10 ಕುರುಡರ ಹಾಗೆ ಗೋಡೆಯನ್ನು ತಡವರಿಸುತ್ತೇವೆ.
ಕಣ್ಣಿಲ್ಲದವರ ಹಾಗೆ ಮುಟ್ಟಿ ನೋಡುತ್ತೇವೆ.
ಮಧ್ಯಾಹ್ನದಲ್ಲಿ ರಾತ್ರಿಯಂತೆ ಎಡವುತ್ತೇವೆ.
ಸತ್ತವರ ಹಾಗೆ ಹಾಳಾದ ಸ್ಥಳಗಳಲ್ಲಿ ಇದ್ದೇವೆ.
11 ನಾವೆಲ್ಲರೂ ಕರಡಿಗಳ ಹಾಗೆ ಗುರುಗುಟ್ಟುತ್ತೇವೆ.
ನಾವು ಪಾರಿವಾಳಗಳಂತೆ ದುಃಖದಿಂದ ಕೊರಗುತ್ತೇವೆ.
ನ್ಯಾಯಕ್ಕಾಗಿ ಕಾದುಕೊಳ್ಳುತ್ತೇವೆ. ಆದರೆ ಅದು ಸಿಕ್ಕದು,
ರಕ್ಷಣೆಯಾದರೋ ಅದು ನಮಗೆ ದೂರವಾಗಿದೆ.
 
12 ಏಕೆಂದರೆ, ನಮ್ಮ ದ್ರೋಹಗಳು
ನಿನ್ನ ಮುಂದೆ ಬಹಳವಾಗಿವೆ.
ನಮ್ಮ ಪಾಪಗಳು ನಮಗೆ
ವಿರೋಧವಾಗಿ ಸಾಕ್ಷಿ ಕೊಡುತ್ತವೆ.
ನಮ್ಮ ದ್ರೋಹಗಳು ನಮ್ಮ ಸಂಗಡ ಇವೆ.
ನಮ್ಮ ಅಕ್ರಮಗಳನ್ನು ನಾವೇ ಬಲ್ಲೆವು.
13 ದ್ರೋಹಮಾಡಿದ್ದೇವೆ, ಯೆಹೋವ ದೇವರಿಗೆ ಸುಳ್ಳಾಡಿದ್ದೇವೆ.
ನಮ್ಮ ದೇವರ ಕಡೆಯಿಂದ ಹಿಂದಿರುಗಿದ್ದೇವೆ.
ಬಲಾತ್ಕಾರದ ತಿರುಗಿ ಬೀಳುವಿಕೆಯ ಕಾರ್ಯಗಳನ್ನು ಮಾತನಾಡಿದ್ದೇವೆ.
ಸುಳ್ಳು ಮಾತುಗಳಿಂದ ಬಸುರಾಗಿ ಅವುಗಳನ್ನು ಹೃದಯದಿಂದ ನುಡಿದಿದ್ದೇವೆ.
14 ನಾವು ನ್ಯಾಯವನ್ನು ಸಹ ಹಿಂದಕ್ಕೆ ತಳ್ಳಿಬಿಟ್ಟಿದ್ದೇವೆ.
ನೀತಿಯನ್ನು ದೂರದಲ್ಲಿ ನಿಲ್ಲಿಸಿಬಿಟ್ಟಿದ್ದೇವೆ.
ಸತ್ಯವು ಬೀದಿಯಲ್ಲಿ ಎಡವುತ್ತದೆ.
ಯಥಾರ್ಥತೆಗೆ ಪ್ರವೇಶಿಸ ಇಲ್ಲಾ.
ಸತ್ಯವು ಬೀದಿಯಲ್ಲಿ ಎಡವುತ್ತದೆ.
ಯಥಾರ್ಥತೆಯು ಪ್ರವೇಶಿಸಕೂಡದು.
15 ಸತ್ಯವು ಇಲ್ಲವೇ ಇಲ್ಲ,
ಕೇಡನ್ನು ಬಿಟ್ಟವನು ಬೇಟೆಯಾಗುತ್ತಾನೆ.
 
ಯೆಹೋವ ದೇವರು ಇದನ್ನು ನೋಡಿ
ನ್ಯಾಯವಿಲ್ಲವಲ್ಲಾ ಎಂದು ವ್ಯಸನಗೊಂಡನು.
16 ಮಧ್ಯಸ್ಥಿಕನು ಒಬ್ಬನೂ ಇಲ್ಲವೆಂದು
ಕಂಡು ಸ್ಥಬ್ಧನಾದನು.
ಆದ್ದರಿಂದ ಆತನ ಸ್ವಹಸ್ತವೇ ಆತನಿಗೆ ರಕ್ಷಣೆಯ ಸಾಧನವಾಯಿತು.
ಆತನ ನೀತಿಯೇ ಆತನಿಗೆ ಆಧಾರವಾಯಿತು.
17 ಅವನು ನೀತಿಯನ್ನು ಕವಚದ ಹಾಗೆ ಧರಿಸಿಕೊಂಡು,
ರಕ್ಷಣೆಯ ಶಿರಸ್ತ್ರಾಣವನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡನು.
ಪ್ರತೀಕಾರದ ವಸ್ತ್ರಗಳನ್ನು ಹೊದಿಕೆಯಾಗಿ ಹೊದ್ದುಕೊಂಡು,
ಆಸಕ್ತಿಯನ್ನು ಮೇಲಂಗಿಯಾಗಿ ತೊಟ್ಟುಕೊಂಡನು.
18 ಅವರ ಕ್ರಿಯೆಗಳ ಪ್ರಕಾರವೇ
ಸರಿಯಾಗಿ ಸಲ್ಲಿಸುವನು.
ತನ್ನ ವೈರಿಗಳಿಗೆ ಉರಿಯನ್ನೂ,
ತನ್ನ ಶತ್ರುಗಳಿಗೆ ಪ್ರತಿಫಲವನ್ನೂ,
ದ್ವೀಪಗಳಿಗೆ ಪ್ರತಿಫಲವನ್ನೂ ಸಲ್ಲಿಸುವನು.
19 ಆಗ ಪಶ್ಚಿಮದ ಕಡೆಯವರು ಯೆಹೋವ ದೇವರ ಹೆಸರಿಗೂ,
ಸೂರ್ಯೋದಯದ ಕಡೆಯವರು ದೇವರ ಘನಕ್ಕೂ ಭಯಪಡುವರು.
ವೈರಿಯು ಪ್ರಳಯದಂತೆ ಬರುವಾಗ,
ಯೆಹೋವ ದೇವರ ಆತ್ಮವು ಅವನಿಗೆ ವಿರೋಧವಾಗಿ ಧ್ವಜವನ್ನೆತ್ತುವರು.
 
20 “ವಿಮೋಚಕನು ಚೀಯೋನಿಗೂ
ಯಾಕೋಬಿನಲ್ಲಿ ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಡುವವರಿಗಾಗಿಯೂ ಬರುವನು,”
ಎಂದು ಯೆಹೋವ ದೇವರು ಹೇಳುತ್ತಾರೆ.
21 ಮಾತ್ರವಲ್ಲದೆ, “ನಾನಾದರೋ ಅವರ ಸಂಗಡ ಮಾಡುವ ಒಡಂಬಡಿಕೆ ಇದೇ. ಎಂದು ಯೆಹೋವ ದೇವರು ಹೇಳುತ್ತಾರೆ. ನಿನ್ನ ಮೇಲಿರುವ ನನ್ನ ಆತ್ಮನೂ, ನಾನು ನಿನ್ನ ಬಾಯಲ್ಲಿ ಇಟ್ಟಿರುವ ನನ್ನ ವಾಕ್ಯಗಳೂ, ಇಂದಿನಿಂದ ಸದಾಕಾಲಕ್ಕೆ ನಿನ್ನ ಬಾಯಿಂದಲೂ, ನಿನ್ನ ಸಂತಾನದ ಬಾಯಿಂದಲೂ ತೊಲಗುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.