18
ಕುಂಬಾರನ ಮನೆಯಲ್ಲಿ
ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾದ ವಾಕ್ಯವೇನೆಂದರೆ, “ನೀನು ಎದ್ದು ಕುಂಬಾರನ ಮನೆಗೆ ಇಳಿದು ಹೋಗು. ಅಲ್ಲಿ ನಿನಗೆ ನನ್ನ ವಾಕ್ಯಗಳನ್ನು ಕೊಡುತ್ತೇನೆ,” ಎಂದರು. ಆಗ ನಾನು ಕುಂಬಾರನ ಮನೆಗೆ ಇಳಿದು ಹೋದೆನು. ಇಗೋ, ಅವನು ಚಕ್ರದ ಮೇಲೆ ಕೆಲಸ ಮಾಡುತ್ತಿದ್ದನು. ಅವನು ಮಣ್ಣಿನಿಂದ ಮಾಡಿದ ಪಾತ್ರೆ ಕುಂಬಾರನ ಕೈಯಲ್ಲಿ ಕೆಟ್ಟು ಹೋಯಿತು. ಆಗ ಕುಂಬಾರನಿಗೆ ಒಳ್ಳೆಯದೆಂದು ತೋರುವ ಪ್ರಕಾರ, ಅದನ್ನು ಮತ್ತೊಂದು ಪಾತ್ರೆಯನ್ನಾಗಿ ಮಾಡಿದನು.
ಅನಂತರ ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ, “ಈ ಇಸ್ರಾಯೇಲಿನ ಮನೆತನದವರೇ, ನಾನು ಈ ಕುಂಬಾರನ ಹಾಗೆ ನಿಮಗೆ ಮಾಡಲಾರೆನೇ, ಎಂದು ಯೆಹೋವ ದೇವರು ಅನ್ನುತ್ತಾರೆ. ಇಗೋ, ಕುಂಬಾರನ ಕೈಯಲ್ಲಿ ಮಣ್ಣು ಹೇಗೋ ಹಾಗೆಯೇ, ಓ ಇಸ್ರಾಯೇಲಿನ ಮನೆತನದವರೇ, ನನ್ನ ಕೈಯಲ್ಲಿ ನೀವು ಇದ್ದೀರಿ. ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿ ಮತ್ತು ಒಂದು ರಾಜ್ಯದ ವಿಷಯವಾಗಿ ಅದನ್ನು ಕೀಳುವುದಕ್ಕೂ ಕೆಡವುದಕ್ಕೂ ನಾಶಮಾಡುವುದಕ್ಕೂ ಮಾತಾಡುತ್ತೇನೋ, ನಾನು ಆ ಜನಾಂಗಕ್ಕೆ ವಿರೋಧವಾಗಿ ಮಾತನಾಡಿದ ತನ್ನ ಕೆಟ್ಟತನವನ್ನು ಬಿಟ್ಟು ತಿರುಗಿದರೆ, ನಾನು ಅದಕ್ಕೆ ಮಾಡಬೇಕೆಂದು ಯೋಚಿಸಿದ ಕೆಟ್ಟದ್ದನ್ನು ಕುರಿತು ಮನಸ್ಸನ್ನು ಬದಲಾಯಿಸುವೆನು. ಇದಲ್ಲದೆ ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿಯೂ ಒಂದು ರಾಜ್ಯದ ವಿಷಯವಾಗಿಯೂ ಅದನ್ನು ಕಟ್ಟುವುದಕ್ಕೂ, ನೆಡುವುದಕ್ಕೂ ಮಾತನಾಡುತ್ತೇನೋ, 10 ನನ್ನ ಸ್ವರಕ್ಕೆ ವಿಧೇಯವಾಗದೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರೆ, ನಾನು ಅದಕ್ಕೆ ಉಪಕಾರ ಮಾಡುತ್ತೇನೆಂದು ಹೇಳಿದ ಒಳ್ಳೆಯದನ್ನು ಕುರಿತು ಮನಸ್ಸನ್ನು ಬದಲಾಯಿಸುವೆನು.
11 “ಹೀಗಿರುವುದರಿಂದ ಈಗ ಯೆಹೂದದ ಮನುಷ್ಯರಿಗೂ, ಯೆರೂಸಲೇಮಿನ ನಿವಾಸಿಗಳಿಗೂ ನೀನು ಹೇಳಬೇಕಾದದ್ದೇನೆಂದರೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ನಿಮಗೆ ವಿರೋಧವಾಗಿ ಕೆಟ್ಟದ್ದನ್ನು ಕಲ್ಪಿಸುತ್ತಾ ಇದ್ದೇನೆ. ನಿಮಗೆ ವಿರೋಧವಾಗಿ ಉಪಾಯವನ್ನು ಆಲೋಚಿಸುತ್ತಾ ಇದ್ದೇನೆ. ನಿಮ್ಮ ನಿಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ಹಿಂದಿರುಗಿರಿ. ನಿಮ್ಮ ಮಾರ್ಗಗಳನ್ನೂ, ನಿಮ್ಮ ಕ್ರಿಯೆಗಳನ್ನೂ ಒಳ್ಳೆಯದಾಗಿ ಮಾಡಿರಿ. 12 ಆದರೆ ಅವರೋ ಏನೂ ಪ್ರಯೋಜನ ಇಲ್ಲ. ಏಕೆಂದರೆ ಸ್ವಂತ ಆಲೋಚನೆಗಳ ಪ್ರಕಾರ ನಡೆದುಕೊಳ್ಳುವೆವು. ನಾವೆಲ್ಲರೂ ನಮ್ಮ ದುಷ್ಟ ಹೃದಯದ ಮೊಂಡುತನವನ್ನು ಅನುಸರಿಸುತ್ತೇವೆ,’ ಎಂದರು.”
 
13 ಆದ್ದರಿಂದ ಯೆಹೋವ ದೇವರು ಹೇಳುವುದೇನೆಂದರೆ:
“ಇತರ ಜನಾಂಗಗಳಲ್ಲಿ ವಿಚಾರಿಸಿರಿ.
ಇಂಥವುಗಳನ್ನು ಯಾರು ಕೇಳಿದ್ದಾರೆ?
ಇಸ್ರಾಯೇಲೆಂಬ ಕನ್ಯೆಯು
ಮಹಾ ಭಯಂಕರವಾದದ್ದನ್ನು ಮಾಡಿದ್ದಾಳೆ.
14 ಹೊಲದ ಬಂಡೆಯಿಂದ ಬರುವ
ಲೆಬನೋನಿನ ಹಿಮವು ತಪ್ಪುವುದೇ?
ದೂರದಿಂದ ಇಳಿದು ಹರಿಯುವ
ತಂಪಾದ ಪ್ರವಾಹದ ನೀರು ಬತ್ತುವುದೇ?
15 ನನ್ನ ಜನರಾದರೋ ನನ್ನನ್ನು ಮರೆತುಬಿಟ್ಟಿದ್ದಾರೆ.
ವ್ಯರ್ಥವಾದ ವಿಗ್ರಹಗಳಿಗೆ ಧೂಪವನ್ನರ್ಪಿಸಿದ್ದಾರೆ.
ಅವು ಪುರಾತನ ಪದ್ಧತಿಯಾದ ಅವರ ಮಾರ್ಗಗಳಲ್ಲಿ
ಅವರನ್ನು ಎಡವುವಂತೆ ಮಾಡಿ,
ಮಾರ್ಗವಲ್ಲದ ಕಾಲು ದಾರಿಗಳಲ್ಲಿ
ಅವರನ್ನು ನಡೆಯುವಂತೆ ಮಾಡಿವೆ.
16 ಹೀಗೆ ತಮ್ಮ ದೇಶವನ್ನು ಹಾಳಾಗಿಯೂ,
ನಿತ್ಯವಾದ ಹಾಸ್ಯಾಸ್ಪದವಾಗಿಯೂ ಮಾಡಿದ್ದಾರೆ.
ಅದನ್ನು ಹಾದುಹೋಗುವವರೆಲ್ಲರೂ
ವಿಸ್ಮಿತರಾಗಿ ತಲೆ ಅಲ್ಲಾಡಿಸುವರು.
17 ಮೂಡಣ ಗಾಳಿಯಿಂದ ಆದ ಹಾಗೆ,
ಅವರನ್ನು ಶತ್ರುವಿನ ಮುಂದೆ ಚದರಿಸುವೆನು.
ಅವರ ಆಪತ್ತಿನ ದಿವಸದಲ್ಲಿ ಅವರಿಗೆ
ಮುಖವನ್ನಲ್ಲ ಬೆನ್ನನ್ನು ತೋರಿಸುವೆನು.”
18 ಆಗ ಜನರು, “ಬನ್ನಿರಿ, ಯೆರೆಮೀಯನಿಗೆ ವಿರೋಧವಾಗಿ ಯುಕ್ತಿಯನ್ನು ಕಲ್ಪಿಸೋಣ. ಯಾಜಕನಿಂದ ನಿಯಮ ಬೋಧನೆಯೂ, ಜ್ಞಾನಿಯಿಂದ ಆಲೋಚನೆಯೂ, ಪ್ರವಾದಿಯಿಂದ ವಾಕ್ಯವೂ ನಿಂತುಹೋಗುವುದಿಲ್ಲ. ಬನ್ನಿರಿ, ನಾಲಿಗೆಯಿಂದ ಅವನನ್ನು ಆಕ್ರಮಿಸೋಣ. ಅವನ ಮಾತುಗಳಲ್ಲಿ ಒಂದನ್ನಾದರೂ ಲಕ್ಷಿಸದೆ ಇರೋಣ,” ಎಂದು ಹೇಳಿದರು.
19 ಓ ಯೆಹೋವ ದೇವರೇ, ನನಗೆ ಕಿವಿಗೊಡು.
ನನ್ನ ಸಂಗಡ ವ್ಯಾಜ್ಯವಾಡುವವರ ಮಾತನ್ನು ಕೇಳು.
20 ಒಳ್ಳೆಯದಕ್ಕೆ ಬದಲಾಗಿ ಕೆಟ್ಟದ್ದನ್ನು ಸಲ್ಲಿಸಬಹುದೇ?
ಏಕೆಂದರೆ, ಅವರು ನನ್ನ ಪ್ರಾಣಕ್ಕೆ ಕುಳಿಯನ್ನು ಅಗೆದಿದ್ದಾರೆ.
ಅವರಿಗೋಸ್ಕರ ಒಳ್ಳೆಯದನ್ನು ಮಾತಾಡುವುದಕ್ಕೂ,
ನಿನ್ನ ಉಗ್ರವನ್ನು ಅವರಿಂದ ತಿರುಗಿಸುವುದಕ್ಕೂ
ನಾನು ನಿನ್ನ ಮುಂದೆ ನಿಂತದ್ದನ್ನು ಜ್ಞಾಪಕಮಾಡಿಕೋ.
21 ಆದ್ದರಿಂದ ಅವರ ಮಕ್ಕಳನ್ನು ಕ್ಷಾಮಕ್ಕೆ ಕೊಡು.
ಖಡ್ಗದ ಬಲದಿಂದ ಅವರ ರಕ್ತವನ್ನು ಸುರಿದುಬಿಡು.
ಅವರ ಹೆಂಡತಿಯರು ಮಕ್ಕಳಿಲ್ಲದೆ ವಿಧವೆಯರಾಗಲಿ.
ಅವರ ಗಂಡಸರು ಹತರಾಗಲಿ.
ಅವರ ಯೌವನಸ್ಥರು ಯುದ್ಧದಲ್ಲಿ ಖಡ್ಗಕ್ಕೆ ತುತ್ತಾಗಲಿ.
22 ನೀನು ಅಕಸ್ಮಾತ್ತಾಗಿ ಅವರ ಮೇಲೆ ಸೈನ್ಯವನ್ನು ತರಿಸುವಾಗ,
ಕೂಗು ಅವರ ಮನೆಗಳೊಳಗಿಂದ ಕೇಳ ಬರಲಿ.
ಏಕೆಂದರೆ, ನನ್ನನ್ನು ಹಿಡಿಯುವುದಕ್ಕೆ ಕುಳಿ ಅಗೆದಿದ್ದಾರೆ.
ನನ್ನ ಕಾಲುಗಳಿಗೆ ಉರುಲುಗಳನ್ನು ಒಡ್ಡಿದ್ದಾರೆ.
23 ಆದರೂ ಯೆಹೋವ ದೇವರೇ, ಅವರು ನನ್ನನ್ನು ಸಾಯಿಸುವುದಕ್ಕೆ
ನನಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೆಲ್ಲಾ ನೀವು ಬಲ್ಲಿರಿ.
ಅವರ ಅಕ್ರಮವನ್ನು ಮನ್ನಿಸಬೇಡಿ.
ಅವರ ಪಾಪಗಳನ್ನು ನಿನ್ನ ಸನ್ನಿಧಿಯೊಳಗಿಂದ ಅಳಿಸಿಬಿಡಬೇಡಿರಿ.
ಅವರು ನಿಮ್ಮ ಮುಂದೆ ಎಡವಿಬೀಳಲಿ.
ನಿಮ್ಮ ಕೋಪದ ಕಾಲದಲ್ಲಿ ಅವರಿಗೆ ತಕ್ಕದ್ದನ್ನು ಮಾಡಿರಿ.