4
ದೆಬೋರಾ
ಏಹೂದನು ಮರಣಹೊಂದಿದನಂತರ ಇಸ್ರಾಯೇಲರು ತಿರುಗಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರು. ಆದ್ದರಿಂದ ಯೆಹೋವ ದೇವರು ಅವರನ್ನು ಹಾಚೋರಿನಲ್ಲಿ ಆಳುವ ಕಾನಾನಿನ ಅರಸನಾದ ಯಾಬೀನನ ಕೈಗೆ ಮಾರಿಬಿಟ್ಟರು. ಅವನ ಸೈನ್ಯಕ್ಕೆ ಜನಾಂಗಗಳ ಪಟ್ಟಣವಾದ ಹರೋಷೆತ್ ಹಗ್ಗೊಯಿಮ್‌ನಲ್ಲಿ ವಾಸವಾಗಿರುವ ಸೀಸೆರನು ಅಧಿಪತಿಯಾಗಿದ್ದನು. ಆಗ ಇಸ್ರಾಯೇಲರು ಯೆಹೋವ ದೇವರಿಗೆ ಮೊರೆಯಿಟ್ಟರು. ಅವನಿಗೆ ಒಂಬೈನೂರು ಕಬ್ಬಿಣದ ರಥಗಳಿದ್ದವು. ಅವನು ಇಸ್ರಾಯೇಲರನ್ನು ಇಪ್ಪತ್ತು ವರುಷ ಬಲವಾಗಿ ಬಾಧೆಪಡಿಸಿದನು.
ಆ ಕಾಲದಲ್ಲಿ ಲಪ್ಪೀದೋತನ ಹೆಂಡತಿಯಾದ ದೆಬೋರಳೆಂಬ ಪ್ರವಾದಿನಿ ಇಸ್ರಾಯೇಲರಿಗೆ ನ್ಯಾಯ ತೀರಿಸುತ್ತಿದ್ದಳು. ದೆಬೋರಳು ರಾಮಕ್ಕೂ ಬೇತೇಲಿಗೂ ಮಧ್ಯದಲ್ಲಿ ಎಫ್ರಾಯೀಮ್ ಬೆಟ್ಟದಲ್ಲಿ ಖರ್ಜೂರದ ಮರದ ಕೆಳಗೆ ವಾಸಿಸುತ್ತಿದ್ದಳು. ಇಸ್ರಾಯೇಲರು ಅವಳ ಬಳಿಗೆ ನ್ಯಾಯಕ್ಕಾಗಿ ಬರುತ್ತಿದ್ದರು. ಅವಳು ಕೆದೆಷ್ ನಫ್ತಾಲಿಯಲ್ಲಿರುವ ಅಬೀನೋವಮನ ಮಗ ಬಾರಾಕನನ್ನು ಕರೆಯಿಸಿ ಅವನಿಗೆ, “ಇಸ್ರಾಯೇಲ್ ದೇವರಾದ ಯೆಹೋವ ದೇವರು ನಿನಗೆ ಆಜ್ಞಾಪಿಸಿದ್ದೇನೆಂದರೆ, ‘ನೀನು ನಫ್ತಾಲಿಯರಲ್ಲಿಯು, ಜೆಬುಲೂನರಲ್ಲಿಯು ಹತ್ತು ಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್ ಬೆಟ್ಟಕ್ಕೆ ಹೋಗು. ನಾನು ಯಾಬೀನನ ಸೇನಾಧಿಪತಿಯಾದ ಸೀಸೆರನನ್ನೂ, ಅವನ ರಥಗಳನ್ನೂ, ಅವನ ಸೈನ್ಯವನ್ನೂ ಕೀಷೋನ್ ಹಳ್ಳಕ್ಕೆ ಎಳೆದುಕೊಂಡು ಬಂದು, ನಿನ್ನ ಕೈಗೆ ಒಪ್ಪಿಸುವೆನು,’ ಎಂದು ಆಜ್ಞಾಪಿಸಿದನು,” ಎಂದಳು.
ಬಾರಾಕನು ಅವಳಿಗೆ, “ನೀನು ನನ್ನ ಸಂಗಡ ಬಂದರೆ ನಾನು ಹೋಗುವೆನು. ನೀನು ನನ್ನ ಸಂಗಡ ಬಾರದೆ ಇದ್ದರೆ ನಾನು ಹೋಗುವುದಿಲ್ಲ,” ಎಂದನು.
ಅದಕ್ಕವಳು, “ನಾನು ನಿನ್ನ ಸಂಗಡ ಖಂಡಿತವಾಗಿ ಬರುವೆನು. ಆದರೆ ನೀನು ಹೋಗುವ ಪ್ರಯಾಣದಿಂದ ಉಂಟಾಗುವ ಘನತೆ ನಿನ್ನದಾಗಿರುವುದಿಲ್ಲ. ಏಕೆಂದರೆ ಯೆಹೋವ ದೇವರು ಸೀಸೆರನನ್ನು ಒಬ್ಬ ಸ್ತ್ರೀಯ ಕೈಗೆ ಒಪ್ಪಿಸಿಬಿಡುವೆನು,” ಎಂದು ಹೇಳಿದಳು. ದೆಬೋರಳು ಎದ್ದು ಬಾರಾಕನ ಸಂಗಡ ಕೆದೆಷಿಗೆ ಹೋದಳು. 10 ಬಾರಾಕನು ಜೆಬುಲೂನನ್ನೂ, ನಫ್ತಾಲಿಯನ್ನೂ ಕೆದೆಷಿಗೆ ಕರೆದನು. ಅವನು ಹತ್ತು ಸಾವಿರ ಜನರಸಹಿತವಾಗಿ ಹೋದನು. ದೆಬೋರಳು ಅವನ ಸಂಗಡ ಹೋದಳು.
11 ಮೋಶೆಯ ಅಳಿಯನಾದ ಹೊಬಾಬನ ಮಕ್ಕಳಲ್ಲಿ ಸೇರಿದ ಕೇನ್ಯನಾದ ಹೆಬೆರನು ಕೇನ್ಯರನ್ನು ಬಿಟ್ಟು, ತನ್ನನ್ನು ಪ್ರತ್ಯೇಕಿಸಿ, ಕೆದೆಷಿನ ಬಳಿಯಲ್ಲಿರುವ ಚಾನನ್ನೀಮ್ ಎಂಬ ಊರಲ್ಲಿ ಅಲ್ಲೋನ್ ಮರದ ಬಳಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು.
12 ಆಗ ಅಬೀನೋವಮನ ಮಗನಾದ ಬಾರಾಕನು ತಾಬೋರ್ ಬೆಟ್ಟದಲ್ಲಿ ಏರಿದನೆಂದು ಸೀಸೆರನಿಗೆ ತಿಳಿಸಲಾಯಿತು. 13 ಆದ್ದರಿಂದ ಸೀಸೆರನು ಒಂಬೈನೂರು ಕಬ್ಬಿಣದ ರಥಗಳನ್ನೂ, ತನ್ನ ಎಲ್ಲಾ ಸೈನ್ಯವನ್ನೂ ತೆಗೆದುಕೊಂಡು ಹರೋಷೆತ್ ಹಗ್ಗೋಯಿಮಿನಿಂದ ಕೀಷೋನ್ ಹಳ್ಳಕ್ಕೆ ಬಂದನು.
14 ಆಗ ದೆಬೋರಳು ಬಾರಾಕನಿಗೆ, “ನೀನು ಏಳು. ಏಕೆಂದರೆ ಯೆಹೋವ ದೇವರು ಸೀಸೆರನನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವ ದಿನವು ಇದೇ. ಯೆಹೋವ ದೇವರು ನಿನ್ನ ಮುಂದೆ ಹೊರಡಲಿಲ್ಲವೋ?” ಎಂದಳು. ಹೀಗೆ ಬಾರಾಕನು ತನ್ನ ಹಿಂದೆ ಹತ್ತು ಸಾವಿರ ಜನರನ್ನು ತೆಗೆದುಕೊಂಡು, ತಾಬೋರ್ ಬೆಟ್ಟದಿಂದ ಇಳಿದನು. 15 ಯೆಹೋವ ದೇವರು ಸೀಸೆರನನ್ನೂ, ಅವನ ಎಲ್ಲಾ ರಥಗಳನ್ನೂ, ಅವನ ಎಲ್ಲಾ ಸೈನ್ಯವನ್ನೂ ಬಾರಾಕನ ಮುಂದೆ ಖಡ್ಗದಿಂದ ಚದರಿಸಿದರು. ಸೀಸೆರನು ರಥದಿಂದ ಇಳಿದು ಓಡಿಹೋದನು.
16 ಬಾರಾಕನು ಅವನ ಸೈನ್ಯ, ರಥಗಳನ್ನು ಹರೋಷೆತ್ ಹಗ್ಗೋಯಿಮಿನವರೆಗೂ ಹಿಂದಟ್ಟಿದನು. ಸೀಸೆರನ ಸೈನ್ಯದವರೆಲ್ಲರು ಖಡ್ಗದಿಂದ ಹತರಾದರು, ಒಬ್ಬನೂ ಉಳಿಯಲಿಲ್ಲ. 17 ಆದರೆ ಸೀಸೆರನು ಕಾಲುನಡೆಯಾಗಿ ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳ ಗುಡಾರಕ್ಕೆ ಓಡಿಬಂದನು. ಏಕೆಂದರೆ ಯಾಬೀನನೆಂಬ ಹಾಚೋರಿನ ಅರಸನಿಗೂ, ಕೇನ್ಯನಾದ ಹೆಬೆರನ ಮನೆಗೂ ನಡುವೆ ಶಾಂತಿ ಇತ್ತು.
18 ಆಗ ಯಾಯೇಲಳು ಸೀಸೆರನನ್ನು ಎದುರುಗೊಳ್ಳುವುದಕ್ಕೆ ಹೋಗಿ ಅವನಿಗೆ, “ಒಳಗೆ ಬಾ, ನನ್ನ ಪ್ರಭುವೇ, ನಮ್ಮ ಬಳಿಗೆ ಬಾ, ಭಯಪಡಬೇಡ,” ಎಂದು ಹೇಳಿದಳು. ಅವನನ್ನು ಒಂದು ಕಂಬಳಿಯಿಂದ ಮುಚ್ಚಿದಳು.
19 ಸೀಸೆರನು ಅವಳಿಗೆ, “ದಯಮಾಡಿ, ನನಗೆ ಕುಡಿಯುವುದಕ್ಕೆ ಸ್ವಲ್ಪ ನೀರು ಕೊಡು, ನನಗೆ ದಾಹವಾಗಿದೆ,” ಎಂದನು. ಅವಳು ಹಾಲಿನ ಬುದ್ದಲಿಯನ್ನು ತೆರೆದು, ಅವನಿಗೆ ಕುಡಿಯುವುದಕ್ಕೆ ಕೊಟ್ಟು, ಅವನನ್ನು ಮುಚ್ಚಿದಳು.
20 ತಿರುಗಿ ಅವನು ಅವಳಿಗೆ, “ನೀನು ಬಾಗಿಲಲ್ಲಿ ನಿಂತಿರು. ಯಾವನಾದರೂ ಬಂದು, ‘ಇಲ್ಲಿ ಯಾರಾದರೂ ಇದ್ದಾರೋ?’ ಎಂದು ನಿನ್ನನ್ನು ಕೇಳಿದರೆ, ‘ಇಲ್ಲ’ ಎಂದು ಹೇಳು,” ಎಂದನು.
21 ಹೆಬೆರನ ಹೆಂಡತಿಯಾದ ಯಾಯೇಲಳು ಗುಡಾರದ ಮೊಳೆಯನ್ನು ತೆಗೆದು, ತನ್ನ ಕೈಯಲ್ಲಿ ಸುತ್ತಿಗೆಯನ್ನು ಹಿಡಿದುಕೊಂಡು, ಅವನು ಆಯಾಸದಿಂದ ನಿದ್ರೆ ಮಾಡುತ್ತಿರುವಾಗ, ಮೆಲ್ಲನೆ ಅವನ ಬಳಿಗೆ ಬಂದು, ಅವನ ತಲೆಯಲ್ಲಿ ಆ ಮೊಳೆಯನ್ನು ಹೊಡೆದು ನೆಲದಲ್ಲಿ ನಾಟಿಸಿದಳು. ಅವನು ಮರಣಹೊಂದಿದನು.
22 ಸೀಸೆರನನ್ನು ಹಿಂದಟ್ಟುವ ಬಾರಾಕನು ಬಂದನು. ಆಗ ಯಾಯೇಲಳು ಅವನನ್ನು ಎದುರುಗೊಳ್ಳುವುದಕ್ಕೆ ಹೊರಟುಹೋಗಿ ಅವನಿಗೆ, “ಬಾ, ನೀನು ಹುಡುಕುವ ಮನುಷ್ಯನನ್ನು ನಾನು ನಿನಗೆ ತೋರಿಸುವೆನು,” ಎಂದು ಹೇಳಿದಳು. ಬಾರಾಕನು ಅವಳ ಬಳಿಗೆ ಬಂದಾಗ, ಸೀಸೆರನು ಮರಣಹೊಂದಿದ್ದನು. ಮೊಳೆಯು ಅವನ ತಲೆಯಲ್ಲಿ ಹೊಡೆದಿತ್ತು.
23 ಹೀಗೆಯೇ ದೇವರು ಆ ದಿವಸದಲ್ಲಿ ಕಾನಾನ್ಯರ ಅರಸನಾದ ಯಾಬೀನನನ್ನು ಇಸ್ರಾಯೇಲರ ಮುಂದೆ ತಗ್ಗಿಸಿದರು. 24 ಇಸ್ರಾಯೇಲರ ಕೈ ಕಾನಾನ್ಯರ ಅರಸನಾದ ಯಾಬೀನನನ್ನು ಕೊಂದುಬಿಡುವ ಮಟ್ಟಿಗೂ ಹೆಚ್ಚಿ ಜಯಹೊಂದಿತು.