8
ಬಿತ್ತುವವನ ಸಾಮ್ಯ
ಇದಾದ ಮೇಲೆ, ಯೇಸು ಪ್ರತಿಯೊಂದು ಪಟ್ಟಣಕ್ಕೂ ಹಳ್ಳಿಗೂ ಹೋಗಿ, ದೇವರ ರಾಜ್ಯದ ವಿಷಯ ಪ್ರಚಾರ ಮಾಡುತ್ತಾ ಸುವಾರ್ತೆಯನ್ನು ಸಾರುತ್ತಾ ಇದ್ದರು. ಹನ್ನೆರಡು ಮಂದಿ ಶಿಷ್ಯರು ಅವರೊಂದಿಗೆ ಇದ್ದರು. ಇದಲ್ಲದೆ ದುರಾತ್ಮಗಳಿಂದಲೂ ರೋಗಗಳಿಂದಲೂ ಬಿಡುಗಡೆ ಹೊಂದಿದ ಕೆಲವು ಸ್ತ್ರೀಯರು ಮತ್ತು ಏಳು ದೆವ್ವಗಳು ಬಿಟ್ಟುಹೋಗಿದ್ದ ಮಗ್ದಲಿನ ಎಂದು ಕರೆಯಲಾದ ಮರಿಯಳು, ಹೆರೋದನ ಅರಮನೆಯ ಗೃಹ ನಿರ್ವಾಹಕನಾದ ಕೂಜನ ಪತ್ನಿ ಯೋಹಾನಳು, ಸುಸನ್ನಳು ಮತ್ತು ಬೇರೆ ಅನೇಕರು ತಮ್ಮ ಆಸ್ತಿಯಿಂದ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರಮಾಡುತ್ತಿದ್ದರು.
ಪ್ರತಿಯೊಂದು ಪಟ್ಟಣದಿಂದ ಬಹುಜನರು ಅವರ ಬಳಿಗೆ ಒಟ್ಟಾಗಿ ಸೇರಿ ಬರಲು ಯೇಸು ಒಂದು ಸಾಮ್ಯವನ್ನು ಅವರಿಗೆ ಹೇಳಿದರು. “ಒಬ್ಬ ರೈತನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುತ್ತಿರುವಾಗ, ಕೆಲವು ಬೀಜಗಳು ದಾರಿಯ ಪಕ್ಕದಲ್ಲಿ ಬಿದ್ದವು; ಅವು ಕಾಲ್ತುಳಿತಕ್ಕೆ ಒಳಗಾದವು, ಆಕಾಶದ ಪಕ್ಷಿಗಳು ಅವುಗಳನ್ನು ಹೆಕ್ಕಿ ತಿಂದವು. ಇದಲ್ಲದೆ ಕೆಲವು ಬೀಜಗಳು ಕಲ್ಲುಭೂಮಿಯ ಮೇಲೆ ಬಿದ್ದವು, ಅವು ಮೊಳೆತ ಕೂಡಲೇ ತೇವ ಇಲ್ಲದಿರುವ ಕಾರಣ ಒಣಗಿಹೋದವು. ಇನ್ನು ಕೆಲವು ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದವು, ಆಗ ಮುಳ್ಳುಗಿಡಗಳು ಅವುಗಳೊಂದಿಗೆ ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು. ಉಳಿದ ಬೀಜಗಳು ಒಳ್ಳೆಯ ನೆಲದ ಮೇಲೆ ಬಿದ್ದವು. ಆಗ ಅವು ಬೆಳೆದು ನೂರರಷ್ಟು ಫಲಕೊಟ್ಟವು.”
ಇದನ್ನು ಯೇಸು ಹೇಳಿ, “ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ,” ಎಂದು ಒತ್ತಿ ಹೇಳಿದರು.
ಯೇಸುವಿನ ಶಿಷ್ಯರು ಅವರನ್ನು ಈ ಸಾಮ್ಯದ ಅರ್ಥ ಏನಾಗಿರಬಹುದು? ಎಂದು ಕೇಳಿದರು. 10 ಅದಕ್ಕೆ ಯೇಸು, “ದೇವರ ರಾಜ್ಯದ ರಹಸ್ಯಗಳನ್ನು ತಿಳಿದುಕೊಳ್ಳುವುದಕ್ಕೆ ನಿಮಗೆ ಅನುಮತಿಸಲಾಗಿದೆ, ಆದರೆ ಉಳಿದವರಿಗೆ,
“ ‘ಅವರು ಕಣ್ಣಾರೆ ನೋಡಿದರೂ ಕಾಣದಂತೆಯೂ;
ಮತ್ತು ಕೇಳಿದರೂ ಗ್ರಹಿಸದಂತೆ ಸಾಮ್ಯಗಳಲ್ಲಿ ಮರೆಯಾಗಿವೆ.’*
11 “ಆ ಸಾಮ್ಯದ ಅರ್ಥ ಹೀಗಿದೆ: ಬೀಜ ಎಂದರೆ ದೇವರ ವಾಕ್ಯ. 12 ವಾಕ್ಯವನ್ನು ಕೇಳಿದವರು ನಂಬಿ ರಕ್ಷಣೆ ಹೊಂದಿಕೊಳ್ಳದಂತೆ, ಪಿಶಾಚನು ಬಂದು ಅವರ ಹೃದಯದೊಳಗಿಂದ, ಆ ವಾಕ್ಯವನ್ನು ತೆಗೆದುಬಿಡುತ್ತಾನೆ, ಇವರೇ ಆ ಬೀಜಗಳು ಬಿದ್ದ ಪಕ್ಕದ ದಾರಿಯಾಗಿದ್ದಾರೆ. 13 ಬೀಜ ಬಿದ್ದ ಕಲ್ಲುಭೂಮಿಯು ಯಾರೆಂದರೆ ವಾಕ್ಯವನ್ನು ಕೇಳಿದಾಗ ಸಂತೋಷದಿಂದ ಸ್ವೀಕರಿಸುವವರು, ಆದರೆ ಇವರು ಬೇರಿಲ್ಲದಿರುವುದರಿಂದ, ಸ್ವಲ್ಪಕಾಲ ನಂಬಿ, ಶೋಧನೆ ಬಂದಾಗ ಬಿದ್ದುಹೋಗುವವರು. 14 ಬೀಜ ಬಿದ್ದ ಮುಳ್ಳುನೆಲವು ಯಾರೆಂದರೆ ವಾಕ್ಯವನ್ನು ಕೇಳಿದ ಮೇಲೆ ಮುಂದುವರಿದು, ಈ ಜೀವನದ ಚಿಂತೆಗಳಿಂದಲೂ ಐಶ್ವರ್ಯಗಳಿಂದಲೂ ಮತ್ತು ಭೋಗಗಳಿಂದಲೂ ಅದುಮಿಬಿಟ್ಟು, ಪರಿಪಕ್ವತೆಗೆ ಫಲಕೊಡದಿದ್ದವರು. 15 ಆದರೆ ಬೀಜ ಬಿದ್ದ ಒಳ್ಳೆಯ ಭೂಮಿಯವರು ಯಾರೆಂದರೆ ಯಥಾರ್ಥವಾದ ಒಳ್ಳೆಯ ಹೃದಯದಿಂದ, ವಾಕ್ಯವನ್ನು ಕೇಳಿ ಅದನ್ನು ಕೈಕೊಂಡು, ತಾಳ್ಮೆಯಿಂದ ಫಲಿಸುವವರೇ,” ಎಂದು ಹೇಳಿದರು.
ದೀಪಸ್ತಂಭದ ಮೇಲೆ ದೀಪ
16 “ದೀಪವನ್ನು ಹಚ್ಚಿ ಯಾರೂ ಅದನ್ನು ಪಾತ್ರೆಯಿಂದ ಮುಚ್ಚುವುದಿಲ್ಲ, ಇಲ್ಲವೆ ಮಂಚದ ಕೆಳಗೆ ಇಡುವುದಿಲ್ಲ. ಆದರೆ ಮನೆಯೊಳಗೆ ಪ್ರವೇಶಿಸುವವರು ಬೆಳಕನ್ನು ಕಾಣುವಂತೆ, ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. 17 ಪ್ರಕಟವಾಗದಂತೆ ಯಾವುದೂ ಮರೆಯಾಗಿರುವುದಿಲ್ಲ, ಬೆಳಕಿಗೆ ಬಾರದೆ ಇರುವ ರಹಸ್ಯವು ಯಾವುದೂ ಇಲ್ಲ. 18 ಆದ್ದರಿಂದ ನೀವು ಕೇಳುವ ವಿಷಯಗಳಲ್ಲಿ ಎಚ್ಚರಿಕೆಯಾಗಿರಿ. ಏಕೆಂದರೆ ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು; ಇಲ್ಲದವರ ಕಡೆಯಿಂದ ತಮಗಿದೆ ಎಂದುಕೊಳ್ಳುವುದನ್ನು ಸಹ, ಅವರಿಂದ ಕಿತ್ತುಕೊಳ್ಳಲಾಗುವುದು,” ಎಂದು ಹೇಳಿದರು.
ಯೇಸುವಿನ ಸಂಬಂಧಿಕರು
19 ಯೇಸುವಿನ ತಾಯಿ ಮತ್ತು ಸಹೋದರರು ಅವರಿದ್ದಲ್ಲಿಗೆ ಬಂದು ಜನರ ಗುಂಪಿನ ನಿಮಿತ್ತ ಅವರ ಬಳಿಗೆ ಹೋಗಲಾರದೆ ಇದ್ದರು. 20 ಆಗ ಒಬ್ಬನು ಯೇಸುವಿಗೆ, “ನಿಮ್ಮ ತಾಯಿಯೂ ಸಹೋದರರೂ ನಿಮ್ಮನ್ನು ಕಾಣಬೇಕೆಂದು, ಅಪೇಕ್ಷಿಸಿ ಹೊರಗೆ ನಿಂತಿದ್ದಾರೆ,” ಎಂದನು.
21 ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನ್ನ ತಾಯಿ ಮತ್ತು ನನ್ನ ಸಹೋದರರು ಆಗಿದ್ದಾರೆ,” ಎಂದು ಹೇಳಿದರು.
ಯೇಸು ಸಮುದ್ರದ ಬಿರುಗಾಳಿಯನ್ನು ನಿಲ್ಲಿಸಿದ್ದು
22 ಒಂದು ದಿನ ಯೇಸು ತಮ್ಮ ಶಿಷ್ಯರಿಗೆ, “ನಾವು ಕೆರೆಯ ಆಚೆದಡಕ್ಕೆ ಹೋಗೋಣ,” ಎಂದು ಹೇಳಿದರು, ಆಗ ಅವರು ದೋಣಿಯನ್ನು ಹತ್ತಿ ಹೊರಟರು. 23 ಆದರೆ ಅವರು ಪ್ರಯಾಣ ಮಾಡುತ್ತಿದ್ದಾಗ, ಯೇಸು ನಿದ್ರಿಸುತ್ತಿದ್ದರು. ಆಗ ಬಿರುಗಾಳಿಯು ಸರೋವರದ ಮೇಲೆ ಬೀಸಲು, ದೋಣಿಯು ನೀರಿನಿಂದ ತುಂಬಿದ್ದರಿಂದ, ಅವರು ಅಪಾಯಕ್ಕೊಳಗಾದರು.
24 ಆಗ ಶಿಷ್ಯರು ಯೇಸುವಿನ ಬಳಿ ಬಂದು ಅವರನ್ನು ಎಬ್ಬಿಸಿ, “ಗುರುವೇ, ಗುರುವೇ, ನಾವು ಮುಳುಗುತ್ತಿದ್ದೇವೆ!” ಎಂದರು.
ಆಗ ಯೇಸು ಎದ್ದು ಬಿರುಗಾಳಿಯನ್ನೂ ರಭಸವಾಗಿ ಬರುತ್ತಿದ್ದ ಅಲೆಗಳನ್ನೂ ಗದರಿಸಿದರು; ಆಗ ಬಿರುಗಾಳಿಯು ನಿಂತು ಹೋಗಿ, ಎಲ್ಲಾ ಪ್ರಶಾಂತವಾಯಿತು. 25 ಆಗ ಯೇಸು ತಮ್ಮ ಶಿಷ್ಯರಿಗೆ, “ನಿಮ್ಮ ನಂಬಿಕೆ ಎಲ್ಲಿ?” ಎಂದರು.
ಅವರು ಹೆದರಿದವರಾಗಿ ಆಶ್ಚರ್ಯದಿಂದ ಒಬ್ಬರಿಗೊಬ್ಬರು, “ಇವರು ಯಾರಿರಬಹುದು? ಗಾಳಿಗೂ ನೀರಿಗೂ ಸಹ ಅಪ್ಪಣೆ ಕೊಡುತ್ತಾರಲ್ಲಾ. ಅವು ಇವರು ಹೇಳಿದ ಹಾಗೆ ಕೇಳುತ್ತಾವಲ್ಲಾ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
ದೆವ್ವಗಳಿಂದ ಪೀಡಿತನಾದವನನ್ನು ಗುಣಮಾಡಿದ್ದು
26 ಅವರು ಗಲಿಲಾಯಕ್ಕೆ ಎದುರಾಗಿದ್ದ, ಗೆರಸೇನರ ಸೀಮೆಗೆ ತಲುಪಿದರು. 27 ಯೇಸು ದಡಕ್ಕೆ ಸೇರಿದಾಗ, ಬಹುಕಾಲದಿಂದ ದೆವ್ವಗಳು ಹಿಡಿದು ಬಟ್ಟೆ ಧರಿಸಿಕೊಳ್ಳದೆ ಯಾವ ಮನೆಯಲ್ಲಿ ಇರದೆ ಸಮಾಧಿಯ ಗುಹೆಗಳಲ್ಲಿ ವಾಸಿಸುತ್ತಿದ್ದ ಒಬ್ಬ ಮನುಷ್ಯನನ್ನು ಯೇಸು ಸಂಧಿಸಿದರು. 28 ಅವನು ಯೇಸುವನ್ನು ಕಂಡಾಗ, ಅವರ ಮುಂದೆ ಅಡ್ಡಬಿದ್ದು, “ಯೇಸುವೇ, ಮಹೋನ್ನತ ದೇವಪುತ್ರರೇ, ನನ್ನ ಗೊಡವೆ ನಿಮಗೆ ಏಕೆ? ನನ್ನನ್ನು ಪೀಡಿಸಬೇಡಿ, ನಿಮ್ಮನ್ನು ಬೇಡಿಕೊಳ್ಳುತ್ತೇನೆ!” ಎಂದು ಗಟ್ಟಿಯಾದ ಸ್ವರದಿಂದ ಕೂಗಿ ಹೇಳಿದನು. 29 ಏಕೆಂದರೆ, ದೆವ್ವಕ್ಕೆ ಅವನಿಂದ ಹೊರಗೆ ಬರಬೇಕೆಂದು ಯೇಸು ಅಪ್ಪಣೆ ಕೊಟ್ಟಿದ್ದರು. ಅದು ಬಹಳ ಸಾರಿ ಅವನನ್ನು ಹಿಡಿಯುತ್ತಿದ್ದುದರಿಂದ, ಅವನು ಸರಪಣಿಗಳಿಂದಲೂ ಬೇಡಿಗಳಿಂದಲೂ ಬಂಧಿತನಾದರೂ ಅವನು ಆ ಬಂಧನಗಳನ್ನು ಮುರಿದು ಬಿಡುತ್ತಿದ್ದನು ಮತ್ತು ದೆವ್ವವು ಅವನನ್ನು ಏಕಾಂತ ಸ್ಥಳಕ್ಕೆ ಓಡಿಸಿಕೊಂಡು ಹೋಗುತ್ತಿತ್ತು.
30 ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದರು.
ಅದಕ್ಕವನು, “ಸೇನೆ,” ಎಂದನು. ಏಕೆಂದರೆ ಬಹಳ ದೆವ್ವಗಳು ಅವನಲ್ಲಿ ಸೇರಿಕೊಂಡಿದ್ದವು. 31 ಅವು ತಮ್ಮನ್ನು ಪಾತಾಳಕ್ಕೆ ಹೋಗುವಂತೆ ಅಪ್ಪಣೆ ಕೊಡಬಾರದೆಂದು ಯೇಸುವನ್ನು ಬೇಡಿಕೊಂಡವು.
32 ಆಗ ಅಲ್ಲಿ ಬೆಟ್ಟದ ಮೇಲೆ ಹಂದಿಗಳ ಹಿಂಡು ಮೇಯುತ್ತಿದ್ದರಿಂದ ಅವುಗಳೊಳಗೆ ತಾವು ಸೇರಿಕೊಳ್ಳಲು ಅಪ್ಪಣೆ ಕೊಡಬೇಕೆಂದು ಯೇಸುವನ್ನು ಬೇಡಿಕೊಂಡವು, ಅವರು ಅವುಗಳಿಗೆ ಅನುಮತಿ ಕೊಟ್ಟರು. 33 ಆಗ ಆ ದೆವ್ವಗಳು ಆ ಮನುಷ್ಯನೊಳಗಿಂದ ಹೊರಗೆ ಬಂದು, ಹಂದಿಗಳೊಳಗೆ ಸೇರಿದವು. ಆ ಗುಂಪು ಚುರುಕಾಗಿ ಓಡಿ, ಕಡಿದಾದ ಬದಿಯಿಂದ ಸರೋವರಕ್ಕೆ ಬಿದ್ದು ಮುಳುಗಿಹೋಯಿತು.
34 ಹಂದಿಗಳನ್ನು ಮೇಯಿಸುತ್ತಿದ್ದವರು ನಡೆದದ್ದನ್ನು ಕಂಡು, ಓಡಿಹೋಗಿ ಪಟ್ಟಣದಲ್ಲಿಯೂ ಸೀಮೆಯಲ್ಲಿಯೂ ಅದನ್ನು ತಿಳಿಯಪಡಿಸಿದರು, 35 ಆಗ ಜನರು ನಡೆದ ಸಂಗತಿ ಏನೆಂದು ಕಾಣುವುದಕ್ಕಾಗಿ ಹೊರಟು ಯೇಸುವಿನ ಬಳಿಗೆ ಬಂದರು. ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ಬಟ್ಟೆಯನ್ನು ಧರಿಸಿಕೊಂಡು ಸ್ವಸ್ಥಬುದ್ಧಿಯುಳ್ಳವನಾಗಿ, ಯೇಸುವಿನ ಪಾದಗಳ, ಬಳಿಯಲ್ಲಿ ಕುಳಿತಿರುವುದನ್ನು ಕಂಡು ಭಯಪಟ್ಟರು. 36 ನಡೆದದ್ದನ್ನು ಕಂಡವರು, ಯಾವ ರೀತಿಯಲ್ಲಿ ದೆವ್ವಪೀಡಿತನಾಗಿದ್ದವನು ಮತ್ತೆ ಸ್ವಸ್ಥನಾದನೆಂದು ಅವರಿಗೆ ತಿಳಿಯಪಡಿಸಿದರು. 37 ಆಗ ಗೆರಸೇನರ ಸೀಮೆಯ ಸುತ್ತಮುತ್ತಲಿನ ಜನಸಮೂಹವೆಲ್ಲವು, ಬಹಳ ಭಯಹಿಡಿದವರಾದುದರಿಂದ ಅವರು ತಮ್ಮ ಬಳಿಯಿಂದ ಹೊರಟುಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು. ಯೇಸು ದೋಣಿಯನ್ನು ಹತ್ತಿ ಹಿಂದಿರುಗಿದರು.
38 ಆಗ ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ತಾನೂ ಅವರ ಜೊತೆಯಲ್ಲಿ ಬರುವೆನೆಂದು, ಯೇಸುವನ್ನು ಬೇಡಿಕೊಂಡನು, ಆದರೆ ಯೇಸು ಅವನಿಗೆ, 39 “ನೀನು ನಿನ್ನ ಮನೆಗೆ ಹಿಂದಿರುಗಿ ಹೋಗಿ ದೇವರು ನಿನಗೆ ಎಂಥಾ ಮಹಾಕಾರ್ಯಗಳನ್ನು ಮಾಡಿದ್ದಾರೆಂಬುದನ್ನು ಹೇಳು,” ಎಂದು ಅವನನ್ನು ಕಳುಹಿಸಿಬಿಟ್ಟರು. ಅವನು ತನ್ನ ಮಾರ್ಗವಾಗಿ ಹೊರಟುಹೋಗಿ ಯೇಸು ತನಗೆ ಮಾಡಿದ ಮಹಾಕಾರ್ಯಗಳನ್ನು ಊರೆಲ್ಲಾ ಸಾರಿದನು.
ಯೇಸು ಸತ್ತ ಹುಡುಗಿಯನ್ನು ಬದುಕಿಸಿದ್ದು
40 ಯೇಸು ಹಿಂತಿರುಗಿ ಬಂದಾಗ ಅವರ ಬರುವಿಕೆಯನ್ನು ಎದುರುನೋಡುತ್ತಿದ್ದ ಜನರೆಲ್ಲರೂ ಅವರನ್ನು ಸ್ವಾಗತಿಸಿದರು. 41 ಆಗ ಸಭಾಮಂದಿರದ ಅಧಿಕಾರಿಯಾಗಿದ್ದ, ಯಾಯೀರನೆಂಬವನು ಬಂದು ಯೇಸುವಿನ ಪಾದಗಳ ಮುಂದೆ ಅಡ್ಡಬಿದ್ದು, ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು 42 ಏಕೆಂದರೆ ಸುಮಾರು ಹನ್ನೆರಡು ವರ್ಷದ, ಅವನ ಒಬ್ಬಳೇ ಮಗಳು, ಸಾಯುವ ಹಾಗಿದ್ದಳು.
ಯೇಸು ದಾರಿಯಲ್ಲಿ ಹೋಗುತ್ತಿದ್ದಾಗ, ಜನರು ಅವರನ್ನು ನೂಕಾಡುತ್ತಿದ್ದರು. 43 ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀ ಆ ಗುಂಪಿನಲ್ಲಿದ್ದಳು. ಅವಳು ತನ್ನ ಆಸ್ತಿಯನ್ನೆಲ್ಲಾ ವೆಚ್ಚಮಾಡಿದ್ದರೂ ಆಕೆಯನ್ನು ಗುಣಪಡಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. 44 ಅವಳು ಯೇಸುವಿನ ಹಿಂದೆ ಬಂದು ಅವರ ಉಡುಪಿನ ಅಂಚನ್ನು ಮುಟ್ಟಿದಳು, ಕೂಡಲೇ ಆಕೆಯ ರಕ್ತಸ್ರಾವವು ನಿಂತುಹೋಯಿತು.
45 ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದರು.
ಎಲ್ಲರೂ ನಿರಾಕರಿಸಿದರು, ಪೇತ್ರನು ಯೇಸುವಿಗೆ, “ಬೋಧಕರೇ, ಇಷ್ಟೊಂದು ಜನರು ನಿಮ್ಮನ್ನು ನೂಕುತ್ತಾ ನಿಮ್ಮನ್ನು ಒತ್ತುತ್ತಿದ್ದಾರಲ್ಲಾ” ಎಂದನು.
46 ಆದರೆ ಯೇಸು, “ಯಾರೋ ಒಬ್ಬರು ನನ್ನನ್ನು ಮುಟ್ಟಿದ್ದಾರೆ; ನನ್ನಿಂದ ಗುಣಪಡಿಸುವ ಶಕ್ತಿಯು ಹೊರಟಿತೆಂದು ನನಗೆ ತಿಳಿಯಿತು,” ಎಂದರು.
47 ಆ ಸ್ತ್ರೀಯು, ತಾನು ಇನ್ನು ಮರೆಮಾಡಲು ಸಾಧ್ಯವಿಲ್ಲವೆಂದು ತಿಳಿದು, ನಡುಗುತ್ತಾ ಬಂದು ಯೇಸುವಿನ ಮುಂದೆ ಅಡ್ಡಬಿದ್ದು, ಯಾವ ಕಾರಣದಿಂದ ಆಕೆಯು ಯೇಸುವನ್ನು ಮುಟ್ಟಿದಳೆಂದೂ ಹೇಗೆ ತಾನು ಕೂಡಲೇ ಸ್ವಸ್ಥಳಾದಳೆಂದೂ ಎಲ್ಲಾ ಜನರ ಮುಂದೆ ಅವರಿಗೆ ತಿಳಿಯಪಡಿಸಿದಳು. 48 ಆಗ ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ. ಸಮಾಧಾನದಿಂದ ಹೋಗು,” ಎಂದರು.
49 ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಸಭಾಮಂದಿರದ ಅಧಿಕಾರಿಯಾದ ಯಾಯೀರನ ಮನೆಯಿಂದ ಒಬ್ಬನು ಬಂದು ಅಧಿಕಾರಿಗೆ, “ನಿನ್ನ ಮಗಳು ತೀರಿಹೋದಳು, ಇನ್ನೂ ಗುರುವಿಗೆ ತೊಂದರೆಪಡಿಸುವುದೇಕೆ?” ಎಂದನು.
50 ಯೇಸು ಅದನ್ನು ಕೇಳಿ, ಆ ಅಧಿಕಾರಿಗೆ, “ಭಯಪಡಬೇಡ; ನಂಬಿಕೆ ಮಾತ್ರ ಇರಲಿ, ಅವಳು ಬದುಕುವಳು,” ಎಂದು ಹೇಳಿದರು.
51 ಯೇಸು ಯಾಯೀರನ ಮನೆಯೊಳಕ್ಕೆ ಬಂದಾಗ ಪೇತ್ರ, ಯಾಕೋಬ ಯೋಹಾನ ಮತ್ತು ಹುಡುಗಿಯ ತಂದೆತಾಯಿಗಳ ಹೊರತು ಯಾರನ್ನೂ ಒಳಗೆ ಬರಗೊಡಲಿಲ್ಲ. 52 ಎಲ್ಲರೂ ಅಳುತ್ತಾ ಹುಡುಗಿಗಾಗಿ ಗೋಳಾಡುತ್ತಿದ್ದರು. ಯೇಸು, “ಅಳಬೇಡಿರಿ, ಆಕೆಯು ಸತ್ತಿಲ್ಲ, ನಿದ್ರೆ ಮಾಡುತ್ತಾಳೆ,” ಎಂದರು.
53 ಆಕೆಯು ಸತ್ತಿದ್ದಾಳೆಂದು ತಿಳಿದು ಅಳುತ್ತಿದ್ದವರು ಯೇಸುವನ್ನು ಹಾಸ್ಯಮಾಡಿದರು. 54 ಆದರೆ ಯೇಸು ಆಕೆಯ ಕೈಹಿಡಿದು, “ಮಗಳೇ, ಎದ್ದೇಳು!” ಎಂದು ಕರೆದರು. 55 ಆಗ ಆಕೆಯ ಪ್ರಾಣವು ಹಿಂದಿರುಗಿ ಬಂತು. ಕೂಡಲೇ ಆಕೆಯು ಎದ್ದಳು. ಆಕೆಗೆ ತಿನ್ನಲು ಏನಾದರೂ ಕೊಡುವಂತೆ ಯೇಸು ಅಪ್ಪಣೆಕೊಟ್ಟರು. 56 ಆಕೆಯ ತಂದೆತಾಯಿಗಳು ಬೆರಗಾದರು, ಆಗ ನಡೆದದ್ದನ್ನು ಅವರು ಯಾರಿಗೂ ಹೇಳಬಾರದೆಂದು ಯೇಸು ಅವರಿಗೆ ಆಜ್ಞಾಪಿಸಿದರು.
* 8:10 8:10 ಯೆಶಾಯ 6:9 8:30 8:30 ಗ್ರೀಕ್ ಭಾಷೆಯಲ್ಲಿ ಲೀಜನ್ ಅಂದರೆ ಸುಮಾರು 4000 ದಿಂದ 6000 ಸೈನ್ಯದ ಸಮೂಹ.