6
ಆಗ ಯೆರಿಕೋವಿನ ಜನರು ಇಸ್ರಾಯೇಲರ ನಿಮಿತ್ತವಾಗಿ, ಒಬ್ಬರೂ ಹೊರಗೆ ಬಾರದ ಹಾಗೆಯೂ ಒಳಗೆ ಹೋಗದ ಹಾಗೆಯೂ ಯೆರಿಕೋ ಪಟ್ಟಣದ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿದರು.
ಆಗ ಯೆಹೋವ ದೇವರು ಯೆಹೋಶುವನಿಗೆ, “ನೋಡು, ಯೆರಿಕೋವನ್ನೂ ಅದರ ಅರಸನನ್ನೂ ಯುದ್ಧ ವೀರರನ್ನೂ ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ. ಯುದ್ಧ ಸನ್ನದ್ಧರಾದ ನೀವೆಲ್ಲರೂ ಪಟ್ಟಣವನ್ನು ಒಂದು ಸಾರಿ ಸುತ್ತಬೇಕು. ಈ ಪ್ರಕಾರ ಆರು ದಿವಸ ಮಾಡಬೇಕು. ಏಳುಮಂದಿ ಯಾಜಕರು ಹೊತ್ತುಕೊಂಡಿದ್ದ ಮಂಜೂಷದ ಮುಂದೆ ಟಗರುಗಳ ಏಳು ಕೊಂಬುಗಳ ತುತೂರಿಗಳನ್ನು ಹಿಡಿದುಕೊಂಡು ಹೋಗಬೇಕು. ಆದರೆ ಅವರು ಏಳನೆಯ ದಿವಸ ಪಟ್ಟಣವನ್ನು ಏಳು ಸಾರಿ ಸುತ್ತಿ ಬರಬೇಕು. ಯಾಜಕರು ತುತೂರಿಗಳನ್ನು ಊದಬೇಕು. ಅವರು ಟಗರು ಕೊಂಬುಗಳ ತುತೂರಿಗಳಿಂದ ದೀರ್ಘಧ್ವನಿಗೈಯುವಾಗ, ಆ ತುತೂರಿಯ ಧ್ವನಿಯನ್ನು ಕೇಳುವ ಜನರೆಲ್ಲರೂ ಮಹಾ ರಭಸದಿಂದ ಆರ್ಭಟಿಸಬೇಕು. ಆಗ ಆ ಪಟ್ಟಣದ ಗೋಡೆಯು ನೆಲಸಮವಾಗಿ ಬಿದ್ದುಹೋಗುವುದು. ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಒಳಗೆ ನುಗ್ಗಿಹೋಗಬಹುದು,” ಎಂದು ಹೇಳಿದರು.
ಆದ್ದರಿಂದ ನೂನನ ಮಗನಾದ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ, “ನೀವು ಒಡಂಬಡಿಕೆಯ ಮಂಜೂಷವನ್ನು ಎತ್ತಿಕೊಳ್ಳಿರಿ. ಏಳುಮಂದಿ ಯಾಜಕರು ಏಳು ಟಗರು ಕೊಂಬುಗಳ ತುತೂರಿಗಳೊಂದಿಗೆ ಯೆಹೋವ ದೇವರ ಮಂಜೂಷದ ಮುಂದೆ ಹೋಗಲಿ,” ಎಂದನು. ಜನರಿಗೆ, “ನೀವು ಹಾದು ಹೋಗಿ ಪಟ್ಟಣವನ್ನು ಸುತ್ತಿರಿ. ಯುದ್ಧಸನ್ನದ್ದರು ಯೆಹೋವ ದೇವರ ಮಂಜೂಷದ ಮುಂದೆ ಹೋಗಲಿ,” ಎಂದನು.
ಯೆಹೋಶುವನು ಜನರ ಸಂಗಡ ಮಾತನಾಡಿದ ತರುವಾಯ, ಏಳು ಟಗರು ಕೊಂಬುಗಳ ತುತೂರಿಗಳನ್ನು ಹಿಡಿದುಕೊಂಡ ಏಳುಮಂದಿ ಯಾಜಕರು ತುತೂರಿಗಳನ್ನು ಊದುತ್ತಾ ಯೆಹೋವ ದೇವರ ಮುಂದೆ ನಡೆದರು. ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಅವರನ್ನು ಹಿಂಬಾಲಿಸಿತು. ಹೀಗೆ ಯುದ್ಧ ಸನ್ನದ್ಧರಾದ ಜನರು ತುತೂರಿಗಳನ್ನು ಊದುವ ಯಾಜಕರ ಮುಂದೆ ಹೋದರು. ಯಾಜಕರು ತುತೂರಿಯನ್ನು ಊದುತ್ತಿರುವಾಗ ಹಿಂದಿನ ಸೈನ್ಯವು ಮಂಜೂಷದ ಹಿಂದೆ ನಡೆದು ಬಂತು. 10 ಯೆಹೋಶುವನು ಜನರಿಗೆ, “ನೀವು ಈಗ ಆರ್ಭಟಿಸಬಾರದು. ನಿಮ್ಮ ಶಬ್ದವು ಕೇಳಿಸಲೂಬಾರದು. ನಿಮ್ಮ ಬಾಯಿಂದ ಯಾವ ಮಾತು ಹೊರಡಲೂಬಾರದು, ನಾನು ಆರ್ಭಟಿಸಿರೆಂದು ಹೇಳುವ ದಿನದಲ್ಲಿ ಮಾತ್ರ ಆರ್ಭಟಿಸಬೇಕು,” ಎಂದು ಆಜ್ಞಾಪಿಸಿದನು. 11 ಹೀಗೆಯೇ ಯೆಹೋವ ದೇವರ ಮಂಜೂಷವು ಪಟ್ಟಣವನ್ನು ಒಂದು ಸಾರಿ ಸುತ್ತಿದ ಮೇಲೆ ಅವರು ಪಾಳೆಯಕ್ಕೆ ಬಂದು ಅಲ್ಲಿ ರಾತ್ರಿಯನ್ನು ಕಳೆದರು.
12 ಯೆಹೋಶುವನು ಮರುದಿನ ಬೆಳಿಗ್ಗೆ ಎದ್ದನು. ಯಾಜಕರು ಯೆಹೋವ ದೇವರ ಮಂಜೂಷವನ್ನು ತೆಗೆದುಕೊಂಡರು. 13 ಟಗರಿನ ಕೊಂಬುಗಳ ಏಳು ತುತೂರಿಗಳನ್ನು ಊದುತ್ತಾ ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ನಡೆಯುತ್ತಾ ಹೋದರು. ಯುದ್ಧಕ್ಕೆ ಸಿದ್ಧವಾದ ಜನರು ಅವರ ಮುಂದೆ ಹೋದರು. ಆದರೆ ಹಿಂದಿನ ಸೈನ್ಯದವರು ಯೆಹೋವ ದೇವರ ಮಂಜೂಷದ ಹಿಂದೆ ನಡೆದರು. ಯಾಜಕರು ತುತೂರಿಗಳನ್ನು ಊದುತ್ತಾ ಹೊರಟರು. 14 ಹೀಗೆ ಎರಡನೆಯ ದಿನದಲ್ಲಿ ಅವರು ಪಟ್ಟಣವನ್ನು ಒಂದು ಸಾರಿ ಸುತ್ತಿಬಂದು ಪಾಳೆಯಕ್ಕೆ ಹಿಂದಿರುಗಿದರು. ಹೀಗೆಯೇ ಆರು ದಿನ ಮಾಡಿದರು.
15 ಆದರೆ ಏಳನೆಯ ದಿನ ಸೂರ್ಯೋದಯವಾಗುವಾಗ, ಅವರು ಎದ್ದು ಪಟ್ಟಣವನ್ನು ಅದೇ ರೀತಿಯಾಗಿ ಏಳು ಸಾರಿ ಸುತ್ತಿಬಂದರು. ಆ ದಿನದಲ್ಲಿ ಮಾತ್ರವೇ ಪಟ್ಟಣವನ್ನು ಏಳು ಸಾರಿ ಸುತ್ತಿಬಂದರು. 16 ಏಳನೆಯ ಸಾರಿ ಯಾಜಕರು ತುತೂರಿಗಳನ್ನು ಊದುವಾಗ, ಯೆಹೋಶುವನು ಜನರಿಗೆ, “ಆರ್ಭಟಿಸಿರಿ! ಯೆಹೋವ ದೇವರು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾರೆ. 17 ಆದರೂ ಈ ಪಟ್ಟಣವೂ ಅದರಲ್ಲಿರುವ ಸಮಸ್ತವೂ ಯೆಹೋವ ದೇವರಿಗೆ ಅರ್ಪಿತವಾದವುಗಳು. ರಾಹಾಬಳೆಂಬ ವೇಶ್ಯೆಯೂ ಆಕೆಯ ಮನೆಯಲ್ಲಿ ಇರುವವರೆಲ್ಲರೂ ಮಾತ್ರ ಉಳಿಯಲಿ. ಏಕೆಂದರೆ ನಾವು ಕಳುಹಿಸಿದ ಗೂಢಚಾರರನ್ನು ಆಕೆಯು ಬಚ್ಚಿಟ್ಟಿದ್ದಳು. 18 ಆದರೆ ಅರ್ಪಿತವಾದವುಗಳನ್ನು ನೀವು ಮುಟ್ಟಬೇಡಿರಿ. ಹಾಗೆ ಅವುಗಳನ್ನು ತೆಗೆದುಕೊಂಡು ನಿಮಗೆ ನಾಶನವನ್ನು ತಂದುಕೊಳ್ಳಬೇಡಿರಿ. ಇಸ್ರಾಯೇಲಿನ ಪಾಳೆಯವೇ ಶಾಪಕ್ಕೆ ಈಡು ಮಾಡಿ, ತೊಂದರೆ ಪಡಿಸದಂತೆ ಶಾಪಕ್ಕೆ ಈಡಾದವುಗಳನ್ನು ತೆಗೆದುಕೊಳ್ಳದೆ ಬಹು ಎಚ್ಚರಿಕೆಯಾಗಿರಿ. 19 ಎಲ್ಲಾ ಬೆಳ್ಳಿಬಂಗಾರ, ಕಂಚು, ಕಬ್ಬಿಣ ಪಾತ್ರೆಗಳು ಯೆಹೋವ ದೇವರಿಗೆ ಅರ್ಪಿತವಾಗಿರಬೇಕು. ಅವು ಯೆಹೋವ ದೇವರ ಭಂಡಾರಕ್ಕೆ ಸೇರಿರಬೇಕು,” ಎಂದು ಆಜ್ಞಾಪಿಸಿದನು.
20 ಕೂಡಲೆ ಯಾಜಕರು ತುತೂರಿಗಳನ್ನು ಊದಿದಾಗ ಜನರು ಆರ್ಭಟಿಸಿದರು. ತುತೂರಿಯ ಶಬ್ದವನ್ನು ಜನರು ಕೇಳಿ ಮಹಾಧ್ವನಿಯಿಂದ ಆರ್ಭಟಿಸಿದಾಗ ಗೋಡೆಯು ನೆಲಸಮವಾಗಿ ಕೆಳಗೆ ಬಿತ್ತು. ಹೀಗೆ ಜನರಲ್ಲಿ ಪ್ರತಿಯೊಬ್ಬನು ಮುಂದೆ ನೇರವಾಗಿ ಒಳಗೆ ನುಗ್ಗಿದರು. ಆಗ ಪಟ್ಟಣವು ಅವರಿಗೆ ಸ್ವಾಧೀನವಾಯಿತು. 21 ಪಟ್ಟಣದಲ್ಲಿರುವ ಎಲ್ಲಾ ಸ್ತ್ರೀಪುರುಷರನ್ನೂ ಹಿರಿಕಿರಿಯರನ್ನೂ ಕುರಿದನಗಳನ್ನೂ ಕತ್ತೆಗಳನ್ನೂ ಖಡ್ಗದಿಂದ ಸಂಪೂರ್ಣವಾಗಿ ನಾಶಮಾಡಿದರು.
22 ಆ ನಾಡನ್ನು ಸಂಚರಿಸಿ ನೋಡುವುದಕ್ಕೆ ಹೋಗಿದ್ದ ಇಬ್ಬರು ಮನುಷ್ಯರಿಗೆ ಯೆಹೋಶುವನು, “ನೀವು ಆ ವೇಶ್ಯೆಯ ಮನೆಗೆ ಹೋಗಿ, ಅವಳನ್ನೂ ಅವಳಿಗೆ ಇರುವ ಸಮಸ್ತವನ್ನೂ ನೀವು ಅವಳಿಗೆ ಆಣೆ ಇಟ್ಟ ಹಾಗೆ ಅಲ್ಲಿಂದ ಹೊರಗೆ ತೆಗೆದುಕೊಂಡು ಬನ್ನಿರಿ,” ಎಂದನು. 23 ಅದರಂತೆ ಆ ಯೌವನಸ್ಥರು ಒಳಗೆ ಹೋಗಿ, ರಾಹಾಬಳನ್ನೂ ಅವಳ ತಂದೆಯನ್ನೂ ಅವಳ ತಾಯಿಯನ್ನೂ ಅವಳ ಸಹೋದರರನ್ನೂ ಅವಳಿಗಿದ್ದ ಸಮಸ್ತವನ್ನೂ ಅವಳ ಗೋತ್ರದ ಎಲ್ಲಾ ಸಂಬಂಧಿಕರನ್ನೂ ಹೊರಗೆ ಕರೆತಂದು ಇಸ್ರಾಯೇಲ್ ಪಾಳೆಯದ ಹೊರಗೆ ಅವರನ್ನು ಇರಿಸಿದರು.
24 ಆದರೆ ಪಟ್ಟಣವನ್ನೂ ಅದರಲ್ಲಿರುವ ಸಮಸ್ತವನ್ನೂ ಬೆಂಕಿಯಿಂದ ಸುಟ್ಟುಬಿಟ್ಟರು. ಬೆಳ್ಳಿಬಂಗಾರವನ್ನೂ ಕಂಚು ಕಬ್ಬಿಣ ಪಾತ್ರೆಗಳನ್ನು ಮಾತ್ರ ಯೆಹೋವ ದೇವರ ಮನೆಯ ಭಂಡಾರದಲ್ಲಿ ಇಟ್ಟರು. 25 ಆದರೆ ಯೆಹೋಶುವನು ವೇಶ್ಯೆಯಾದ ರಾಹಾಬಳನ್ನೂ, ಅವಳ ತಂದೆಯ ಮನೆಯವರನ್ನೂ ಅವಳಿಗಿದ್ದ ಸಮಸ್ತವನ್ನೂ ತಪ್ಪಿಸಿ ಉಳಿಸಿದನು. ಅವಳು ಈ ದಿವಸದವರೆಗೂ ಇಸ್ರಾಯೇಲರಲ್ಲಿ ವಾಸವಾಗಿದ್ದಾಳೆ. ಏಕೆಂದರೆ ಯೆರಿಕೋವನ್ನು ಸಂಚರಿಸಿ ನೋಡಲು, ಯೆಹೋಶುವನು ಕಳುಹಿಸಿದ ಗೂಢಚಾರರನ್ನು ಅವಳು ಬಚ್ಚಿಟ್ಟಿದ್ದಳು.
26 ಆ ಕಾಲದಲ್ಲಿ ಯೆಹೋಶುವನು ಅವರಿಗೆ ಆಣೆ ಇಟ್ಟು ಹೇಳಿದ್ದೇನೆಂದರೆ, “ಯೆರಿಕೋವೆಂಬ ಈ ನಗರವನ್ನು ಮತ್ತೆ ಕಟ್ಟುವವನು, ಯೆಹೋವ ದೇವರ ದೃಷ್ಟಿಯಲ್ಲಿ ಶಾಪಗ್ರಸ್ತನಾಗುವನು.
“ಅದರ ಅಸ್ತಿವಾರವನ್ನು ಹಾಕುವವನು,
ಅವನು ತನ್ನ ಚೊಚ್ಚಲು ಮಗನನ್ನು ಕಳೆದುಕೊಳ್ಳುವನು.
ಪಟ್ಟಣದ ಬಾಗಿಲುಗಳನ್ನಿಡುವಾಗ
ತನ್ನ ಕಿರಿ ಮಗನನ್ನು ಕಳೆದುಕೊಳ್ಳುವನು.”
27 ಯೆಹೋವ ದೇವರು ಯೆಹೋಶುವನ ಸಂಗಡ ಇದ್ದರು. ಅವನ ಕೀರ್ತಿ ದೇಶದಲ್ಲೆಲ್ಲಾ ಹರಡಿತು.