4
“ಇಸ್ರಾಯೇಲೇ, ನೀನು ಹಿಂದಿರುಗುವಿಯಾದರೆ
ನನ್ನ ಕಡೆ ಹಿಂದಿರುಗಿ ಬಾ,”
ಎಂದು ಯೆಹೋವ ದೇವರು ನುಡಿಯುತ್ತಾರೆ.
“ನೀನು ನಿನ್ನ ಅಸಹ್ಯಗಳನ್ನು
ನನ್ನ ಎದುರಿನಿಂದ ತೆಗೆದುಬಿಟ್ಟರೆ, ಅಲೆದಾಡದೆ ಇರುವೆ.
ನೀನು ಸತ್ಯದಿಂದಲೂ ನ್ಯಾಯದಿಂದಲೂ ನೀತಿಯಿಂದಲೂ,
‘ಯೆಹೋವ ದೇವರ ಜೀವದಾಣೆ,’ ಎಂದು ಪ್ರಮಾಣ ಮಾಡುವೆ.
ಆಗ ರಾಷ್ಟ್ರಗಳೆಲ್ಲ ನನ್ನಿಂದ ಆಶೀರ್ವಾದ ಪಡೆಯ ಬಯಸುವರು.
ನನ್ನಲ್ಲಿಯೇ ಹೆಮ್ಮೆಪಡುವರು.”
ಏಕೆಂದರೆ ಯೆಹೋವ ದೇವರು ಯೆಹೂದದ ಮತ್ತು ಯೆರೂಸಲೇಮಿನ ಜನರಿಗೆ ಹೀಗೆ ಹೇಳುತ್ತಾರೆ:
“ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, ನಿಮ್ಮ ಬಂಜರು ಭೂಮಿಯನ್ನು ಗೆಯ್ಯಿರಿ.
ಮುಳ್ಳುಗಳಲ್ಲಿ ಬೀಜ ಬಿತ್ತಬೇಡಿರಿ.
ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ಯೆಹೋವ ದೇವರಿಗೋಸ್ಕರ ಸುನ್ನತಿ ಮಾಡಿಕೊಳ್ಳಿರಿ;
ನಿಮ್ಮ ಹೃದಯಗಳ ಮುಂದೊಗಲನ್ನು ತೆಗೆದುಹಾಕಿರಿ.
ಇಲ್ಲದಿದ್ದರೆ ನನ್ನ ಉಗ್ರವು ಬೆಂಕಿಯ ಹಾಗೆ ಹೊರಟು,
ನಿಮ್ಮ ಕ್ರಿಯೆಗಳ ಕೆಟ್ಟತನದ ನಿಮಿತ್ತ
ಯಾರೂ ಆರಿಸಲಾಗದ ಹಾಗೆ ಉರಿಯುವುದು.”
ಉತ್ತರ ದಿಕ್ಕಿನಿಂದ ಬರುವ ಆಪತ್ತು
“ಯೆಹೂದದಲ್ಲಿ ಪ್ರಚಾರಪಡಿಸಿರಿ, ಯೆರೂಸಲೇಮಿನಲ್ಲಿ ಪ್ರಕಟಿಸಿರಿ,
‘ಇಡೀ ದೇಶದಲ್ಲಿ ತುತೂರಿ ಊದಿರಿ!’ ಎಂದು ಹೇಳಿರಿ.
ಗಟ್ಟಿಯಾಗಿ ಹೀಗೆ ಕೂಗಿರಿ,
‘ಕೂಡಿಕೊಂಡು ಕೋಟೆಯುಳ್ಳ
ಪಟ್ಟಣಗಳಲ್ಲಿ ಪ್ರವೇಶಿಸೋಣ!’ ಎಂದು ಹೇಳಿರಿ.
ಚೀಯೋನಿನ ಕಡೆಗೆ ಧ್ವಜವನ್ನೆತ್ತಿರಿ;
ವಿಳಂಬವಿಲ್ಲದೆ ಸುರಕ್ಷತೆಗಾಗಿ ಓಡಿಹೋಗಿರಿ.
ಏಕೆಂದರೆ ನಾನು ಉತ್ತರದಿಂದ ಕೇಡನ್ನೂ,
ದೊಡ್ಡ ನಾಶವನ್ನೂ ತರುತ್ತೇನೆ.”
 
ಸಿಂಹವು ತನ್ನ ಪೊದೆಯೊಳಗಿಂದ ಏರಿ ಬರುತ್ತದೆ.
ಇತರ ಜನಾಂಗಗಳನ್ನು ನಾಶ ಮಾಡುವವನು ಹೊರಟಿದ್ದಾನೆ.
ನಿನ್ನ ದೇಶವನ್ನು ಹಾಳು ಮಾಡುವುದಕ್ಕೆ ತನ್ನ ಸ್ಥಳವನ್ನು ಬಿಟ್ಟಿದ್ದಾನೆ.
ನಿನ್ನ ಪಟ್ಟಣಗಳು ನಿವಾಸಿ ಇಲ್ಲದೆ ಪಾಳು ಬೀಳುವುದು.
ಇದಕ್ಕಾಗಿ ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ.
ಪ್ರಲಾಪಿಸಿರಿ, ಗೋಳಾಡಿರಿ.
ಯೆಹೋವ ದೇವರ ಉಗ್ರಕೋಪದ ಉರಿಯು
ನಮ್ಮಿಂದ ಹಿಂದಿರುಗಲಿಲ್ಲ.
 
ಆ ದಿವಸದಲ್ಲಿ, “ಅರಸನ ಹೃದಯವೂ ಎದೆಗುಂದುವುದು.
ಅಧಿಪತಿಯ ಹೃದಯವೂ ಕುಗ್ಗುವುದು.
ಯಾಜಕರು ಭ್ರಮೆಗೊಳ್ಳುವರು.
ಪ್ರವಾದಿಗಳು ಸ್ತಬ್ಧರಾಗುವರು,”
ಎಂದು ಯೆಹೋವ ದೇವರು ನುಡಿಯುತ್ತಾರೆ.
10 ಆಗ ನಾನು ಹೇಳಿದ್ದೇನೆಂದರೆ, “ಹಾ, ಸಾರ್ವಭೌಮ ಯೆಹೋವ ದೇವರೇ, ನಿಶ್ಚಯವಾಗಿ ನೀವು ಈ ಜನರಿಗೂ, ಯೆರೂಸಲೇಮಿಗೂ, ‘ನಿಮಗೆ ಸಮಾಧಾನವಾಗುವುದು,’ ಎಂದು ಹೇಳಿ, ಬಹಳ ಮೋಸ ಮಾಡಿದಿರಿ. ಖಡ್ಗವು ಅವರ ಕುತ್ತಿಗೆಗೆ ಬಂದಿದೆ” ಎಂದೆನು.
11 ಆ ಸಮಯದಲ್ಲಿ ಈ ಜನರಿಗೂ, ಯೆರೂಸಲೇಮಿಗೂ ಈ ಮಾತುಗಳನ್ನು ತಿಳಿಸಲಾಗುವುದು: “ಒಣ ಗಾಳಿಯು ಮರುಭೂಮಿಯ ಉನ್ನತ ಸ್ಥಳಗಳಿಂದ ನನ್ನ ಜನರ ಪುತ್ರಿಯರ ಕಡೆಗೆ ಬರುತ್ತದೆ. ಅದು ತೂರುವುದಕ್ಕೂ, ಶುದ್ಧಮಾಡುವುದಕ್ಕೂ ಆಗತಕ್ಕದ್ದಲ್ಲ. 12 ಅದಕ್ಕಿಂತ ಬಿರುಸಾದ ಗಾಳಿ ಆ ಸ್ಥಳಗಳಿಂದ ನನ್ನ ಬಳಿಗೆ ಬರುವುದು. ಈಗಲೂ ನಾನು ಅವರಿಗೆ ವಿರೋಧವಾಗಿ ನ್ಯಾಯತೀರ್ಪುಗಳನ್ನು ಕೊಡುವೆನು.”
13 ಇಗೋ, ಮೇಘಗಳ ಹಾಗೆ ಏರಿ ಬರುವನು.
ಆತನ ರಥಗಳು ಬಿರುಗಾಳಿಯ ಹಾಗೆ ಇರುವುವು.
ಆತನ ಕುದುರೆಗಳು ಹದ್ದುಗಳಿಗಿಂತ ತೀವ್ರವಾಗಿವೆ.
ನಮ್ಮ ಗತಿಯನ್ನು ಏನು ಹೇಳೋಣ, ಏಕೆಂದರೆ ಹಾಳಾದೆವು.
14 ಯೆರೂಸಲೇಮೇ, ನಿನಗೆ ರಕ್ಷಣೆಯಾಗುವ ಹಾಗೆ ನಿನ್ನ ಹೃದಯದ ಕೆಟ್ಟತನವನ್ನು ತೊಳೆದುಕೋ;
ನಿನ್ನ ವ್ಯರ್ಥ ಆಲೋಚನೆಗಳು ಎಷ್ಟರವರೆಗೆ ನಿನ್ನಲ್ಲಿ ತಂಗುವುವು.
15 ಏಕೆಂದರೆ ಒಂದು ಶಬ್ದವು ದಾನಿನಿಂದ ಪ್ರಕಟಮಾಡುತ್ತದೆ;
ಎಫ್ರಾಯೀಮಿನ ಬೆಟ್ಟದಿಂದ ಆಪತ್ತನ್ನು ತಿಳಿಯಪಡಿಸುತ್ತದೆ.
16 “ಜನಾಂಗಗಳಿಗೆ ತಿಳಿಸಿರಿ.
ಇಗೋ, ಯೆರೂಸಲೇಮಿಗೆ ವಿರೋಧವಾಗಿ ತಿಳಿಯಪಡಿಸಿರಿ.
ಏನೆಂದರೆ, ‘ಮುತ್ತಿಗೆ ಹಾಕುವ ಸೈನ್ಯದವರು ದೂರದೇಶದಿಂದ ಬರುತ್ತಾರೆ,
ಯೆಹೂದದ ಪಟ್ಟಣಗಳಿಗೆ ವಿರೋಧವಾಗಿ ಯುದ್ಧದ ಕೂಗನ್ನು ಎಬ್ಬಿಸುತ್ತಾರೆ.
17 ಹೊಲ ಕಾಯುವವರಂತೆ ಸುತ್ತಲಾಗಿ ಅವಳಿಗೆ ವಿರೋಧವಾಗಿದ್ದಾರೆ.
ಏಕೆಂದರೆ ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾಳೆಂದು,’ ”
ಎಂದು ಯೆಹೋವ ದೇವರು ಹೇಳುತ್ತಾರೆ.
18 “ನಿನ್ನ ಮಾರ್ಗವೂ, ನಿನ್ನ ಕ್ರಿಯೆಗಳೂ,
ಇವುಗಳನ್ನು ನಿನಗೆ ಉಂಟುಮಾಡಿದವು,
ಇದೇ ನಿನ್ನ ಶಿಕ್ಷೆ.
ಅದು ಕಹಿಯಾದದ್ದಲ್ಲವೋ?
ನಿನ್ನ ಹೃದಯಕ್ಕೆ ನಾಟುವುದಿಲ್ಲವೋ?”
 
19 ಓ, ನನ್ನ ಕರುಳು, ನನ್ನ ಕರುಳು!
ನಾನು ನೋವಿನಿಂದ ನರಳುತ್ತೇನೆ.
ನನ್ನ ಹೃದಯವು ನನ್ನಲ್ಲಿ ತಳಮಳಗೊಂಡಿದೆ.
ನಾನು ಮೌನವಾಗಿರಲಾರೆನು;
ಓ ನನ್ನ ಪ್ರಾಣವೇ,
ತುತೂರಿ ಶಬ್ದವನ್ನೂ,
ಯುದ್ಧದ ಆರ್ಭಟವನ್ನೂ ಕೇಳುತ್ತಿರುವೆ.
20 ನಾಶನದ ಮೇಲೆ ನಾಶನದ ಸುದ್ದಿಬರುತ್ತಿದೆ.
ದೇಶವೆಲ್ಲಾ ಹಾಳಾಯಿತು.
ಫಕ್ಕನೆ ನನ್ನ ಗುಡಾರಗಳೂ,
ಕ್ಷಣಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು.
21 ಎಷ್ಟರವರೆಗೆ ನಾನು ಯುದ್ಧದ ಧ್ವಜವನ್ನು ನೋಡುತ್ತಿರಲಿ?
ತುತೂರಿಯ ಶಬ್ದವನ್ನು ಎಷ್ಟರವರೆಗೆ ನಾನು ಕೇಳಲಿ?
 
22 “ಏಕೆಂದರೆ ನನ್ನ ಜನರು ಮೂಢರಾಗಿದ್ದಾರೆ.
ನನ್ನನ್ನು ಅವರು ಅರಿಯರು;
ಮೂರ್ಖ ಮಕ್ಕಳಾಗಿದ್ದಾರೆ,
ಅವರು ಗ್ರಹಿಕೆಯಿಲ್ಲದವರು;
ಕೆಟ್ಟದ್ದನ್ನು ಮಾಡುವುದಕ್ಕೆ ಜಾಣರಾಗಿದ್ದಾರೆ,
ಆದರೆ ಒಳ್ಳೆಯದನ್ನು ಮಾಡುವುದಕ್ಕೆ ಅರಿಯರು.”
 
23 ನಾನು ಭೂಮಿಯನ್ನು ನೋಡಿದೆನು,
ಇಗೋ, ಅದು ನಿರಾಕಾರವಾಗಿಯೂ, ಹಾಳಾಗಿಯೂ, ಶೂನ್ಯವಾಗಿಯೂ ಇತ್ತು.
ಆಕಾಶಗಳನ್ನು ಸಹ ನೋಡಿದೆನು,
ಅವುಗಳಿಗೆ ಬೆಳಕಿರಲಿಲ್ಲ.
24 ಬೆಟ್ಟಗಳನ್ನು ನೋಡಿದೆನು,
ಇಗೋ, ಅವು ನಡುಗಿದವು;
ಗುಡ್ಡಗಳು ಹಗುರವಾಗಿ ಅದುರಿದವು.
25 ನಾನು ನೋಡಿದೆನು, ಇಗೋ, ಮನುಷ್ಯನು ಇರಲಿಲ್ಲ;
ಆಕಾಶದ ಪಕ್ಷಿಗಳೆಲ್ಲಾ ಹಾರಿ ಹೋಗಿದ್ದವು.
26 ನಾನು ನೋಡಿದೆನು, ಇಗೋ, ಫಲವುಳ್ಳ ಸ್ಥಳವು ಮರುಭೂಮಿಯಾಯಿತು;
ಅದರ ಪಟ್ಟಣಗಳೆಲ್ಲಾ ಯೆಹೋವ ದೇವರ ಮುಂದೆಯೂ,
ಅವರ ಉಗ್ರಕೋಪದ ಉರಿಯ ಮುಂದೆಯೂ ಬಿದ್ದು ಹೋಗಿದ್ದವು.
27 ಏಕೆಂದರೆ ಯೆಹೋವ ದೇವರು ಹೀಗೆ ಹೇಳಿದ್ದಾರೆ:
“ದೇಶವೆಲ್ಲಾ ಹಾಳಾಗುವುದು.
ಆದರೂ ನಾನು ಅದನ್ನು ಪೂರ್ಣ ನಾಶ ಮಾಡಿಲ್ಲ.
28 ಇದರ ನಿಮಿತ್ತ ಭೂಮಿಯು ದುಃಖಿಸುವುದು.
ಮೇಲಿರುವ ಆಕಾಶವು ಕಪ್ಪಾಗುವುದು.
ಏಕೆಂದರೆ ನಾನು ಅದನ್ನು ಹೇಳಿದ್ದರಿಂದ ನಿಶ್ಚಯಿಸಿದ್ದೇನೆ.
ಮಾನಸಾಂತರ ಪಡುವುದಿಲ್ಲ. ಇಲ್ಲವೆ ಅದರಿಂದ ಹಿಂದಿರುಗುವುದಿಲ್ಲ.”
 
29 ರಾವುತರ ಮತ್ತು ಬಿಲ್ಲಿನವರ ಶಬ್ದದ ನಿಮಿತ್ತ
ಪಟ್ಟಣವೆಲ್ಲಾ ಓಡಿ ಹೋಗುವುದು.
ಪೊದೆಗಳಲ್ಲಿ ಹೊಕ್ಕು,
ಬಂಡೆಗಳನ್ನು ಹತ್ತುವರು.
ಪಟ್ಟಣಗಳೆಲ್ಲಾ ನಾಶವಾಗುವುವು.
ಅವುಗಳಲ್ಲಿ ಒಬ್ಬನಾದರೂ ವಾಸಮಾಡನು.
 
30 ಆಗ ನೀನು ನಿರ್ಜನನಾದಾಗ ಏನು ಮಾಡುವೆ?
ನೀನು ಕಡುಕೆಂಪು ಬಣ್ಣದ ವಸ್ತ್ರವನ್ನು ತೊಟ್ಟುಕೊಂಡರೇನು?
ಚಿನ್ನದ ಆಭರಣಗಳಿಂದ ನಿನ್ನನ್ನು ಅಲಂಕರಿಸಿಕೊಂಡರೇನು?
ಕಾಡಿಗೆಯಿಂದ ಕಣ್ಣುಗಳನ್ನು ಅಗಲಿಸಿಕೊಂಡು ಶೃಂಗರಿಸಿಕೊಂಡರೇನು?
ನೀವು ವ್ಯರ್ಥವಾಗಿ ನಿನ್ನನ್ನು ಅಲಂಕರಿಸಿಕೊಳ್ಳುತ್ತಿ.
ನಿನ್ನ ಪ್ರೇಮಿಗಳು ನಿನ್ನನ್ನು ತಿರಸ್ಕರಿಸುತ್ತಾರೆ;
ಅವರು ನಿನ್ನನ್ನು ಕೊಲ್ಲಲು ಬಯಸುತ್ತಾರೆ.
 
31 ಏಕೆಂದರೆ ಪ್ರಸವವೇದನೆ ಪಡುವವಳಂತೆ,
ಚೊಚ್ಚಲನ್ನು ಹೆರುವವಳ ಸಂಕಟಕ್ಕೆ ಸಮಾನವಾಗಿರುವ
ಚೀಯೋನಿನ ಮಗಳ ಕಿರಿಚುವ ಕೂಗನ್ನು ಕೇಳಿದ್ದೇನೆ.
ಆಕೆಯು ಗೋಳಾಡುತ್ತಾಳೆ, ಕೈಗಳನ್ನು ಚಾಚಿ,
“ಅಯ್ಯೋ, ನನಗೀಗ ಕಷ್ಟ!
ಕೊಲೆಗಾರರ ನಿಮಿತ್ತ ನನ್ನ ಪ್ರಾಣವು ಬೇಸರಗೊಳ್ಳುತ್ತದೆ,”
ಎಂದು ಅರಚಿಕೊಳ್ಳುತ್ತಾಳೆ.