24
“ಸರ್ವಶಕ್ತರು ತೀರ್ಪಿನ ಕಾಲವನ್ನು ನಿಗದಿಪಡಿಸದೆ ಇರುವುದೇಕೆ?
ದೇವರನ್ನು ತಿಳಿದವರು ದೇವರ ದಿನಗಳಿಗೋಸ್ಕರ ವ್ಯರ್ಥವಾಗಿ ನೋಡುತ್ತಿರುವುದು ಏಕೆ?
ಕೆಲವರು ಗಡಿಗಳ ಕಲ್ಲುಗಳನ್ನು ಬದಲಿಸುತ್ತಾರೆ,
ಕದ್ದ ಮಂದೆಗಳನ್ನು ತೆಗೆದುಕೊಂಡು ಸಾಕಿಕೊಳ್ಳುತ್ತಾರೆ.
ದಿಕ್ಕಿಲ್ಲದವರ ಕತ್ತೆಗಳನ್ನು ಹೊಡೆದುಕೊಂಡು ಹೋಗುತ್ತಾರೆ;
ವಿಧವೆಯ ಎತ್ತನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.
ದರಿದ್ರನನ್ನು ದಾರಿಯಿಂದ ತೊಲಗಿಸುತ್ತಾರೆ;
ದೇಶದ ಬಡವರು ಕೂಡ ಅವರಿಂದ ಓಡಿ ಅಡಗಿಕೊಳ್ಳುತ್ತಾರೆ.
ಕಾಡುಕತ್ತೆಗಳ ಹಾಗೆ ಬಡವರು
ತಮ್ಮ ಆಹಾರಕ್ಕಾಗಿ ಅಲೆಯುತ್ತಾರೆ;
ಪಾಳುಭೂಮಿಯಿಂದ ಅವರಿಗೂ, ಅವರ ಮಕ್ಕಳಿಗೂ ಆಹಾರ ಸಿಗುತ್ತದೆ.
ಬಡವರು ಹೊಲಗಳಲ್ಲಿ ಮೇವನ್ನು ಕೊಯ್ದು,
ದುಷ್ಟನ ದ್ರಾಕ್ಷಿತೋಟದಲ್ಲಿ ಹಕ್ಕಲಾಯುತ್ತಾರೆ.*
ಸಾಕಷ್ಟು ಬಟ್ಟೆ ಇಲ್ಲದೆ ಅವರು ರಾತ್ರಿಯನ್ನು ಕಳೆಯುತ್ತಾರೆ;
ಚಳಿಯಲ್ಲಿ ಅವರಿಗೆ ಹೊದ್ದುಕೊಳ್ಳುವುದಕ್ಕೆ ಇಲ್ಲ.
ಬೆಟ್ಟಗಳ ಮಳೆಯಿಂದ ನೆನೆದುಹೋಗುತ್ತಾರೆ;
ಬಂಡೆಗಳಲ್ಲಿ ಆಶ್ರಯವನ್ನು ಪಡೆಯುತ್ತಾರೆ.
ಆದರೆ ದುಷ್ಟರು ದಿಕ್ಕಿಲ್ಲದ ಶಿಶುವನ್ನು ತಾಯಿಯ ಎದೆಯಿಂದ ಕಸೆದುಕೊಳ್ಳುತ್ತಾರೆ;
ಬಡವನ ಶಿಶುವನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.
10 ಬಡವರೋ ಸಾಕಷ್ಟು ಬಟ್ಟೆಯಿಲ್ಲದವರಾಗಿ ಅಲೆಯುತ್ತಾರೆ;
ಹಸಿದವರಾಗಿ ಸಿವುಡುಗಳನ್ನು ಹೊರುತ್ತಾರೆ.
11 ಯಜಮಾನರ ಮಾಳಿಗೆಗಳ ಮೇಲೆ ಓಲಿವ್ ಎಣ್ಣೆಗಾಣಗಳನ್ನು ಆಡಿಸುತ್ತಾರೆ;
ದಾಹಗೊಂಡೇ ದ್ರಾಕ್ಷೆಯ ತೊಟ್ಟಿಗಳಲ್ಲಿ ಕೆಲಸ ಮಾಡುತ್ತಾರೆ.
12 ಪಟ್ಟಣದೊಳಗಿಂದ ಮನುಷ್ಯರ ನರಳುವಿಕೆಯು ಜೋರಾಗುತ್ತದೆ;
ಗಾಯಪಟ್ಟವರ ಪ್ರಾಣವು ಸಹಾಯಕ್ಕಾಗಿ ಕೂಗುತ್ತದೆ;
ಆದರೂ ದೇವರು ಯಾರ ಮೇಲೆಯೂ ತಪ್ಪು ಹೊರಿಸುವುದಿಲ್ಲ.
 
13 “ಬೆಳಕಿನ ವಿರೋಧವಾಗಿ ತಿರುಗಿಬಿದ್ದವರು ಇದ್ದಾರೆ;
ಅಂಥವರು ಬೆಳಕಿನ ಮಾರ್ಗಗಳನ್ನು ಅರಿಯದವರು;
ಬೆಳಕಿನ ದಾರಿಗಳಲ್ಲಿ ವಾಸವಾಗಿರದವರೂ ಆಗಿದ್ದಾರೆ.
14 ಕೊಲೆಗಾರನು ಮುಂಜಾನೆಯೇ ಎದ್ದು,
ದಿಕ್ಕಿಲ್ಲದವರನ್ನೂ, ಬಡವರನ್ನೂ ಸಂಹರಿಸುತ್ತಾನೆ;
ರಾತ್ರಿಯಲ್ಲಿ ಕಳ್ಳನಂತೆ ವರ್ತಿಸುತ್ತಾನೆ.
15 ವ್ಯಭಿಚಾರಿಯು ಸಂಜೆಯನ್ನು ಎದುರುನೋಡುತ್ತಿರುವನು.
ತರುವಾಯ, ‘ಯಾವ ಕಣ್ಣೂ ನನ್ನನ್ನು ನೋಡುವುದಿಲ್ಲ,’ ಎಂದು ಹೇಳುತ್ತಾನೆ;
ಯಾರು ತನ್ನನ್ನು ಕಾಣದಂತೆ ಮುಖವನ್ನು ಮುಚ್ಚಿಕೊಳ್ಳುತ್ತಾನೆ.
16 ಕಳ್ಳರು ಕತ್ತಲಲ್ಲಿ ಕನ್ನ ಕೊರೆದು ಮನೆಗಳೊಳಗೆ ನುಗ್ಗುತ್ತಾರೆ.
ಹಗಲಿನಲ್ಲಿ ತಮ್ಮ ಮನೆಬಾಗಿಲುಗಳನ್ನು ಮುಚ್ಚಿಕೊಳ್ಳುತ್ತಾರೆ;
ಅವರು ಬೆಳಕಿನಲ್ಲಿ ಏನೂ ಮಾಡಲು ಬಯಸುವುದಿಲ್ಲ.
17 ಅವರೆಲ್ಲರಿಗೂ ಕಾರ್ಗತ್ತಲು ಬೆಳಕಿನಂತಿರುವುದು;
ಕತ್ತಲೆಯ ಭೀತಿಯೇ ಅವರಿಗೆ ಸ್ನೇಹಿತರು.
 
18 “ಆದರೂ ಅವರು ನೀರಿನ ಮೇಲಿನ ಗುಳ್ಳೆಯಂತೆ ಇದ್ದಾರೆ.
ಅವರ ಜಮೀನು ಶಾಪಕ್ಕೆ ಒಳಪಟ್ಟಿರುವುದರಿಂದ,
ಯಾರೂ ಅವರ ದ್ರಾಕ್ಷೆಯ ತೋಟಕ್ಕೆ ಹೋಗುವುದಿಲ್ಲ.
19 ಬರಗಾಲದ ಬಿಸಿಲು ಹಿಮದ ನೀರನ್ನು ಹೀರಿಕೊಳ್ಳುವಂತೆ,
ಪಾಪಮಾಡಿದವರನ್ನು ಸಮಾಧಿಯು ಹೀರಿಕೊಳ್ಳುತ್ತದೆ.
20 ಹೆತ್ತ ಕರುಳು ಅಂಥವರನ್ನು ಮರೆತು ಬಿಡುವುದು;
ಹುಳವು ಅಂಥವರ ಹೆಣವನ್ನು ರುಚಿಯಿಂದ ತಿಂದುಬಿಡುವುದು;
ಇನ್ನು ಅವರ ನೆನಪು ಇರುವುದಿಲ್ಲ;
ಮರದ ಹಾಗೆ ದುಷ್ಟರು ಮುರಿದುಹೋಗುವರು.
21 ದುಷ್ಟರು ಆಸ್ತಿಯ ವಿಷಯದಲ್ಲಿ ಬಂಜೆಯರನ್ನು ಮೋಸಮಾಡುತ್ತಾನೆ;
ದುಷ್ಟರು ವಿಧವೆಯರಿಗೆ ದಯೆ ತೋರಿಸುವುದಿಲ್ಲ.
22 ಆದರೆ ದೇವರು ತಮ್ಮ ಶಕ್ತಿಯಿಂದ ಬಲಿಷ್ಠರನ್ನು ಎಳೆದೊಯ್ಯುತ್ತಾರೆ;
ಬಲಿಷ್ಠರು ಉದ್ಧಾರವಾಗಿದ್ದರೂ ಅವರಿಗೆ ಜೀವನದ ಭರವಸೆ ಇಲ್ಲ.
23 ಭದ್ರತೆಯಲ್ಲಿ ವಿಶ್ರಾಂತಿ ಪಡೆಯಲು ದೇವರು ಅವರಿಗೆ ಅವಕಾಶ ನೀಡಬಹುದು;
ಆದರೆ ದೇವರ ಕಣ್ಣುಗಳು ಅವರ ಮಾರ್ಗಗಳ ಮೇಲಿರುವುದು.
24 ಅವರು ಸ್ವಲ್ಪಕಾಲ ಉನ್ನತವಾಗಿದ್ದು ನಂತರ ಇಲ್ಲದೆ ಹೋಗುತ್ತಾರೆ;
ಅವರು ಎಲ್ಲಾ ಮನುಷ್ಯರಂತೆ ಕೊಯ್ದ ತೆನೆಯ ಹಾಗೆ
ಕೆಳಗೆ ಬಿದ್ದು ಕಾಳಿನಂತೆ ಬೇರ್ಪಡುತ್ತಾರೆ.
 
25 “ಈ ಮಾತು ನಿಜ ಇಲ್ಲದಿದ್ದರೆ, ಯಾರು ನನ್ನನ್ನು ಸುಳ್ಳುಗಾರನನ್ನಾಗಿ ಸ್ಥಾಪಿಸಬಲ್ಲರು?
ಯಾರು ನನ್ನ ಮಾತನ್ನು ವ್ಯರ್ಥಮಾಡಬಲ್ಲರು?”
* 24:6 24:6 ಹಕ್ಕಲಾಯುತ್ತಾರೆ ಅಂದರೆ ಕೊಯ್ಲುಗಾರನು ಬಿಟ್ಟುಹೋದ ಹಣ್ಣುಗಳನ್ನು ಆರಿಸುತ್ತಾರೆ.