8
ಆಯಿ ಎಂಬ ಪಟ್ಟಣದ ಪತನ
ಆಗ ಯೆಹೋವ ದೇವರು ಯೆಹೋಶುವನಿಗೆ, “ಭಯಪಡಬೇಡ, ನಿರುತ್ಸಾಹಗೊಳ್ಳಬೇಡ, ನೀನು ಸಮಸ್ತ ಸೈನ್ಯವನ್ನು ಕೂಡಿಸಿಕೊಂಡು ಎದ್ದು ಆಯಿ ಎಂಬ ಪಟ್ಟಣಕ್ಕೆ ಏರಿ ಹೋಗು. ನೋಡು, ನಾನು ಆಯಿ ಎಂಬ ಪಟ್ಟಣದ ಅರಸನನ್ನೂ ಅವನ ಜನರನ್ನೂ ಅವನ ಪಟ್ಟಣವನ್ನೂ ಅವನ ಸೀಮೆಯನ್ನೂ ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ. ನೀನು ಯೆರಿಕೋವಿಗೂ ಅದರ ಅರಸನಿಗೂ ಯಾವ ಪ್ರಕಾರ ಮಾಡಿದೆಯೋ ಹಾಗೆಯೇ ಆಯಿ ಎಂಬ ಪಟ್ಟಣಕ್ಕೂ ಅದರ ಅರಸನಿಗೂ ಮಾಡಬೇಕು. ಅದರ ಕೊಳ್ಳೆಯನ್ನೂ, ಪಶುಪ್ರಾಣಿಗಳನ್ನು ಮಾತ್ರವೇ ನಿಮಗೋಸ್ಕರ ಇಟ್ಟುಕೊಳ್ಳಿರಿ. ನೀವು ಆ ಪಟ್ಟಣದ ಹಿಂಭಾಗದಲ್ಲಿ ಹೊಂಚುಹಾಕಲು ಸ್ಥಳಮಾಡಿಕೊಳ್ಳಿರಿ,” ಎಂದರು.
ಆಗ ಆಯಿ ಎಂಬ ಪಟ್ಟಣಕ್ಕೆ ಏರಿ ಹೋಗಲು ಯೆಹೋಶುವನೂ, ಸಮಸ್ತ ಸೈನಿಕರೂ ಎದ್ದರು. ಆದರೆ ಯೆಹೋಶುವನು ಪರಾಕ್ರಮಶಾಲಿಗಳಾದ ಮೂವತ್ತು ಸಾವಿರ ಜನರನ್ನು ಆಯ್ದುಕೊಂಡು ರಾತ್ರಿಯಲ್ಲಿ ಅವರನ್ನು ಕಳುಹಿಸಿದನು. ಅವರಿಗೆ ಆಜ್ಞಾಪಿಸಿ, “ಪಟ್ಟಣದ ಹಿಂದೆ ನೀವು ಹೊಂಚಿಕೊಂಡಿರಿ, ಪಟ್ಟಣಕ್ಕೆ ಬಹುದೂರ ಹೋಗಬೇಡಿರಿ. ನೀವೆಲ್ಲರೂ ಸಿದ್ಧವಾಗಿರಿ. ಆದರೆ ನಾನೂ, ನನ್ನ ಸಂಗಡ ಇರುವ ಜನರೆಲ್ಲರೂ ಪಟ್ಟಣದ ಸಮೀಪಕ್ಕೆ ಸೇರುವೆವು. ಆಗ, ಅವರು ಮುಂಚಿನ ಹಾಗೆಯೇ ನಮಗೆ ವಿರೋಧವಾಗಿ ಪಟ್ಟಣದಿಂದ ಹೊರಟು ಬರುವಾಗ ಅವರ ಮುಂದೆ ನಾವು ಓಡಿ ಹೋಗುವೆವು. ಆಗ ಅವರು, ‘ಮುಂಚಿನ ಹಾಗೆಯೇ ನಮ್ಮ ಮುಂದೆ ಓಡಿಹೋಗುತ್ತಾರೆ,’ ಎಂದು ಹೇಳಿಕೊಳ್ಳುವರು. ಪಟ್ಟಣದ ಬಳಿಯಿಂದ ದೂರದವರೆಗೂ ಅವರು ಬರುವವರೆಗೆ ನಾವು ಓಡಿ ಹೋಗುತ್ತಲೇ ಇರುವೆವು. ಆಗ ನೀವು ಹೊಂಚಿಕೊಳ್ಳುವ ಸ್ಥಳದಿಂದ ಎದ್ದು ಬಂದು ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವ ದೇವರು ಅದನ್ನು ನಿಮ್ಮ ಕೈಗೆ ಒಪ್ಪಿಸಿಕೊಡುವರು. ನೀವು ಪಟ್ಟಣವನ್ನು ಹಿಡಿದ ತರುವಾಯ, ಬೆಂಕಿ ಹಚ್ಚಿ, ಅದನ್ನು ಸುಟ್ಟುಬಿಟ್ಟು, ಯೆಹೋವ ದೇವರ ಆಜ್ಞೆಯ ಪ್ರಕಾರವೇ ಮಾಡಿರಿ. ನಾನು ಇದನ್ನು ನಿಮಗೆ ಆಜ್ಞಾಪಿಸಿದ್ದೇನೆ,” ಎಂದನು.
ಯೆಹೋಶುವನು ಅವರನ್ನು ಕಳುಹಿಸಿದಾಗ ಅವರು ಹೋಗಿ ಹೊಂಚಿಕೊಂಡು ಬೇತೇಲಿಗೂ ಆಯಿ ಎಂಬ ಪಟ್ಟಣಕ್ಕೂ ನಡುವೆ ಆಯಿ ಎಂಬ ಪಟ್ಟಣಕ್ಕೆ ಪಶ್ಚಿಮದ ಕಡೆ ಅಡಗಿಕೊಂಡರು. ಆದರೆ ಯೆಹೋಶುವನು ಆ ರಾತ್ರಿ ಜನರ ಮಧ್ಯದಲ್ಲಿ ಉಳಿದನು.
10 ಉದಯಕಾಲದಲ್ಲಿ ಯೆಹೋಶುವನು ಎದ್ದು ಸೈನ್ಯವನ್ನು ಲೆಕ್ಕ ಮಾಡಿ, ತಾನೂ ಇಸ್ರಾಯೇಲಿನ ಹಿರಿಯರೂ ಜನರ ಮುಂದೆ ನಡೆದು ಆಯಿ ಎಂಬ ಪಟ್ಟಣಕ್ಕೆ ಏರಿಹೋದರು. 11 ಅವನ ಸಂಗಡ ಇದ್ದ ಸೈನಿಕರೆಲ್ಲಾ ನಡೆದು ಪಟ್ಟಣದ ಸಮೀಪವಾಗಿ ಬಂದು ಸೇರಿ, ಆಯಿ ಎಂಬ ಪಟ್ಟಣದ ಉತ್ತರ ದಿಕ್ಕಿನಲ್ಲಿ ಪಾಳೆಯಲ್ಲಿ ಇಳಿದುಕೊಂಡರು. ಆದರೆ ಆಯಿ ಎಂಬ ಪಟ್ಟಣಕ್ಕೂ ಅವರಿಗೂ ಮಧ್ಯದಲ್ಲಿ ಒಂದು ಕಣಿವೆ ಇತ್ತು. 12 ಯೆಹೋಶುವನು ಹೆಚ್ಚು ಕಡಿಮೆ ಐದು ಸಾವಿರ ಜನರನ್ನು ಆಯ್ದುಕೊಂಡು, ಆ ಪಟ್ಟಣದ ಪಶ್ಚಿಮ ಕಡೆಯಲ್ಲಿ ಬೇತೇಲಿಗೂ, ಆಯಿ ಎಂಬ ಪಟ್ಟಣದ ನಡುವೆ ಹೊಂಚಿಹಾಕಿಕೊಂಡಿರಲು ಅವರನ್ನು ಇಟ್ಟನು. 13 ಪಟ್ಟಣಕ್ಕೆ ಉತ್ತರದಲ್ಲಿರುವ ಸಕಲ ಸೈನ್ಯದ ಜನರನ್ನೂ, ಪಟ್ಟಣಕ್ಕೆ ಪಶ್ಚಿಮ ದಿಕ್ಕಿನಲ್ಲಿ ಹೊಂಚುಗಾರರನ್ನೂ ಇಟ್ಟ ತರುವಾಯ ಯೆಹೋಶುವನು ಆ ರಾತ್ರಿಯಲ್ಲಿ ಕಣಿವೆಯ ಮಧ್ಯಕ್ಕೆ ಹೋದನು.
14 ಆಯಿ ಎಂಬ ಪಟ್ಟಣದ ಅರಸನು ಇದನ್ನು ಕಂಡಾಗ, ಆ ಪಟ್ಟಣದ ಜನರು ತ್ವರೆಪಟ್ಟು, ಉದಯಕಾಲದಲ್ಲಿ ಎದ್ದು, ನಿಶ್ಚಯಿಸಿದ ವೇಳೆಯಲ್ಲಿ ಆಯಿ ಎಂಬ ಪಟ್ಟಣದ ಅರಸನೂ ಅವನ ಜನರೆಲ್ಲರೂ ಇಸ್ರಾಯೇಲಿಗೆ ಎದುರಾಗಿ ಯುದ್ಧಮಾಡಲು ಬಯಲಿಗೆ ಹೊರಟರು. ಅವನೂ ಅವನ ಜನರೂ ಅರಾಬಾ ಎಂಬ ತಗ್ಗಾದ ಪ್ರದೇಶವು ಕಾಣುವ ಸ್ಥಳಕ್ಕೆ ಬಂದರು. ಆದರೆ ಅವನು ಪಟ್ಟಣದ ಹಿಂದೆ ತನಗೋಸ್ಕರ ಹೊಂಚಿಕೊಂಡಿರುವವರನ್ನು ಅರಿಯದೆ ಇದ್ದನು. 15 ಅವರ ಮುಂದೆ ಯೆಹೋಶುವನೂ ಇಸ್ರಾಯೇಲರೆಲ್ಲರೂ ಸೋತವರ ಹಾಗೆ ಮರುಭೂಮಿಯ ಮಾರ್ಗವಾಗಿ ಓಡಿಹೋದರು. 16 ಆಗ ಆಯಿ ಎಂಬ ಪಟ್ಟಣದಲ್ಲಿರುವ ಜನರೆಲ್ಲರನ್ನು ಕರೆದುಕೊಂಡು ಹಿಂದಟ್ಟುವುದಕ್ಕೆ ಕರೆಯಲಾದವರು ಯೆಹೋಶುವನನ್ನು ಹಿಂದಟ್ಟಿದರು. ಹೀಗೆ ಅವರು ಆ ಪಟ್ಟಣದಿಂದ ಹೊರಬಂದರು. 17 ಆಯಿ ಎಂಬ ಪಟ್ಟಣದಲ್ಲಿಯೂ ಬೇತೇಲಿನಲ್ಲಿಯೂ ಇಸ್ರಾಯೇಲಿನ ಹಿಂದೆ ಹೊರಟು ಹೋಗದ ಮನುಷ್ಯನು ಒಬ್ಬನೂ ಇರಲಿಲ್ಲ. ಪಟ್ಟಣವನ್ನು ತೆರೆದಿಟ್ಟು ಹೋಗಿ ಇಸ್ರಾಯೇಲರನ್ನು ಹಿಂದಟ್ಟಿದರು.
18 ಆಗ ಯೆಹೋವ ದೇವರು ಯೆಹೋಶುವನಿಗೆ, “ನಿನ್ನ ಕೈಯಲ್ಲಿರುವ ಈಟಿಯನ್ನು ಆಯಿ ಎಂಬ ಪಟ್ಟಣಕ್ಕೆ ಎದುರಾಗಿ ಚಾಚು. ಏಕೆಂದರೆ ಅದನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು,” ಎಂದರು. ಹಾಗೆಯೇ ಅವನು ತನ್ನ ಕೈಯಲ್ಲಿರುವ ಈಟಿಯನ್ನು ಪಟ್ಟಣಕ್ಕೆ ಎದುರಾಗಿ ಚಾಚಿದನು. 19 ಆಗ ಹೊಂಚುಗಾರರು ತ್ವರೆಯಾಗಿ ತಮ್ಮ ಸ್ಥಳದಿಂದ ಎದ್ದು ಪಟ್ಟಣದಲ್ಲಿ ಪ್ರವೇಶಿಸಿ, ಸೆರೆಹಿಡಿದು ಕೂಡಲೆ ಅದಕ್ಕೆ ಬೆಂಕಿಯನ್ನು ಹಚ್ಚಿದರು.
20 ಆಯಿ ಎಂಬ ಪಟ್ಟಣದ ಮನುಷ್ಯರು ಹಿಂದಕ್ಕೆ ತಿರುಗಿ ನೋಡಿದಾಗ, ಪಟ್ಟಣದ ಹೊಗೆ ಹೊತ್ತಿ ಆಕಾಶಕ್ಕೆ ಏಳುವುದನ್ನು ಕಂಡರು. ಹೇಗಾದರೂ ಓಡಿಹೋಗಲು ಅವರಿಗೆ ತ್ರಾಣ ಇಲ್ಲದೆ ಹೋಯಿತು. ಆಗ ಮರುಭೂಮಿಗೆ ಓಡಿ ಹೋದ ಇಸ್ರಾಯೇಲರು ಹಿಂದಟ್ಟಿದವರ ಕಡೆಗೆ ತಿರುಗಿದರು. 21 ಪಟ್ಟಣವು ಹೊಂಚುಗಾರರಿಗೆ ಸ್ವಾಧೀನವಾದುದನ್ನೂ ಹೊಗೆ ಆಕಾಶಕ್ಕೆ ಏರುತ್ತಿದ್ದುದನ್ನೂ ಕಂಡಾಗ ಯೆಹೋಶುವನೂ ಇಸ್ರಾಯೇಲರೂ ಹಿಂದಿರುಗಿ ಆಯಿ ಎಂಬ ಪಟ್ಟಣದ ಜನರ ಮೇಲೆ ಬಿದ್ದರು. 22 ಅವರು ಪಟ್ಟಣದೊಳಗಿಂದ ಇವರಿಗೆ ಎದುರಾಗಿ ಬಂದ ಕಾರಣ, ಅವರು ಈ ಕಡೆ ಆ ಕಡೆ ಇರುವ ಇಸ್ರಾಯೇಲರ ಮಧ್ಯದಲ್ಲಿ ಸಿಕ್ಕಿದರು. ಅವರಲ್ಲಿ ಇಬ್ಬರೂ ತಪ್ಪಿಸಿಕೊಂಡ ಹಾಗೆಯೂ ಅವರನ್ನು ಹೊಡೆದರು. 23 ಆಯಿ ಎಂಬ ಪಟ್ಟಣದ ಅರಸನನ್ನು ಜೀವಸಹಿತ ಹಿಡಿದು ಯೆಹೋಶುವನ ಬಳಿಗೆ ತಂದರು.
24 ಇಸ್ರಾಯೇಲರು ಮರುಭೂಮಿಯಲ್ಲಿಯೂ ಬಯಲಿನಲ್ಲಿಯೂ ಓಡಿಸಿದ ಆಯಿ ಎಂಬ ಪಟ್ಟಣದ ನಿವಾಸಿಗಳೆಲ್ಲರನ್ನೂ ಖಡ್ಗದಿಂದ ಸಂಹರಿಸಿದ ನಂತರ ಅವರೆಲ್ಲರೂ ಪಟ್ಟಣಕ್ಕೆ ಹೋಗಿ ಅಲ್ಲಿದ್ದವರನ್ನು ಕೊಂದರು. 25 ಆ ದಿನದಲ್ಲಿ ಆಯಿ ಎಂಬ ಪಟ್ಟಣದಲ್ಲಿಯ ಹನ್ನೆರಡು ಸಾವಿರ ಜನರು ಹತರಾದರು. 26 ಆಯಿ ಎಂಬ ಪಟ್ಟಣದ ನಿವಾಸಿಗಳೆಲ್ಲರನ್ನೂ ಸಂಪೂರ್ಣ ನಾಶವಾಗುವವರೆಗೂ ಯೆಹೋಶುವನು ಚಾಚಿಕೊಂಡಿರುವ ತನ್ನ ಕೈಯಲ್ಲಿದ್ದ ಈಟಿಯನ್ನು ಹಿಂದೆಗೆಯಲಿಲ್ಲ. 27 ಯೆಹೋವ ದೇವರು ಯೆಹೋಶುವನಿಗೆ ಆಜ್ಞಾಪಿಸಿದ ಮಾತಿನ ಪ್ರಕಾರವೇ ಇಸ್ರಾಯೇಲರು ಆ ಪಟ್ಟಣದ ಪಶುಪ್ರಾಣಿಗಳನ್ನೂ, ಕೊಳ್ಳೆಯನ್ನೂ ತಮಗೋಸ್ಕರ ಇಟ್ಟುಕೊಂಡರು.
28 ಯೆಹೋಶುವನು ಆಯಿ ಎಂಬ ಪಟ್ಟಣವನ್ನು ಸುಟ್ಟುಬಿಟ್ಟು, ಅದನ್ನು ಮರಳಿ ಕಟ್ಟಲಾಗದಂತೆ ಹಾಳು ದಿಬ್ಬವಾಗಿ ಮಾಡಿದನು. ಅದು ಇಂದಿನವರೆಗೂ ಹಾಗೆಯೇ ಉಳಿದಿದೆ. 29 ಆಯಿ ಎಂಬ ಪಟ್ಟಣದ ಅರಸನನ್ನು ಸಾಯಂಕಾಲದವರೆಗೂ ಒಂದು ಮರದಲ್ಲಿ ತೂಗಿಹಾಕಿಸಿದನು. ಸೂರ್ಯ ಅಸ್ತಮಿಸುವಾಗ ಯೆಹೋಶುವನು ಅವನ ಹೆಣವನ್ನು ಮರದಿಂದ ಇಳಿಸಿ, ಅದನ್ನು ಆ ಪಟ್ಟಣದ ಬಾಗಿಲಿನ ದ್ವಾರದಲ್ಲಿ ಹಾಕಲು ಆಜ್ಞಾಪಿಸಿದನು. ಆಗ ಅವರು ಹಾಗೆಯೇ ಮಾಡಿದರು. ಆ ದೊಡ್ಡ ಕಲ್ಲು ಕುಪ್ಪೆಯನ್ನು ಅದರ ಮೇಲೆ ಇಟ್ಟರು. ಅದು ಇಂದಿನವರೆಗೂ ಇದೆ.
ಏಬಾಲ್ ಬೆಟ್ಟದಲ್ಲಿ ಒಡಂಬಡಿಕೆಯ ನವೀಕರಣ
30 ಆಗ ಯೆಹೋಶುವನು ಏಬಾಲ್ ಪರ್ವತದಲ್ಲಿ ಇಸ್ರಾಯೇಲಿನ ಯೆಹೋವ ದೇವರಿಗೆ ಒಂದು ಬಲಿಪೀಠವನ್ನು ಕಟ್ಟಿದನು. 31 ಸೇವಕನಾದ ಮೋಶೆಯು ಇಸ್ರಾಯೇಲರಿಗೆ ಆಜ್ಞಾಪಿಸಿದಂತೆ, ಮೋಶೆಯ ನಿಯಮದಲ್ಲಿ ಬರೆದಿರುವ ಪ್ರಕಾರ, ಯೆಹೋವ ದೇವರಿಗೆ ಉಳಿಮುಟ್ಟದ ಪೂರ್ಣವಾದ ಕಲ್ಲುಗಳಿಂದ ಬಲಿಪೀಠವನ್ನು ಕಟ್ಟಿದನು. ಆಗ ಅವರು ಅದರ ಮೇಲೆ ಯೆಹೋವ ದೇವರಿಗೆ ದಹನಬಲಿಗಳನ್ನೂ ಸಮಾಧಾನ ಸಮರ್ಪಣೆಗಳನ್ನೂ ಅರ್ಪಿಸಿದರು. 32 ಅಲ್ಲಿ ಅವನು ಇಸ್ರಾಯೇಲರ ಸಮಕ್ಷಮದಲ್ಲಿ ಮೋಶೆ ಬರೆದಿದ್ದ ಮೋಶೆಯ ನಿಯಮದ ಪ್ರತಿಯನ್ನು ಬರೆದನು. 33 ಇಸ್ರಾಯೇಲರೆಲ್ಲರೂ ಅವರ ಹಿರಿಯರೂ ಅವರ ಅಧಿಕಾರಿಗಳೂ ಅವರ ನ್ಯಾಯಾಧಿಪತಿಗಳೂ ಪರದೇಶಸ್ಥರೂ ಸ್ವದೇಶಸ್ಥರೂ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವ ಲೇವಿಯರಾದ ಯಾಜಕರ ಮುಂದೆ ಒಡಂಬಡಿಕೆಯ ಮಂಜೂಷಕ್ಕೆ ಈ ಕಡೆಯೂ ಆ ಕಡೆಯೂ ಅರ್ಧ ಗೆರಿಜೀಮ್ ಪರ್ವತದ ಕಡೆಗೂ ಅರ್ಧ ಏಬಾಲ್ ಪರ್ವತದ ಮುಂದೆಯೂ ನಿಂತರು. ಯೆಹೋವ ದೇವರ ಸೇವಕ ಮೋಶೆ ಇಸ್ರಾಯೇಲರನ್ನು ಆಶೀರ್ವದಿಸುವಂತೆ ಮುಂಚೆ ವಾಕ್ಯಗಳನ್ನು ಕೊಟ್ಟಾಗ ಆಜ್ಞಾಪಿಸಿದ ಹಾಗೆಯೇ ನಿಂತರು.
34 ತರುವಾಯ ಯೆಹೋಶುವನು ದೇವರ ನಿಯಮ ಗ್ರಂಥದಲ್ಲಿ ಬರೆದಿರುವ ಎಲ್ಲಾ ಮಾತುಗಳನ್ನೂ ಆಶೀರ್ವಾದಗಳನ್ನೂ, ಶಾಪಗಳನ್ನೂ ಓದಿದನು. 35 ಮೋಶೆ ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಬಿಡದೆ ಮಹಿಳೆಯರಿಗೂ, ಮಕ್ಕಳಿಗೂ, ಅನ್ಯದೇಶೀಯರಿಗೂ ಕೇಳಿಸುವಂತೆ ಸರ್ವಸಮೂಹದ ಮುಂದೆ ಓದಿದನು.