34
ಎಲೀಹು ಮುಂದುವರೆಸಿ ಹೇಳಿದ್ದೇನೆಂದರೆ:
ಜ್ಞಾನಿಗಳೇ, ನನ್ನ ನುಡಿಗಳನ್ನು ಕೇಳಿರಿ;
ಪಂಡಿತರೇ, ನನಗೆ ಕಿವಿಗೊಡಿರಿ.
ಏಕೆಂದರೆ ಆಹಾರವನ್ನು ನಾಲಿಗೆ ರುಚಿ ನೋಡುವಂತೆ,
ಕಿವಿಯು ನುಡಿಗಳನ್ನು ಪರಿಶೋಧಿಸುತ್ತದೆ.
ನಾವು ಸರಿಯಾದುದನ್ನೇ ಆಯ್ದುಕೊಳ್ಳೋಣ;
ಒಳ್ಳೆಯದು ಏನೆಂದು ನಮ್ಮೊಳಗೆ ನಾವೇ ತಿಳಿದುಕೊಳ್ಳೋಣ.
 
“ಏಕೆಂದರೆ ಯೋಬನು, ‘ನಾನು ನಿರ್ದೋಷಿಯಾಗಿದ್ದೇನೆ.
ಆದರೆ ದೇವರು ನನಗೆ ನ್ಯಾಯವನ್ನು ನಿರಾಕರಿಸಿದ್ದಾರೆ.
ನನ್ನಲ್ಲಿ ನ್ಯಾಯವಿದ್ದರೂ
ನನ್ನನ್ನು ಸುಳ್ಳುಗಾರನೆಂದು ಪರಿಗಣಿಸಲಾಗಿದೆ;
ನಾನು ನಿರ್ದೋಷಿಯಾಗಿದ್ದರೂ
ದೇವರ ಬಾಣವು ಗುಣಪಡಿಸಲಾಗದ ಗಾಯವನ್ನು ನನಗೆ ಉಂಟುಮಾಡಿದೆ,’ ಎಂದು ಹೇಳುತ್ತಿದ್ದಾನೆ.”
ಯೋಬನಿಗೆ ಸಮಾನನು ಯಾರು?
ಅವನು ನೀರು ಕುಡಿಯುವಂತೆ ಅಪಹಾಸ್ಯ ಮಾಡುತ್ತಿದ್ದಾನೆ.
ಯೋಬನು ದುಷ್ಕರ್ಮಿಗಳೊಂದಿಗೆ ಸಹವಾಸ ಇಟ್ಟುಕೊಳ್ಳುತ್ತಾ
ದುಷ್ಟಜನರ ಸಂಗಡ ನಡೆದಾಡುತ್ತಾನೆ.
“ಏಕೆಂದರೆ ಅವನು, ‘ದೇವರನ್ನು ಮೆಚ್ಚಿಸಲು ಪ್ರಯತ್ನಿಸುವುದರಿಂದ
ಮನುಷ್ಯನಿಗೆ ಯಾವುದೇ ಲಾಭವಿಲ್ಲ,’ ಎಂದು ಹೇಳುತ್ತಾನೆ.”
 
10 “ಆದ್ದರಿಂದ ಬುದ್ಧಿವಂತರೇ, ನಾನು ಹೇಳುವುದನ್ನು ಕೇಳಿರಿ,
ದೇವರು ಕೆಟ್ಟದ್ದನ್ನು ಮಾಡುತ್ತಾರೆಂಬ ಯೋಚನೆ ದೂರವಿರಲಿ.
ಸರ್ವಶಕ್ತರು ಅನ್ಯಾಯವನ್ನು ಎಸಗುತ್ತಾರೆಂಬ ಭಾವನೆ ದೂರವಾಗಿರಲಿ.
11 ದೇವರು ಮನುಷ್ಯನಿಗೆ ಅವನ ಕೃತ್ಯಗಳಿಗೆ ತಕ್ಕ ಫಲವನ್ನು ಕೊಡುತ್ತಾರೆ;
ಹೌದು, ದೇವರು ಪ್ರತಿಯೊಬ್ಬರನ್ನು ಅವರವರ ನಡತೆಗೆ ತಕ್ಕಂತೆ ಅನುಭವಿಸಮಾಡುತ್ತಾರೆ.
12 ನಿಶ್ಚಯವಾಗಿ ದೇವರು ಕೆಟ್ಟದ್ದನ್ನು ಮಾಡುವುದಿಲ್ಲ,
ಸರ್ವಶಕ್ತರು ನ್ಯಾಯವನ್ನು ಡೊಂಕು ಮಾಡುವುದಿಲ್ಲ.
13 ಭೂಮಿಯ ಮೇಲೆ ದೇವರನ್ನು ನೇಮಿಸಿದವರು ಯಾರು?
ಸರ್ವಲೋಕವನ್ನು ದೇವರ ವಶಕ್ಕೆ ಒಪ್ಪಿಸಿಕೊಟ್ಟವರು ಯಾರು?
14 ಒಂದು ವೇಳೆ, ದೇವರು ತಮ್ಮ ಆತ್ಮವನ್ನೂ, ಶ್ವಾಸವನ್ನೂ,
ನಮ್ಮಿಂದ ಹಿಂದಕ್ಕೆ ತೆಗೆದುಕೊಳ್ಳಲು ಮನಸ್ಸುಮಾಡುವುದಾದರೆ,
15 ಎಲ್ಲಾ ಮನುಷ್ಯರೂ ಒಟ್ಟಿಗೆ ಅಳಿದುಹೋಗುವರು;
ಇಡೀ ಮಾನವಕುಲವು ಧೂಳಿಗೆ ಹಿಂದಿರುಗುವುದು.”
 
16 “ಯೋಬನೇ, ಅರ್ಥಮಾಡಿಕೊಂಡು, ಇದನ್ನು ಕೇಳಿಸಿಕೋ;
ನನ್ನ ಮಾತಿಗೆ ಕಿವಿಗೊಡು.
17 ನ್ಯಾಯವನ್ನು ದ್ವೇಷಿಸುವ ದೇವರು, ಆಳ್ವಿಕೆಮಾಡಲು ಸಾಧ್ಯವೇ?
ನೀತಿವಂತರೂ, ಸರ್ವಶಕ್ತರೂ ಆಗಿರುವ ದೇವರ ಮೇಲೆ ನೀನು ತಪ್ಪುಹೊರಿಸುವಿಯೋ?
18 ದೇವರು ಅರಸನಿಗೆ, ‘ನೀನು ಮೂರ್ಖ,’ ಎಂದು ಹೇಳಬಲ್ಲರು.
ದೇವರು ಪ್ರಧಾನರಿಗೆ, ‘ನೀವು ದುಷ್ಟರು’ ಎಂದು ಕರೆಯಬಲ್ಲರು ಅಲ್ಲವೇ?
19 ದೇವರು ಅಧಿಪತಿಗಳಿಗೆ ಮುಖದಾಕ್ಷಿಣ್ಯ ತೋರಿಸುವರೋ?
ಧನಿಕನನ್ನು ಬಡವನಿಗಿಂತ ಹೆಚ್ಚೆಂದು ದೇವರು ಲಕ್ಷಿಸುವರೋ?
ಏಕೆಂದರೆ ಅವರೆಲ್ಲರೂ ದೇವರ ಸೃಷ್ಟಿಯಾಗಿದ್ದಾರೆ.
20 ಜನರು ಮಧ್ಯರಾತ್ರಿಯಲ್ಲಿ ಕ್ಷಣಮಾತ್ರದಲ್ಲಿ ಸಾಯುತ್ತಾರೆ;
ಅವರು ತಲ್ಲಣಗೊಂಡು ಇಲ್ಲದೆ ಹೋಗುತ್ತಾರೆ;
ಪರಾಕ್ರಮಿಗಳು ಸಹ ಮಾನವರ ಕೈ ಒಳಪಡದೆ ಗತಿಸಿಹೋಗುತ್ತಾರೆ.”
 
21 “ಏಕೆಂದರೆ ದೇವರ ಕಣ್ಣು ಮನುಷ್ಯನ ಮಾರ್ಗಗಳ ಮೇಲೆ ಇರುತ್ತದೆ;
ದೇವರು ಮನುಷ್ಯನ ಪ್ರತಿಯೊಂದು ಹೆಜ್ಜೆಯನ್ನೂ ನೋಡುತ್ತಾರೆ.
22 ಆದ್ದರಿಂದ ದೇವರ ದೃಷ್ಟಿಯಿಂದ ದುಷ್ಟರು ಅಡಗಿಕೊಳ್ಳಲು,
ಗಾಢಾಂಧಕಾರವೂ ಇಲ್ಲ, ನೆರಳೂ ಇರುವುದಿಲ್ಲ.
23 ದೇವರು ಮನುಷ್ಯನ ಮೇಲೆ ಹೆಚ್ಚು ಗಮನ ಇಡಬೇಕಾಗಿಲ್ಲ.
ಮನುಷ್ಯನು ನ್ಯಾಯವಿಚಾರಣೆಗೆ ಬರಬೇಕೆಂದು ದೇವರು ಕರೆಯುವ ಅವಶ್ಯಕತೆಯೂ ಇಲ್ಲ.
24 ಯಾವ ವಿಚಾರಣೆ ಇಲ್ಲದೆಯೇ ದೇವರು ಪರಾಕ್ರಮಿಗಳನ್ನು ದಂಡಿಸಬಹುದು.
ದೇವರು ಮತ್ತೊಬ್ಬರನ್ನು ಅವರ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯ.
25 ಏಕೆಂದರೆ, ದೇವರು ಅಂಥವರ ದುಷ್ಕಾರ್ಯಗಳನ್ನು ತಿಳಿದಿದ್ದಾರೆ.
ರಾತ್ರಿಯಲ್ಲಿ ಅವರನ್ನು ಕೆಡವಿ ದಂಡನೆಗೆ ಗುರಿಮಾಡುವರು.
26 ಅವರ ದುಷ್ಟತನಕ್ಕಾಗಿ
ದೇವರು ಎಲ್ಲರು ನೋಡುವಂತೆ ಅವರನ್ನು ಶಿಕ್ಷಿಸುವರು.
27 ಅವರು ದೇವರನ್ನು ಹಿಂಬಾಲಿಸದೆ,
ದೇವರ ಮಾರ್ಗಗಳನ್ನೆಲ್ಲಾ ಅಲಕ್ಷ್ಯ ಮಾಡಿದ್ದರಷ್ಟೆ.
28 ಹೀಗೆ ದುಷ್ಟರು ಬಡವರ ಕೂಗನ್ನು ದೇವರ ಬಳಿಗೆ ಬರುವಂತೆ ಮಾಡಿದ್ದರು
ದೇವರು ದಿಕ್ಕಿಲ್ಲದವರ ಕೂಗನ್ನು ಆಲೈಸಿದ್ದರು.
29 ಆದರೆ ದೇವರು ಸುಮ್ಮನಿದ್ದರೆ ಅವರ ಮೇಲೆ, ತಪ್ಪುಹೊರಿಸುವವರು ಯಾರು?
ದೇವರು ತಮ್ಮ ಮುಖವನ್ನು ವ್ಯಕ್ತಿಗಾಗಲಿ, ದೇಶಕ್ಕಾಗಲಿ ಮರೆಮಾಡಿದರೆ,
ದೇವದರ್ಶನ ಪಡೆಯಬಲ್ಲವರು ಯಾರು?
30 ಭಕ್ತಿಹೀನನು ಆಳಬಾರದು,
ಯಾರೂ ಜನರಿಗೆ ಉರುಲಾಗಬಾರದು, ಎಂಬುದೇ ಇದರಲ್ಲಿ ದೇವರ ಉದ್ದೇಶ.”
 
31 “ಒಂದು ವೇಳೆ, ಯಾರಾದರೂ ದೇವರಿಗೆ,
‘ನಾನು ಪಾಪಮಾಡಿದ್ದೇನೆ, ಆದರೆ ಇನ್ನು ಮುಂದೆ ಪಾಪಮಾಡುವುದಿಲ್ಲ.
32 ದೇವರೇ, ನಾನು ಕಾಣದಿರುವುದನ್ನು ನನಗೆ ಬೋಧಿಸಿರಿ.
ನಾನು ತಪ್ಪುಮಾಡಿದ್ದರೂ, ಇನ್ನು ಮೇಲೆ ಅದನ್ನು ಮಾಡುವುದಿಲ್ಲ,’ ಎಂದು ಹೇಳಿದ್ದರೆ ಸರಿ.
33 ಆದರೆ ನೀನು ಪಶ್ಚಾತ್ತಾಪಪಡಲು ನಿರಾಕರಿಸಿದಾಗ,
ದೇವರು ನಿನಗೆ ತಕ್ಕ ದಂಡನೆಯನ್ನು ಕೊಡಬಾರದೆ?
ಇದನ್ನು ನೀನೇ ತೀರ್ಮಾನಿಸು, ನಾನು ತೀರ್ಮಾನಿಸುವುದಿಲ್ಲ;
ಆದ್ದರಿಂದ ನಿನಗೆ ತಿಳಿದದ್ದನ್ನು ನನಗೆ ತಿಳಿಸು.”
 
34 “ತಿಳುವಳಿಕೆಯುಳ್ಳವರೂ, ನನ್ನನ್ನು ಆಲಿಸಿದ
ಜ್ಞಾನಿಗಳೂ ನಿನ್ನ ವಿಷಯವಾಗಿ:
35 ‘ಯೋಬನು ತಿಳುವಳಿಕೆಯಿಲ್ಲದೆ ಮಾತಾಡಿದ್ದಾನೆ;
ಅವನ ಮಾತುಗಳು ಬುದ್ಧಿಯಿಲ್ಲದ ಮಾತುಗಳು.
36 ಯೋಬನನ್ನು ಕಡೆಯವರೆಗೆ ಪರೀಕ್ಷಿಸಬೇಕೆಂದು ಬಯಸುತ್ತೇವೆ.
ಏಕೆಂದರೆ ಅವನು ದುಷ್ಟರ ಹಾಗೆ ಉತ್ತರ ಕೊಡುತ್ತಾನೆ.
37 ಯೋಬನು ತನ್ನ ಪಾಪಕ್ಕೆ ದೇವರಿಗೆ ಎದುರಾಗಿ ಪ್ರತಿಭಟನೆಯನ್ನು ಸಹ ಕೂಡಿಸುತ್ತಿದ್ದಾನೆ;
ಅಪಹಾಸ್ಯದಿಂದ ನಮ್ಮ ಮಧ್ಯದಲ್ಲಿ ಚಪ್ಪಾಳೆ ತಟ್ಟುತ್ತಾನೆ;
ದೇವರಿಗೆ ವಿರುದ್ಧ ಹೆಚ್ಚು ಮಾತುಗಳನ್ನಾಡುತ್ತಾನೆ,’ ಎಂದು ನನಗೆ ಹೇಳುತ್ತಿದ್ದಾರೆ.”