31
“ಕನ್ನಿಕೆಯನ್ನು ಕಾಮದೃಷ್ಟಿಯಿಂದ ನೋಡುವುದಿಲ್ಲವೆಂದು
ನನ್ನ ಕಣ್ಣುಗಳೊಂದಿಗೆ ನಾನು ಒಡಂಬಡಿಕೆಯನ್ನು ಮಾಡಿಕೊಂಡೆನು.
ದೇವರು ಮೇಲಣ ಲೋಕದಿಂದ ಯಾವ ಪಾಲನ್ನು ವಿಧಿಸುವರು?
ಸರ್ವಶಕ್ತರು ಉನ್ನತಾಕಾಶದಿಂದ ಕೊಡುವ ಬಾಧ್ಯತೆ ಯಾವುದು?
ದುಷ್ಟರಿಗೆ ವಿಪತ್ತು ಇಲ್ಲವೋ?
ಕೆಡುಕರಿಗೆ ವಿನಾಶ ಇಲ್ಲವೋ?
ದೇವರು ನನ್ನ ಮಾರ್ಗಗಳನ್ನು ನೋಡಿ,
ನನ್ನ ಹೆಜ್ಜೆಗಳನ್ನೆಲ್ಲಾ ಎಣಿಸುತ್ತಾರಲ್ಲವೆ?
 
“ನಾನು ಕಪಟವಾಗಿ ನಡೆದುಕೊಂಡಿದ್ದರೆ,
ಮೋಸಕ್ಕೆ ನನ್ನ ಕಾಲು ತ್ವರೆಪಟ್ಟಿದ್ದರೆ,
ದೇವರು ನ್ಯಾಯದ ತಕ್ಕಡಿಯಲ್ಲಿ ನನ್ನನ್ನು ತೂಗಿ ನೋಡಲಿ;
ನಾನು ನಿರ್ದೋಷಿ ಎಂದು ದೇವರು ತಿಳಿದುಕೊಳ್ಳಲಿ.
ನಾನು ದಾರಿತಪ್ಪಿ ನಡೆದಿದ್ದರೆ,
ನನ್ನ ಕಣ್ಣು ಕಂಡವುಗಳ ಹಿಂದೆ ನನ್ನ ಹೃದಯವು ಹೋಗಿದ್ದರೆ,
ನನ್ನ ಅಂಗೈಗಳಲ್ಲಿ ದೋಷ ಅಂಟಿಕೊಂಡಿದ್ದರೆ,
ನಾನು ಬಿತ್ತುವುದನ್ನು ಬೇರೊಬ್ಬನು ಉಣ್ಣಲಿ;
ನನ್ನ ಬೆಳೆಯು ಬುಡಮೇಲಾಗಲಿ.
 
“ನನ್ನ ಹೃದಯವು ಪರಸ್ತ್ರೀಗೆ ಮರುಳಾಗಿ,
ನನ್ನ ನೆರೆಯವನ ಬಾಗಿಲ ಹತ್ತಿರ ನಾನು ಹೊಂಚುಹಾಕಿದ್ದರೆ,
10 ನನ್ನ ಹೆಂಡತಿ ಮತ್ತೊಬ್ಬನಿಗೋಸ್ಕರ ಧಾನ್ಯಬೀಸಲಿ,
ಮತ್ತೊಬ್ಬರು ಅವಳ ಸಂಗಡ ಮಲಗಲಿ.
11 ಏಕೆಂದರೆ ನಾನು ಹಾಗೆಲ್ಲಾ ಮಾಡಿದ್ದರೆ, ಅಂಥ ನಡತೆ ದುಷ್ಕಾರ್ಯವಾಗುತ್ತಿತ್ತು,
ಆ ಅಪರಾಧವು ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾಗುತ್ತಿತ್ತು.
12 ಅದು ನಾಶಲೋಕದವರೆಗೆ ದಹಿಸುವಂಥಾ ಅಗ್ನಿಯಾಗುತ್ತಿತ್ತು,
ಅದು ನನ್ನ ಆದಾಯವನ್ನೆಲ್ಲಾ ನಿರ್ಮೂಲ ಮಾಡುತ್ತಿತ್ತು.
 
13 “ಒಂದು ವೇಳೆ ನನಗೂ
ನನ್ನ ದಾಸದಾಸಿಯರಿಗೂ ನನ್ನ ಮೇಲೆ ವ್ಯಾಜ್ಯವಾದಾಗ,
ನಾನು ಅವರ ನ್ಯಾಯವನ್ನು ತಿರಸ್ಕರಿಸಿದ್ದರೆ,
14 ದೇವರು ನ್ಯಾಯಸ್ಥಾಪನೆಗೆ ಏಳುವಾಗ ನಾನು ಏನು ಮಾಡುತ್ತಿದ್ದೆನು?
ದೇವರು ವಿಚಾರಿಸುವಾಗ, ನಾನು ಅವರಿಗೆ ಏನು ಉತ್ತರಕೊಡುತ್ತಿದ್ದೆನು?
15 ಗರ್ಭದಲ್ಲಿ ನನ್ನನ್ನು ಉಂಟುಮಾಡಿದ ದೇವರೇ ಅವರನ್ನೂ ಉಂಟು ಮಾಡಿದ್ದಾರಲ್ಲವೇ?
ಅವರನ್ನೂ, ನನ್ನನ್ನೂ ತಾಯಂದಿರ ಗರ್ಭದಲ್ಲಿ ರೂಪಿಸಿದ ದೇವರು ಒಬ್ಬರೇ ಅಲ್ಲವೇ?
 
16 “ನಾನು ಬಡವರ ಬಯಕೆಗಳನ್ನು ಭಂಗಪಡಿಸಿದೆನೋ?
ವಿಧವೆಯ ಕಣ್ಣುಗಳನ್ನು ನಾನು ಮಂಕಾಗಿಸಿದೆನೋ?
17 ದಿಕ್ಕಿಲ್ಲದವರು ಊಟ ಉಣ್ಣದ ಹಾಗೆ,
ನಾನು ಮಾತ್ರ ತುತ್ತನ್ನೆಲ್ಲಾ ಒಂಟಿಯಾಗಿ ತಿಂದೆನೋ?
18 ಇಲ್ಲಾ, ನನ್ನ ಯೌವನಕಾಲದಿಂದ ನಾನು ಅನಾಥರನ್ನು ತಂದೆಯಂತೆ ಬೆಳೆಸಿದೆನು.
ಹುಟ್ಟಿದಂದಿನಿಂದ ವಿಧವೆಯರಿಗೆ ಮಾರ್ಗದರ್ಶಿಯಾಗಿದ್ದೆನು.
19 ಬಟ್ಟೆ ಇಲ್ಲದೆ ಕಷ್ಟಪಡುವವರನ್ನೂ,
ಹೊದಿಕೆ ಇಲ್ಲದೆ ನಡುಗುವವರನ್ನೂ ನಾನು ನೋಡಿದಾಗೆಲ್ಲಾ,
20 ಆ ಬಡವರು ನನ್ನ ಕುರಿ ಉಣ್ಣೆಯಿಂದ ಬೆಚ್ಚಗಾಗಿ,
ತಮ್ಮ ಅಂತರಾಳದಿಂದ ನನ್ನನ್ನು ಹರಸಲಿಲ್ಲವೋ?
21 ನ್ಯಾಯಸ್ಥಾನದಲ್ಲಿ ನನಗೆ ಬೆಂಬಲ ಉಂಟೆಂದು ಕಂಡು,
ನಾನು ದಿಕ್ಕಿಲ್ಲದವರ ಮೇಲೆ ನನ್ನ ಕೈಮಾಡಿದ್ದರೆ,
22 ನನ್ನ ಹೆಗಲು, ಬೆನ್ನಿನ ಕೀಲು ತಪ್ಪಿಹೋಗಲಿ;
ನನ್ನ ತೋಳು ಅದರ ಸಂದಿನಿಂದ ಕಳಚಿಬೀಳಲಿ.
23 ಏಕೆಂದರೆ ದೇವರಿಂದ ಬರುವ ವಿಪತ್ತಿನ ಬಗ್ಗೆ ನನಗೆ ಹೆದರಿಕೆಯಾಯಿತು;
ದೇವರ ಪ್ರಭಾವದ ಭಯದ ನಿಮಿತ್ತ ನಾನು ಇಂಥ ಕೃತ್ಯವನ್ನು ಮಾಡುವುದಕ್ಕೆ ಸಾಧ್ಯವಾಗಲಿಲ್ಲ.
 
24 “ನಾನು ಬಂಗಾರದಲ್ಲಿ ನನ್ನ ನಿರೀಕ್ಷೆಯನ್ನು ಇಟ್ಟಿದ್ದರೆ,
ಅಪರಂಜಿಗೆ, ‘ನೀನು ನನ್ನ ಭದ್ರತೆ,’ ಎಂದು ಹೇಳಿದ್ದರೆ,
25 ನನ್ನ ಐಶ್ವರ್ಯವು ಬಹಳ ಎಂದು ಕೊಚ್ಚಿಕೊಂಡಿದ್ದರೆ,
ನನ್ನ ಕೈ ಬಹಳ ಸಂಪಾದಿಸಿದೆ ಎಂದು ನಾನು ಸಂತೋಷಪಟ್ಟಿದ್ದರೆ,
26 ನಾನು ಸೂರ್ಯನು ಹೊಳೆಯುವುದನ್ನು ಗಮನಿಸಿ,
ಚಂದ್ರನು ಪ್ರಭೆಯಲ್ಲಿ ಚಲಿಸುವುದನ್ನು ನೋಡಿ,
27 ನನ್ನ ಹೃದಯವು ಮರುಳುಗೊಂಡು,
ನನ್ನ ಕೈ ಅವುಗಳನ್ನು ನನ್ನ ಬಾಯಿಂದ ಗೌರವದಿಂದ ಮುಗಿದಿದ್ದರೆ,
28 ಇದು ಸಹ ನ್ಯಾಯಾಧಿಪತಿಯ ದಂಡನೆಗೆ ಯೋಗ್ಯವಾಗುತ್ತಿತ್ತು;
ಏಕೆಂದರೆ, ಆಗ ನಾನು ಉನ್ನತದಲ್ಲಿರುವ ದೇವರಿಗೆ ದ್ರೋಹಿಯಾಗುತ್ತಿದ್ದೆನು.
 
29 “ವೈರಿಯ ನಾಶಕ್ಕೆ ನಾನು ಸಂತೋಷಪಟ್ಟು,
ವೈರಿಗೆ ಕೇಡು ಬಂದಾಗ ಹಿಗ್ಗಿಕೊಂಡು ಗರ್ವಪಟ್ಟೆನೋ?
30 ಇಲ್ಲ, ಅವನ ಸಾಯಲಿ ಎಂದು ನಾನು ಶಾಪ ಕೊಡಲಿಲ್ಲ.
ನಾನು ನನ್ನ ಬಾಯಿಂದ ಅಂಥ ಪಾಪಮಾಡಲಿಲ್ಲ.
31 ನನ್ನ ಮನೆಯ ಕೆಲಸದವರು,
‘ಯೋಬನು ನೀಡಿದ ಭೋಜನದಿಂದ ತೃಪ್ತರಾಗದವರು ಯಾರು?’ ಎಂದು ಹೇಳಿಕೊಳ್ಳುತ್ತಿದ್ದರಲ್ಲವೆ?
32 ಆದರೆ ಯಾವ ಪರದೇಶಸ್ಥರೂ ಬೀದಿಯಲ್ಲಿ ತಂಗಬೇಕಾಗಿರಲಿಲ್ಲ;
ಪ್ರಯಾಣಿಕರಿಗೆ ನನ್ನ ಬಾಗಿಲು ಸದಾ ತೆರೆದಿಟ್ಟಿದ್ದೆನು.
33 ನಾನು ಹೃದಯದಲ್ಲಿ ನನ್ನ ಅಪರಾಧ ಪ್ರಜ್ಞೆಯನ್ನು ಅಡಗಿಸಿ,
ಮಾನವರಂತೆ ನನ್ನ ದ್ರೋಹವನ್ನು ಮುಚ್ಚಿಕೊಳ್ಳಲಿಲ್ಲ.
34 ನಾನು ದೊಡ್ಡ ಸಮೂಹಕ್ಕೆ ಹೆದರಿದೆನೋ?
ಕುಲಗಳ ಅವಹೇಳನಕ್ಕೆ ಕಳವಳಗೊಂಡರೂ,
ಬಾಗಿಲಿನಿಂದ ಹೊರಗೆ ಹೋಗದೆ ಮೌನವಾಗಿದ್ದೆನೋ?
 
35 “ನನ್ನ ಕರೆಗೆ ಕಿವಿಗೊಡತಕ್ಕವರು ಒಬ್ಬರು ಈಗ ಇದ್ದರೆ ಎಷ್ಟೋ ಲೇಸು!
ಸರ್ವಶಕ್ತರು ನನಗೆ ಉತ್ತರಕೊಡಲಿ;
ನನ್ನ ವಿರೋಧಿಯು ನನ್ನ ಆಪಾದನಾ ಪತ್ರವನ್ನು ಬರೆದು ಕೊಡಲಿ.
36 ನಾನು ನನ್ನ ಹೆಗಲಲ್ಲಿ ಆ ಲಿಖಿತವನ್ನು ನಿಶ್ಚಯವಾಗಿ ಹೊತ್ತು ನಡೆಯುತ್ತಿದ್ದೆ;
ಅದನ್ನು ಕಿರೀಟವಾಗಿ ಧರಿಸಿಕೊಳ್ಳುತ್ತಿದ್ದೆನು.
37 ನನ್ನ ಹೆಜ್ಜೆಗಳ ಲೆಕ್ಕವನ್ನು ದೇವರಿಗೆ ಒಪ್ಪಿಸುತ್ತಿದ್ದೆನು;
ಒಬ್ಬ ಅಧಿಪತಿಯಂತೆ ನಾನು ದೇವರನ್ನು ಸಮೀಪಿಸುತ್ತಿದ್ದೆನು.
 
38 “ನನ್ನ ಹೊಲ ನನಗೆ ವಿರೋಧವಾಗಿ ಪ್ರತಿಭಟಿಸಿದ್ದರೆ,
ಅದರ ನೇಗಿಲ ಗೆರೆಗಳೆಲ್ಲಾ ದೂರಿ ಅಳುತ್ತಿದ್ದರೆ,
39 ಕೂಲಿಕೊಡದೆ ಭೂಮಿಯ ಫಲವನ್ನು ನಾನು ತಿಂದಿದ್ದರೆ,
ಅದರ ಯಜಮಾನರ ಪ್ರಾಣಹಾನಿಗೆ ಕಾರಣನಾಗಿದ್ದರೆ,
40 ಗೋಧಿಗೆ ಬದಲಾಗಿ ಮುಳ್ಳುಗಳೂ,
ಜವೆಗೋಧಿಗೆ ಬದಲಾಗಿ ಕಳೆಗಳೂ ಬೆಳೆಯಲಿ.”
ಹೀಗೆ ಯೋಬನ ಮಾತುಗಳು ಮುಗಿದವು.