2
ದಾವೀದನು ಸೊಲೊಮೋನನಿಗೆ ಹೇಳಿದ ಕಡೆಯ ಮಾತುಗಳು
ಆದರೆ ದಾವೀದನ ಸಾಯುವ ಕಾಲ ಸಮೀಪಿಸಿದ್ದರಿಂದ ಅವನು ತನ್ನ ಮಗ ಸೊಲೊಮೋನನಿಗೆ ಆಜ್ಞಾಪಿಸಿದ್ದೇನೆಂದರೆ,
“ಭೂಮಿಯಲ್ಲಿರುವವರೆಲ್ಲರು ಹೋಗುವ ಮಾರ್ಗವಾಗಿ ನಾನು ಹೋಗುತ್ತೇನೆ. ನೀನು ಬಲಗೊಂಡು ಶೂರನಾಗಿರು. ನಿನ್ನ ದೇವರಾದ ಯೆಹೋವ ದೇವರ ಆಜ್ಞೆಗಳನ್ನು ಅನುಸರಿಸಿ ಅವರ ಮಾರ್ಗದಲ್ಲೇ ನಡೆದುಕೋ; ಮೋಶೆಯ ನಿಯಮದಲ್ಲಿ ಬರೆದಿರುವ ಅವರ ಆಜ್ಞಾನಿಯಮಗಳಿಗೂ, ವಿಧಿನಿರ್ಣಯಗಳಿಗೂ ವಿಧೇಯನಾಗಿರು. ಹೀಗೆ ಮಾಡುವುದಾದರೆ ನೀನು ಏನು ಮಾಡಿದರೂ, ಎಲ್ಲಿ ಸಂಚರಿಸಿದರೂ ಎಲ್ಲಾದರಲ್ಲಿಯೂ ಯಶಸ್ವಿಯಾಗುವೆ. ಯೆಹೋವ ದೇವರು, ‘ನಿನ್ನ ಮಕ್ಕಳು ತಾವು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ನನ್ನ ಮುಂದೆ ನಂಬಿಗಸ್ತರಾಗಿ ನಡೆದುಕೊಳ್ಳುವ ಹಾಗೆ ತಮ್ಮ ಮಾರ್ಗವನ್ನು ಕಾದುಕೊಂಡರೆ ಅವರು ಇಸ್ರಾಯೇಲಿನ ಸಿಂಹಾಸನದ ಮೇಲೆ ತಪ್ಪದೇ ಕುಳಿತುಕೊಳ್ಳುವರು,’ ಎಂದು ನನಗೆ ಹೇಳಿದ ತಮ್ಮ ವಾಕ್ಯವನ್ನು ಸ್ಥಿರಪಡಿಸುವರು.
“ಇದಲ್ಲದೆ ಚೆರೂಯಳ ಮಗ ಯೋವಾಬನು ನನಗೂ, ಇಸ್ರಾಯೇಲಿನ ಸೈನ್ಯಗಳಿಗೆ ಇಬ್ಬರು ಅಧಿಪತಿಗಳಾದ ನೇರನ ಮಗ ಅಬ್ನೇರನಿಗೂ, ಯೆತೆರನ ಮಗ ಅಮಾಸನಿಗೂ ಏನು ಮಾಡಿದನೋ ನೀನು ಬಲ್ಲೆ. ಅವನು ಅವರನ್ನು ಕೊಂದು, ಸಮಾಧಾನ ಕಾಲದಲ್ಲಿ ಯುದ್ಧದ ರಕ್ತವನ್ನು ಚೆಲ್ಲಿ, ತನ್ನ ನಡುವಲ್ಲಿರುವ ನಡುಕಟ್ಟಿನ ಮೇಲೆಯೂ, ತನ್ನ ಪಾದಗಳಲ್ಲಿರುವ ಪಾದರಕ್ಷೆಗಳ ಮೇಲೆಯೂ ಯುದ್ಧದ ರಕ್ತವನ್ನು ಹಚ್ಚಿಕೊಂಡನು. ಆದಕಾರಣ ನೀನು ನಿನ್ನ ಜ್ಞಾನದ ಪ್ರಕಾರಮಾಡಿ, ಅವನ ನರೆತಲೆಯನ್ನು ಸಮಾಧಾನದಿಂದ ಸಮಾಧಿ ಸೇರದಂತೆ ಮಾಡು.
“ನೀನು ಗಿಲ್ಯಾದ್ಯನಾದ ಬರ್ಜಿಲ್ಲೈಯನ ಮಕ್ಕಳಿಗೆ ದಯೆತೋರಿಸು. ಅವರು ನಿನ್ನ ಮೇಜಿನಲ್ಲಿ ಊಟಮಾಡುವವರಾಗಿ ನಿನ್ನ ಸಂಗಡ ಇರಲಿ. ಏಕೆಂದರೆ ನಾನು ನಿನ್ನ ಸಹೋದರನಾದ ಅಬ್ಷಾಲೋಮನ ಮುಂದೆ ಓಡಿಹೋದಾಗ ಅವರು ನನ್ನನ್ನು ಉಪಚರಿಸಿದರು.
“ಇದಲ್ಲದೆ ನಾನು ಮಹನಯಿಮಿಗೆ ಹೋಗುವ ದಿನದಲ್ಲಿ ಘೋರವಾದ ಶಾಪದಿಂದ ನನ್ನನ್ನು ಶಪಿಸಿದ ಬಹುರೀಮಿನ ಬೆನ್ಯಾಮೀನನಾದ ಗೇರನ ಮಗನಾಗಿರುವ ಶಿಮ್ಮಿಯು ನಿನ್ನ ಬಳಿಯಲ್ಲಿದ್ದಾನೆ. ಅವನು ಯೊರ್ದನ್ ನದಿ ಬಳಿಯಲ್ಲಿ ನನ್ನನ್ನು ಎದುರುಗೊಳ್ಳಲು ಬಂದದ್ದರಿಂದ, ‘ನಾನು ನಿನ್ನನ್ನು ಖಡ್ಗದಿಂದ ಕೊಲ್ಲುವುದಿಲ್ಲ,’ ಎಂದು ಯೆಹೋವ ದೇವರ ಹೆಸರಿನಲ್ಲಿ ಆಣೆಯಿಟ್ಟೆನು. ಆದರೆ ನೀನು ಈಗ ಅವನನ್ನು ನಿರಪರಾಧಿ ಎಂದು ಎಣಿಸಬೇಡ. ನೀನು ಬುದ್ಧಿವಂತನಾಗಿರುವುದರಿಂದ ಅವನಿಗೆ ಏನು ಮಾಡತಕ್ಕದ್ದೋ ನೀನು ಬಲ್ಲೆ. ಆದರೆ ಅವನ ನರೆತಲೆಯನ್ನು ರಕ್ತದಿಂದ ಸಮಾಧಿ ಸೇರುವಂತೆ ಮಾಡು,” ಎಂದನು.
10 ಹೀಗೆಯೇ ದಾವೀದನು ಮರಣಹೊಂದಿ ತನ್ನ ಪಿತೃಗಳ ಜೊತೆ ಸೇರಿದನು. ದಾವೀದನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. 11 ದಾವೀದನು ಇಸ್ರಾಯೇಲಿನ ಮೇಲೆ ಆಳಿದ ದಿವಸಗಳು ನಾಲ್ವತ್ತು ವರ್ಷಗಳು. ಏಳು ವರ್ಷ ಹೆಬ್ರೋನಿನಲ್ಲಿ ಆಳಿದನು. ಮೂವತ್ತಮೂರು ವರ್ಷ ಯೆರೂಸಲೇಮಿನಲ್ಲಿ ಆಳಿದನು. 12 ಆಗ ಸೊಲೊಮೋನನು ತನ್ನ ತಂದೆಯಾದ ದಾವೀದನ ಸಿಂಹಾಸನದ ಮೇಲೆ ಕುಳಿತನು. ಅವನ ರಾಜ್ಯವು ಬಹು ಸ್ಥಿರವಾಗಿತ್ತು.
ಸೊಲೊಮೋನನ ಸಿಂಹಾಸನವು ಸ್ಥಾಪಿತವಾದದ್ದು
13 ಆದರೆ ಹಗ್ಗೀತಳ ಮಗ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಯ ದರ್ಶನಕ್ಕೆ ಬಂದನು. ಬತ್ಷೆಬೆಳು ಅವನಿಗೆ, “ಸಮಾಧಾನವಾಗಿ ಬರುತ್ತೀಯೋ?” ಎಂದಳು.
ಅದಕ್ಕೆ ಅವನು, “ಸಮಾಧಾನವೇ,” ಎಂದನು. 14 ಅವನು, “ನಿನಗೆ ಹೇಳತಕ್ಕ ಮಾತಿದೆ,” ಎಂದನು.
ಬತ್ಷೆಬೆಳು, “ಹೇಳು,” ಎಂದಳು.
15 ಆಗ ಅವನು, “ರಾಜ್ಯವು ನನ್ನದಾಗಿತ್ತೆಂದೂ, ನಾನು ಆಳುವ ಸಮಸ್ತ ಇಸ್ರಾಯೇಲರು ನನ್ನ ಮೇಲೆ ಕಣ್ಣಿಟ್ಟಿದ್ದರೆಂದೂ ನೀನು ಬಲ್ಲೆ. ಆದರೆ ಎಲ್ಲವೂ ಬದಲಾಗಿ, ರಾಜ್ಯವು ನನ್ನ ಸಹೋದರನಿಗೆ ದೊರಕಿತು. ಏಕೆಂದರೆ ಅದು ಅವನಿಗೆ ಯೆಹೋವ ದೇವರಿಂದ ಉಂಟಾಯಿತು. 16 ಆದರೆ ಈಗ ನನಗೆ ಒಂದು ಬಿನ್ನಹವಿದೆ. ಅದನ್ನು ತಿರಸ್ಕರಿಸಬೇಡ,” ಎಂದನು.
ಬತ್ಷೆಬೆಳು ಅವನಿಗೆ, “ಅದೇನು ಹೇಳು,” ಎಂದಳು.
17 ಆಗ ಅವನು, “ನೀನು ದಯಮಾಡಿ ಅರಸನಾದ ಸೊಲೊಮೋನನು ಶೂನೇಮ್ಯಳಾದ ಅಬೀಷಗಳನ್ನು ನನಗೆ ಹೆಂಡತಿಯಾಗಿ ಕೊಡಲು ಅವನನ್ನು ಕೇಳು. ಏಕೆಂದರೆ ಅವನು ನಿನಗೆ ಆಗುವುದಿಲ್ಲವೆಂದು ಹೇಳುವುದಿಲ್ಲ,” ಎಂದನು.
18 ಅದಕ್ಕೆ ಬತ್ಷೆಬೆಳು, “ಒಳ್ಳೆಯದು, ನಿನಗೋಸ್ಕರ ಅರಸನ ಸಂಗಡ ಮಾತನಾಡುವೆನು,” ಎಂದಳು.
19 ಆದ್ದರಿಂದ ಬತ್ಷೆಬೆಳು ಅದೋನೀಯನಿಗೋಸ್ಕರ ಮಾತನಾಡುವುದಕ್ಕೆ ಅರಸನಾದ ಸೊಲೊಮೋನನ ಬಳಿಗೆ ಹೋದಳು. ಅರಸನು ಅವಳನ್ನು ಎದುರುಗೊಳ್ಳಲು ಎದ್ದು, ಅವಳಿಗೆ ಅಡ್ಡಬಿದ್ದು, ತಾನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ರಾಜಮಾತೆಗೋಸ್ಕರ ಆಸನವನ್ನು ಹಾಕಿಸಿದನು. ಅವಳು ಅವನ ಬಲಗಡೆಯಲ್ಲಿ ಕುಳಿತುಕೊಂಡಳು.
20 ಅವಳು ಅವನಿಗೆ, “ನಿನ್ನಿಂದ ಒಂದು ಚಿಕ್ಕ ಬಿನ್ನಹವಿದೆ, ಆಗುವುದಿಲ್ಲವೆಂದು ಹೇಳಬೇಡ,” ಎಂದಳು.
ಅರಸನು ಅವಳಿಗೆ, “ನನ್ನ ತಾಯಿಯೇ ಕೇಳು. ಏಕೆಂದರೆ ನಾನು ನಿನ್ನ ಮಾತಿಗೆ ಆಗುವುದಿಲ್ಲವೆಂದು ಹೇಳುವುದಿಲ್ಲ,” ಎಂದನು.
21 ಅದಕ್ಕವಳು, “ಶೂನೇಮ್ಯಳಾದ ಅಬೀಷಗಳನ್ನು ನಿನ್ನ ಅಣ್ಣ ಅದೋನೀಯನಿಗೆ ಹೆಂಡತಿಯಾಗಲು ಅಪ್ಪಣೆಯಾಗಲಿ,” ಎಂದಳು.
22 ಅರಸನಾದ ಸೊಲೊಮೋನನು ತನ್ನ ತಾಯಿಗೆ ಉತ್ತರವಾಗಿ, “ಅದೋನೀಯನಿಗೋಸ್ಕರ ಶೂನೇಮ್ಯಳಾದ ಅಬೀಷಗ್ ಎಂಬಾಕೆಯನ್ನು ನೀನು ಕೇಳುವುದೇಕೆ? ರಾಜ್ಯವನ್ನೂ ಕೇಳು. ಏಕೆಂದರೆ ಅವನು ನನ್ನ ಅಣ್ಣನಾಗಿದ್ದಾನೆ. ಯಾಜಕ ಅಬಿಯಾತರನಿಗೋಸ್ಕರವೂ, ಚೆರೂಯಳ ಮಗ ಯೋವಾಬನಿಗೋಸ್ಕರವೂ ಕೇಳು,” ಎಂದನು.
23 ತರುವಾಯ ಅರಸನಾದ ಸೊಲೊಮೋನನು, “ಅದೋನೀಯನು ಈ ಮಾತನ್ನು ತನ್ನ ಪ್ರಾಣಕ್ಕೆ ವಿರೋಧವಾಗಿ ಹೇಳದೆ ಇದ್ದರೆ, ನನಗೆ ದೇವರು ಹಾಗೆಯೂ, ಅದಕ್ಕಿಂತಲೂ ಅಧಿಕವಾಗಿಯೂ ಮಾಡಲಿ,” ಎಂದು ಯೆಹೋವ ದೇವರ ಹೆಸರಿನಲ್ಲಿ ಆಣೆ ಇಟ್ಟನು. 24 “ಹಾಗಾದರೆ ನನ್ನನ್ನು ಸ್ಥಿರಪಡಿಸಿ, ನನ್ನ ತಂದೆ ದಾವೀದನ ಸಿಂಹಾಸನದ ಮೇಲೆ ನನ್ನನ್ನು ಕೂಡಿಸಿ, ತಾವು ಮಾತುಕೊಟ್ಟ ಪ್ರಕಾರ ನನಗೆ ಮನೆತನ ಕಟ್ಟಿಸಿದ ಯೆಹೋವ ದೇವರ ಜೀವದಾಣೆ, ಈ ಹೊತ್ತು ಅದೋನೀಯನು ಸಾಯಬೇಕು,” ಎಂದನು. 25 ಆಗ ಅರಸನಾದ ಸೊಲೊಮೋನನು ಯೆಹೋಯಾದಾವನ ಮಗ ಬೆನಾಯನನ್ನು ಕಳುಹಿಸಿದನು. ಇವನು ಹೋಗಿ ಅದೋನೀಯನನ್ನು ಕೊಂದುಹಾಕಿದನು.
26 ಯಾಜಕನಾದ ಅಬಿಯಾತರನಿಗೆ ಅರಸನು, “ನೀನು ಅನಾತೋತಿನಲ್ಲಿರುವ ನಿನ್ನ ಹೊಲಗಳಿಗೆ ಹೋಗು. ಏಕೆಂದರೆ ನೀನು ಸಾವಿಗೆ ಪಾತ್ರನಾಗಿದ್ದೀಯೆ. ಆದರೆ ನೀನು ಸಾರ್ವಭೌಮ ಯೆಹೋವ ದೇವರ ಮಂಜೂಷವನ್ನು ನನ್ನ ತಂದೆ ದಾವೀದನ ಮುಂದೆ ಹೊತ್ತದ್ದರಿಂದಲೂ, ನನ್ನ ತಂದೆಯ ಎಲ್ಲಾ ಕಷ್ಟಗಳಲ್ಲಿ ನೀನು ಪಾಲುಗಾರನಾಗಿದ್ದರಿಂದಲೂ, ನಾನು ಈಗ ನಿನ್ನನ್ನು ಸಾಯಿಸುವುದಿಲ್ಲ,” ಎಂದನು. 27 ಹೀಗೆಯೇ ಯೆಹೋವ ದೇವರು ಶೀಲೋವಿನಲ್ಲಿ ಏಲಿಯ ಮನೆಯನ್ನು ಕುರಿತು ಹೇಳಿದ ವಾಕ್ಯವು ಈಡೇರುವುದಕ್ಕೆ ಸೊಲೊಮೋನನು ಅಬಿಯಾತರನನ್ನು ಯೆಹೋವ ದೇವರಿಗೆ ಯಾಜಕನಾಗಿರದ ಹಾಗೆ ಹೊರಡಿಸಿಬಿಟ್ಟನು.
28 ಆಗ ಈ ಸುದ್ದಿ ಯೋವಾಬನಿಗೆ ಬಂತು. ಏಕೆಂದರೆ ಯೋವಾಬನು ಅಬ್ಷಾಲೋಮನ ಹಿಂದೆ ಹೋಗದೆ ಇದ್ದರೂ, ಅದೋನೀಯನ ಹಿಂದೆ ಹೋದನು. ಆದ್ದರಿಂದ ಯೋವಾಬನು ಯೆಹೋವ ದೇವರ ಮಂದಿರಕ್ಕೆ ಓಡಿಹೋಗಿ ಬಲಿಪೀಠದ ಕೊಂಬುಗಳನ್ನು ಹಿಡಿದನು. 29 ಯೋವಾಬನು ಯೆಹೋವ ದೇವರ ಗುಡಾರಕ್ಕೆ ಓಡಿಹೋಗಿ ಬಲಿಪೀಠದ ಬಳಿಯಲ್ಲಿ ಇದ್ದಾನೆ, ಎಂಬ ಸುದ್ದಿ ಅರಸನಾದ ಸೊಲೊಮೋನನಿಗೆ ತಿಳಿಯಿತು. ಆಗ ಸೊಲೊಮೋನನು ಯೆಹೋಯಾದಾವನ ಮಗ ಬೆನಾಯನಿಗೆ, “ನೀನು ಹೋಗಿ ಅವನನ್ನು ಕೊಂದುಹಾಕು,” ಎಂದನು.
30 ಬೆನಾಯನು ಯೆಹೋವ ದೇವರ ಗುಡಾರಕ್ಕೆ ಬಂದು ಯೋವಾಬನಿಗೆ, “ನೀನು ಹೊರಗೆ ಬರಬೇಕೆಂದು ಅರಸನು ಹೇಳುತ್ತಾನೆ,” ಎಂದನು.
ಅದಕ್ಕವನು, “ಇಲ್ಲ, ಇಲ್ಲಿಯೇ ಸಾಯುತ್ತೇನೆ,” ಎಂದನು.
ಬೆನಾಯನು ಅರಸನ ಬಳಿಗೆ ತಿರುಗಿ ಹೋಗಿ ಯೋವಾಬನು ಹೇಳಿದ್ದನ್ನು ತಿಳಿಸಿದನು.
31 ಅರಸನು ಬೆನಾಯನಿಗೆ, “ಅವನು ಹೇಳಿದ ಪ್ರಕಾರ ಮಾಡು. ಯೋವಾಬನು ನಿನ್ನ ಹಾಗೂ ನನ್ನ ತಂದೆಯ ಮನೆಯವರ ನಿರಪರಾಧ ರಕ್ತವನ್ನು ಚೆಲ್ಲಿದ ದೋಷವನ್ನು ತೊಲಗಿಸುವ ಹಾಗೆ ಅವನನ್ನು ಕೊಂದು, ಅವನ ಶವವನ್ನು ಸಮಾಧಿಮಾಡು. 32 ಆಗ ಯೆಹೋವ ದೇವರು ಅವನ ತಲೆಯ ಮೇಲೆ ಅವನ ರಕ್ತಾಪರಾಧವನ್ನು ಬರಮಾಡುವರು. ಏಕೆಂದರೆ ಅವನು ನನ್ನ ತಂದೆ ದಾವೀದನಿಗೆ ತಿಳಿಯದೆ ತನಗಿಂತ ಉತ್ತಮರೂ ನೀತಿವಂತರೂ ಆದ ಇಬ್ಬರು ವ್ಯಕ್ತಿಗಳನ್ನು ಖಡ್ಗದಿಂದ ಕೊಂದನು. ಅವರು ಯಾರೆಂದರೆ, ಇಸ್ರಾಯೇಲಿನ ಸೈನ್ಯಕ್ಕೆ ಅಧಿಪತಿಯೂ ನೇರನ ಮಗನೂ ಆದ ಅಬ್ನೇರನು, ಯೆಹೂದ ಸೈನ್ಯಕ್ಕೆ ಅಧಿಪತಿಯೂ ಯೆತೆರನ ಮಗನೂ ಆದ ಅಮಾಸನು. 33 ಆದ್ದರಿಂದ ಅವರ ರಕ್ತಾಪರಾಧವು ಯೋವಾಬನ ತಲೆಯ ಮೇಲೆಯೂ, ಅವನ ಸಂತತಿಯವರ ತಲೆಯ ಮೇಲೆಯೂ ಯುಗಯುಗಕ್ಕೂ ಇರುವುದು. ಆದರೆ ದಾವೀದನ ಮೇಲೆಯೂ, ಅವನ ಸಂತಾನದವರ ಮೇಲೆಯೂ, ಅವನ ಮನೆಯ ಮೇಲೆಯೂ, ಅವನ ಸಿಂಹಾಸನದ ಮೇಲೆಯೂ ಯೆಹೋವ ದೇವರಿಂದ ಸಮಾಧಾನವು ಯುಗಯುಗಾಂತರಕ್ಕೂ ಇರುವುದು,” ಎಂದನು.
34 ಹಾಗೆಯೇ ಯೆಹೋಯಾದಾವನ ಮಗ ಬೆನಾಯನು ಹೋಗಿ ಯೋವಾಬನನ್ನು ಕೊಂದುಹಾಕಿದನು. ಅವನ ಶವಕ್ಕೆ ಮರುಭೂಮಿಯಲ್ಲಿದ್ದ ಅವನ ಮನೆಯ ನಿವೇಶನದಲ್ಲಿ ಸಮಾಧಿಯಾಯಿತು. 35 ಆಗ ಅರಸನು ಯೆಹೋಯಾದಾವನ ಮಗ ಬೆನಾಯನನ್ನು ಯೋವಾಬನಿಗೆ ಬದಲಾಗಿ ಸೈನ್ಯದ ಮೇಲೆ ನೇಮಿಸಿದನು. ಇದಲ್ಲದೆ ಅರಸನು ಅಬಿಯಾತರನಿಗೆ ಬದಲಾಗಿ ಯಾಜಕನಾದ ಚಾದೋಕನನ್ನು ನೇಮಿಸಿದನು.
36 ಆಗ ಅರಸನು ಶಿಮ್ಮಿಯನ್ನು ಕರೆಯಿಸಿ ಅವನಿಗೆ, “ನೀನು ಯೆರೂಸಲೇಮಿನಲ್ಲಿ, ನಿನಗೆ ಮನೆಯನ್ನು ಕಟ್ಟಿಸಿಕೊಂಡು, ಅಲ್ಲಿಂದ ಎಲ್ಲಿಗೂ ಹೋಗದೆ ವಾಸವಾಗಿರು. 37 ಯಾವ ದಿವಸದಲ್ಲಿ ನೀನು ಹೊರಟು ಕಿದ್ರೋನೆಂಬ ಹಳ್ಳವನ್ನು ದಾಟುವೆಯೋ, ಆ ದಿವಸದಲ್ಲಿ ನಿಶ್ಚಯವಾಗಿ ಸಾಯುವೆ ಎಂದು ಖಂಡಿತ ತಿಳಿದುಕೋ ಮತ್ತು ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರುವುದು,” ಎಂದನು.
38 ಶಿಮ್ಮಿ ಅರಸನಿಗೆ, “ನಿಮ್ಮ ಮಾತು ಒಳ್ಳೆಯದು. ಅರಸನಾದ ನನ್ನ ಒಡೆಯನು ಹೇಳಿದ ಪ್ರಕಾರವೇ, ನಿನ್ನ ಸೇವಕನು ಮಾಡುವನು,” ಎಂದನು. ಶಿಮ್ಮಿ ಯೆರೂಸಲೇಮಿನಲ್ಲಿ ಬಹಳ ದಿವಸ ವಾಸವಾಗಿದ್ದನು.
39 ಮೂರು ವರ್ಷಗಳ ಅಂತ್ಯದಲ್ಲಿ ಶಿಮ್ಮಿಯ ಸೇವಕರಲ್ಲಿ ಇಬ್ಬರು ಗತ್‌ನ ಅರಸನೂ ಮಾಕನ ಮಗನೂ ಆದ ಆಕೀಷನ ಬಳಿಗೆ ಓಡಿಹೋದರು. ಆಗ ಶಿಮ್ಮಿಗೆ, “ನಿನ್ನ ಸೇವಕರು ಗತ್‌ನಲ್ಲಿ ಇದ್ದಾರೆ” ಎಂದು ತಿಳಿಸಿದರು. 40 ಆದ್ದರಿಂದ ಶಿಮ್ಮಿ ಎದ್ದು ತನ್ನ ಕತ್ತೆಗೆ ತಡಿಯನ್ನು ಹಾಕಿಸಿ, ತನ್ನ ಸೇವಕರನ್ನು ಹುಡುಕಲು ಗತ್‌ನಲ್ಲಿರುವ ಆಕೀಷನ ಬಳಿಗೆ ಹೋದನು. ಶಿಮ್ಮಿ ಹೋಗಿ ಗತ್‌ನಿಂದ ತನ್ನ ಸೇವಕರನ್ನು ಕರೆದುಕೊಂಡು ಬಂದನು.
41 ಶಿಮ್ಮಿ ಯೆರೂಸಲೇಮನ್ನು ಬಿಟ್ಟು ಗತ್ ಊರಿಗೆ ಹೋಗಿ, ತಿರುಗಿ ಬಂದಿದ್ದಾನೆಂದು ಸೊಲೊಮೋನನಿಗೆ ತಿಳಿಯಿತು. 42 ಆಗ ಅರಸನು ಶಿಮ್ಮಿಯನ್ನು ಕರೆಕಳುಹಿಸಿ ಅವನಿಗೆ, “ನೀನು ಯಾವ ದಿವಸದಲ್ಲಿ ಹೊರಟು ಎಲ್ಲಿಗಾದರೂ ಹೋದರೆ, ಅದೇ ದಿವಸದಲ್ಲಿ ನಿಶ್ಚಯವಾಗಿ ಸಾಯುವೆ, ಎಂದು ಖಂಡಿತವಾಗಿ ತಿಳಿದುಕೋ, ಎಂಬುದಾಗಿ ನಾನು ನಿನಗೆ ದೃಢವಾಗಿ ಹೇಳಿ, ಯೆಹೋವ ದೇವರ ಹೆಸರಿನಲ್ಲಿ ನಿನ್ನಿಂದ ಪ್ರಮಾಣ ಮಾಡಿಸಲಿಲ್ಲವೋ? ನಾನು ಹೇಳಿದ ಮಾತುಒಳ್ಳೆಯದೆಂದು ನೀನು ಹೇಳಲಿಲ್ಲವೋ? 43 ನೀನು ಯೆಹೋವ ದೇವರ ಆಣೆಯನ್ನೂ, ನಾನು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನೂ ನೀನು ಕೈಗೊಳ್ಳದೆ ಇದ್ದದ್ದೇನು?” ಎಂದನು.
44 ಅರಸನು ಶಿಮ್ಮಿಗೆ, “ನೀನು ನನ್ನ ತಂದೆ ದಾವೀದನಿಗೆ ಮಾಡಿದ ಕೇಡನ್ನು ನಿನ್ನ ಹೃದಯವು ತಿಳಿದಿದೆ. ಯೆಹೋವ ದೇವರು ನಿನ್ನ ಕೆಟ್ಟತನವನ್ನು ನಿನ್ನ ತಲೆಯ ಮೇಲೆ ಬರಮಾಡುವರು. 45 ಆದರೆ ಅರಸನಾದ ಸೊಲೊಮೋನನಿಗೆ ಆಶೀರ್ವಾದವಾಗಲಿ. ದಾವೀದನ ಸಿಂಹಾಸನವು ಯೆಹೋವ ದೇವರ ಮುಂದೆ ಯುಗಯುಗಾಂತರಕ್ಕೂ ಸ್ಥಿರವಾಗಿರುವುದು,” ಎಂದನು.
46 ಆಗ ಅರಸನಾದ ಸೊಲೊಮೋನನು ಯೆಹೋಯಾದಾವನ ಮಗ ಬೆನಾಯನಿಗೆ ಆಜ್ಞಾಪಿಸಿದ್ದರಿಂದ, ಅವನು ಹೊರಟು ಹೋಗಿ ಶಿಮ್ಮಿಯ ಮೇಲೆ ಬಿದ್ದು ಅವನನ್ನು ಕೊಂದುಹಾಕಿದನು.
ಹೀಗೆ ರಾಜ್ಯವು ಸೊಲೊಮೋನನ ಕೈಯಲ್ಲಿ ಸ್ಥಿರವಾಯಿತು.