37
ಸೆರೆಮನೆಯಲ್ಲಿ ಯೆರೆಮೀಯನು
ಯೋಷೀಯನ ಮಗ ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಯೆಹೂದ ದೇಶದ ಅರಸನನ್ನಾಗಿ ಮಾಡಿದನು. ಅವನು ಯೆಹೋಯಾಕೀಮನ ಮಗ ಕೊನ್ಯನಿಗೆ ಬದಲಾಗಿ, ಅರಸನಾಗಿ ಆಳಿದನು. ಆದರೆ ಅವನೂ ಅವನ ಸೇವಕರೂ ದೇಶದ ಜನರೂ ಯೆಹೋವ ದೇವರ ಪ್ರವಾದಿಯಾದ ಯೆರೆಮೀಯನಿಂದ ಹೇಳಿಸಿದ ವಾಕ್ಯಗಳಿಗೆ ಕಿವಿಗೊಡಲಿಲ್ಲ.
ಅರಸನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲನನ್ನೂ, ಯಾಜಕನಾದ ಮಾಸೇಯನ ಮಗನಾದ ಚೆಫನ್ಯನನ್ನೂ, ಪ್ರವಾದಿಯಾದ ಯೆರೆಮೀಯನ ಬಳಿಗೆ ಕಳುಹಿಸಿ, “ನಮಗೋಸ್ಕರ ನಮ್ಮ ದೇವರಾದ ಯೆಹೋವ ದೇವರನ್ನು ಪ್ರಾರ್ಥಿಸು,” ಎಂದು ಹೇಳಿಸಿದನು.
ಆಗ ಯೆರೆಮೀಯನು ಜನರೊಳಗೆ ಬರುತ್ತಾ ಹೋಗುತ್ತಾ ಇದ್ದನು. ಏಕೆಂದರೆ ಅವರು ಅವನನ್ನು ಸೆರೆಮನೆಯಲ್ಲಿ ಇಡಲಿಲ್ಲ. ಫರೋಹನ ಸೈನ್ಯವು ಈಜಿಪ್ಟಿನಿಂದ ಹೊರಟಿತು. ಯೆರೂಸಲೇಮಿಗೆ ಮುತ್ತಿಗೆ ಹಾಕುತ್ತಿದ್ದ ಕಸ್ದೀಯರು ಅದರ ಸುದ್ದಿಯನ್ನು ಕೇಳಿ, ಯೆರೂಸಲೇಮನ್ನು ಬಿಟ್ಟುಹೋದರು.
ಆಗ ಯೆಹೋವ ದೇವರ ವಾಕ್ಯವು ಪ್ರವಾದಿಯಾದ ಯೆರೆಮೀಯನಿಗೆ ಬಂದಿತು: “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಬಳಿಯಲ್ಲಿ ವಿಚಾರಿಸುವುದಕ್ಕೆ ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದೇನೆಂದರೆ, ಇಗೋ, ನಿಮ್ಮ ಸಹಾಯಕ್ಕೆ ಹೊರಟ, ‘ಫರೋಹನ ಸೈನ್ಯವು, ಅದರ ಸ್ವದೇಶವಾದ ಈಜಿಪ್ಟಿಗೆ ಹಿಂದಿರುಗುವುದು. ಕಸ್ದೀಯರು ತಿರುಗಿಕೊಂಡು, ಈ ಪಟ್ಟಣಕ್ಕೆ ವಿರೋಧವಾಗಿ ಯುದ್ಧಮಾಡಿ, ಅದನ್ನು ಹಿಡಿದು ಬೆಂಕಿಯಿಂದ ಸುಡುವರು.’
“ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಕಸ್ದೀಯರು ನಿಜವಾಗಿ ನಮ್ಮನ್ನು ಬಿಟ್ಟು ಹೋಗುವರು,’ ಎಂದುಕೊಂಡು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ; ಏಕೆಂದರೆ ಅವರು ತೊಲಗುವುದೇ ಇಲ್ಲ. 10 ನಿಮ್ಮ ಸಂಗಡ ಯುದ್ಧಮಾಡುವ ಕಸ್ದೀಯರ ಸೈನ್ಯವನ್ನೆಲ್ಲಾ ನೀವು ಹೊಡೆದಿದ್ದಾಗ್ಯೂ, ಗಾಯಪಟ್ಟ ಮನುಷ್ಯರು ಮಾತ್ರ ಅವರೊಳಗೆ ಉಳಿದಿದ್ದಾಗ್ಯೂ ಅವರೇ ತಮ್ಮ ತಮ್ಮ ಡೇರೆಗಳಲ್ಲಿ ಎದ್ದು, ಈ ಪಟ್ಟಣವನ್ನು ಬೆಂಕಿಯಿಂದ ಸುಡುವರು.”
11 ಕಸ್ದೀಯರ ದಂಡು ಫರೋಹನ ದಂಡಿನ ಭಯದ ನಿಮಿತ್ತ, ಯೆರೂಸಲೇಮನ್ನು ಬಿಟ್ಟುಹೋದ ಮೇಲೆ, 12 ಯೆರೆಮೀಯನು ಬೆನ್ಯಾಮೀನನ ದೇಶಕ್ಕೆ ಹೋಗುವುದಕ್ಕೂ, ಜನರ ಮಧ್ಯದಿಂದ ತನ್ನ ಪಾಲನ್ನು ತೆಗೆದುಕೊಳ್ಳುವುದಕ್ಕೂ ಯೆರೂಸಲೇಮಿನಿಂದ ಹೊರಟನು. 13 ಆಗ ಅವನು ಬೆನ್ಯಾಮೀನನ ಬಾಗಿಲಲ್ಲಿ ಇರುವಾಗ, ಅಲ್ಲಿ ಶೆಲೆಮ್ಯನ ಮಗನೂ ಹನನ್ಯನ ಮೊಮ್ಮಗನಾದ ಇರೀಯನೆಂಬ ಪಹರೆಯ ನಾಯಕನು ಇದ್ದನು. ಇವನು ಪ್ರವಾದಿಯಾದ ಯೆರೆಮೀಯನನ್ನು, “ನೀನು ಕಸ್ದೀಯರ ಪಕ್ಷಕ್ಕೆ ಸೇರುತ್ತೀ,” ಎಂದು ಹೇಳಿ ಹಿಡಿದನು.
14 ಆದರೆ ಯೆರೆಮೀಯನು ಹೇಳಿದ್ದೇನೆಂದರೆ, ಸುಳ್ಳು; ನಾನು ಕಸ್ದೀಯರ ಕಡೆಗೆ ಸೇರುವವನಲ್ಲ. ಆದರೆ ಇರೀಯನು ಅವನಿಗೆ ಕಿವಿಗೊಡದೆ ಯೆರೆಮೀಯನನ್ನು ಹಿಡಿದು ಪ್ರಧಾನರ ಬಳಿಗೆ ತಂದನು. 15 ಆಗ ಪ್ರಧಾನರು ಯೆರೆಮೀಯನ ಮೇಲೆ ಕೋಪಗೊಂಡು, ಅವನನ್ನು ಹೊಡೆದು, ಲೇಖಕನಾದ ಯೋನಾತಾನನ ಮನೆಯಲ್ಲಿ ಬಂಧನದಲ್ಲಿ ಇಟ್ಟರು. ಏಕೆಂದರೆ ಅದನ್ನು ಸೆರೆಮನೆಯಾಗಿ ಮಾಡಿದ್ದರು.
16 ಯೆರೆಮೀಯನು ಆ ಬಂಧಿಖಾನೆಯ ನೆಲಮನೆಗಳಲ್ಲಿ ಕೆಲವು ದಿವಸ ಇದ್ದನು. 17 ಬಳಿಕ ಅರಸ ಚಿದ್ಕೀಯನು ಅವನನ್ನು ಕರೆಯಿಸಿ, ಅರಮನೆಗೆ ಕರೆತಂದನು, “ಯೆಹೋವ ದೇವರಿಂದ ಮಾತು ಉಂಟೋ,” ಎಂದು ಹೇಳಿದನು.
ಯೆರೆಮೀಯನು, “ಹೌದು, ಉಂಟು. ನೀನು ಬಾಬಿಲೋನಿನ ಅರಸನ ಕೈಗೆಸಿಕ್ಕಿಬೀಳುವೆ,” ಎಂದನು.
18 ಇದಲ್ಲದೆ ಯೆರೆಮೀಯನು ಅರಸನಾದ ಚಿದ್ಕೀಯನಿಗೆ ಹೇಳಿದ್ದೇನೆಂದರೆ: “ನೀವು ನನ್ನನ್ನು ಸೆರೆಮನೆಯಲ್ಲಿ ಹಾಕುವ ಹಾಗೆ ನಾನು ನಿನಗೂ, ನಿನ್ನ ಸೇವಕರಿಗೂ, ಈ ಜನರಿಗೂ ವಿರೋಧವಾಗಿ ಏನು ಅಪರಾಧ ಮಾಡಿದ್ದೇನೆ? 19 ಬಾಬಿಲೋನಿನ ಅರಸನು ನಿಮ್ಮ ಮೇಲೆಯೂ, ಈ ದೇಶದ ಮೇಲೆಯೂ ಬರುವುದಿಲ್ಲವೆಂದು ನಿಮಗೆ ಪ್ರವಾದಿಸಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ? 20 ಆದ್ದರಿಂದ ಈಗ ಕಿವಿಗೊಡು. ನನ್ನ ಒಡೆಯನಾದ ಅರಸನೇ, ನನ್ನ ವಿಜ್ಞಾಪನೆ ನಿನ್ನ ಮುಂದೆ ಅಂಗೀಕಾರವಾಗಲಿ. ಲೇಖಕನಾದ ಯೋನಾತಾನನ ಮನೆಗೆ ನಾನು ಅಲ್ಲಿ ಸಾಯದ ಹಾಗೆ ನನ್ನನ್ನು ತಿರುಗಿ ಕಳುಹಿಸಬೇಡ,” ಎಂದನು.
21 ಆಗ ಅರಸನಾದ ಚಿದ್ಕೀಯನು ಯೆರೆಮೀಯನನ್ನು ಸೆರೆಮನೆಯ ಅಂಗಳದಲ್ಲಿ ಇರಿಸಬೇಕೆಂದೂ, ಪಟ್ಟಣದಲ್ಲಿರುವ ರೊಟ್ಟಿಯೆಲ್ಲಾ ಮುಗಿದು ಹೋಗುವವರೆಗೆ, ಅವನಿಗೆ ರೊಟ್ಟಿಗಾರರ ಬೀದಿಯಿಂದ ದಿನಕ್ಕೆ ಒಂದು ತುಂಡು ರೊಟ್ಟಿ ಕೊಡಬೇಕೆಂದು ಆಜ್ಞಾಪಿಸಿದನು; ಹಾಗೆಯೇ ಯೆರೆಮೀಯನು ಸೆರೆಮನೆಯ ಅಂಗಳದಲ್ಲಿ ನಿಂತನು.