ಅರಸುಗಳು
ದ್ವಿತೀಯ ಭಾಗ
1
ಅಹಜ್ಯನ ಮೇಲೆ ಯೆಹೋವ ದೇವರ ತೀರ್ಪು
ಅಹಾಬನ ಮರಣದ ನಂತರ ಮೋವಾಬ್ಯರು ಇಸ್ರಾಯೇಲರ ವಿರುದ್ಧ ದಂಗೆ ಎದ್ದರು. ಅಹಜ್ಯನು ಸಮಾರ್ಯದಲ್ಲಿದ್ದ ತನ್ನ ಮೇಲುಪ್ಪರಿಗೆಯ ಕಿಟಕಿಯೊಂದರಿಂದ ಬಿದ್ದು ಅಸ್ವಸ್ಥನಾಗಿದ್ದನು. ಅವನು ತನ್ನ ಸೇವಕರನ್ನು ಕರೆದು, “ಎಕ್ರೋನಿನ ದೇವರಾದ ‘ಬಾಳ್ ಜೆಬೂಬನ’ ಸನ್ನಿಧಿಗೆ ಹೋಗಿ, ನಾನು ಈ ಅಸ್ವಸ್ಥತೆಯಿಂದ ಗುಣವಾಗುವೆನೋ ಇಲ್ಲವೋ? ಎಂದು ವಿಚಾರಿಸಿ ಬನ್ನಿ,” ಎಂದು ಹೇಳಿ ಕಳುಹಿಸಿದನು.
ಆದರೆ ಯೆಹೋವ ದೇವರ ದೂತನು ತಿಷ್ಬೀಯನಾದ ಎಲೀಯನಿಗೆ, “ನೀನೆದ್ದು ಸಮಾರ್ಯದ ಅರಸನ ಸೇವಕರಿಗೆ ಎದುರಾಗಿ ಹೋಗಿ ಅವರಿಗೆ, ‘ಇಸ್ರಾಯೇಲಿನಲ್ಲಿ ದೇವರು ಇಲ್ಲವೆ? ನೀವು ಎಕ್ರೋನಿನ ದೇವರಾದ ಬಾಳ್ ಜೆಬೂಬನನ್ನು ವಿಚಾರಿಸಲು ಹೋಗುತ್ತಿರುವುದೇಕೆ? ಇದರ ನಿಮಿತ್ತ ನೀನು ಏರಿದ ಮಂಚದಿಂದ ಇಳಿಯದೆ, ನಿಶ್ಚಯವಾಗಿ ಸಾಯುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ ಎಂದು ಹೇಳು,” ಎಂದರು. ಆಗ ಎಲೀಯನು ಹೊರಟುಹೋಗಿ ಅದರಂತೆ ಹೇಳಿದನು.
ಸೇವಕರು ಅರಸನ ಬಳಿಗೆ ಹಿಂದಿರುಗಿ ಬಂದಾಗ, ಅವನು ಅವರಿಗೆ, “ನೀವು ಹಿಂದಿರುಗಿ ಬಂದದ್ದೇಕೆ?” ಎಂದನು.
ಅವರು ಅರಸನಿಗೆ, “ಒಬ್ಬ ಮನುಷ್ಯನು ನಮಗೆ ಎದುರಾಗಿ ಬಂದು, ‘ನೀವು ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹಿಂದಿರುಗಿ ಹೋಗಿ, ಯೆಹೋವ ದೇವರು ಹೇಳುವುದು ಏನೆಂದರೆ: ಇಸ್ರಾಯೇಲಿನಲ್ಲಿ ದೇವರು ಇಲ್ಲವೆ? ನೀನು ಎಕ್ರೋನಿನ ದೇವರಾದ ಬಾಳ್ ಜೆಬೂಬನನ್ನು ವಿಚಾರಿಸಲು ಜನರನ್ನು ಕಳುಹಿಸಿರುತ್ತೀ? ಇದರ ನಿಮಿತ್ತ, ನೀನು ಏರಿದ ಮಂಚದಿಂದ ಇಳಿಯದೆ, ನಿಶ್ಚಯವಾಗಿ ಸಾಯುವೆ,’ ಎಂಬುದಾಗಿ ಅವನಿಗೆ ಹೇಳಿರಿ, ಎಂದು ತಿಳಿಸಿದನು,” ಎಂದರು.
ಅರಸನು ಅವರಿಗೆ, “ನಿಮಗೆದುರಾಗಿ ಬಂದು ಈ ಮಾತುಗಳನ್ನು ನಿಮಗೆ ಹೇಳಿದ ಆ ಮನುಷ್ಯನು ಹೇಗಿದ್ದನು?” ಎಂದು ಕೇಳಿದನು.
ಅದಕ್ಕವರು, “ಅವನು ಕಂಬಳಿಯನ್ನು ಹೊದ್ದುಕೊಂಡಿದ್ದನು; ಅವನ ಸೊಂಟಕ್ಕೆ ಸುತ್ತಲೂ ತೊಗಲಿನ ನಡುಕಟ್ಟು ಇತ್ತು,” ಎಂದರು.
ಆಗ ಅರಸನು, “ಅವನು ತಿಷ್ಬೀಯನಾದ ಎಲೀಯನೇ ಆಗಿರಬೇಕು,” ಎಂದು ಹೇಳಿದನು.
ಆಗ ಅರಸನು ಒಬ್ಬ ಪ್ರಧಾನನನ್ನು, ಅವನ ಐವತ್ತು ಮಂದಿ ಸಿಪಾಯಿಗಳೊಡನೆ ಎಲೀಯನ ಬಳಿಗೆ ಕಳುಹಿಸಿದನು. ಪ್ರಧಾನನು ಅವನ ಬಳಿಗೆ ಹೋದಾಗ, ಇಗೋ, ಎಲೀಯನು ಬೆಟ್ಟದ ತುದಿಯಲ್ಲಿ ಕುಳಿತಿದ್ದನು. ಆಗ ಅವನು ಎಲೀಯನಿಗೆ, “ದೇವರ ಮನುಷ್ಯನೇ, ‘ಇಳಿದು ಬಾ,’ ಎಂದು ಅರಸನು ಹೇಳುತ್ತಾನೆ,” ಎಂದನು.
10 ಅದಕ್ಕೆ ಎಲೀಯನು ಪ್ರಧಾನನಿಗೆ ಉತ್ತರವಾಗಿ, “ನಾನು ದೇವರ ಮನುಷ್ಯನಾಗಿದ್ದರೆ, ಬೆಂಕಿಯು ಆಕಾಶದಿಂದ ಇಳಿದು ನಿನ್ನನ್ನೂ ನಿನ್ನ ಐವತ್ತು ಮಂದಿಯನ್ನೂ ದಹಿಸಿಬಿಡಲಿ,” ಎಂದನು. ಆಗ ಬೆಂಕಿಯು ಆಕಾಶದಿಂದ ಇಳಿದು ಅವನನ್ನೂ ಅವನ ಐವತ್ತು ಮಂದಿಯನ್ನೂ ದಹಿಸಿಬಿಟ್ಟಿತು.
11 ತಿರುಗಿ ಅರಸನು ಎಲೀಯನ ಬಳಿಗೆ ಐವತ್ತು ಮಂದಿಯ ಪ್ರಧಾನನನ್ನೂ ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಅವನು ಬಂದು ಇವನಿಗೆ, “ದೇವರ ಮನುಷ್ಯನೇ, ‘ಬೇಗನೆ ಇಳಿದು ಬಾ,’ ಎಂದು ಅರಸನು ಹೇಳುತ್ತಾನೆ,” ಎಂದನು.
12 ಎಲೀಯನು ಅವರಿಗೆ ಉತ್ತರವಾಗಿ, “ನಾನು ದೇವರ ಮನುಷ್ಯನಾಗಿದ್ದರೆ, ಬೆಂಕಿಯು ಆಕಾಶದಿಂದ ಇಳಿದು ನಿನ್ನನ್ನೂ ನಿನ್ನ ಐವತ್ತು ಮಂದಿಯನ್ನೂ ದಹಿಸಿಬಿಡಲಿ,” ಎಂದನು. ಆಗ ದೇವರ ಬೆಂಕಿಯು ಆಕಾಶದಿಂದ ಇಳಿದು ಅವನನ್ನೂ ಅವನ ಐವತ್ತು ಮಂದಿಯನ್ನೂ ಸುಟ್ಟುಬಿಟ್ಟಿತು.
13 ತಿರುಗಿ ಅರಸನು ಐವತ್ತು ಮಂದಿಯ ಪ್ರಧಾನನಾದ ಮೂರನೆಯವನನ್ನೂ, ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಈ ಐವತ್ತು ಮಂದಿಗೆ ಪ್ರಧಾನನಾದ ಮೂರನೆಯವನು ಬಂದು ಎಲೀಯನ ಮುಂದೆ ತನ್ನ ಮೊಣಕಾಲೂರಿಕೊಂಡು ಅವನಿಗೆ, “ದೇವರ ಮನುಷ್ಯನೇ, ನೀನು ದಯಮಾಡು, ನನ್ನ ಪ್ರಾಣವೂ, ನಿನ್ನ ಸೇವಕರಾದ ಈ ಐವತ್ತು ಮಂದಿಯ ಪ್ರಾಣಗಳೂ ನಿನ್ನ ಸಮ್ಮುಖದಲ್ಲಿ ಮೌಲ್ಯವುಳ್ಳದ್ದಾಗಿರಲಿ. 14 ಇಗೋ, ಬೆಂಕಿಯು ಆಕಾಶದಿಂದ ಇಳಿದು ಮೊದಲಿನ ಇಬ್ಬರು ಪ್ರಧಾನರನ್ನೂ, ಅವರ ಐವತ್ತು ಮಂದಿಯನ್ನೂ ದಹಿಸಿಬಿಟ್ಟಿತು. ಆದರೆ ಈಗ ನನ್ನ ಪ್ರಾಣವು ನಿನ್ನ ಸಮ್ಮುಖದಲ್ಲಿ ಮೌಲ್ಯವುಳ್ಳದ್ದಾಗಿರಲಿ,” ಎಂದು ಹೇಳಿ ಅವನನ್ನು ಬೇಡಿಕೊಂಡನು.
15 ಆಗ ಯೆಹೋವ ದೇವರ ದೂತನು ಎಲೀಯನಿಗೆ, “ಅವನ ಸಂಗಡ ಇಳಿದು ಹೋಗು, ಅವನಿಗೆ ಭಯಪಡಬೇಡ,” ಎಂದನು. ಆದ್ದರಿಂದ ಎಲೀಯನು ಎದ್ದು ಅವನ ಸಂಗಡ ಅರಸನ ಬಳಿಗೆ ಇಳಿದು ಹೋದನು.
16 ಅರಸನಿಗೆ, “ಯೆಹೋವ ದೇವರ ವಾಕ್ಯವನ್ನು ವಿಚಾರಿಸಲು ಇಸ್ರಾಯೇಲಿನಲ್ಲಿ ದೇವರಿಲ್ಲವೆಂಬ ಹಾಗೆ ನೀನು ಎಕ್ರೋನಿನ ದೇವರಾದ ಬಾಳ್ ಜೆಬೂಬನ್ನು ವಿಚಾರಿಸಲು ದೂತರನ್ನು ಕಳುಹಿಸಿದ ಕಾರಣ, ‘ನೀನು ಏರಿದ ಮಂಚದಿಂದ ಇಳಿಯದೆ ನಿಶ್ಚಯವಾಗಿ ಸಾಯುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು. 17 ಹಾಗೆಯೇ ಅವನು ಎಲೀಯನು ಹೇಳಿದ ಯೆಹೋವ ದೇವರ ವಾಕ್ಯದ ಪ್ರಕಾರವೇ ಸತ್ತುಹೋದನು.
ಅಹಜ್ಯನಿಗೆ ಮಗನಿಲ್ಲದ್ದರಿಂದ ಯೆಹೂದದ ಅರಸನಾದ ಯೆಹೋಷಾಫಾಟನ ಮಗ ಯೆಹೋರಾಮನ ಎರಡನೆಯ ವರ್ಷದಲ್ಲಿ ಯೋರಾಮನು ಅವನಿಗೆ ಬದಲಾಗಿ ಅರಸನಾದನು. 18 ಅಹಜ್ಯನು ಮಾಡಿದ ಇತರ ಕ್ರಿಯೆಗಳು ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.