29
ಸೆರೆಯಾಗಿದ್ದವರಿಗೆ ಪತ್ರ
ಪ್ರವಾದಿಯಾದ ಯೆರೆಮೀಯನು ಸೆರೆಯಲ್ಲಿರುವ ಹಿರಿಯರಲ್ಲಿ ಉಳಿದವರಿಗೂ ಯಾಜಕರಿಗೂ ಪ್ರವಾದಿಗಳಿಗೂ ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ಬಾಬಿಲೋನಿಗೆ ಒಯ್ದ ಜನರೆಲ್ಲರಿಗೂ ಅರಸನಾದ ಯೆಕೊನ್ಯನೂ ರಾಜಮಾತೆಯೂ ಕಂಚುಕಿಗಳೂ ಯೆಹೂದದ ಯೆರೂಸಲೇಮಿನ ಪ್ರಧಾನರೂ ಬಡಿಗೆಯವರೂ ಕಮ್ಮಾರರೂ ಯೆರೂಸಲೇಮನ್ನು ಬಿಟ್ಟುಹೋದ ಮೇಲೆ ಈ ಪತ್ರವನ್ನು ಬರೆದನು. ಯೆಹೂದದ ಅರಸನಾದ ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ಕಳುಹಿಸಿದ ಶಾಫಾನನ ಮಗ ಎಲ್ಲಾಸನ ಕೈಯಿಂದಲೂ ಹಿಲ್ಕೀಯನ ಮಗನಾದ ಗೆಮರೀಯನ ಕೈಯಿಂದಲೂ ಕಳುಹಿಸಿದ ಪತ್ರ:
ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಯೆರೂಸಲೇಮಿನಿಂದ ಬಾಬಿಲೋನಿಗೆ ನಾನು ಕರೆದೊಯ್ದ ಸೆರೆಯವರೆಲ್ಲರಿಗೆ ಹೇಳುವುದೇನೆಂದರೆ: “ಮನೆಗಳನ್ನು ಕಟ್ಟಿ ವಾಸಮಾಡಿರಿ. ತೋಟಗಳನ್ನು ನೆಟ್ಟು, ಅವುಗಳ ಫಲವನ್ನು ತಿನ್ನಿರಿ. ಮದುವೆಮಾಡಿಕೊಂಡು, ಪುತ್ರಪುತ್ರಿಯರನ್ನು ಪಡೆಯಿರಿ. ನಿಮ್ಮ ಪುತ್ರರಿಗೆ ಹೆಂಡತಿಯರನ್ನು ಹುಡುಕಿರಿ. ನಿಮ್ಮ ಪುತ್ರಿಯರನ್ನು ಮದುವೆಮಾಡಿಕೊಡಿರಿ; ಅವರು ಪುತ್ರಪುತ್ರಿಯರನ್ನು ಹೆರಲಿ. ಹೀಗೆ ನೀವು ಕಡಿಮೆಯಾಗದೆ, ಅಲ್ಲಿ ಹೆಚ್ಚಿರಿ. ನಾನು ನಿಮ್ಮನ್ನು ಸೆರೆಯಾಗಿ ಒಯ್ದ ಪಟ್ಟಣದ ಸಮಾಧಾನ ಮತ್ತು ಸಮೃದ್ಧಿಯನ್ನು ಹುಡುಕಿರಿ. ಅದಕ್ಕೋಸ್ಕರ ಯೆಹೋವ ದೇವರಿಗೆ ಪ್ರಾರ್ಥನೆಮಾಡಿರಿ. ಏಕೆಂದರೆ ಅದರ ಸಮಾಧಾನದಿಂದ ನಿಮಗೆ ಸಮಾಧಾನವಾಗುವುದು.” ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮ್ಮ ಮಧ್ಯದಲ್ಲಿರುವ ನಿಮ್ಮ ಪ್ರವಾದಿಗಳೂ ನಿಮ್ಮ ಶಕುನದವರೂ ನಿಮಗೆ ಮೋಸಮಾಡದಿರಲಿ. ನೀವು ಕೇಳುವ ನಿಮ್ಮ ಕನಸುಗಳಿಗೆ ಕಿವಿಗೊಡಬೇಡಿರಿ. ಏಕೆಂದರೆ ಅವರು ನಿಮಗೆ ನನ್ನ ಹೆಸರಿನಲ್ಲಿ ಸುಳ್ಳಾಗಿ ಪ್ರವಾದಿಸುತ್ತಾರೆ. ನಾನು ಅವರನ್ನು ಕಳುಹಿಸಲಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
10 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಬಾಬಿಲೋನಿನಲ್ಲಿ ಎಪ್ಪತ್ತು ವರ್ಷ ತುಂಬಿದ ಮೇಲೆ ನಿಮ್ಮನ್ನು ಪರಾಮರಿಸುವೆನು. ನನ್ನ ಒಳ್ಳೆಯ ವಾಕ್ಯವನ್ನು ನಿಮ್ಮ ವಿಷಯದಲ್ಲಿ ಸ್ಥಾಪಿಸಿ, ನಿಮ್ಮನ್ನು ತಿರುಗಿ ಈ ಸ್ಥಳಕ್ಕೆ ಬರಮಾಡುವೆನು. 11 ನಾನು ನಿಮ್ಮನ್ನು ಕುರಿತು ಮಾಡುವ ಯೋಜನೆಗಳನ್ನು ಬಲ್ಲೆನು. ಅವು ಕೇಡಿಗಲ್ಲ, ಹಿತಕ್ಕಾಗಿರುವ ಯೋಜನೆಗಳು. ನಿಮಗೆ ಭವಿಷ್ಯವನ್ನೂ, ನಿರೀಕ್ಷೆಯನ್ನೂ ಕೊಡುವುದಕ್ಕಿವೆ. 12 ಆಗ ನನ್ನನ್ನು ಕರೆಯುವಿರಿ. ಹೋಗಿ ನನಗೆ ಪ್ರಾರ್ಥನೆ ಮಾಡುವಿರಿ. ನಾನು ನಿಮಗೆ ಕಿವಿಗೊಡುವೆನು. 13 ನನ್ನನ್ನು ಹುಡುಕುವಿರಿ. ಪೂರ್ಣಹೃದಯದಿಂದ ನನ್ನನ್ನು ಹುಡುಕುವಾಗ, ನನ್ನನ್ನು ಕಂಡುಕೊಳ್ಳುವಿರಿ. 14 ನಿಮಗೆ ದೊರೆಯುವೆನು. ನಿಮ್ಮ ಸೆರೆಯನ್ನು ತಿರುಗಿಸಿ ನಾನು ನಿಮ್ಮನ್ನು ಓಡಿಸಿಬಿಟ್ಟ ಎಲ್ಲಾ ಜನಾಂಗಗಳಿಂದಲೂ, ಎಲ್ಲಾ ಸ್ಥಳಗಳಿಂದಲೂ ನಿಮ್ಮನ್ನು ಕೂಡಿಸುವೆನು. ನಾನು ಯಾವ ಸ್ಥಳದಿಂದ ನಿಮ್ಮನ್ನು ಸೆರೆಯಾಗಿ ಕಳುಹಿಸಿದೆನೋ, ಆ ಸ್ಥಳಕ್ಕೆ ನಿಮ್ಮನ್ನು ತಿರುಗಿ ಬರಮಾಡುವೆನು.”
15 ಆದರೆ, “ಯೆಹೋವ ದೇವರು ನಮಗೆ ಬಾಬಿಲೋನಿನಲ್ಲಿ ಪ್ರವಾದಿಗಳನ್ನು ಎಬ್ಬಿಸಿದ್ದಾನೆ,” ಎಂದು ನೀವು ಹೇಳಿದ್ದರಿಂದ, 16 ದಾವೀದನ ಸಿಂಹಾಸನದಲ್ಲಿ ಕೂತುಕೊಳ್ಳುವ ಅರಸನನ್ನು ಕುರಿತು, ನಿಮ್ಮ ಸಂಗಡ ಸೆರೆಗೆ ಹೊರಡದೆ, ಈ ಪಟ್ಟಣದಲ್ಲಿ ವಾಸವಾಗಿರುವ ನಿಮ್ಮ ಸಹೋದರರಾದ ಜನರೆಲ್ಲರನ್ನು ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ 17 ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, “ಇಗೋ, ನಾನು ಅವರಲ್ಲಿ ಖಡ್ಗವನ್ನೂ ಕ್ಷಾಮವನ್ನೂ ವ್ಯಾಧಿಯನ್ನೂ ಕಳುಹಿಸಿ, ಅವರನ್ನು ಕೆಟ್ಟವರನ್ನಾಗಿ ಮಾಡಿರುವುದರಿಂದ, ತಿನ್ನಕೂಡದ ಅಸಹ್ಯವಾದ ಅಂಜೂರಗಳ ಹಾಗೆ ಮಾಡುವೆನು. 18 ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಅವರನ್ನು ಹಿಂಸಿಸಿ, ನಾನು ಅವರನ್ನು ಓಡಿಸಿಬಿಟ್ಟ ಎಲ್ಲಾ ಜನಾಂಗಗಳಲ್ಲಿ ಶಾಪಕ್ಕೂ ಭಯಕ್ಕೂ ಪರಿಹಾಸ್ಯಕ್ಕೂ ನಿಂದೆಗೂ ಗುರಿಯಾಗುವ ಹಾಗೆ ಒಪ್ಪಿಸಿಬಿಡುವೆನು. 19 ಏಕೆಂದರೆ ಅವರು ನನ್ನ ವಾಕ್ಯಗಳನ್ನು ಕೇಳಲಿಲ್ಲ. ನಾನು ಅವರಿಗೆ ನನ್ನ ಸೇವಕರಾದ ಪ್ರವಾದಿಗಳನ್ನು ಬೆಳಿಗ್ಗೆ ಪುನಃ ಕಳುಹಿಸಿದೆನು. ಆದರೆ ಅವರು ಕೇಳಲಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
20 ಆದ್ದರಿಂದ ನಾನು ಯೆರೂಸಲೇಮಿನಿಂದ ಬಾಬಿಲೋನಿಗೆ ಕಳುಹಿಸಿದ ಸೆರೆಯವರೆಲ್ಲರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ, 21 ನನ್ನ ಹೆಸರಿನಲ್ಲಿ ನಿಮಗೆ ಸುಳ್ಳನ್ನು ಪ್ರವಾದಿಸುವ ಕೊಲಾಯನ ಮಗ ಅಹಾಬನ ವಿಷಯವೂ, ಮಾಸೇಯನ ಮಗ ಚಿದ್ಕೀಯನ ವಿಷಯವೂ, ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ಅವರನ್ನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿ ಒಪ್ಪಿಸುತ್ತೇನೆ. ಅವನು ಅವರನ್ನು ನಿಮ್ಮ ಕಣ್ಣುಗಳ ಮುಂದೆ ಕೊಂದುಹಾಕುವನು. 22 ಬಾಬಿಲೋನಿನಲ್ಲಿರುವ ಯೆಹೂದದ ಸೆರೆಯವರೆಲ್ಲರು ಅವರಿಂದ ಶಾಪವನ್ನು ತೆಗೆದುಕೊಂಡು, ‘ಬಾಬಿಲೋನಿನ ಅರಸನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಹಾಗೆಯೂ, ಅಹಾಬನ ಹಾಗೆಯೂ ಯೆಹೋವ ದೇವರು ನಿನಗೆ ಮಾಡಲಿ,’ ಎಂದು ಹೇಳುವರು. 23 ಏಕೆಂದರೆ ಅವರು ತಮ್ಮ ನೆರೆಯವರ ಹೆಂಡರ ಸಂಗಡ ವ್ಯಭಿಚಾರ ಮಾಡಿ, ನನ್ನ ಹೆಸರಿನಲ್ಲಿ ಸುಳ್ಳಾಗಿ ನಾನು ಅವರಿಗೆ ಆಜ್ಞಾಪಿಸದೆ ಇದ್ದ ಮಾತುಗಳನ್ನಾಡಿ, ಇಸ್ರಾಯೇಲಿನಲ್ಲಿ ನೀಚತನವನ್ನು ನಡೆಸಿದರು. ನಾನೇ ಅದನ್ನು ತಿಳಿದು ಸಾಕ್ಷಿಯಾಗಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
ಶೆಮಾಯನಿಗೆ ಸಂದೇಶ
24 ನೆಹೆಲಾಮ್ಯನಾದ ಶೆಮಾಯನಿಗೆ ನೀನು ಹೀಗೆ ಹೇಳು: 25 “ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನು ನಿನ್ನ ಹೆಸರಿನಲ್ಲಿ ಯೆರೂಸಲೇಮಿನವರೆಲ್ಲರಿಗೂ, ಮಾಸೇಯನ ಮಗ ಯಾಜಕನಾದ ಚೆಫನ್ಯನಿಗೂ ಯಾಜಕರೆಲ್ಲರಿಗೂ ಪತ್ರಗಳನ್ನು ಕಳುಹಿಸಿದೆಯಲ್ಲಾ? 26 ‘ಏಕೆಂದರೆ, ಹುಚ್ಚನಾದ ತನ್ನನ್ನು ಪ್ರವಾದಿಯಾಗಿ ಮಾಡಿಕೊಳ್ಳುವಂಥ ಪ್ರತಿ ಮನುಷ್ಯನಿಗೆ ಯೆಹೋವ ದೇವರ ಆಲಯದಲ್ಲಿ ಅಧಿಕಾರಿಗಳು ಇರುವ ಹಾಗೆಯೂ, ನೀನು ಅಂಥವರನ್ನು ಕೋಳದಲ್ಲಿಯೂ, ಸೆರೆಯಲ್ಲಿಯೂ ಇಡುವ ಹಾಗೆಯೂ, ಯೆಹೋವ ದೇವರು ಯಾಜಕನಾದ ಯೆಹೋಯಾದನಿಗೆ ಬದಲಾಗಿ ನಿನ್ನನ್ನು ಯಾಜಕನಾಗಿ ಇಟ್ಟಿದ್ದಾರೆ. 27 ಹೀಗಿರಲಾಗಿ ನಿಮಗೆ ತನ್ನನ್ನು ಪ್ರವಾದಿಯಾಗಿ ಮಾಡಿಕೊಳ್ಳುವ ಅನಾತೋತಿನವನಾದ ಯೆರೆಮೀಯನನ್ನು ನೀನು ಏಕೆ ಗದರಿಸಲಿಲ್ಲ? 28 ಏಕೆಂದರೆ, ಅವನು ಸೆರೆಯು ಬಹಳ ದೀರ್ಘವಾಗುವುದು, ಮನೆಗಳನ್ನು ಕಟ್ಟಿ ವಾಸಮಾಡಿರಿ; ತೋಟಗಳನ್ನು ನೆಟ್ಟು, ಅವುಗಳ ಫಲವನ್ನು ತಿನ್ನಿರಿ; ಎಂದು ನಮಗೆ ಬಾಬಿಲೋನಿಗೆ ಹೇಳಿ ಕಳುಹಿಸಿದ್ದಾನೆ.’ ”
29 ಆಗ ಯಾಜಕನಾದ ಚೆಫನ್ಯನು ಈ ಪತ್ರವನ್ನು ಪ್ರವಾದಿಯಾದ ಯೆರೆಮೀಯನಿಗೆ ಓದಿ ಹೇಳಿದನು. 30 ಆಗ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಬಂದಿತು: 31 “ನೀನು ಸೆರೆಯವರೆಲ್ಲರಿಗೆ ಹೇಳಿ ಕಳುಹಿಸಬೇಕಾದದ್ದೇನೆಂದರೆ, ‘ಯೆಹೋವ ದೇವರು ನೆಹೆಲಾಮ್ಯನಾದ ಶೆಮಾಯನ ವಿಷಯವಾಗಿ ಹೀಗೆ ಹೇಳುತ್ತಾರೆ. ಶೆಮಾಯನು, ನಾನು ಅವನನ್ನು ಕಳುಹಿಸದೆ ಇರುವಾಗ, ನಿಮಗೆ ಪ್ರವಾದಿಸಿ, ನಿಮ್ಮನ್ನು ಸುಳ್ಳಿನಲ್ಲಿ ನಂಬಿಕೆ ಇಡಮಾಡಿದ ಕಾರಣ, 32 ಯೆಹೋವ ದೇವರು ಹೀಗೆ ಹೇಳುತ್ತಾರೆ, ಇಗೋ, ನಾನು ನೆಹೆಲಾಮ್ಯನಾದ ಶೆಮಾಯನನ್ನೂ, ಅವನ ಸಂತಾನವನ್ನೂ ದಂಡಿಸುತ್ತೇನೆ. ಈ ಜನರೊಳಗೆ ವಾಸಿಸುವುದಕ್ಕೆ ಅವನಿಗೆ ಒಬ್ಬನೂ ಇರುವುದಿಲ್ಲ. ನಾನು ನನ್ನ ಜನರಿಗೆ ಮಾಡುವ ಒಳ್ಳೆಯದನ್ನು ಅವನು ನೋಡುವುದಿಲ್ಲವೆಂದು ಯೆಹೋವ ದೇವರು ಹೇಳುತ್ತಾರೆ. ಏಕೆಂದರೆ ಅವನು ಯೆಹೋವ ದೇವರಿಗೆ ವಿರೋಧವಾಗಿ ಬೋಧಿಸಿದ್ದಾನೆ.’ ”