20
ಇಸ್ರಾಯೇಲರು ಬೆನ್ಯಾಮೀನ್ಯರೊಂದಿಗೆ ಯುದ್ಧ ಮಾಡಿದ್ದು
ಆಗ ಇಸ್ರಾಯೇಲರೆಲ್ಲರು ಹೊರಟು ಗಿಲ್ಯಾದ್ ಸಹಿತವಾಗಿ ದಾನ್ ಪಟ್ಟಣ ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ ಒಬ್ಬ ಮನುಷ್ಯನಂತೆ ಮಿಚ್ಪೆಯಲ್ಲಿ ಯೆಹೋವ ದೇವರ ಮುಂದೆ ಕೂಡಿಬಂದರು. ಇದಲ್ಲದೆ ಇಸ್ರಾಯೇಲಿನ ಸಮಸ್ತ ಗೋತ್ರಗಳಾದ ಸಮಸ್ತ ಜನರ ಮುಖ್ಯಸ್ಥರು ಬಿಚ್ಚು ಖಡ್ಗ ಹಿಡಿದುಕೊಂಡ ನಾಲ್ಕು ಲಕ್ಷ ಕಾಲಾಳುಗಳು ದೇವರ ಸಮೂಹದ ಜನರಲ್ಲಿಗೆ ಬಂದರು. ಬೆನ್ಯಾಮೀನ್ಯರು, ಇಸ್ರಾಯೇಲರು ಮಿಚ್ಪೆಗೆ ಬಂದ ವರ್ತಮಾನವನ್ನು ಕೇಳಿದರು. ಆಗ ಇಸ್ರಾಯೇಲರು, “ನೀವು ಮಾತನಾಡಿರಿ; ಆ ಕೆಟ್ಟತನವು ಹೇಗೆ ಆಯಿತು?” ಎಂದರು.
ಹತಳಾದ ಸ್ತ್ರೀಯ ಗಂಡನಾದ ಆ ಲೇವಿಯನು ಅವರಿಗೆ ಉತ್ತರಕೊಟ್ಟು, “ನಾನು ಬೆನ್ಯಾಮೀನನ ಊರಾದ ಗಿಬೆಯಕ್ಕೆ ನನ್ನ ಉಪಪತ್ನಿ ಸಹಿತವಾಗಿ ಇಳಿದುಕೊಳ್ಳುವುದಕ್ಕೆ ಬಂದೆನು. ಆದರೆ ಗಿಬೆಯ ಪಟ್ಟಣದವರು ನನಗೆ ವಿರೋಧವಾಗಿ ಎದ್ದು, ನಾನು ಇಳಿದಿದ್ದ ಮನೆಯನ್ನು ರಾತ್ರಿಯಲ್ಲಿ ಮುತ್ತಿಕೊಂಡು ನನ್ನನ್ನು ಕೊಲ್ಲಬೇಕೆಂದಿದ್ದರು ಮತ್ತು ನನ್ನ ಉಪಪತ್ನಿಯನ್ನು ಅತ್ಯಾಚಾರಮಾಡಿದರು. ಅವಳು ಸತ್ತುಹೋದಳು. ಅವರು ಇಸ್ರಾಯೇಲಿನಲ್ಲಿ ಇಂಥ ದುಷ್ಕಾರ್ಯವನ್ನೂ ಅತಿರೇಕದ ಕೆಲಸವನ್ನೂ ಮಾಡಿದ್ದರಿಂದ, ನಾನು ನನ್ನ ಉಪಪತ್ನಿಯನ್ನು ಹಿಡಿದು, ಅವಳನ್ನು ಕಡಿದು, ಇಸ್ರಾಯೇಲಿನ ಬಾಧ್ಯತೆಯಾದ ಎಲ್ಲಾ ಸೀಮೆಗಳಿಗೆ ಕಳುಹಿಸಿದೆನು. ನೀವೆಲ್ಲರೂ ಇಸ್ರಾಯೇಲರಾಗಿದ್ದೀರಿ. ಇಲ್ಲಿ ಕೂಡಿದ ಎಲ್ಲಾ ಇಸ್ರಾಯೇಲರೇ, ನಿಮ್ಮ ಮಾತನ್ನೂ ಆಲೋಚನೆಯನ್ನೂ ಇಲ್ಲಿ ಹೇಳಿಕೊಳ್ಳಿರಿ,” ಎಂದನು.
ಆಗ ಸಮಸ್ತ ಜನರೂ ಒಟ್ಟಾಗಿ ಎದ್ದು, “ನಮ್ಮಲ್ಲಿ ಯಾವನೂ ತನ್ನ ಡೇರೆಗೆ ಹೋಗದಿರಲಿ. ತನ್ನ ಮನೆಗೆ ಹಿಂದಿರುಗದಿರಲಿ. ಈಗ ನಾವು ಗಿಬೆಯಕ್ಕೆ ಮಾಡುವುದು ಇದೇ. ಅದಕ್ಕೆ ವಿರೋಧವಾಗಿ ಚೀಟುಗಳು ಬಿದ್ದ ಪ್ರಕಾರ ಹೋಗೋಣ. 10 ಆದರೆ ಬೆನ್ಯಾಮೀನನ ಗೋತ್ರದವರಾದ ಗಿಬೆಯದವರು ಇಸ್ರಾಯೇಲಿನಲ್ಲಿ ಮಾಡಿದ ಈ ಅತಿರೇಕದ ಕೆಲಸಕ್ಕೆ ತಕ್ಕ ಪ್ರಕಾರ ಮಾಡುವ ಹಾಗೆ ನಾವು ಆಹಾರವನ್ನು ತೆಗೆದುಕೊಂಡು ಬರುವುದಕ್ಕೆ ಇಸ್ರಾಯೇಲಿನ ಸಕಲ ಗೋತ್ರಗಳಲ್ಲಿ ನೂರಕ್ಕೆ ಹತ್ತು ಸಾವಿರಕ್ಕೆ ನೂರು, ಹತ್ತು ಸಾವಿರಕ್ಕೆ ಸಾವಿರ ಜನರನ್ನು ತೆಗೆದುಕೊಂಡು ಕಳುಹಿಸುತ್ತೇವೆ,” ಎಂದರು. 11 ಹೀಗೆಯೇ ಇಸ್ರಾಯೇಲರೆಲ್ಲರೂ ಒಟ್ಟಾಗಿ ಆ ಪಟ್ಟಣದ ಮುಂದೆ ಕೂಡಿದರು.
12 ಅಲ್ಲಿಂದ ಇಸ್ರಾಯೇಲ್ ಗೋತ್ರಗಳು ಬೆನ್ಯಾಮೀನನ ಸಮಸ್ತ ಗೋತ್ರಗಳಿಗೆ ದೂತರನ್ನು ಕಳುಹಿಸಿ, “ನಿಮ್ಮಲ್ಲಿ ಮಾಡಿದ ಈ ಕೆಟ್ಟತನವೇನು? 13 ಗಿಬೆಯದಲ್ಲಿರುವ ದುಷ್ಟ ಮನುಷ್ಯರನ್ನು ನಾವು ಕೊಂದು, ಕೆಟ್ಟತನವನ್ನು ಇಸ್ರಾಯೇಲಿನಿಂದ ತೆಗೆದುಹಾಕುವ ಹಾಗೆ, ಅವರನ್ನು ಒಪ್ಪಿಸಿಕೊಡಿರಿ,” ಎಂದು ಹೇಳಿ ಕಳುಹಿಸಿದರು.
ಆದರೆ ಬೆನ್ಯಾಮೀನ್ಯರು ಇಸ್ರಾಯೇಲರಾದ ತಮ್ಮ ಸಹೋದರರ ಮಾತನ್ನು ಕೇಳುವುದಕ್ಕೆ ಮನಸ್ಸಿಲ್ಲದೆ, 14 ಇಸ್ರಾಯೇಲರ ಸಂಗಡ ಯುದ್ಧಮಾಡುವುದಕ್ಕೆ ಹೊರಡುವ ಹಾಗೆ ಪಟ್ಟಣಗಳಲ್ಲಿಂದ ಗಿಬೆಯದಲ್ಲಿ ಬಂದು ಕೂಡಿದರು. 15 ಆ ಕಾಲದಲ್ಲಿ ಆಯಾ ಪಟ್ಟಣಗಳಿಂದ ಯುದ್ಧಸನ್ನದ್ಧರಾಗಿ ಕೂಡಿಬಂದ ಬೆನ್ಯಾಮೀನ್ಯರ ಸಂಖ್ಯೆಯು ಇಪ್ಪತ್ತಾರು ಸಾವಿರವಾಗಿತ್ತು. ಇವರಲ್ಲದೆ ಗಿಬೆಯದಲ್ಲಿಯೇ ಏಳು ನೂರು ಮಂದಿ ಯುದ್ಧವೀರರಿದ್ದರು. 16 ಈ ಸಮಸ್ತ ಜನರಲ್ಲಿ ಆರಿಸಿದ ಏಳು ನೂರು ಜನರು ಬಲಗೈ ಅಭ್ಯಾಸವಿಲ್ಲದವರಾಗಿದ್ದರು. ಅವರೆಲ್ಲರೂ ಒಂದು ಕೂದಲೆಳೆ ತಪ್ಪದ ಹಾಗೆ ಕವಣೆಯಿಂದ ಕಲ್ಲೆಸೆಯುವವರಾಗಿದ್ದರು.
17 ಬೆನ್ಯಾಮೀನನವರ ಹೊರತು ಇಸ್ರಾಯೇಲರಲ್ಲಿ ನಾಲ್ಕು ಲಕ್ಷ ಯೋಧರಿದ್ದರು. ಇವರೆಲ್ಲರೂ ಯುದ್ಧವೀರರಾಗಿದ್ದರು.
18 ಆಗ ಇಸ್ರಾಯೇಲರು ಬೇತೇಲಿಗೆ ಹೋಗಿ, ತಮ್ಮಲ್ಲಿ ಮೊದಲು ಬೆನ್ಯಾಮೀನ್ಯರ ಸಂಗಡ ಯುದ್ಧಮಾಡುವುದಕ್ಕೆ ಹೋಗಬೇಕಾದವರು ಯಾರೆಂದು ದೇವರನ್ನು ಕೇಳಿದರು.
ಅದಕ್ಕೆ ಯೆಹೋವ ದೇವರು, “ಯೆಹೂದ ಗೋತ್ರದವರು ಮೊದಲು ಹೋಗಬೇಕು,” ಎಂದರು.
19 ಆಗ ಇಸ್ರಾಯೇಲರು ಉದಯದಲ್ಲಿ ಎದ್ದು ಗಿಬೆಯಕ್ಕೆ ಎದುರಾಗಿ ಪಾಳೆಯಮಾಡಿಕೊಂಡರು. 20 ಇಸ್ರಾಯೇಲಿನ ಮನುಷ್ಯರು ಗಿಬೆಯದ ಬಳಿಯಲ್ಲಿ ಬೆನ್ಯಾಮೀನ್ಯರೊಡನೆ ಯುದ್ಧಮಾಡುವದಕ್ಕೋಸ್ಕರ ವ್ಯೂಹ ಕಟ್ಟಿದರು. 21 ಆಗ ಬೆನ್ಯಾಮೀನ್ಯರು ಗಿಬೆಯದಿಂದ ಹೊರಟು, ಇಸ್ರಾಯೇಲರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಆ ದಿವಸದಲ್ಲಿ ನೆಲಕ್ಕೆ ಬೀಳುವಂತೆ ಸಂಹರಿಸಿದರು. 22 ಇಸ್ರಾಯೇಲರಾದ ಜನರು ಬಲಗೊಂಡು, ಮೊದಲನೆಯ ದಿವಸ ಯುದ್ಧಕ್ಕೆ ವ್ಯೂಹ ಕಟ್ಟಿದ ಸ್ಥಳದಲ್ಲಿ ತಿರುಗಿ ವ್ಯೂಹ ಕಟ್ಟಿದರು. 23 ಇಸ್ರಾಯೇಲರು ಯೆಹೋವ ದೇವರ ಬಳಿಗೆ ಹೋಗಿ, ಅವರ ಮುಂದೆ ಸಂಜೆಯವರೆಗೆ ಅತ್ತು, “ನಮ್ಮ ಸಹೋದರರಾದ ಬೆನ್ಯಾಮೀನ್ಯರ ಸಂಗಡ ಯುದ್ಧಮಾಡುವುದಕ್ಕೆ ಹೋಗಬೇಕೋ?” ಎಂದು ಯೆಹೋವ ದೇವರನ್ನು ಕೇಳಿದರು.
ಅದಕ್ಕೆ ಯೆಹೋವ ದೇವರು, “ಅವರ ಮೇಲೆ ಹೋಗಿರಿ,” ಎಂದರು. ಎರಡನೆಯ ದಿವಸದಲ್ಲಿ ಇಸ್ರಾಯೇಲರು ಬೆನ್ಯಾಮೀನ್ಯರ ಬಳಿಗೆ ಬಂದರು.
24 ಆಗ ಬೆನ್ಯಾಮೀನನವರು ಆ ಎರಡನೆಯ ದಿವಸದಲ್ಲಿ ಗಿಬೆಯದಿಂದ ಅವರಿಗೆ ಎದುರಾಗಿ ಹೊರಟುಬಂದು, 25 ಬೆನ್ಯಾಮೀನ್ಯರು ಎರಡನೆಯ ದಿನದಲ್ಲಿಯೂ ಗಿಬೆಯಾದಿಂದ ಹೊರಗೆ ಬಂದು ಇಸ್ರಾಯೇಲರಲ್ಲಿ ಖಡ್ಗ ಹಿಡಿಯುವ ಹದಿನೆಂಟು ಸಾವಿರ ಜನರನ್ನು ನೆಲಕ್ಕೆ ಉರುಳಿಸಿದರು.
26 ಆಗ ಇಸ್ರಾಯೇಲರೆಲ್ಲರೂ ಸಮಸ್ತ ಸೇನೆಯೂ ಬೇತೇಲಿಗೆ ಹೊರಟು, ಅಲ್ಲಿ ಅಳುತ್ತಾ ಯೆಹೋವ ದೇವರ ಮುಂದೆ ಕುಳಿತುಕೊಂಡು, ಆ ಸಂಜೆಯವರೆಗೆ ಉಪವಾಸವಾಗಿದ್ದು, ಯೆಹೋವ ದೇವರಿಗೆ ದಹನಬಲಿಗಳನ್ನೂ ಸಮಾಧಾನದ ಸಮರ್ಪಣೆಗಳನ್ನೂ ಅರ್ಪಿಸಿದರು. 27 ಏಕೆಂದರೆ ಆ ದಿವಸಗಳಲ್ಲಿ ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿದ್ದದರಿಂದಲೂ, 28 ಆರೋನನ ಮೊಮ್ಮಗನೂ, ಎಲಿಯಾಜರನ ಮಗನೂ ಆದ ಫೀನೆಹಾಸನು ಅವರ ಮುಂದೆ ನಿಂತಿದ್ದದರಿಂದಲೂ, ಇಸ್ರಾಯೇಲರು, “ನಮ್ಮ ಸಹೋದರರಾದ ಬೆನ್ಯಾಮೀನ್ಯರಿಗೆ ವಿರೋಧವಾಗಿ ಇನ್ನೂ ಯುದ್ಧಮಾಡುವುದಕ್ಕೆ ಹೋಗಬೇಕೋ ಬೇಡವೋ?” ಎಂದು ದೇವರನ್ನು ಕೇಳಿಕೊಂಡರು.
ಯೆಹೋವ ದೇವರು, “ಹೋಗಿರಿ, ಏಕೆಂದರೆ ನಾಳೆ ಅವರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಡುವೆನು,” ಎಂದರು.
29 ಇಸ್ರಾಯೇಲರು ಗಿಬೆಯದ ಸುತ್ತಲೂ ಹೊಂಚಿ ನೋಡುವವರನ್ನು ಇಟ್ಟರು. 30 ಮೂರನೆಯ ದಿವಸದಲ್ಲಿ ಇಸ್ರಾಯೇಲರು ಬೆನ್ಯಾಮೀನ್ಯರಿಗೆ ಎದುರಾಗಿ ಹೋಗಿ ಮೊದಲು ಎರಡು ಸಾರಿ ಮಾಡಿದ ಹಾಗೆಯೇ, ಗಿಬೆಯದ ಸಮೀಪದಲ್ಲಿ ವ್ಯೂಹವನ್ನು ಕಟ್ಟಿದರು. 31 ಆಗ ಬೆನ್ಯಾಮೀನ್ಯರು ಇಸ್ರಾಯೇಲ್ ಜನಕ್ಕೆ ಎದುರಾಗಿ ಹೊರಟು, ಪಟ್ಟಣದ ಬಳಿಯಿಂದ ಹೊರಬಂದು, ಅಡವಿಯಲ್ಲಿ ಹೆದ್ದಾರಿಯಾದ ಬೇತೇಲಿಗೂ ಗಿಬೆಯಕ್ಕೂ ಹೋಗುವ ಎರಡು ಮಾರ್ಗಗಳಲ್ಲಿ ಇಸ್ರಾಯೇಲ್ ಜನರೊಳಗೆ ಮೊದಲಿನ ಹಾಗೆಯೇ ಹೆಚ್ಚು ಕಡಿಮೆ ಮೂವತ್ತು ಜನರನ್ನು ಹೊಡೆದು ಕೊಲ್ಲಲಾರಂಭಿಸಿದಾಗ, 32 ಬೆನ್ಯಾಮೀನ್ಯರು, “ಅವರು ಮೊದಲಿನ ಹಾಗೆಯೇ ನಮ್ಮ ಮುಂದೆ ಸೋತುಹೋಗುತ್ತಾರೆ,” ಎಂದುಕೊಂಡರು. ಆದರೆ ಇಸ್ರಾಯೇಲರು, “ಅವರನ್ನು ಪಟ್ಟಣದ ಬಳಿಯಿಂದ ಹೆದ್ದಾರಿಗಳಿಗೆ ಎಳೆದುಕೊಳ್ಳುವ ಹಾಗೆ ನಾವು ಹಿಂದಕ್ಕೆ ಓಡಿಹೋಗೋಣ,” ಎಂದುಕೊಂಡರು.
33 ಇಸ್ರಾಯೇಲರೆಲ್ಲರೂ ತಮ್ಮ ಸ್ಥಳದಿಂದ ಎದ್ದು, ಬಾಳ್ ತಾಮಾರಿನಲ್ಲಿ ವ್ಯೂಹವನ್ನು ಕಟ್ಟಿದರು. ಆಗ ಗಿಬೆಯದ ಗವಿಯಲ್ಲಿ ಹೊಂಚಿ ನೋಡುತ್ತಿದ್ದ ಇಸ್ರಾಯೇಲರು ಹೊರಟು ಬಂದರು. 34 ಅವರಲ್ಲಿ ಆರಿಸಿದ ಹತ್ತು ಸಾವಿರ ಮನುಷ್ಯರು ಗಿಬೆಯಕ್ಕೆ ವಿರೋಧವಾಗಿ ಬಂದರು. ಯುದ್ಧವು ಘೋರವಾಗಿತ್ತು. ಆದರೆ ಬೆನ್ಯಾಮೀನ್ಯರು, ಕೇಡು ತಮಗೆ ಸಮೀಪವಾಗಿತ್ತೆಂದು ಅರಿಯದೆ ಇದ್ದರು. 35 ಆಗ ಯೆಹೋವ ದೇವರು ಇಸ್ರಾಯೇಲಿನ ಮುಂದೆ ಬೆನ್ಯಾಮೀನ್ಯರನ್ನು ಹೊಡೆದರು. ಆ ದಿವಸದಲ್ಲಿ ಇಸ್ರಾಯೇಲರು ಬೆನ್ಯಾಮೀನ್ಯರಲ್ಲಿ ಖಡ್ಗ ಹಿಡಿಯುವವರಾದ ಇಪ್ಪತ್ತೈದು ಸಾವಿರದ ನೂರು ಮನುಷ್ಯರನ್ನು ನಾಶಮಾಡಿದರು. 36 ತಾವು ಸೋತುಹೋದೆವೆಂಬುದು ಹೀಗೆ ಬೆನ್ಯಾಮೀನ್ಯರಿಗೆ ಆಗ ತಿಳಿಯಿತು.
ಏಕೆಂದರೆ ಇಸ್ರಾಯೇಲರು ಗಿಬೆಯದ ಹತ್ತಿರ ಹೊಂಚು ಹಾಕುವದಕ್ಕೆ ಇಟ್ಟ ಜನರನ್ನು ನಂಬಿದ್ದರು. ಆದುದರಿಂದ ತಮ್ಮ ಸ್ಥಳವನ್ನು ಬಿಟ್ಟು ಬೆನ್ಯಾಮೀನ್ಯರ ಮುಂದೆ ಓಡಿಹೋದರು. 37 ಆಗ ಹೊಂಚು ಹಾಕಿಕೊಂಡಿದ್ದವರು ತೀವ್ರವಾಗಿ ಗಿಬೆಯಕ್ಕೆ ಸಾಲಾಗಿ ಹೊರಟು, ಪಟ್ಟಣದಲ್ಲಿರುವವರೆಲ್ಲರನ್ನು ಖಡ್ಗದಿಂದ ಸಂಹರಿಸಿದರು. 38 ಇಸ್ರಾಯೇಲರು ಹೊಂಚು ಹಾಕಿಕೊಂಡಿದ್ದವರ ಸಂಗಡ ನೇಮಿಸಿಕೊಂಡ ಗುರುತೇನೆಂದರೆ, ಪಟ್ಟಣದಲ್ಲಿಂದ ಮಹಾ ದೊಡ್ಡ ಹೊಗೆಯನ್ನು ಏಳ ಮಾಡುವುದೇ. 39 ತದನಂತರ ಇಸ್ರಾಯೇಲರು ಪ್ರತಿದಾಳಿ ನಡೆಸಿದರು.
ಬೆನ್ಯಾಮೀನ್ಯರು ಇಸ್ರಾಯೇಲರನ್ನು ಹೊಡೆಯುವುದಕ್ಕೆ ಪ್ರಾರಂಭಿಸಿ, ಅವರಲ್ಲಿ ಹೆಚ್ಚು ಕಡಿಮೆ ಮೂವತ್ತು ಜನರನ್ನು ಕೊಂದಾಗ, “ಮೊದಲು ಯುದ್ಧದಲ್ಲಿ ಆದ ಹಾಗೆ ನಿಶ್ಚಯವಾಗಿ ಅವರು ನಮ್ಮ ಮುಂದೆ ಸೋತುಹೋದರು,” ಎಂದು ಅಂದುಕೊಂಡರು. 40 ಆದರೆ ಪಟ್ಟಣದೊಳಗಿಂದ ಹೊಗೆಯ ಸ್ತಂಭ ಸಹಿತವಾಗಿ ಏಳುವುದಕ್ಕೆ ಪ್ರಾರಂಭಿಸಿತು. ಬೆನ್ಯಾಮೀನ್ಯರು ಹಿಂದಕ್ಕೆ ತಿರುಗಿ ನೋಡಿದಾಗ, ಪಟ್ಟಣದ ಜ್ವಾಲೆಯು ಆಕಾಶಕ್ಕೆ ಏರಿತು. 41 ಇಸ್ರಾಯೇಲರು ತಿರುಗಿಕೊಂಡು ಬಂದಾಗ, ಬೆನ್ಯಾಮೀನನ ಜನರು ತಲ್ಲಣಗೊಂಡರು, ಏಕೆಂದರೆ ಕೇಡು ತಮ್ಮ ಮೇಲೆ ಪ್ರಾಪ್ತವಾಯಿತೆಂದು ಕಂಡರು. 42 ಅವರು ಇಸ್ರಾಯೇಲರ ಮುಂದೆ ಮರುಭೂಮಿಯ ಮಾರ್ಗಕ್ಕೆ ತಿರುಗಿಕೊಂಡು ಹೋದರು. ಆದರೆ ಸೈನಿಕರು ಅವರನ್ನು ಹಿಡಿದು, ಪಟ್ಟಣದಿಂದ ಹೊರಟು ಬರುವ ಜನರನ್ನು ಮಧ್ಯದಲ್ಲೇ ಕೊಂದುಹಾಕಿದರು. 43 ಹೀಗೆ ಬೆನ್ಯಾಮೀನ್ಯರನ್ನು ಸುತ್ತಲೂ ಮುತ್ತಿಕೊಂಡು, ಅವರನ್ನು ಹಿಂದಟ್ಟಿ, ಗಿಬೆಯ ಊರಿನ ಪೂರ್ವದಿಕ್ಕಿನಲ್ಲಿ ಅವಕಾಶವಿಲ್ಲದೆ ತುಳಿದು ಹಾಕಿದರು. 44 ಬೆನ್ಯಾಮೀನ್ಯರಲ್ಲಿ ಹದಿನೆಂಟು ಸಾವಿರ ಜನರು ಸತ್ತರು. ಇವರೆಲ್ಲರೂ ಪರಾಕ್ರಮಶಾಲಿಗಳಾಗಿದ್ದರು. 45 ಆದರೆ ಕೆಲವರು ತಿರುಗಿಕೊಂಡು ಮರುಭೂಮಿಯಲ್ಲಿರುವ ರಿಮ್ಮೋನ್ ಬಂಡೆಗೆ ಓಡಿಹೋದರು. ಅದರಲ್ಲಿ ಐದು ಸಾವಿರ ಜನರನ್ನು ಹೆದ್ದಾರಿಗಳಲ್ಲಿ ಹಕ್ಕಲಾರಿಸಿ ಕೊಂದುಹಾಕಿದರು. ಉಳಿದವರನ್ನು ಗಿದೋಮಿನವರೆಗೆ ಹಿಂದಟ್ಟಿ ಅವರಲ್ಲಿ ಎರಡು ಸಾವಿರ ಮನುಷ್ಯರನ್ನು ವಧಿಸಿದರು.
46 ಹೀಗೆಯೇ ಬೆನ್ಯಾಮೀನ್ಯರೊಳಗೆ ಆ ದಿವಸದಲ್ಲಿ ಬಿದ್ದವರೆಲ್ಲರೂ ಖಡ್ಗ ಹಿಡಿಯುವ ಇಪ್ಪತ್ತೈದು ಸಾವಿರ ಜನರು. ಇವರೆಲ್ಲರೂ ಪರಾಕ್ರಮಶಾಲಿಗಳಾಗಿದ್ದರು. 47 ಆದರೆ ಆರುನೂರು ಮಂದಿ ತಿರುಗಿಕೊಂಡು ಮರುಭೂಮಿಯಲ್ಲಿರುವ ರಿಮ್ಮೋನ್ ಬೆಟ್ಟಕ್ಕೆ ಓಡಿಹೋಗಿ, ರಿಮ್ಮೋನ್ ಗುಡ್ಡದಲ್ಲಿ ನಾಲ್ಕು ತಿಂಗಳು ವಾಸವಾಗಿದ್ದರು. 48 ಇಸ್ರಾಯೇಲರು ಬೆನ್ಯಾಮೀನ್ಯರ ಮೇಲೆ ತಿರುಗಿ ಹೋಗಿ, ಪಟ್ಟಣದಲ್ಲಿ ಜನರನ್ನೂ, ಪಶುಗಳನ್ನೂ, ಕೈಗೆ ಸಿಕ್ಕಿದ್ದೆಲ್ಲವನ್ನೂ ಸಂಹರಿಸಿ, ತಾವು ಹೋದ ಸಮಸ್ತ ಪಟ್ಟಣಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟರು.