14
ಯಾರೊಬ್ಬಾಮನಿಗೆ ವಿರೋಧವಾಗಿ ಅಹೀಯನ ಪ್ರವಾದನೆ
ಅದೇ ಕಾಲದಲ್ಲಿ ಯಾರೊಬ್ಬಾಮನ ಮಗ ಅಬೀಯನಿಗೆ ರೋಗ ತಗುಲಿತು. ಆದ್ದರಿಂದ ಯಾರೊಬ್ಬಾಮನು ತನ್ನ ಪತ್ನಿಗೆ, “ನೀನು ಯಾರೊಬ್ಬಾಮನ ಪತ್ನಿ ಎಂದು ಯಾರೂ ತಿಳಿಯದ ಹಾಗೆ ನೀನೆದ್ದು, ವೇಷಹಾಕಿಕೊಂಡು ಶೀಲೋವಿಗೆ ಹೋಗು. ‘ಈ ಜನರ ಮೇಲೆ ಅರಸನಾಗಿರುವೆ,’ ಎಂದು ನನಗೆ ಹೇಳಿದ ಪ್ರವಾದಿ ಅಹೀಯನು ಅಲ್ಲಿದ್ದಾನೆ. ಇದಲ್ಲದೆ ನೀನು ನಿನ್ನ ಕೈಯಲ್ಲಿ ಹತ್ತು ರೊಟ್ಟಿಗಳನ್ನೂ, ಭಕ್ಷ್ಯಗಳನ್ನೂ, ಒಂದು ಮಡಕೆ ಜೇನುತುಪ್ಪವನ್ನೂ ತೆಗೆದುಕೊಂಡು ಅವನ ಬಳಿಗೆ ಹೋಗು. ಅವನು ಮಗುವಿಗೆ ಆಗುವುದನ್ನು ನಿನಗೆ ತಿಳಿಸುವನು,” ಎಂದನು. ಯಾರೊಬ್ಬಾಮನ ಪತ್ನಿಯು ಹಾಗೆಯೇ ಮಾಡಿ, ಎದ್ದು ಶೀಲೋವಿಗೆ ಹೋಗಿ, ಅಹೀಯನ ಮನೆಗೆ ಬಂದಳು.
ಆದರೆ ಅಹೀಯನಿಗೆ ಕಾಣಿಸಲಿಲ್ಲ, ವೃದ್ದಾಪ್ಯದಿಂದ ಅವನ ಕಣ್ಣುಗಳು ಮೊಬ್ಬಾಗಿ ಹೋಗಿದ್ದವು. ಆದರೆ ಯೆಹೋವ ದೇವರು ಅಹೀಯನಿಗೆ, “ಯಾರೊಬ್ಬಾಮನ ಪತ್ನಿಯು ತನ್ನ ಮಗನಿಗೋಸ್ಕರ ನಿನ್ನಿಂದ ದೈವೋತ್ತರವನ್ನು ಕೇಳುವುದಕ್ಕೆ ಬರುತ್ತಾಳೆ. ಏಕೆಂದರೆ ಅವಳ ಮಗನು ರೋಗದಲ್ಲಿದ್ದಾನೆ. ನೀನು ಅವಳಿಗೆ ಹೀಗೀಗೆ ಹೇಳು, ಅವಳು ಒಳಗೆ ಬರುವಾಗ ಮತ್ತೊಬ್ಬಳ ಹಾಗೆ ವೇಷಹಾಕಿಕೊಂಡು ಬರುವಳು,” ಎಂದು ಹೇಳಿಕೊಟ್ಟಿದ್ದನು.
ಅನಂತರ ಅವಳು ಬಾಗಿಲಲ್ಲಿ ಪ್ರವೇಶಿಸುವಾಗ, ಅಹೀಯನು ಅವಳ ಹೆಜ್ಜೆಗಳ ಶಬ್ದ ಕೇಳುತ್ತಲೇ ಅವನು, “ಯಾರೊಬ್ಬಾಮನ ಪತ್ನಿಯೇ ಒಳಗೆ ಬಾ, ನೀನು ಮತ್ತೊಬ್ಬಳಂತೆ ತೋರಿಸಿಕೊಳ್ಳುವುದು ಏಕೆ? ನಾನು ಕಠಿಣವಾದವುಗಳನ್ನು ತಿಳಿಸಲು ನನಗೆ ಅಪ್ಪಣೆಯಾಗಿದೆ. ನೀನು ಹೋಗಿ ಯಾರೊಬ್ಬಾಮನಿಗೆ ಹೇಳಬೇಕಾದದ್ದು, ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, ‘ನಾನು ಜನರೊಳಗಿಂದ ತೆಗೆದು ನಿನ್ನನ್ನು ಹೆಚ್ಚಿಸಿ, ನನ್ನ ಜನರಾದ ಇಸ್ರಾಯೇಲರ ಮೇಲೆ ನಾಯಕನಾಗಿ ಮಾಡಿದೆನು. ದಾವೀದನ ಮನೆಯಿಂದ ರಾಜ್ಯವನ್ನು ವಿಭಾಗಿಸಿ ನಿನಗೆ ಕೊಟ್ಟೆನು. ಆದರೆ ನನ್ನ ಆಜ್ಞೆಗಳನ್ನು ಕೈಗೊಂಡು, ನನ್ನ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದನ್ನು ಮಾಡಿ, ತನ್ನ ಸಂಪೂರ್ಣ ಹೃದಯದಿಂದ ನನ್ನನ್ನು ಹಿಂಬಾಲಿಸಿದ ನನ್ನ ಸೇವಕನಾದ ದಾವೀದನ ಹಾಗೆ ನೀನು ಇರಲಿಲ್ಲ. ನೀನು ನಿನಗೆ ಮುಂಚೆ ಇದ್ದವರೆಲ್ಲರಿಗಿಂತ ಕೆಟ್ಟದ್ದನ್ನು ಮಾಡಿದೆ. ಏಕೆಂದರೆ, ನೀನು ಹೋಗಿ ನನಗೆ ಕೋಪವನ್ನೆಬ್ಬಿಸುವ ಅನ್ಯದೇವರುಗಳನ್ನೂ, ಎರಕದ ವಿಗ್ರಹಗಳನ್ನೂ ಮಾಡಿಕೊಂಡು, ನನ್ನನ್ನು ತಿರಸ್ಕರಿಸಿದೆ.
10 “ ‘ಆದ್ದರಿಂದ ನಾನು ಯಾರೊಬ್ಬಾಮನ ಮನೆಯ ಮೇಲೆ ಕೇಡನ್ನು ಬರಮಾಡಿ, ಯಾರೊಬ್ಬಾಮನ ಕಡೆಯಿಂದ ಸಮಸ್ತ ಗಂಡಸರನ್ನೂ, ಇಸ್ರಾಯೇಲಿನಲ್ಲಿ ಉಳಿದು ಬಚ್ಚಿಟ್ಟುಕೊಂಡವರನ್ನೂ ಕಡಿದುಬಿಟ್ಟು, ಅದು ತೀರುವವರೆಗೆ ಮನುಷ್ಯನು ರಸವನ್ನು ಹೇಗೆ ತೆಗೆದು ಹಾಕುತ್ತಾನೋ, ಹಾಗೆಯೇ ನಾನು ಯಾರೊಬ್ಬಾಮನ ಮನೆಯ ಉಳುವಿಕೆಯನ್ನು ತೆಗೆದುಹಾಕುತ್ತೇನೆ. 11 ಯಾರೊಬ್ಬಾಮನವರಲ್ಲಿ ಯಾವನು ಪಟ್ಟಣದಲ್ಲಿ ಸಾಯುವನೋ ಅವನನ್ನು ನಾಯಿಗಳು ತಿಂದುಬಿಡುವವು. ಹೊಲದಲ್ಲಿ ಸಾಯುವವನನ್ನು ಆಕಾಶದ ಪಕ್ಷಿಗಳು ತಿಂದುಬಿಡುವವು,’ ಎಂದು ಯೆಹೋವ ದೇವರು ಹೇಳಿದ್ದಾರೆ.
12 “ಆದ್ದರಿಂದ ನೀನೆದ್ದು ನಿನ್ನ ಮನೆಗೆ ಹೋಗು. ಪಟ್ಟಣದಲ್ಲಿ ಪ್ರವೇಶಿಸುವಾಗ ನಿನ್ನ ಮಗನು ಸಾಯುವನು. 13 ಇದಲ್ಲದೆ ಸಮಸ್ತ ಇಸ್ರಾಯೇಲರು ಅವನಿಗೋಸ್ಕರ ಗೋಳಾಡಿ ಅವನನ್ನು ಹೂಳಿಡುವರು. ಏಕೆಂದರೆ, ಯಾರೊಬ್ಬಾಮನವರಲ್ಲಿ ಅವನೊಬ್ಬನೇ ಸಮಾಧಿಗೆ ಸೇರುವನು. ಯಾರೊಬ್ಬಾಮನ ಮನೆಯವರೊಳಗೆ ಅವನಲ್ಲಿ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಕಡೆಗಾದ ಒಳ್ಳೆಯ ಕ್ರಿಯೆ ಸಿಕ್ಕಿತು.
14 “ಇದಲ್ಲದೆ ಯೆಹೋವ ದೇವರು ಇಸ್ರಾಯೇಲನ್ನು ಆಳುವುದಕ್ಕೆ ಅದೇ ದಿನದಲ್ಲಿ ಯಾರೊಬ್ಬಾಮನ ಮನೆಯನ್ನು ಕಡಿದುಬಿಡುವ ಒಬ್ಬ ಅರಸನನ್ನು ತನಗೋಸ್ಕರ ಎಬ್ಬಿಸುವರು. 15 ಈಗಲೇ ಏನು ಆಗುವುದು? ನೀರಿನಲ್ಲಿರುವ ಆಪು ಹುಲ್ಲು ಅಲ್ಲಾಡುವ ಹಾಗೆ ಯೆಹೋವ ದೇವರು ಇಸ್ರಾಯೇಲನ್ನು ಹೊಡೆಯುವರು. ಇಸ್ರಾಯೇಲರು ಯೆಹೋವ ದೇವರಿಗೆ ಕೋಪವನ್ನು ಎಬ್ಬಿಸಲು, ತಮ್ಮ ವಿಗ್ರಹಾರಾಧನೆಗೋಸ್ಕರ ಅಶೇರ ಸ್ತಂಭಗಳನ್ನು ನಿಲ್ಲಿಸಿಕೊಂಡದ್ದರಿಂದ, ಯೆಹೋವ ದೇವರು ಅವರ ತಂದೆಗಳಿಗೆ ಕೊಟ್ಟ ಈ ಉತ್ತಮ ದೇಶದಲ್ಲಿಂದ ಅವರನ್ನು ನಿರ್ಮೂಲ ಮಾಡಿ, ಯೂಫ್ರೇಟೀಸ್ ನದಿಯ ಆಚೆಯಲ್ಲಿ ಅವರನ್ನು ಚದರುವಂತೆ ಮಾಡುವರು. 16 ಯೆಹೋವ ದೇವರು ಯಾರೊಬ್ಬಾಮನ ಪಾಪಗಳ ನಿಮಿತ್ತ ಇಸ್ರಾಯೇಲರನ್ನು ಶತ್ರುಗಳಿಗೆ ಒಪ್ಪಿಸಿಬಿಡುವರು. ಏಕೆಂದರೆ ಯಾರೊಬ್ಬಾಮನೇ ಪಾಪಮಾಡಿ, ಪಾಪವನ್ನು ಮಾಡಲು ಇಸ್ರಾಯೇಲರನ್ನು ಪ್ರೇರೇಪಿಸಿದನು,” ಎಂದನು.
17 ಆಗ ಯಾರೊಬ್ಬಾಮನ ಪತ್ನಿ ಎದ್ದು ಹೊರಟು ತಿರ್ಚಕ್ಕೆ ಬಂದಳು. ಯೆಹೋವ ದೇವರು ಪ್ರವಾದಿಯಾದ ತನ್ನ ಸೇವಕನಾಗಿರುವ ಅಹೀಯನ ಮುಖಾಂತರ ಹೇಳಿದ ವಾಕ್ಯದ ಪ್ರಕಾರವೇ ಅವಳು ಬಾಗಿಲ ಹೊಸ್ತಿಲ ಬಳಿಗೆ ಬಂದಾಗ ಅವಳ ಮಗನು ಸತ್ತನು. 18 ಯೆಹೋವ ದೇವರು ಪ್ರವಾದಿಯಾದ ಅಹೀಯನ ಮುಖಾಂತರವಾಗಿ ತಿಳಿಸಿದ ಪ್ರಕಾರ ಅವರು ಅವನನ್ನು ಹೂಳಿಟ್ಟರು. ಇಸ್ರಾಯೇಲರೆಲ್ಲರು ಅವನಿಗೋಸ್ಕರ ಗೋಳಾಡಿದರು.
19 ಯಾರೊಬ್ಬಾಮನ ಮಿಕ್ಕಾದ ಕ್ರಿಯೆಗಳೂ, ಅವನು ಯುದ್ಧ ಮಾಡಿದ್ದೂ, ಆಳಿದ್ದೂ, ಇವು ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 20 ಯಾರೊಬ್ಬಾಮನು ಆಳಿದ ದಿವಸಗಳು ಇಪ್ಪತ್ತೆರಡು ವರ್ಷಗಳಾಗಿದ್ದವು. ಅವನು ಮೃತನಾಗಿ, ತನ್ನ ಪಿತೃಗಳ ಜೊತೆ ಸೇರಿದನು. ಅವನಿಗೆ ಬದಲಾಗಿ ಅವನ ಮಗ ನಾದಾಬನು ಅರಸನಾದನು.
ಯೆಹೂದ್ಯರ ಅರಸನಾದ ರೆಹಬ್ಬಾಮನು
21 ಆದರೆ ಸೊಲೊಮೋನನ ಮಗ ರೆಹಬ್ಬಾಮನು ಯೆಹೂದದಲ್ಲಿ ಆಳುತ್ತಾ ಇದ್ದನು. ರೆಹಬ್ಬಾಮನು ಆಳಲು ಆರಂಭಿಸಿದಾಗ, ನಲವತ್ತೊಂದು ವರ್ಷದವನಾಗಿದ್ದು, ಅಲ್ಲಿ ಯೆಹೋವ ದೇವರು ತಮ್ಮ ಹೆಸರಿಗೋಸ್ಕರ ಇಸ್ರಾಯೇಲಿನ ಸಮಸ್ತ ಗೋತ್ರಗಳಲ್ಲಿ ಆಯ್ದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ಹದಿನೇಳು ವರ್ಷ ಆಳಿದನು. ಅಮ್ಮೋನಿಯಳಾದ ಅವನ ತಾಯಿಯ ಹೆಸರು ನಯಮಾ.
22 ಆದರೆ ಯೆಹೂದದವರು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟತನ ಮಾಡಿ, ತಮ್ಮ ಪಿತೃಗಳು ಮಾಡಿದ ಸಮಸ್ತ ಪಾಪಗಳಿಗಿಂತ, ತಾವು ಹೆಚ್ಚಾಗಿ ಪಾಪಮಾಡಿ ಯೆಹೋವ ದೇವರಿಗೆ ರೋಷವನ್ನೆಬ್ಬಿಸಿದರು. 23 ಅವರು ಅಶೇರ ಸ್ತಂಭಗಳನ್ನೂ, ವಿಗ್ರಹಗಳನ್ನೂ, ಉನ್ನತ ಸ್ಥಳಗಳನ್ನೂ ಎತ್ತರವಾದ ಪ್ರತಿ ಗುಡ್ಡದ ಮೇಲೆಯೂ, ಹಸುರಾದ ಪ್ರತಿ ಗಿಡದ ಕೆಳಗೂ ತಮಗಾಗಿ ಮಾಡಿಕೊಂಡರು. 24 ಇದಲ್ಲದೆ ಪೂಜಾಸ್ಥಳಗಳಲ್ಲಿ ಪುರುಷಗಾಮಿಗಳಿದ್ದರು. ಅವರು ಇಸ್ರಾಯೇಲರ ಮುಂದೆ ಯೆಹೋವ ದೇವರು ಹೊರಡಿಸಿದ ಜನಾಂಗಗಳ ಸಕಲ ಅಸಹ್ಯ ಕಾರ್ಯಗಳನ್ನು ಮಾಡುತ್ತಾ ಇದ್ದರು.
25 ರೆಹಬ್ಬಾಮನು ಅರಸನಾದ ಐದನೆಯ ವರ್ಷದಲ್ಲಿ, ಈಜಿಪ್ಟ್ ಅರಸನಾದ ಶೀಶಕನು ಯೆರೂಸಲೇಮಿನ ಮೇಲೆ ದಾಳಿಮಾಡಿದನು. 26 ಅವನು ಯೆಹೋವ ದೇವರ ಆಲಯ ಬೊಕ್ಕಸಗಳನ್ನೂ ಅರಮನೆಯ ಬೊಕ್ಕಸಗಳನ್ನೂ ದೋಚಿಕೊಂಡನು, ಇದಲ್ಲದೆ ಸೊಲೊಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನು ಒಳಗೊಂಡಂತೆ ಅವನು ಸಮಸ್ತವನ್ನೂ ದೋಚಿಕೊಂಡು ಹೋದನು. 27 ಆದಕಾರಣ ಅರಸನಾದ ರೆಹಬ್ಬಾಮನು ಅವುಗಳಿಗೆ ಬದಲಾಗಿ ಕಂಚಿನ ಗುರಾಣಿಗಳನ್ನು ಮಾಡಿಸಿ, ಅವುಗಳನ್ನು ಅರಮನೆಯ ಪ್ರವೇಶದ್ವಾರದ ಕರ್ತವ್ಯದಲ್ಲಿದ್ದ ಕಾವಲುಗಾರರ ಅಧಿಪತಿಗಳ ಕೈಯಲ್ಲಿ ಒಪ್ಪಿಸಿದನು. 28 ಅರಸನು ಯೆಹೋವ ದೇವರ ಆಲಯಕ್ಕೆ ಹೋಗುವಾಗಲೆಲ್ಲಾ, ಕಾವಲುಗಾರರು ಅವುಗಳನ್ನು ಎತ್ತಿಕೊಂಡು ಬರುತ್ತಿದ್ದರು. ಅಲ್ಲಿಂದ ಹಿಂದಕ್ಕೆ ಬಂದ ನಂತರ ಕಾವಲಿನ ಚಾವಡಿಗೆ ತರುತ್ತಿದ್ದರು.
29 ರೆಹಬ್ಬಾಮನ ಉಳಿದ ಕಾರ್ಯಗಳೂ, ಅವನು ಮಾಡಿದ ಸಮಸ್ತವೂ ಯೆಹೂದ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 30 ಇದಲ್ಲದೆ ರೆಹಬ್ಬಾಮನಿಗೂ, ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧಗಳಾಗುತ್ತಿದ್ದವು. 31 ರೆಹಬ್ಬಾಮನು ಮೃತನಾಗಿ ತನ್ನ ಪಿತೃಗಳ ಬಳಿ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸಮಾಧಿ ಬಳಿ ಸಮಾಧಿಮಾಡಿದರು. ಅವನ ತಾಯಿ ಅಮ್ಮೋನಿಯಳಾದ ನಯಮಾ. ಅವನ ಮಗ ಅಬಿಯಾಮನು ಅವನಿಗೆ ಬದಲಾಗಿ ಅರಸನಾದನು.