12
ದುಷ್ಟ ರೈತರ ಸಾಮ್ಯ
ಯೇಸು ಸಾಮ್ಯಗಳಿಂದ ಮಾತನಾಡಲು ಪ್ರಾರಂಭಿಸಿದರು: “ಒಬ್ಬಾನೊಬ್ಬ ಮನುಷ್ಯನು ಒಂದು ದ್ರಾಕ್ಷಿಯ ತೋಟವನ್ನು ಮಾಡಿ ಸುತ್ತಲೂ ಬೇಲಿ ಹಾಕಿದನು. ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಅಗೆದು ಕಾವಲುಗೋಪುರವನ್ನು ಕಟ್ಟಿ ರೈತರಿಗೆ ವಹಿಸಿಬಿಟ್ಟು ದೂರದೇಶಕ್ಕೆ ಹೊರಟುಹೋದನು. ಫಲದ ಕಾಲ ಬಂದಾಗ ಅವನು ದ್ರಾಕ್ಷಿತೋಟದ ಫಲವನ್ನು ರೈತರಿಂದ ಪಡೆಯುವುದಕ್ಕಾಗಿ ಅವರ ಬಳಿಗೆ ಒಬ್ಬ ಸೇವಕನನ್ನು ಕಳುಹಿಸಿದನು. ಆದರೆ ಅವರು ಅವನನ್ನು ಹಿಡಿದು ಹೊಡೆದು, ಬರಿಗೈಯಲ್ಲಿ ಕಳುಹಿಸಿಬಿಟ್ಟರು. ಯಜಮಾನನು ಪುನಃ ಮತ್ತೊಬ್ಬ ಸೇವಕನನ್ನು ಅವರ ಬಳಿಗೆ ಕಳುಹಿಸಿದಾಗ ಅವರು ಅವನ ತಲೆಯನ್ನು ಗಾಯಗೊಳಿಸಿ ಅವಮಾನ ಮಾಡಿ ಕಳುಹಿಸಿಬಿಟ್ಟರು. ಯಜಮಾನನು ಮತ್ತೊಬ್ಬ ಸೇವಕನನ್ನು ಕಳುಹಿಸಿದಾಗ ಅವರು ಅವನನ್ನು ಕೊಂದುಹಾಕಿದರು. ಯಜಮಾನನು ಬೇರೆ ಕೆಲವರನ್ನು ಕಳುಹಿಸಿದಾಗ ಅವರಲ್ಲಿ ಕೆಲವರನ್ನು ಹೊಡೆದರು, ಕೆಲವರನ್ನು ಕೊಂದುಹಾಕಿದರು.
“ಕಡೆಯದಾಗಿ ತನಗೆ ಪ್ರಿಯನಾಗಿದ್ದ ಒಬ್ಬನೇ ಮಗನಿದ್ದನು. ‘ಅವರು ನನ್ನ ಮಗನಿಗಾದರೂ ಮರ್ಯಾದೆ ಕೊಡುವರು,’ ಎಂದು ಭಾವಿಸಿ, ಅವನನ್ನು ಅವರ ಬಳಿಗೆ ಕಳುಹಿಸಿದನು.
“ಆದರೆ ಆ ರೈತರು, ‘ಇವನೇ ಬಾಧ್ಯಸ್ಥನು, ಬನ್ನಿರಿ, ಇವನನ್ನು ನಾವು ಕೊಂದು ಹಾಕೋಣ. ಆಗ ಆಸ್ತಿ ನಮ್ಮದಾಗುವುದು,’ ಎಂದು ತಮ್ಮ ತಮ್ಮಲ್ಲಿ ಮಾತನಾಡಿಕೊಂಡರು. ಅವರು ಅವನನ್ನು ಹಿಡಿದು ಕೊಂದುಹಾಕಿ ದ್ರಾಕ್ಷಿತೋಟದ ಹೊರಗೆ ಬಿಸಾಡಿದರು.
“ಹಾಗಾದರೆ ದ್ರಾಕ್ಷಿತೋಟದ ಯಜಮಾನನು ಅವರಿಗೆ ಏನು ಮಾಡುವನು? ಅವನು ಬಂದು ಆ ರೈತರನ್ನು ಸಂಹರಿಸಿ ದ್ರಾಕ್ಷಿಯ ತೋಟವನ್ನು ಬೇರೆಯವರಿಗೆ ಕೊಡುವನು. 10 ಈ ಪವಿತ್ರ ವಾಕ್ಯವನ್ನು ನೀವು ಓದಲಿಲ್ಲವೋ:
“ ‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ
ಮುಖ್ಯವಾದ ಮೂಲೆಗಲ್ಲಾಯಿತು.
11 ಇದು ಕರ್ತನಿಂದಲೇ ಆಯಿತು.
ಇದು ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಗಿದೆ,’*
ಎಂದು ಹೇಳಿದರು.
12 ಆಗ ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೂ ತಮ್ಮ ವಿರೋಧವಾಗಿಯೇ ಈ ಸಾಮ್ಯವನ್ನು ಹೇಳಿದರೆಂದು ತಿಳಿದು ಯೇಸುವನ್ನು ಹಿಡಿಯುವುದಕ್ಕೆ ಸಂದರ್ಭ ನೋಡಿದರು. ಆದರೆ ಅವರು ಜನರಿಗೆ ಹೆದರಿ, ಯೇಸುವನ್ನು ಬಿಟ್ಟು ಹೊರಟು ಹೋದರು.
ಚಕ್ರವರ್ತಿಗೆ ತೆರಿಗೆ ಕಟ್ಟುವುದು
13 ಆಮೇಲೆ ಅವರು ಯೇಸುವನ್ನು ಅವರ ಮಾತುಗಳಲ್ಲಿ ಹಿಡಿಯಬೇಕೆಂದು ಫರಿಸಾಯರಲ್ಲಿಯೂ ಹೆರೋದ್ಯರಲ್ಲಿಯೂ ಕೆಲವರನ್ನು ಅವರ ಬಳಿಗೆ ಕಳುಹಿಸಿದರು. 14 ಅವರು ಬಂದು ಯೇಸುವಿಗೆ, “ಬೋಧಕರೇ, ನೀವು ಸತ್ಯವಂತರು ಮತ್ತು ಯಾವ ಮನುಷ್ಯನನ್ನೂ ಲಕ್ಷಿಸದವರೂ ನೀವು ಮನುಷ್ಯರ ಮುಖದಾಕ್ಷಿಣ್ಯ ಮಾಡದೆ ದೇವರ ಮಾರ್ಗವನ್ನು ಸತ್ಯದಲ್ಲಿ ಬೋಧಿಸುತ್ತೀರಿ ಎಂದೂ ನಾವು ಬಲ್ಲೆವು. ಕೈಸರನಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ ಇಲ್ಲವೋ? 15 ನಾವು ಕೊಡಬೇಕೋ? ಕೊಡಬಾರದೋ?” ಎಂದು ಕೇಳಿದರು.
ಆದರೆ ಯೇಸು ಅವರ ಕಪಟವನ್ನು ತಿಳಿದು ಅವರಿಗೆ, “ನೀವು ನನ್ನನ್ನೇಕೆ ಪರೀಕ್ಷಿಸುತ್ತೀರಿ? ಒಂದು ಬೆಳ್ಳಿ ನಾಣ್ಯವನ್ನು ತಂದು ನನಗೆ ತೋರಿಸಿರಿ,” ಎಂದು ಹೇಳಿದರು. 16 ಅವರು ಅದನ್ನು ತಂದಾಗ ಯೇಸು ಅವರಿಗೆ, “ಇದರ ಮುಖ ಮುದ್ರೆಯು ಮತ್ತು ಮೆಲ್ಬರಹವು ಯಾರದು?” ಎಂದು ಕೇಳಿದ್ದಕ್ಕೆ ಅವರು,
“ಕೈಸರನದು,” ಎಂದು ಉತ್ತರಕೊಟ್ಟರು.
17 ಆಗ ಯೇಸು ಉತ್ತರವಾಗಿ ಅವರಿಗೆ, “ಕೈಸರನಿಗೆ ಸಲ್ಲತಕ್ಕದ್ದನ್ನು ಕೈಸರನಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದು ಹೇಳಿದರು.
ಇದಕ್ಕೆ ಅವರು ಯೇಸುವಿನ ವಿಷಯವಾಗಿ ಆಶ್ಚರ್ಯಪಟ್ಟರು.
ಪುನರುತ್ಥಾನದಲ್ಲಿ ಮದುವೆ ಇಲ್ಲ
18 ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಯೇಸುವಿನ ಬಳಿಗೆ ಬಂದು, 19 “ಬೋಧಕರೇ, ‘ಒಬ್ಬ ಮನುಷ್ಯನ ಸಹೋದರನು ಮಕ್ಕಳಿಲ್ಲದೆ ವಿಧವೆಯನ್ನು ಬಿಟ್ಟು ಸತ್ತರೆ, ಅವನ ಸಹೋದರನು ಅವನ ಹೆಂಡತಿಯನ್ನು ತೆಗೆದುಕೊಂಡು ತನ್ನ ಸಹೋದರನಿಗಾಗಿ ಸಂತಾನವನ್ನು ಪಡೆಯಬೇಕು’ ಎಂದು ಮೋಶೆಯು ನಮಗೆ ಬರೆದಿರುತ್ತಾನಷ್ಟೆ. 20 ಏಳುಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆಯಾಗಿ ಸಂತಾನವಿಲ್ಲದೆ ಮೃತಪಟ್ಟನು. 21 ಎರಡನೆಯವನೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಮೃತನಾದನು. ಅದರಂತೆಯೇ ಮೂರನೆಯವನೂ ಆದನು. 22 ಹೀಗೆ ಏಳುಮಂದಿಯೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದವರಾಗಿ ಮೃತರಾದರು. ಕೊನೆಯಲ್ಲಿ ಆ ಸ್ತ್ರೀಯೂ ಸಹ ಮರಣಹೊಂದಿದಳು. 23 ಹಾಗಾದರೆ, ಪುನರುತ್ಥಾನದಲ್ಲಿ ಅವರು ಜೀವಂತವಾಗಿ ಎದ್ದಾಗ ಅವರಲ್ಲಿ ಆಕೆಯು ಯಾರ ಪತ್ನಿಯಾಗಿರುವಳು? ಏಕೆಂದರೆ ಏಳುಮಂದಿಯೂ ಅವಳನ್ನು ಮದುವೆ ಮಾಡಿಕೊಂಡಿದ್ದರಲ್ಲಾ,” ಎಂದು ಪ್ರಶ್ನಿಸಿದರು.
24 ಅದಕ್ಕೆ ಯೇಸು, “ನೀವು ಪವಿತ್ರ ವೇದವನ್ನಾಗಲಿ ದೇವರ ಶಕ್ತಿಯನ್ನಾಗಲಿ ಅರ್ಥ ಮಾಡಿಕೊಳ್ಳದೆ ತಪ್ಪುತ್ತಿದ್ದಿರಲ್ಲವೇ? 25 ಅವರು ಸತ್ತವರೊಳಗಿಂದ ಜೀವಂತವಾಗಿ ಎದ್ದ ಮೇಲೆ, ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ. 26 ಸತ್ತವರು ಎದ್ದು ಬರುವುದರ ವಿಷಯವಾಗಿ, ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ’ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಹೇಗೆ ಮಾತನಾಡಿದರೆಂದು ಮೋಶೆಯ ಗ್ರಂಥದಲ್ಲಿ ನೀವು ಓದಲಿಲ್ಲವೋ? 27 ದೇವರು ಜೀವಿತರಿಗೆ ದೇವರಾಗಿದ್ದಾರೆ ಹೊರತು ಸತ್ತವರಿಗಲ್ಲ, ಆದ್ದರಿಂದ ಈ ವಿಷಯದಲ್ಲಿ ನೀವು ಬಹಳವಾಗಿ ತಪ್ಪುಮಾಡುತ್ತೀರಿ,” ಎಂದು ಹೇಳಿದರು.
ಅತ್ಯಂತ ಪ್ರಮುಖ ಆಜ್ಞೆ
28 ನಿಯಮ ಬೋಧಕರಲ್ಲಿ ಒಬ್ಬನು ಬಂದು ಅವರು ಕೂಡಿಕೊಂಡು ತರ್ಕಿಸುತ್ತಿರುವುದನ್ನು ಕೇಳಿ ಯೇಸು ಅವರಿಗೆ ಸರಿಯಾಗಿ ಉತ್ತರವನ್ನು ಕೊಟ್ಟನೆಂದು ತಿಳಿದು ಅವರಿಗೆ, “ಎಲ್ಲಾ ಆಜ್ಞೆಗಳಲ್ಲಿ ಮೊದಲನೆಯದು ಯಾವುದು?” ಎಂದು ಕೇಳಿದನು.
29 ಯೇಸು ಉತ್ತರವಾಗಿ ಅವನಿಗೆ, “ಎಲ್ಲಾ ಆಜ್ಞೆಗಳಲ್ಲಿ ಮೊದಲನೆಯದು, ‘ಇಸ್ರಾಯೇಲೇ, ಕೇಳು: ನಮ್ಮ ದೇವರಾದ ಕರ್ತ ಒಬ್ಬರೇ ಕರ್ತನಾಗಿದ್ದಾರೆ. 30 ನೀನು ನಿನ್ನ ದೇವರನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಮನಸ್ಸಿನಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು?’ 31 ‘ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು,’§ ಎಂಬುದು ಅದರಂತೆಯೇ ಇರುವ ಎರಡನೆಯ ಆಜ್ಞೆಯಾಗಿದೆ. ಇವುಗಳಿಗಿಂತ ಹೆಚ್ಚಿನ ಆಜ್ಞೆಯು ಮತ್ತೊಂದಿಲ್ಲ,” ಎಂದು ಹೇಳಿದರು.
32 ಅದಕ್ಕೆ ಆ ನಿಯಮ ಬೋಧಕನು ಯೇಸುವಿಗೆ, “ಬೋಧಕರೇ, ಚೆನ್ನಾಗಿ ಹೇಳಿದಿರಿ. ನೀವು ಹೇಳಿದ್ದು ಸತ್ಯವೇ; ಏಕೆಂದರೆ ದೇವರು ಒಬ್ಬರೇ, ಅವರ ಹೊರತು ಬೇರೊಬ್ಬರು ಇಲ್ಲ. 33 ಅವರನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ಪ್ರೀತಿಸಿ, ತನ್ನ ನೆರೆಯವನನ್ನು ತನ್ನಂತೆಯೇ ಪ್ರೀತಿಸುವುದು ಎಲ್ಲಾ ದಹನಬಲಿಗಳಿಗಿಂತಲೂ ಯಜ್ಞಗಳಿಗಿಂತಲೂ ಹೆಚ್ಚಿನದಾಗಿದೆ,” ಎಂದನು.
34 ಅವನು ವಿವೇಕದಿಂದ ಉತ್ತರ ಕೊಟ್ಟದ್ದನ್ನು ಯೇಸು ಕಂಡು ಅವನಿಗೆ, “ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ,” ಎಂದರು. ಅಂದಿನಿಂದ ಯೇಸುವನ್ನು ಪ್ರಶ್ನೆಮಾಡುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.
ಕ್ರಿಸ್ತನು ಯಾರ ಪುತ್ರನು?
35 ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ, “ಕ್ರಿಸ್ತನು ದಾವೀದನ ಪುತ್ರನು ಎಂದು ನಿಯಮ ಬೋಧಕರು ಹೇಳುತ್ತಿರುವುದು ಹೇಗೆ? 36 ದಾವೀದನು ತಾನೇ ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದ್ದೇನೆಂದರೆ:
“ ‘ಕರ್ತದೇವರು ನನ್ನ ಕರ್ತದೇವರಿಗೆ ಹೇಳಿದ್ದಾರೆ:
“ನಾನು ನಿನ್ನ ವಿರೋಧಿಗಳನ್ನು
ನಿನ್ನ ಪಾದದಡಿಯಲ್ಲಿ ಹಾಕುವವರೆಗೆ
ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು.” ’*
37 ಆದ್ದರಿಂದ ದಾವೀದನು ತಾನೇ ಅವರನ್ನು, ‘ನನ್ನ ಕರ್ತದೇವರೇ’ ಎಂದು ಕರೆಯುವಾಗ, ಆತನು ದಾವೀದನ ಪುತ್ರನಾಗುವುದು ಹೇಗೆ?” ಎಂದು ಕೇಳಿದರು.
ಜನಸಮೂಹವು ಸಂತೋಷದಿಂದ ಯೇಸುವಿನ ಮಾತುಗಳನ್ನು ಆಲಿಸುತ್ತಿತ್ತು.
ನಿಯಮ ಬೋಧಕರ ವಿಷಯದಲ್ಲಿ ಎಚ್ಚರಿಕೆ
38 ಯೇಸು ಬೋಧನೆಮಾಡುತ್ತಾ, “ನಿಯಮ ಬೋಧಕರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಅವರು ನಿಲುವಂಗಿಯನ್ನು ತೊಟ್ಟುಕೊಂಡು ತಿರುಗಾಡುವುದಕ್ಕೆ ಬಯಸುವವರೂ ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ 39 ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಇಷ್ಟಪಡುತ್ತಾರೆ. 40 ಇವರು ವಿಧವೆಯರ ಮನೆಗಳನ್ನು ದೋಚಿ ನಟನೆಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ, ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು,” ಎಂದರು.
ಬಡ ವಿಧವೆಯ ಕಾಣಿಕೆ
41 ಯೇಸು ಕಾಣಿಕೆ ಪೆಟ್ಟಿಗೆಯ ಎದುರಾಗಿ ಕುಳಿತುಕೊಂಡು ಜನರು ಹೇಗೆ ಅದರಲ್ಲಿ ಹಣ ಹಾಕುತ್ತಿದ್ದಾರೆಂಬುದನ್ನು ಗಮನಿಸುತ್ತಿದ್ದರು. ಅನೇಕ ಐಶ್ವರ್ಯವಂತರು ಹೆಚ್ಚು ಹಣ ಹಾಕಿದರು. 42 ಆದರೆ ಒಬ್ಬ ಬಡ ವಿಧವೆಯು ಬಂದು ಎರಡು ಚಿಕ್ಕ ನಾಣ್ಯಗಳನ್ನು ಹಾಕಿದಳು.
43 ಯೇಸು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ, “ಈ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದವರೆಲ್ಲರಿಗಿಂತ ಈ ಬಡ ವಿಧವೆಯು ಹೆಚ್ಚಾಗಿ ಹಾಕಿದ್ದಾಳೆ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 44 ಎಲ್ಲರೂ ತಮ್ಮ ಸಮೃದ್ಧಿಯಲ್ಲಿ ಹಾಕಿದರು. ಆದರೆ ಈಕೆಯು ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಎಂದರೆ, ತನ್ನ ಜೀವನಕ್ಕೆ ಆಧಾರವಾಗಿದ್ದುದನ್ನು ಹಾಕಿದ್ದಾಳೆ,” ಎಂದರು.
* 12:11 12:11 ಕೀರ್ತನೆ 118:22,23 12:26 12:26 ವಿಮೋ 3:6 12:30 12:30 ಧರ್ಮೋ 6:4,5 § 12:31 12:31 ಯಾಜಕ 19:18 * 12:36 12:36 ಕೀರ್ತನೆ 110:1