10
ನಾದಾಬ್ ಮತ್ತು ಅಬೀಹು ಅವರ ಮರಣ
ಆರೋನನ ಪುತ್ರರಾದ ನಾದಾಬ್ ಮತ್ತು ಅಬೀಹೂ ತಮ್ಮ ತಮ್ಮ ಧೂಪ ಪಾತ್ರೆಗಳನ್ನು ತೆಗೆದುಕೊಂಡು, ಅದರಲ್ಲಿ ಬೆಂಕಿಯನ್ನು ಹಾಕಿ, ಅದರಲ್ಲಿ ಸುವಾಸನೆಯ ಧೂಪವನ್ನು ಹಾಕಿ, ಯೆಹೋವ ದೇವರು ಆಜ್ಞಾಪಿಸದೇ ಇದ್ದ ಬೇರೆ ಬೆಂಕಿಯನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಸಮರ್ಪಿಸಿದರು. ಆಗ ಯೆಹೋವ ದೇವರ ಬಳಿಯಿಂದ ಬೆಂಕಿಯು ಹೊರಟುಬಂದು ಅವರನ್ನು ದಹಿಸಿಬಿಟ್ಟಿತು. ಅವರು ಯೆಹೋವ ದೇವರ ಮುಂದೆ ಮರಣಹೊಂದಿದರು. ತರುವಾಯ ಮೋಶೆಯು ಆರೋನನಿಗೆ, “ಯೆಹೋವ ದೇವರು ಹೇಳಿದ್ದು ಇದೇ. ಅದೇನೆಂದರೆ:
“ ‘ನನ್ನನ್ನು ಸಮೀಪಿಸುವವರ ಮುಖಾಂತರ
ನನ್ನ ಪರಿಶುದ್ಧತೆಯನ್ನು ತೋರಿಸುವೆನು
ಮತ್ತು ಜನರೆಲ್ಲರ ಮುಂದೆ
ನನ್ನ ಮಹಿಮೆಯನ್ನು ತೋರ್ಪಡಿಸುವೆನು,’ ”
ಎಂದನು. ಆಗ ಆರೋನನು ಮಾತನಾಡದೆ ಸುಮ್ಮನಿದ್ದನು.
ಮೋಶೆಯು ಆರೋನನ ಚಿಕ್ಕಪ್ಪನಾದ ಉಜ್ಜೀಯೇಲನ ಮಕ್ಕಳಾದ ಮೀಶಾಯೇಲನನ್ನೂ ಎಲ್ಜಾಫಾನನನ್ನೂ ಕರೆದು, “ನಿಮ್ಮ ಸಹೋದರರನ್ನು ಪರಿಶುದ್ಧ ಸ್ಥಳದಿಂದ ಪಾಳೆಯದ ಹೊರಗೆ ಹೊತ್ತುಕೊಂಡು ಹೋಗಿರಿ,” ಎಂದನು. ಮೋಶೆಯು ಹೇಳಿದ ಹಾಗೆಯೇ, ಅವರು ಹತ್ತಿರಕ್ಕೆ ಹೋಗಿ ಅವರನ್ನು ಅವರ ಮೇಲಂಗಿಗಳೊಂದಿಗೆ ಹೊತ್ತುಕೊಂಡು ಪಾಳೆಯದ ಹೊರಗೆ ಹೋದರು.
ಆಗ ಮೋಶೆಯು ಆರೋನನಿಗೂ ಅವನ ಪುತ್ರರಾದ ಎಲಿಯಾಜರನಿಗೂ ಈತಾಮಾರನಿಗೂ, “ನೀವು ಮರಣ ಹೊಂದದಂತೆಯೂ ಕೋಪವು ಜನರೆಲ್ಲರ ಮೇಲೆ ಬಾರದಂತೆಯೂ ನೀವು ನಿಮ್ಮ ಮುಚ್ಚಿದ ತಲೆಗಳನ್ನು ತೆಗೆಯಬೇಡಿರಿ. ಇಲ್ಲವೆ ನಿಮ್ಮ ಬಟ್ಟೆಗಳನ್ನು ತೆಗೆಯಬೇಡಿರಿ. ಇಲ್ಲವೆ ನಿಮ್ಮ ಬಟ್ಟೆಗಳನ್ನು ಹರಿದುಕೊಳ್ಳಬೇಡಿರಿ. ಆದರೆ ನಿಮ್ಮ ಸಹೋದರರಾಗಿರುವ ಇಸ್ರಾಯೇಲಿನ ಮನೆತನದವರೆಲ್ಲರು ಯೆಹೋವ ದೇವರು ಉರಿಸಿದ ಬೆಂಕಿಯ ನಾಶದ ನಿಮಿತ್ತ ಗೋಳಾಡಲಿ. ನೀವು ಮರಣ ಹೊಂದದಂತೆ ದೇವದರ್ಶನದ ಗುಡಾರದ ಬಾಗಿಲಿನಿಂದ ಹೊರಗೆ ಹೋಗಬಾರದು. ಏಕೆಂದರೆ ಯೆಹೋವ ದೇವರ ಅಭಿಷೇಕ ತೈಲವು ನಿಮ್ಮ ಮೇಲಿದೆ,” ಎಂದನು. ಆಗ ಅವರು ಮೋಶೆಯ ಮಾತಿನ ಪ್ರಕಾರವೇ ಮಾಡಿದರು.
ಯೆಹೋವ ದೇವರು ಮಾತನಾಡಿ ಆರೋನನಿಗೆ, “ನೀನು ಸಾಯದಂತೆ ದೇವದರ್ಶನದ ಗುಡಾರಕ್ಕೆ ಬರುವಾಗ ನೀನೂ ಇಲ್ಲವೆ ನಿನ್ನ ಪುತ್ರರೂ ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಕುಡಿಯಬಾರದು. ಇದು ನಿಮ್ಮ ವಂಶಾವಳಿಯು ಇರುವವರೆಗೂ ಶಾಶ್ವತವಾಗಿರುವ ಕಟ್ಟಳೆಯಾಗಿದೆ. 10 ನೀವು ಶುದ್ಧವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಮಧ್ಯೆ ಇರುವ ವ್ಯತ್ಯಾಸವನ್ನು ತೋರಿಸುವುದಕ್ಕಾಗಿಯೂ 11 ನೀವು ಇಸ್ರಾಯೇಲರಿಗೆ ಯೆಹೋವ ದೇವರು ಮೋಶೆಯ ಕೈಗೆ ಒಪ್ಪಿಸಿ ಹೇಳಿದ ಹಾಗೆ, ಎಲ್ಲಾ ಕಟ್ಟಳೆಗಳನ್ನು ಬೋಧಿಸುವುದಕ್ಕಾಗಿಯೂ ಇರುವುದು,” ಎಂದರು.
12 ಮೋಶೆಯು ಆರೋನನೊಂದಿಗೂ ಉಳಿದ ಅವನ ಪುತ್ರರಾದ ಎಲಿಯಾಜರನೊಂದಿಗೂ ಈತಾಮಾರನೊಂದಿಗೂ ಮಾತನಾಡಿ, “ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಬಲಿಗಳಲ್ಲಿ ಉಳಿದಿರುವ ಧಾನ್ಯ ಸಮರ್ಪಣೆಯನ್ನು ತೆಗೆದುಕೊಳ್ಳಿರಿ ಮತ್ತು ಅದನ್ನು ಯಜ್ಞವೇದಿಯ ಬಳಿಯಲ್ಲಿ ಹುಳಿಯಿಲ್ಲದ ರೊಟ್ಟಿ ತಿನ್ನಿರಿ. ಏಕೆಂದರೆ ಅದು ಮಹಾಪರಿಶುದ್ಧವಾದದ್ದು. 13 ನೀವು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ದಹನ ಮಾಡಿದ ಯೆಹೋವ ದೇವರ ಯಜ್ಞಗಳಲ್ಲಿ ಇವು ನಿನಗೂ ನಿನ್ನ ಪುತ್ರರಿಗೂ ಸಲ್ಲತಕ್ಕವುಗಳು. ಏಕೆಂದರೆ ಹಾಗೆ ನನಗೆ ಆಜ್ಞೆಯಾಗಿದೆ. 14 ನೀನೂ, ನಿನ್ನೊಂದಿಗೆ ನಿನ್ನ ಪುತ್ರರೂ ನಿನ್ನ ಪುತ್ರಿಯರೂ ನೈವೇದ್ಯ ಮಾಡಿದ ಎದೆಯ ಭಾಗವನ್ನೂ, ಅರ್ಪಿಸುವ ತೊಡೆಯ ಭಾಗವನ್ನೂ ಶುದ್ಧ ಸ್ಥಳದಲ್ಲಿ ತಿನ್ನಬೇಕು. ಏಕೆಂದರೆ ಅದು ಇಸ್ರಾಯೇಲರ ಸಮಾಧಾನದ ಬಲಿಗಳಲ್ಲಿ ನಿನಗೂ ನಿನ್ನ ಪುತ್ರರಿಗೂ ಸಲ್ಲುವಂಥವುಗಳಾಗಿವೆ. 15 ನೈವೇದ್ಯವಾಗಿ ಅರ್ಪಿಸುವ ಎದೆಯನ್ನೂ ತೊಡೆಯನ್ನೂ ಅವರು ಬೆಂಕಿಯಿಂದ ಮಾಡಿದ ಕೊಬ್ಬಿನ ಸಮರ್ಪಣೆಗಳನ್ನು ನೈವೇದ್ಯವಾಗಿ ನಿವಾಳಿಸುವುದಕ್ಕೆ ಯೆಹೋವ ದೇವರ ಸನ್ನಿಧಿಯಲ್ಲಿ ತರಬೇಕು. ಯೆಹೋವ ದೇವರು ಆಜ್ಞಾಪಿಸಿದ ಹಾಗೆ ಅದು ನಿನಗೂ, ನಿನ್ನೊಂದಿಗೆ ನಿನ್ನ ಪುತ್ರರಿಗೂ ನಿತ್ಯ ಕಟ್ಟಳೆಯಾಗಿ ಸಿಕ್ಕಬೇಕು,” ಎಂದು ಹೇಳಿದನು.
16 ಅನಂತರ ಮೋಶೆಯು ಶ್ರದ್ಧೆಯಿಂದ ಪಾಪ ಪರಿಹಾರದ ಬಲಿಯ ಹೋತವನ್ನು ಹುಡುಕಿದಾಗ, ಅದು ಸುಟ್ಟು ಹೋಗಿತ್ತು. ಅವನು ಆರೋನನ ಉಳಿದ ಪುತ್ರರಾದ ಎಲಿಯಾಜರ್ ಮತ್ತು ಈತಾಮಾರನ ಮೇಲೆ ಕೋಪಗೊಂಡು, ಹೇಳಿದ್ದೇನೆಂದರೆ, 17 “ಅದು ಮಹಾಪರಿಶುದ್ಧವಾದ್ದರಿಂದಲೂ ಯೆಹೋವ ಸನ್ನಿಧಿಯಲ್ಲಿ ಅವರಿಗಾಗಿ ಪ್ರಾಯಶ್ಚಿತ್ತ ಮಾಡುವುದಕ್ಕಾಗಿಯೂ ನೀವು ಸಭೆಯ ಅಪರಾಧವನ್ನು ಹೊರುವುದಕ್ಕಾಗಿ ದೇವರು ಅದನ್ನು ಕೊಟ್ಟಿದ್ದೆಂದೂ ನೀವು ತಿಳಿದು ಪಾಪ ಪರಿಹಾರದ ಬಲಿಯನ್ನು ಪರಿಶುದ್ಧವಾದ ಸ್ಥಳದಲ್ಲಿ ಏಕೆ ತಿನ್ನಲಿಲ್ಲ? 18 ಇಗೋ, ಅದರ ರಕ್ತವು ಪರಿಶುದ್ಧಸ್ಥಳದ ಒಳಗೆ ತರಲಿಲ್ಲವಾದ ಕಾರಣ ನಾನು ಆಜ್ಞಾಪಿಸಿದಂತೆ ನಿಶ್ಚಯವಾಗಿ ನೀವು ಅದನ್ನು ಪರಿಶುದ್ಧ ಸ್ಥಳದಲ್ಲಿ ತಿನ್ನಬೇಕಾಗಿತ್ತು,” ಎಂದನು.
19 ಆಗ ಆರೋನನು ಮೋಶೆಗೆ, “ಈ ದಿನ ಅವರು ಪಾಪಪರಿಹಾರ ಬಲಿಯನ್ನು ಮತ್ತು ಅದರ ದಹನಬಲಿಯನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಸಮರ್ಪಿಸಿದ್ದರು. ಆದರೆ ಈ ದುಃಖ ಘಟನೆಗಳು ನನಗೆ ಸಂಭವಿಸಿದೆ. ಹೀಗಿರುವಲ್ಲಿ ಇಂದು ನಾನು ಆ ಪಾಪ ಪರಿಹಾರದ ಬಲಿದ್ರವ್ಯವನ್ನು ಊಟಮಾಡಿದ್ದರೆ, ಯೆಹೋವ ದೇವರು ಸಂತೋಷಪಡುತ್ತಿದ್ದರೋ?” ಎಂದನು. 20 ಆಗ ಮೋಶೆಯು ಈ ಮಾತನ್ನು ಕೇಳಿದಾಗ ತೃಪ್ತಿಪಟ್ಟನು.