18
ಯೆಹೂದ್ಯರ ಅರಸನಾದ ಹಿಜ್ಕೀಯ
ಇಸ್ರಾಯೇಲಿನ ಅರಸನಾಗಿರುವ ಏಲನ ಮಗ ಹೋಶೇಯನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಯೆಹೂದದ ಅರಸನಾಗಿದ್ದ ಆಹಾಜನ ಮಗ ಹಿಜ್ಕೀಯನು ಆಳಲು ಆರಂಭಿಸಿದನು. ಅವನು ಅರಸನಾದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಅವನ ತಾಯಿಯ ಹೆಸರು ಅಬೀಯಾ*. ಅವಳು ಜೆಕರ್ಯನ ಮಗಳಾಗಿದ್ದಳು. ಹಿಜ್ಕೀಯನು ತನ್ನ ತಂದೆ ದಾವೀದನು ಮಾಡಿದ ಪ್ರಕಾರ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು. ಹಿಜ್ಕೀಯನು ಉನ್ನತ ಪೂಜಾಸ್ಥಳಗಳನ್ನು ತೆಗೆದುಹಾಕಿ, ವಿಗ್ರಹಗಳನ್ನು ಒಡೆದುಬಿಟ್ಟು, ಅಶೇರ ಸ್ತಂಭಗಳನ್ನು ಕಡಿದುಹಾಕಿದನು. ಮೋಶೆಯು ಮಾಡಿದ ತಾಮ್ರದ ಸರ್ಪವನ್ನು ಮುರಿದುಬಿಟ್ಟನು. ಏಕೆಂದರೆ ಆ ದಿವಸಗಳವರೆಗೂ ಇಸ್ರಾಯೇಲರು ಅದಕ್ಕೆ ಧೂಪ ಸುಡುತ್ತಿದ್ದರು. ಅದನ್ನು ನೆಹುಷ್ಟಾನ್ ಎಂದು ಕರೆಯುತ್ತಿದ್ದರು.
ಹಿಜ್ಕೀಯನು ಇಸ್ರಾಯೇಲಿನ ಯೆಹೋವ ದೇವರಲ್ಲಿ ಭರವಸೆವುಳ್ಳವನಾಗಿದ್ದನು. ಅವನಿಗೆ ಮುಂಚೆ ಇದ್ದವರಲ್ಲಿಯೂ, ಅವನ ತರುವಾಯ ಯೆಹೂದದ ಸಮಸ್ತ ಅರಸುಗಳಲ್ಲಿಯೂ ಅವನ ಹಾಗೆ ಒಬ್ಬರೂ ಇರಲಿಲ್ಲ. ಅವನು ಯೆಹೋವ ದೇವರನ್ನು ಹಿಂಬಾಲಿಸುವುದನ್ನು ಬಿಟ್ಟುಬಿಡದೆ, ದೇವರನ್ನೇ ಆತುಕೊಂಡು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಆಜ್ಞೆಗಳನ್ನು ಕೈಗೊಂಡನು. ಯೆಹೋವ ದೇವರು ಅವನ ಸಂಗಡ ಇದ್ದರು. ಹಿಜ್ಕೀಯನು ಯಾವ ಕಡೆಗೆ ಹೋದರೂ ಅವನಿಗೆ ಸಫಲವಾಯಿತು. ಅವನು ಅಸ್ಸೀರಿಯದ ಅರಸನನ್ನು ಸೇವಿಸದೆ, ಅವನ ಮೇಲೆ ತಿರುಗಿಬಿದ್ದನು. ಅವರು ಕಾವಲು ಗೋಪುರದಿಂದ ಕೋಟೆಯುಳ್ಳ ಪಟ್ಟಣಗಳವರೆಗೂ ಫಿಲಿಷ್ಟಿಯರನ್ನು ಗಾಜಪ್ರಾಂತ್ಯದವರೆಗೆ ಸಂಹರಿಸಿದನು.
ಇಸ್ರಾಯೇಲಿನ ಅರಸನಾದ ಏಲನ ಮಗ ಹೋಶೇಯನ ಆಳ್ವಿಕೆಯ ಏಳನೆಯ ವರ್ಷ, ಹಿಜ್ಕೀಯನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಅಸ್ಸೀರಿಯದ ಅರಸನಾದ ಶಲ್ಮನೆಸೆರನು ಸಮಾರ್ಯಕ್ಕೆ ವಿರೋಧವಾಗಿ ಬಂದು ಅದಕ್ಕೆ ಮುತ್ತಿಗೆಹಾಕಿದನು. 10 ಮೂರು ವರ್ಷದ ತರುವಾಯ ಸಮಾರ್ಯವನ್ನು ಅಸ್ಸೀರಿಯದವರು ಸ್ವಾಧೀನಮಾಡಿಕೊಂಡರು. ಇಸ್ರಾಯೇಲಿನ ಅರಸನಾದ ಹೋಶೇಯನ ಒಂಬತ್ತನೆಯ ವರ್ಷವಾದ, ಹಿಜ್ಕೀಯನ ಆರನೆಯ ವರ್ಷದಲ್ಲಿ ಸಮಾರ್ಯವು ಸ್ವಾಧೀನವಾಯಿತು. 11 ಅಸ್ಸೀರಿಯದ ಅರಸನು ಇಸ್ರಾಯೇಲರನ್ನು ಅಸ್ಸೀರಿಯ ದೇಶಕ್ಕೆ ಸೆರೆಯಾಗಿ ಒಯ್ದು ಹಲಹ ಪ್ರಾಂತದಲ್ಲಿಯೂ, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತದಲ್ಲಿಯೂ ಮತ್ತು ಮೇದ್ಯರ ಪಟ್ಟಣಗಳಲ್ಲಿಯೂ ಇರಿಸಿದನು. 12 ಏಕೆಂದರೆ ಅವರು ತಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳದೆ, ಅವರ ಒಡಂಬಡಿಕೆಯನ್ನೂ, ಯೆಹೋವ ದೇವರ ಸೇವಕನಾದ ಮೋಶೆಯು ಆಜ್ಞಾಪಿಸಿದ್ದ ಸಮಸ್ತವನ್ನೂ ಮೀರಿದರು. ಅವರು ದೇವರ ಆಜ್ಞೆಗಳಿಗೆ ಕಿವಿಗೊಡಲಿಲ್ಲ, ಅವುಗಳಂತೆ ನಡೆಯಲಿಲ್ಲ.
13 ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಅಸ್ಸೀರಿಯದ ಅರಸನಾದ ಸನ್ಹೇರೀಬನು ಬಂದು, ಯೆಹೂದದ ಎಲ್ಲಾ ಕೋಟೆಯ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು. 14 ಆಗ ಯೆಹೂದದ ಅರಸನಾದ ಹಿಜ್ಕೀಯನು ಲಾಕೀಷಿನಲ್ಲಿದ್ದ ಅಸ್ಸೀರಿಯದ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನಾನು ತಪ್ಪು ಮಾಡಿದ್ದೇನೆ. ನನ್ನನ್ನು ಬಿಟ್ಟು ಹಿಂದಿರುಗಿ ಹೋಗು. ನೀನು ನನ್ನ ಮೇಲೆ ವಿಧಿಸುವುದನ್ನು ನಾನು ಕೊಡುತ್ತೇನೆ,” ಎಂದು ಹೇಳಿ ಕಳುಹಿಸಿದನು. ಆಗ ಅಸ್ಸೀರಿಯದ ಅರಸನು ಯೆಹೂದದ ಅರಸನಾದ ಹಿಜ್ಕೀಯನು ಹತ್ತು ಸಾವಿರ ಕಿಲೋಗ್ರಾಂ ಬೆಳ್ಳಿಯನ್ನೂ, ಒಂದು ಸಾವಿರ ಕಿಲೋಗ್ರಾಂ ಬಂಗಾರವನ್ನೂ ಕೊಡಬೇಕೆಂದು ನೇಮಕಮಾಡಿದನು. 15 ಆದ್ದರಿಂದ ಹಿಜ್ಕೀಯನು ಯೆಹೋವ ದೇವರ ಆಲಯದಲ್ಲಿಯೂ, ಅರಸನ ಮನೆಯ ಬೊಕ್ಕಸಗಳಲ್ಲಿಯೂ, ಸಿಕ್ಕಿದ ಸಮಸ್ತ ಬೆಳ್ಳಿಯನ್ನೂ ಕೊಟ್ಟನು.
16 ಈ ಸಮಯದಲ್ಲಿ ಯೆಹೂದದ ಅರಸನಾದ ಹಿಜ್ಕೀಯನು, ಯೆಹೋವ ದೇವರ ಮಂದಿರದ ಕದಗಳ ಮೇಲೆಯೂ, ಸ್ತಂಭಗಳ ಮೇಲೆಯೂ ತಾನು ಹೊದಿಸಿದ್ದ ಬಂಗಾರವನ್ನೂ ಕತ್ತರಿಸಿ, ಅಸ್ಸೀರಿಯದ ಅರಸನಿಗೆ ಕೊಟ್ಟನು.
ಸನ್ಹೇರೀಬನು ಯೆರೂಸಲೇಮನ್ನು ಹೆದರಿಸಿದ್ದು
17 ಅಸ್ಸೀರಿಯದ ಅರಸನು ತನ್ನ ಅತಿ ಪ್ರಮುಖ ಅಧಿಕಾರಿಯನ್ನೂ, ಮುಖ್ಯ ನಾಯಕರನ್ನೂ, ಸೈನ್ಯಾಧಿಕಾರಿಯನ್ನೂ ಲಾಕೀಷಿನಿಂದ ದೊಡ್ಡ ಸೈನ್ಯದೊಂದಿಗೆ ರಬ್ಷಾಕೆ ಎಂಬವನನ್ನೂ ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಅವರು ಯೆರೂಸಲೇಮಿಗೆ ಬಂದು ಅಗಸರ ಹೊಲದ ಮಾರ್ಗದಲ್ಲಿ ಮೇಲಿನ ಕೆರೆಯ ಕಾಲುವೆಯ ಸಮೀಪದಲ್ಲಿ ನಿಂತುಕೊಂಡರು. 18 ಅವರು ಅರಸನನ್ನು ಕರೆಕಳುಹಿಸಿದರು. ಅರಮನೆಯ ಕಾರ್ಯನಿರ್ವಾಹಕನಾದ ಹಿಲ್ಕೀಯನ ಮಗ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬುವರು ಅವರ ಬಳಿಗೆ ಬಂದರು.
19 ರಬ್ಷಾಕೆಯು ಅವರಿಗೆ, “ನೀವು ಹಿಜ್ಕೀಯನಿಗೆ ಹೀಗೆ ಹೇಳಬೇಕು:
“ ‘ಮಹಾರಾಜನಾದ ಅಸ್ಸೀರಿಯದ ಅರಸನು ಹೇಳುವುದೇನೆಂದರೆ, ಈ ನಿನ್ನ ಭರವಸೆಗೆ ಆಧಾರ ಏನು? 20 ಯುದ್ಧಕ್ಕೆ ಬೇಕಾದ ಆಲೋಚನೆಯೂ, ಪರಾಕ್ರಮವೂ ಉಂಟೆಂದು ಹೇಳುವ ನಿನ್ನ ಮಾತು ಬರೀ ವ್ಯರ್ಥವಾದ ಮಾತುಗಳೇ, ನೀನು ಯಾರನ್ನು ನಂಬಿಕೊಂಡು ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದೀಯೆ? 21 ಇಗೋ, ನೀನು ಜಜ್ಜಿದ ದಂಟಿಗೆ ಸಮಾನವಾಗಿರುವ ಈಜಿಪ್ಟಿನ ಮೇಲೆ ಭರವಸೆ ಇಟ್ಟಿರುವಿಯಷ್ಟೆ, ಅದರ ಮೇಲೆ ಮನುಷ್ಯನು ಊರಿಕೊಂಡರೆ ಅದು ಅವನ ಕೈಯನ್ನೇ ಚುಚ್ಚಿ ಗಾಯ ಮಾಡುವುದು! ಈಜಿಪ್ಟಿನ ಅರಸನಾದ ಫರೋಹನಲ್ಲಿ ಭರವಸೆ ಇಟ್ಟವರೆಲ್ಲರಿಗೂ ಇದೇ ಗತಿಯಾಗುವದು. 22 ಬಹುಶಃ ನೀವು, “ನಮ್ಮ ದೇವರಾದ ಯೆಹೋವ ದೇವರನ್ನೇ ನಂಬಿಕೊಂಡಿದ್ದೇವೆ,” ಎಂದು ಹೇಳಬಹುದು. “ಯೆರೂಸಲೇಮಿನ ಬಲಿಪೀಠದ ಮುಂದೆಯೇ ಆರಾಧನೆ ಮಾಡಬೇಕು,” ಎಂದು ಯೆಹೂದ್ಯರಿಗೆ ಮತ್ತು ಯೆರೂಸಲೇಮಿನವರಿಗೆ ಹಿಜ್ಕೀಯನು ಆಜ್ಞಾಪಿಸಿ, ಆ ಯೆಹೋವ ದೇವರ ಪೂಜಾಸ್ಥಳಗಳನ್ನೂ, ಬೇರೆ ಎಲ್ಲಾ ಬಲಿಪೀಠಗಳನ್ನೂ ಹಾಳುಮಾಡಿದನಲ್ಲವೇ?
23 “ ‘ಹಾಗಾದರೆ ಈಗ ನೀನು ಅಸ್ಸೀರಿಯದ ಅರಸನಾದ ನನ್ನ ಯಜಮಾನನೊಂದಿಗೆ ಒಪ್ಪಂದ ಮಾಡಿಕೋ, ಆಗ ನಿನಗೆ ಎರಡು ಸಾವಿರ ಕುದುರೆಸವಾರರನ್ನು ಬಳಸಲು ಸಾಮರ್ಥ್ಯವಿದ್ದರೆ ನಾನು ಎರಡು ಸಾವಿರ ಕುದುರೆಗಳನ್ನು ಕೊಡುತ್ತೇನೆ. 24 ಇದಾಗದಿದ್ದರೆ ನನ್ನ ಯಜಮಾನನ ಸೇವಕರಲ್ಲಿ ಚಿಕ್ಕವನಾದ ಒಬ್ಬ ಸೈನ್ಯಾಧಿಪತಿಯನ್ನು ಹೇಗೆ ಎದುರಿಸುತ್ತೀ? ನೀನು ರಥಗಳಿಗೋಸ್ಕರವೂ, ರಾಹುತರಿಗೋಸ್ಕರವೂ ಈಜಿಪ್ಟಿನ ಮೇಲೆ ಭರವಸೆ ಇಟ್ಟಿದ್ದೀಯೋ? 25 ಈ ಸ್ಥಳವನ್ನು ನಾಶಮಾಡುವುದಕ್ಕೆ ಯೆಹೋವ ದೇವರ ಅಪ್ಪಣೆ ಇಲ್ಲದೆ ಬಂದಿದ್ದೇನೋ? ಈ ದೇಶದ ಮೇಲೆ ಹೋಗಿ ಅದನ್ನು ನಾಶಮಾಡೆಂದು ಯೆಹೋವ ದೇವರೇ ನನಗೆ ಹೇಳಿದರು,’ ” ಎಂದನು.
26 ಆಗ ಹಿಲ್ಕೀಯನ ಮಗ ಎಲ್ಯಾಕೀಮ್, ಶೆಬ್ನ, ಯೋವ ಎಂಬುವರು ರಬ್ಷಾಕೆಗೆ, “ನೀನು ಮಾತನಾಡುವುದು ಗೋಡೆಯ ಮೇಲಿರುವವರಿಗೆ ಕೇಳಿಸುತ್ತದೆ ಆದ್ದರಿಂದ ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಅರಾಮ್ಯ ಭಾಷೆಯಲ್ಲಿ ಮಾತನಾಡು: ಅದು ನಮಗೆ ತಿಳಿಯುತ್ತದೆ ಆದರೆ ಹಿಬ್ರಿಯ ಭಾಷೆಯಲ್ಲಿ ಮಾತನಾಡಬೇಡ,” ಎಂದು ಹೇಳಿದರು.
27 ಆದರೆ ರಬ್ಷಾಕೆಯು ಅವರಿಗೆ, “ನನ್ನ ಯಜಮಾನನು ನಿಮ್ಮ ಸಂಗಡವಾಗಲಿ, ನಿಮ್ಮ ಯಜಮಾನನ ಸಂಗಡವಾಗಲಿ ಮಾತ್ರ ಈ ಮಾತುಗಳನ್ನು ಹೇಳುವುದಕ್ಕೆ ಕಳುಹಿಸಲಿಲ್ಲ. ಈ ಗೋಡೆಯ ಮೇಲೆ ಕುಳಿತ ಜನರ ಸಂಗಡವೂ ಮಾತನಾಡುವುದಕ್ಕಾಗಿ ಕಳುಹಿಸಿದ್ದಾರೆ. ಈ ಜನರು ನಿಮ್ಮ ಸಂಗಡ ಇದ್ದರೆ ನಿಮ್ಮ ಹಾಗೆ ಇವರೂ ಸಹ ತಮ್ಮ ಸ್ವಂತ ಮಲಮೂತ್ರವನ್ನು ತಿಂದು ಕುಡಿಯಬೇಕಾಗುತ್ತದೆ,” ಎಂದು ಹೇಳಿದನು.
28 ಆಗ ರಬ್ಷಾಕೆ ನಿಂತುಕೊಂಡು ಯೆಹೂದ್ಯರ ಭಾಷೆಯಾದ ಹಿಬ್ರಿಯದಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿದ್ದೇನೆಂದರೆ, “ನೀವು ಅಸ್ಸೀರಿಯದ ಮಹಾರಾಜನ ಮಾತನ್ನು ಕೇಳಿರಿ. 29 ಅರಸನು ಹೇಳುವುದೇನೆಂದರೆ: ಹಿಜ್ಕೀಯನ ಮಾತನ್ನು ಕೇಳಿ ಮೋಸಹೋಗಬೇಡಿರಿ. ಏಕೆಂದರೆ ಅವನು ನನ್ನ ಕೈಯಿಂದ ನಿಮ್ಮನ್ನು ಬಿಡಿಸಲು ಶಕ್ತನಲ್ಲ. 30 ಇದಲ್ಲದೆ, ‘ಯೆಹೋವ ದೇವರು ನಮ್ಮನ್ನು ನಿಶ್ಚಯವಾಗಿ ರಕ್ಷಿಸುವರು, ಈ ಪಟ್ಟಣವು ಅಸ್ಸೀರಿಯದ ಅರಸನ ಕೈಯಲ್ಲಿ ಒಪ್ಪಿಸುವುದಿಲ್ಲ,’ ಎಂದು ಹೇಳಿ, ಹಿಜ್ಕೀಯನು ನಿಮಗೆ ಯೆಹೋವ ದೇವರಲ್ಲಿ ಭರವಸೆ ಇಡುವಂತೆ ಮಾಡುವನು.
31 “ಹಿಜ್ಕೀಯನ ಮಾತುಗಳಿಗೆ ಕಿವಿಗೊಡಬೇಡಿರಿ. ಏಕೆಂದರೆ ಅಸ್ಸೀರಿಯದ ಅರಸನು ಹೇಳುವುದೇನೆಂದರೆ: ನನ್ನ ಸಂಗಡ ಒಡಂಬಡಿಕೆ ಮಾಡಿಕೊಂಡು, ನನ್ನ ಬಳಿಗೆ ಹೊರಟುಬನ್ನಿರಿ, ಆಗ ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ತನ್ನ ದ್ರಾಕ್ಷಾಫಲವನ್ನೂ, ಅಂಜೂರದ ಫಲವನ್ನೂ ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವನು. 32 ಸ್ವಲ್ಪ ಕಾಲವಾದ ನಂತರ ನಾನು ಬಂದು, ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ, ಎಣ್ಣೆಮರಗಳು, ಜೇನು ಇವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾಗಿರುವ ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುವೆನು. ಜೀವವನ್ನು ಆಯ್ದುಕೊಳ್ಳಿರಿ, ಮರಣವನ್ನಲ್ಲ.
“ ‘ಯೆಹೋವ ದೇವರು ನಮ್ಮನ್ನು ರಕ್ಷಿಸುವರು,’ ಎಂದು ಹಿಜ್ಕೀಯನು ನಿಮ್ಮನ್ನು ಪ್ರೇರೇಪಿಸಿ ತಪ್ಪು ಮಾರ್ಗದಲ್ಲಿ ನಡೆಸುವಾಗ, ಅವನ ಮಾತನ್ನು ಕೇಳಬೇಡಿರಿ. 33 ಯಾವ ಜನಾಂಗದ ದೇವರುಗಳಾದರೂ ತನ್ನ ದೇಶಗಳನ್ನು ಅಸ್ಸೀರಿಯದ ಅರಸನ ಕೈಯಿಂದ ಬಿಡಿಸಿದ್ದು ಉಂಟೋ? 34 ಹಮಾತ್, ಅರ್ಪಾದ್ ದೇವರುಗಳು ಎಲ್ಲಿ? ಸೆಫರ್ವಯಿಮ್, ಹೇನ, ಇವ್ವಗಳ ದೇವರುಗಳು ಎಲ್ಲಿ? ಅವರು ಸಮಾರ್ಯವನ್ನು ನನ್ನ ಕೈಯಿಂದ ಬಿಡಿಸಿಕೊಂಡರೋ? 35 ಈ ದೇಶಗಳ ಸಮಸ್ತ ದೇವರುಗಳಲ್ಲಿ ಯಾರೂ ತಮ್ಮ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದ ಮೇಲೆ, ಯೆಹೋವ ದೇವರು ಯೆರೂಸಲೇಮನ್ನು ನನ್ನ ಕೈಗೆ ಸಿಗದಂತೆ ತಪ್ಪಿಸಿ ಕಾಪಾಡುವನೋ?” ಎಂದು ಹೇಳಿದನು.
36 ಆದರೆ ಜನರು ಅವನಿಗೆ ಪ್ರತ್ಯುತ್ತರ ಕೊಡದೆ ಸುಮ್ಮನಿದ್ದರು. ಏಕೆಂದರೆ ಅವನಿಗೆ ಉತ್ತರ ಕೊಡಬೇಡಿರೆಂದು ಅರಸನ ಆಜ್ಞೆಯಾಗಿತ್ತು.
37 ಆಗ ಅರಮನೆಯ ಮೇಲ್ವಿಚಾರಕನಾದ ಹಿಲ್ಕೀಯನ ಮಗ ಎಲ್ಯಾಕೀಮನೂ, ಕಾರ್ಯದರ್ಶಿಯಾದ ಶೆಬ್ನನೂ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬವನೂ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಹಿಜ್ಕೀಯನ ಬಳಿಗೆ ಬಂದು ಸೈನ್ಯಾಧಿಕಾರಿಯಾದ ರಬ್ಷಾಕೆ ಹೇಳಿದ ಮಾತುಗಳನ್ನು ಅವನಿಗೆ ತಿಳಿಸಿದರು.
* 18:2 18:2 ಅಬೀಯಾ ಹೀಬ್ರೂ ಭಾಷೆಯಲ್ಲಿ ಅಬೀ