12
ಎಚ್ಚರಿಕೆಯೂ ಉತ್ತೇಜನವೂ
ಅಷ್ಟರಲ್ಲಿ, ಸಾವಿರಾರು ಜನರು ಒಬ್ಬರನ್ನೊಬ್ಬರು ತುಳಿದಾಡುವಷ್ಟು ಕಿಕ್ಕಿರಿದು ಬಂದಿರಲಾಗಿ, ಯೇಸು ಮೊದಲು ತಮ್ಮ ಶಿಷ್ಯರಿಗೆ ಹೀಗೆಂದು ಮಾತನಾಡಲಾರಂಭಿಸಿದರು, “ಫರಿಸಾಯರ ಹುಳಿಹಿಟ್ಟಿನ ಬಗ್ಗೆ ಅಂದರೆ, ಕಪಟತನದ ಬಗ್ಗೆ ನೀವು ಎಚ್ಚರವಾಗಿರಿ. ಪ್ರಕಟವಾಗದಂತೆ ಯಾವುದೂ ಮರೆಯಾಗಿರುವುದಿಲ್ಲ, ತಿಳಿಯಲಾಗದಂತೆ ಯಾವುದೂ ಗುಪ್ತವಾಗಿರುವುದಿಲ್ಲ. ಆದ್ದರಿಂದ ನೀವು ಕತ್ತಲೆಯಲ್ಲಿ ಯಾವುದನ್ನು ಹೇಳಿದ್ದೀರೋ ಅದು ಬೆಳಕಿನಲ್ಲಿ ಕೇಳಲಾಗುವುದು, ಕೋಣೆಗಳೊಳಗೆ ನೀವು ಪಿಸುಗುಟ್ಟಿದ್ದು ಮಾಳಿಗೆಗಳ ಮೇಲೆ ಸಾರಲಾಗುವುದು.
“ನನ್ನ ಸ್ನೇಹಿತರೇ, ದೇಹವನ್ನು ಕೊಂದು, ಅದಕ್ಕಿಂತ ಹೆಚ್ಚೇನೂ ಮಾಡಲಾರದವರಿಗೆ ಹೆದರಬೇಡಿರಿ ಎಂದು ನಿಮಗೆ ಹೇಳುತ್ತೇನೆ. ಆದರೆ ಯಾರಿಗೆ ನೀವು ಭಯಪಡಬೇಕೆಂದು ನಾನು ನಿಮಗೆ ತೋರಿಸುತ್ತೇನೆ: ನಿಮ್ಮ ದೇಹವನ್ನು ಕೊಂದ ಮೇಲೆ, ನರಕದಲ್ಲಿ ಹಾಕುವುದಕ್ಕೆ ಅಧಿಕಾರವಿರುವ ದೇವರಿಗೆ ಭಯಪಡಿರಿ. ಹೌದು, ದೇವರಿಗೇ ಭಯಪಡಿರಿ, ಎಂದು ನಾನು ನಿಮಗೆ ಹೇಳುತ್ತೇನೆ. ಎರಡು ರೂಪಾಯಿಗಳಿಗೆ* ಐದು ಗುಬ್ಬಿಗಳನ್ನು ಮಾರುವುದಿಲ್ಲವೇ? ಆದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ. ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿರಿ; ಅನೇಕ ಗುಬ್ಬಿಗಳಿಗಿಂತಲೂ ನೀವು ಎಷ್ಟೋ ಮೌಲ್ಯವುಳ್ಳವರು.
“ಆದರೆ ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರ ಮುಂದೆ ನನ್ನನ್ನು ಒಪ್ಪಿಕೊಳ್ಳುವ ಪ್ರತಿಯೊಬ್ಬರನ್ನು, ಮನುಷ್ಯಪುತ್ರನಾದ ನಾನು ಸಹ ದೇವದೂತರ ಮುಂದೆ ನನ್ನವರೆಂದು ಒಪ್ಪಿಕೊಳ್ಳುವೆನು. ಆದರೆ ಯಾರು ಜನರ ಮುಂದೆ ನನ್ನನ್ನು ಅಲ್ಲಗಳೆಯುವರೋ ಅವರನ್ನು ದೇವದೂತರ ಮುಂದೆ ನಾನು ಅಲ್ಲಗಳೆಯುವೆನು. 10 ಮನುಷ್ಯಪುತ್ರನಾದ ನನಗೆ ವಿರೋಧವಾಗಿ ಮಾತನಾಡುವ ಪ್ರತಿಯೊಬ್ಬರಿಗೂ ಕ್ಷಮಾಪಣೆಯಾಗುವುದು, ಆದರೆ ಪವಿತ್ರಾತ್ಮರಿಗೆ ವಿರೋಧವಾಗಿ ದೂಷಣೆ ಮಾಡಿದರೆ ಅದಕ್ಕೆ ಕ್ಷಮಾಪಣೆಯಿಲ್ಲ.
11 “ಜನರು ನಿಮ್ಮನ್ನು ಸಭಾಮಂದಿರಗಳಿಗೂ ಆಳುವವರ ಮುಂದೆಯೂ ಅಧಿಕಾರಿಗಳ ಮುಂದೆಯೂ ತಂದಾಗ ಹೇಗೆ ಇಲ್ಲವೆ ಯಾವುದನ್ನು ಕುರಿತು ಉತ್ತರಕೊಡಬೇಕೆಂದು, ಇಲ್ಲವೆ ಏನು ಹೇಳಬೇಕೆಂದು ಚಿಂತಿಸಬೇಡಿರಿ, 12 ಆ ಸಮಯದಲ್ಲಿ ನೀವು ಹೇಳಬೇಕಾದದ್ದನ್ನು ಪವಿತ್ರಾತ್ಮರು ನಿಮಗೆ ಕಲಿಸಿಕೊಡುವರು.”
ಬುದ್ಧಿಯಿಲ್ಲದ ಐಶ್ವರ್ಯವಂತನ ಸಾಮ್ಯ
13 ಗುಂಪಿನಲ್ಲಿದ್ದ ಒಬ್ಬನು ಯೇಸುವಿಗೆ, “ಬೋಧಕರೇ, ಆಸ್ತಿಯನ್ನು ಭಾಗಮಾಡಿ ನನಗೆ ಕೊಡುವಂತೆ ನನ್ನ ಸಹೋದರನಿಗೆ ಹೇಳಿ,” ಎಂದನು.
14 ಯೇಸು, “ಸ್ನೇಹಿತನೇ, ನಿಮ್ಮ ಮೇಲೆ ನ್ಯಾಯಾಧಿಪತಿಯಾಗಿ ಇಲ್ಲವೆ ನಿಮಗೆ ಭಾಗಮಾಡಿಕೊಡುವುದಕ್ಕೆ ನನ್ನನ್ನು ನೇಮಿಸಿದವರು ಯಾರು?” ಎಂದು ಹೇಳಿದರು. 15 ಅನಂತರ ಯೇಸು ಜನರಿಗೆ, “ಎಚ್ಚರಿಕೆ! ನೀವು ಎಲ್ಲಾ ಲೋಭದಿಂದ ನಿಮ್ಮನ್ನು ಕಾಪಾಡಿಕೊಳ್ಳಿರಿ; ಏಕೆಂದರೆ ಜೀವನವು ಸಮೃದ್ಧಿಯಾದ ಆಸ್ತಿಗೆ ಆಧಾರವಾದದ್ದಲ್ಲ,” ಎಂದರು.
16 ಅನಂತರ ಯೇಸು ಅವರಿಗೆ ಒಂದು ಸಾಮ್ಯವನ್ನು ಹೇಳಿದರು: “ಒಬ್ಬ ಐಶ್ವರ್ಯವಂತನ ಭೂಮಿಯು ಸಮೃದ್ಧಿಯಾಗಿ ಬೆಳೆ ಕೊಟ್ಟಿತು. 17 ಆಗ ಅವನು ತನ್ನೊಳಗೆ, ‘ನಾನೇನು ಮಾಡಲಿ? ನನಗಿರುವ ಬೆಳೆಯನ್ನು ಇಡುವುದಕ್ಕೆ ನನಗೆ ಸ್ಥಳವಿಲ್ಲ,’ ಎಂದು ಆಲೋಚಿಸಿ ಹೀಗೆಂದುಕೊಂಡನು,
18 “ನಾನು ಹೀಗೆ ಮಾಡುತ್ತೇನೆ, ‘ನನ್ನ ಕಣಜಗಳನ್ನು ಮುರಿದು ಹಾಕಿಸಿ ಇನ್ನೂ ದೊಡ್ಡದಾಗಿ ಕಟ್ಟಿಸುತ್ತೇನೆ, ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನೂ ಕೂಡಿಸಿಟ್ಟುಕೊಳ್ಳುತ್ತೇನೆ. 19 ಅಲ್ಲದೆ, ನಾನು ನನ್ನ ಪ್ರಾಣಕ್ಕೆ, “ಪ್ರಾಣವೇ ಅನೇಕ ವರ್ಷಗಳಿಗಾಗಿ ನಿನಗೆ ಬಹಳ ಸರಕು ಇಡಲಾಗಿದೆ. ವಿಶ್ರಮಿಸಿಕೋ; ತಿನ್ನು, ಕುಡಿ ಮತ್ತು ಆನಂದವಾಗಿರು ಎಂದು ಹೇಳಿಕೊಳ್ಳುತ್ತೇನೆ,” ’ ಎಂದುಕೊಂಡನು.
20 “ಆದರೆ ದೇವರು ಅವನಿಗೆ, ‘ಬುದ್ಧಿಹೀನನೇ! ಈ ರಾತ್ರಿಯೇ ನಿನ್ನ ಪ್ರಾಣವು ನಿನ್ನಿಂದ ತೆಗೆದುಕೊಳ್ಳಲಾಗುವುದು. ಆಗ ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?’ ಎಂದು ಹೇಳಿದರು.
21 “ತನಗೋಸ್ಕರ ಸಂಪತ್ತನ್ನು ಕೂಡಿಸಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತ ಆಗದಿರುವವನು ಇವನಂತೆಯೇ ಇರುವನು,” ಎಂದರು.
ಚಿಂತಿಸಬೇಡ
22 ಯೇಸು ತಮ್ಮ ಶಿಷ್ಯರಿಗೆ: “ಆದಕಾರಣ, ನೀವು ನಿಮ್ಮ ಜೀವನಕ್ಕಾಗಿ ಏನು ಊಟಮಾಡಬೇಕು; ಮತ್ತು ನಿಮ್ಮ ದೇಹಕ್ಕೆ ಏನು ಧರಿಸಿಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂದು ನಾನು ನಿಮಗೆ ಹೇಳುತ್ತೇನೆ. 23 ಊಟಕ್ಕಿಂತ ಜೀವನವೂ ವಸ್ತ್ರಕ್ಕಿಂತ ದೇಹವೂ ಹೆಚ್ಚಿನದು. 24 ಕಾಗೆಗಳನ್ನು ಗಮನಿಸಿರಿ: ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಅವುಗಳಿಗೆ ಉಗ್ರಾಣವಾಗಲಿ ಕಣಜವಾಗಲಿ ಇಲ್ಲ, ಆದರೂ ದೇವರು ಅವುಗಳನ್ನು ಪೋಷಿಸುತ್ತಾರೆ. ನೀವು ಪಕ್ಷಿಗಳಿಗಿಂತ ಎಷ್ಟೋ ಮೌಲ್ಯವುಳ್ಳವರಾಗಿದ್ದೀರಲ್ಲಾ! 25 ನಿಮ್ಮಲ್ಲಿ ಯಾರಾದರೂ ಚಿಂತೆ ಮಾಡುವುದರಿಂದ ತಮ್ಮ ಜೀವನಾವಧಿಗೆ ಒಂದು ತಾಸನ್ನು ಕೂಡಿಸಲು ಸಾಧ್ಯವೇ? 26 ಅತ್ಯಲ್ಪವಾಗಿರುವುದನ್ನು ನೀವು ಮಾಡಲಾರದವರಾಗಿದ್ದರೆ, ಇತರ ವಿಷಯಗಳಿಗಾಗಿ ನೀವು ಚಿಂತೆ ಮಾಡುವುದೇನು?
27 “ಅಡವಿಯ ಹೂವುಗಳು ಹೇಗೆ ಬೆಳೆಯುತ್ತವೆಂದು ಯೋಚಿಸಿರಿ. ಅವು ದುಡಿಯುವುದಿಲ್ಲ, ನೂಲುವುದಿಲ್ಲ, ಆದರೂ ಅರಸನಾದ ಸೊಲೊಮೋನನು ತನ್ನ ಸರ್ವವೈಭವದಲ್ಲಿ ಇದ್ದಾಗಲೂ ಆ ಹೂವುಗಳಲ್ಲಿ ಒಂದರಂತೆಯಾದರೂ ಉಡುಪನ್ನು ಧರಿಸಿರಲಿಲ್ಲ ಎಂದು, ನಾನು ನಿಮಗೆ ಹೇಳುತ್ತೇನೆ. 28 ಅಲ್ಪವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೇ ದೇವರು ಹೀಗೆ ಉಡಿಸಿದರೆ, ನಿಮಗೆ ಎಷ್ಟೋ ಹೆಚ್ಚಾಗಿ ಉಡಿಸುವರಲ್ಲವೇ? 29 ಏನು ಊಟಮಾಡಬೇಕು? ಏನು ಕುಡಿಯಬೇಕು? ಎಂದು ತವಕಪಡಬೇಡಿರಿ; ಚಿಂತೆಯೂ ಮಾಡಬೇಡಿರಿ. 30 ದೇವರನ್ನು ಅರಿಯದವರು ಇವೆಲ್ಲವುಗಳಿಗಾಗಿ ಬೆನ್ನಟ್ಟುತ್ತಾರೆ, ಆದರೆ ಇವುಗಳು ನಿಮಗೆ ಅಗತ್ಯವೆಂದು ನಿಮ್ಮ ತಂದೆಯು ತಿಳಿದಿದ್ದಾರೆ. 31 ಆದರೆ ನೀವು ದೇವರ ರಾಜ್ಯವನ್ನೇ ಹುಡುಕಿರಿ, ಆಗ ಇವೆಲ್ಲವನ್ನು ದೇವರು ನಿಮಗೆ ಕೊಡುವರು.
32 “ಚಿಕ್ಕ ಹಿಂಡೇ, ಭಯಪಡಬೇಡ, ಏಕೆಂದರೆ ನಿಮ್ಮ ತಂದೆಯು ತಮ್ಮ ರಾಜ್ಯವನ್ನು ನಿಮಗೆ ಕೊಡುವುದಕ್ಕೆ ಮೆಚ್ಚಿದ್ದಾರೆ. 33 ನಿಮ್ಮ ಆಸ್ತಿಪಾಸ್ತಿಗಳನ್ನು ಮಾರಿ ಬಡವರಿಗೆ ಕೊಡಿರಿ. ನಿಮಗೋಸ್ಕರ ನಾಶವಾಗದ ಹಣದ ಚೀಲಗಳನ್ನೂ, ಕ್ಷಯವಾಗದ ಸಂಪತ್ತನ್ನೂ ಪರಲೋಕದಲ್ಲಿ ಮಾಡಿಕೊಳ್ಳಿರಿ, ಅಲ್ಲಿ ಕಳ್ಳನು ಸಮೀಪಕ್ಕೆ ಬರುವುದಿಲ್ಲ. ನುಸಿಹಿಡಿದು ಕೆಟ್ಟುಹೋಗುವುದಿಲ್ಲ. 34 ನಿಮ್ಮ ಸಂಪತ್ತು ಇರುವಲ್ಲಿಯೇ, ನಿಮ್ಮ ಹೃದಯವು ಸಹ ಇರುವುದು,” ಎಂದು ಹೇಳಿದರು.
ಎಚ್ಚರವಾಗಿರುವುದರ ಕುರಿತು
35 “ನೀವು ವಸ್ತ್ರ ಧರಿಸಿ ಸೇವೆಗೆ ಸಿದ್ಧರಾಗಿರಿ. ನಿಮ್ಮ ದೀಪಗಳು ಉರಿಯುತ್ತಿರಲಿ, 36 ನೀವಂತೂ ಮದುವೆಯ ಔತಣದಿಂದ ಹಿಂದಿರುಗುವ ತಮ್ಮ ಯಜಮಾನನಿಗಾಗಿ ಕಾಯುತ್ತಿದ್ದು, ಅವನು ಬಂದು ಬಾಗಿಲನ್ನು ತಟ್ಟಿದ ತಕ್ಷಣವೇ ಅವನಿಗಾಗಿ ತೆರೆಯುವ ಸೇವಕರಂತೆ ಇರಿ. 37 ಯಜಮಾನನು ಬಂದಾಗ ಯಾರು ಎಚ್ಚರವಾಗಿರುವುದನ್ನು ಅವನು ಕಾಣುವನೋ ಆ ಸೇವಕರು ಧನ್ಯರು. ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಅವನು ಬಂದು ನಡುಕಟ್ಟಿ ನಿಂತು ಅವರನ್ನು ಊಟಕ್ಕೆ ಕೂರಿಸಿ, ಅವರಿಗೆ ತಾನೇ ಸೇವೆಮಾಡುವನು. 38 ಯಜಮಾನನು ನಡು ರಾತ್ರಿಯಲ್ಲಾಗಲಿ ಮುಂಜಾನೆಯಲ್ಲಾಗಲಿ ಬಂದು, ಸೇವಕರು ಇನ್ನೂ ಎಚ್ಚರದಿಂದಿರುವುದನ್ನು ಕಂಡರೆ ಆ ಸೇವಕರು ಧನ್ಯರು. 39 ಆದರೆ, ಕಳ್ಳನು ಯಾವ ಸಮಯದಲ್ಲಿ ಬರುವನೆಂಬುದು ಮನೆಯ ಯಜಮಾನನಿಗೆ ತಿಳಿದಿದ್ದರೆ, ಅವನು ಎಚ್ಚರವಾಗಿದ್ದು ತನ್ನ ಮನೆಯನ್ನು ಪ್ರವೇಶಿಸಲು ಕನ್ನಾಹಾಕಲು ಬಿಡುತ್ತಿರಲಿಲ್ಲ ಎಂಬುದನ್ನು ತಿಳಿದುಕೊಳ್ಳಿರಿ. 40 ಆದಕಾರಣ ನೀವು ಸಹ ಸಿದ್ಧವಾಗಿರಿ, ಏಕೆಂದರೆ ನೀವು ನಿರೀಕ್ಷಿಸದ ಸಮಯದಲ್ಲಿ ಮನುಷ್ಯಪುತ್ರನಾದ ನಾನು ಬರುತ್ತೇನೆ,” ಎಂದು ಹೇಳಿದರು.
41 ಪೇತ್ರನು ಯೇಸುವಿಗೆ, “ಕರ್ತದೇವರೇ, ನೀವು ಈ ಸಾಮ್ಯವನ್ನು ನಮಗೆ ಮಾತ್ರ ಹೇಳುತ್ತೀರೋ ಅಥವಾ ಎಲ್ಲರಿಗೋ?” ಎಂದು ಕೇಳಿದನು.
42 ಕರ್ತದೇವರು ಹೇಳಿದ್ದೇನೆಂದರೆ, “ತಕ್ಕ ಕಾಲದಲ್ಲಿ ತನ್ನ ಸೇವಕರಿಗೆ ಅವರ ಪಾಲಿನ ಆಹಾರವನ್ನು ಕೊಡುವುದಕ್ಕಾಗಿ, ಅವರ ಯಜಮಾನನು ತನ್ನ ಮನೆಯ ಮೇಲೆ ನೇಮಿಸಿದ ನಂಬಿಗಸ್ತನೂ ಜ್ಞಾನಿಯೂ ಆಗಿರುವ ಆಡಳಿತಗಾರನು ಯಾರು? 43 ತನ್ನ ಯಜಮಾನನು ಬಂದಾಗ ಯಾವ ಸೇವಕನು ಸೇವೆ ಮಾಡುವುದನ್ನು ಕಾಣುವನೋ ಆ ಸೇವಕನು ಧನ್ಯನು. 44 ಅವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಯ ಮೇಲೆ ಆಡಳಿತಗಾರನಾಗಿ ನೇಮಿಸುವನೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 45 ಆದರೆ ಆ ಸೇವಕನು, ‘ನನ್ನ ಯಜಮಾನನು ಬರುವುದಕ್ಕೆ ತಡಮಾಡುತ್ತಾನೆ,’ ಎಂದು ತನ್ನ ಹೃದಯದಲ್ಲಿ ಭಾವಿಸಿಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆದು, ತಿಂದು ಕುಡಿದು ಮತ್ತನಾಗುವುದಕ್ಕೆ ಆರಂಭಿಸಿದರೆ, 46 ಆ ಸೇವಕನು ನಿರೀಕ್ಷಿಸದ ದಿನದಲ್ಲಿಯೂ ತಿಳಿಯದ ಸಮಯದಲ್ಲಿಯೂ ಅವನ ಯಜಮಾನನು ಬಂದು, ಅವನನ್ನು ಕಠಿಣವಾಗಿ ಹೊಡಿಸಿ ಅವಿಶ್ವಾಸಿಗಳಿಗೆ ಆಗ ಸಿಕ್ಕುವ ಪಾಲನ್ನು ಅವನಿಗೆ ನೇಮಿಸುವನು.
47 “ತನ್ನ ಯಜಮಾನನ ಚಿತ್ತವನ್ನು ತಿಳಿದು ತನ್ನನ್ನು ಸಿದ್ಧಮಾಡಿಕೊಳ್ಳದೆ, ಇಲ್ಲವೆ ಅವನ ಚಿತ್ತಕ್ಕೆ ಅನುಸಾರವಾಗಿ ಮಾಡದೆ ಇದ್ದ ಸೇವಕನು ಬಹಳ ಪೆಟ್ಟುಗಳಿಗೆ ಗುರಿಯಾಗುವನು. 48 ದಂಡನೆಗೆ ಯೋಗ್ಯವಾದದ್ದನ್ನು ತಿಳಿಯದೆ ಮಾಡಿದವನು ಸ್ವಲ್ಪ ಪೆಟ್ಟುಗಳಿಗೆ ಗುರಿಯಾಗುವನು. ಯಾವನಿಗೆ ಹೆಚ್ಚು ಕೊಡಲಾಗಿದೆಯೋ, ಅವನಿಂದ ಹೆಚ್ಚು ಕೇಳಲಾಗುವುದು; ಯಾವನಿಗೆ ಹೆಚ್ಚಾಗಿ ಒಪ್ಪಿಸಿರುವುದೋ, ಅವನಿಂದ ಹೆಚ್ಚಾಗಿಯೇ ಕೇಳಲಾಗುವುದು.”
ಸಮಾಧಾನವನ್ನಲ್ಲ ಆದರೆ ಭೇದ
49 “ನಾನು ಭೂಮಿಯ ಮೇಲೆ ಬೆಂಕಿಯನ್ನು ಹಾಕುವುದಕ್ಕಾಗಿ ಬಂದೆನು, ಅದು ಈಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ! 50 ಆದರೆ ನಾನು ಪಡೆಯಲಿರುವ ಒಂದು ದೀಕ್ಷಾಸ್ನಾನ ಉಂಟು, ಅದು ನೆರವೇರುವ ತನಕ ನಾನು ಎಷ್ಟೋ ಇಕ್ಕಟ್ಟಿನಲ್ಲಿದ್ದೇನೆ! 51 ನಾನು ಭೂಮಿಯ ಮೇಲೆ ಸಮಾಧಾನವನ್ನು ತರುವುದಕ್ಕಾಗಿ ಬಂದಿದ್ದೇನೆಂದು ನೀವು ಭಾವಿಸುತ್ತೀರೋ? ಇಲ್ಲ, ಭಿನ್ನಭೇದಗಳನ್ನು ಉಂಟುಮಾಡುವುದಕ್ಕೆ ಬಂದಿದ್ದೇನೆಂದು, ನಿಮಗೆ ಹೇಳುತ್ತೇನೆ. 52 ಹೇಗೆಂದರೆ ಇಂದಿನಿಂದ ಒಂದೇ ಮನೆಯಲ್ಲಿರುವ ಐದು ಮಂದಿಯಲ್ಲಿ ಇಬ್ಬರಿಗೆ ವಿರೋಧವಾಗಿ ಮೂವರೂ ಮೂವರಿಗೆ ವಿರೋಧವಾಗಿ ಇಬ್ಬರೂ ವಿಭಾಗವಾಗುವರು. 53 ತಂದೆಗೆ ವಿರೋಧವಾಗಿ ಮಗನು, ಮಗನಿಗೆ ವಿರೋಧವಾಗಿ ತಂದೆಯು, ತಾಯಿಗೆ ವಿರೋಧವಾಗಿ ಮಗಳು, ಮಗಳಿಗೆ ವಿರೋಧವಾಗಿ ತಾಯಿಯು, ಅತ್ತೆಗೆ ವಿರೋಧವಾಗಿ ಸೊಸೆಯು, ಸೊಸೆಗೆ ವಿರೋಧವಾಗಿ ಅತ್ತೆಯು ವಿಭಾಗವಾಗುವರು.”
ಕಾಲಗಳ ವಿವರಣೆ
54 ಯೇಸು ಜನಸಮೂಹಕ್ಕೆ ಹೇಳಿದ್ದೇನೆಂದರೆ: “ನೀವು ಪಶ್ಚಿಮದ ಕಡೆಯಿಂದ ಏಳುವ ಮೋಡವನ್ನು ನೋಡಿ, ‘ಮಳೆ ಬರುತ್ತದೆ ಎನ್ನುತ್ತೀರಿ,’ ಹಾಗೆಯೇ ಆಗುವುದು. 55 ದಕ್ಷಿಣ ದಿಕ್ಕಿನ ಗಾಳಿ ಬೀಸುವುದನ್ನು ನೀವು ನೋಡಿ, ‘ಸೆಕೆಯಾಗುತ್ತದೆ,’ ಎನ್ನುತ್ತೀರಿ, ಅದು ಹಾಗೆ ಆಗುತ್ತದೆ. 56 ಕಪಟಿಗಳೇ! ಭೂಮ್ಯಾಕಾಶಗಳ ಲಕ್ಷಣಗಳನ್ನು ನೀವು ಗ್ರಹಿಸಬಲ್ಲಿರಿ, ಆದರೆ ಈ ಕಾಲವನ್ನು ನೀವು ವಿವೇಚಿಸದಿರುವುದು ಹೇಗೆ?
57 “ಹೌದು, ನಿಮ್ಮಷ್ಟಕ್ಕೆ ನೀವು ಸರಿಯಾದದ್ದನ್ನು ಏಕೆ ನಿರ್ಣಯಿಸಿಕೊಳ್ಳುವುದಿಲ್ಲ? 58 ನೀನು ನಿನ್ನ ವಿರೋಧಿಯ ಸಂಗಡ ನ್ಯಾಯಾಧಿಪತಿಯ ಎದುರಿಗೆ ಹೋಗುವಾಗ, ಮಾರ್ಗದಲ್ಲಿಯೇ ಅವನಿಂದ ವ್ಯಾಜ್ಯ ಬಗೆಹರಿಸಿಕೊಳ್ಳಲು ಪ್ರಯತ್ನ ಮಾಡು, ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಬಳಿಗೆ ಬಲವಂತವಾಗಿ ಎಳೆಯಬಹುದು, ಆಗ ನ್ಯಾಯಾಧಿಪತಿಯು ನಿನ್ನನ್ನು ಸೆರೆಮನೆಯ ಅಧಿಕಾರಿಗೆ ಒಪ್ಪಿಸಬಹುದು ಮತ್ತು ಅಧಿಕಾರಿಯು ನಿನ್ನನ್ನು ಸೆರೆಯಲ್ಲಿ ಹಾಕಬಹುದು. 59 ನೀನು ಕೊನೆಯ ರೂಪಾಯಿಯನ್ನು ಸಲ್ಲಿಸುವವರೆಗೂ ಅಲ್ಲಿಂದ ಹೊರಗೆ ಬರುವುದೇ ಇಲ್ಲವೆಂದು, ನಾನು ನಿನಗೆ ಹೇಳುತ್ತೇನೆ,” ಎಂದರು.
* 12:6 12:6 ದಿನದ ಕೂಲಿಯ 1/8 ಭಾಗದ ಹಣ 12:25 12:25 ಅಥವಾ ಒಂದು ಮೊಳ ಹೆಚ್ಚಿಸಲು ಸಾಧ್ಯ