15
ಪಿಲಾತನ ಮುಂದೆ ಯೇಸು
ಬೆಳಗಾದ ಕೂಡಲೇ ಮುಖ್ಯಯಾಜಕರೂ ಹಿರಿಯರೂ ನಿಯಮ ಬೋಧಕರ ಮತ್ತು ಆಲೋಚನಾ ಸಭೆಯವರೊಂದಿಗೆ ಸಮಾಲೋಚನೆ ಮಾಡಿಕೊಂಡು ಯೇಸುವಿಗೆ ಬೇಡಿಹಾಕಿಸಿ ಪಿಲಾತನಿಗೆ ಒಪ್ಪಿಸಿದರು.
ಆಗ ಪಿಲಾತನು ಯೇಸುವಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಲು,
“ನೀನೇ ಅದನ್ನು ಹೇಳಿದ್ದೀ” ಎಂದು ಯೇಸು ಉತ್ತರಿಸಿದರು.
ಇದಲ್ಲದೆ ಮುಖ್ಯಯಾಜಕರು ಯೇಸುವಿನ ಮೇಲೆ ಅನೇಕ ದೂರುಗಳನ್ನು ಹೇಳಿದರು. ಆದರೆ ಪಿಲಾತನು ತಿರುಗಿ ಯೇಸುವಿಗೆ, “ನೀನು ಉತ್ತರ ಕೊಡುವುದಿಲ್ಲವೋ? ಇವರು ನಿನಗೆ ವಿರೋಧವಾಗಿ ಎಷ್ಟು ದೂರುಗಳನ್ನು ಹೇಳುತ್ತಾರೆ ನೋಡು,” ಎಂದು ಕೇಳಿದನು.
ಆದರೂ ಯೇಸು ಉತ್ತರ ಕೊಡದೆ ಇರಲಾಗಿ ಪಿಲಾತನು ಆಶ್ಚರ್ಯಪಟ್ಟನು.
ಹಬ್ಬದಲ್ಲಿ ಜನರು ಕೋರಿದ ಒಬ್ಬ ಸೆರೆಯಾಳನ್ನು ಅವರಿಗೆ ಬಿಟ್ಟುಕೊಡುವ ಪದ್ಧತಿಯಿತ್ತು. ದಂಗೆ ಮಾಡಿದವರೊಂದಿಗೆ ಬಂಧಿಸಲಾದ ಆ ದಂಗೆಯಲ್ಲಿ ಕೊಲೆಮಾಡಿದ ಬರಬ್ಬನೆಂಬ ಹೆಸರುಳ್ಳವನೊಬ್ಬನು ಸೆರೆಯಲ್ಲಿ ಇದ್ದನು. ಜನಸಮೂಹವು ಪಿಲಾತನು ತಮಗೆ ಯಾವಾಗಲೂ ಮಾಡುತ್ತಿದ್ದ ಪ್ರಕಾರ ಮಾಡಬೇಕೆಂದು ಅವನನ್ನು ಬೇಡಿಕೊಳ್ಳಲಾರಂಭಿಸಿದರು.
ಪಿಲಾತನು ಅವರಿಗೆ, “ಯೆಹೂದ್ಯರ ಅರಸನನ್ನು ನಿಮಗಾಗಿ ನಾನು ಬಿಡಿಸಬೇಕೋ?” ಎಂದು ಕೇಳಿದನು. 10 ಮುಖ್ಯಯಾಜಕರು ಹೊಟ್ಟೆಕಿಚ್ಚಿನಿಂದ ಯೇಸುವನ್ನು ಒಪ್ಪಿಸಿಕೊಟ್ಟಿದ್ದರೆಂದು ಪಿಲಾತನಿಗೆ ತಿಳಿದಿತ್ತು. 11 ಆದರೆ ಮುಖ್ಯಯಾಜಕರು ತಮಗೆ ಬರಬ್ಬನನ್ನೇ ಬಿಟ್ಟುಕೊಡಬೇಕೆಂದು ಜನರನ್ನು ಪ್ರೇರೇಪಿಸಿದರು.
12 ಪಿಲಾತನು ಅವರಿಗೆ, “ಹಾಗಾದರೆ ನೀವು ಯೆಹೂದ್ಯರ ಅರಸನೆಂದು ಕರೆಯುವ ಈತನಿಗೆ ನಾನೇನು ಮಾಡಬೇಕೆನ್ನುತ್ತೀರಿ?” ಎಂದು ಕೇಳಿದನು.
13 ಅವರು, “ಆತನನ್ನು ಶಿಲುಬೆಗೆ ಹಾಕಿಸು,” ಎಂದು ಮತ್ತೆ ಕೂಗಿಕೊಂಡರು.
14 ಆಗ ಪಿಲಾತನು ಅವರಿಗೆ, “ಏಕೆ? ಆತನು ಯಾವ ಅಪರಾಧ ಮಾಡಿದ್ದಾನೆ?” ಎಂದು ಕೇಳಲು ಅವರು,
“ಆತನನ್ನು ಶಿಲುಬೆಗೆ ಹಾಕಿಸು,” ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡರು.
15 ಪಿಲಾತನು ಜನರನ್ನು ಮೆಚ್ಚಿಸಲು ಮನಸ್ಸುಳ್ಳವನಾಗಿ ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡೆಸಿ ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು.
ಸೈನಿಕರು ಯೇಸುವನ್ನು ಪರಿಹಾಸ್ಯ ಮಾಡಿದ್ದು
16 ಸೈನಿಕರು ಯೇಸುವನ್ನು ರಾಜಭವನದ ಅಂಗಳದೊಳಕ್ಕೆ ತೆಗೆದುಕೊಂಡು ಬಂದು ತಮ್ಮ ದಳದವರನ್ನೆಲ್ಲಾ ಒಟ್ಟಾಗಿ ಕರೆದರು. 17 ಅವರು ಯೇಸುವಿಗೆ ಕಡುಗೆಂಪು ಬಣ್ಣದ ಮೇಲಂಗಿಯನ್ನು ಹೊದಿಸಿ ಮುಳ್ಳಿನ ಕಿರೀಟವನ್ನು ಹೆಣೆದು ಅವರ ತಲೆಯ ಮೇಲೆ ಇಟ್ಟರು. 18 ತರುವಾಯ ಅವರು, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ,” ಎಂದರು. 19 ಅವರು ಬೆತ್ತದಿಂದ ಯೇಸುವಿನ ತಲೆಯ ಮೇಲೆ ಹೊಡೆದು, ಅವರ ಮೇಲೆ ಉಗುಳಿ ಮೊಣಕಾಲೂರಿ ಅವರಿಗೆ ನಮಸ್ಕರಿಸಿದರು. 20 ಹೀಗೆ ಅವರು ಯೇಸುವನ್ನು ಪರಿಹಾಸ್ಯ ಮಾಡಿದ ಮೇಲೆ ಕಡುಗೆಂಪು ಬಣ್ಣದ ಬಟ್ಟೆಯನ್ನು ಅವರಿಂದ ತೆಗೆದುಹಾಕಿ ಅವರ ಸ್ವಂತ ಬಟ್ಟೆಗಳನ್ನು ಅವರಿಗೆ ಉಡಿಸಿ ಶಿಲುಬೆಗೆ ಹಾಕುವುದಕ್ಕಾಗಿ ತೆಗೆದುಕೊಂಡು ಹೋದರು.
ಶಿಲುಬೆಗೇರಿಸಿದ್ದು
21 ಅಲೆಕ್ಸಾಂದ್ರ ಮತ್ತು ರೂಫ ಎಂಬುವರ ತಂದೆಯಾದ ಕುರೇನೆದ ಸೀಮೋನನು ಗ್ರಾಮದಿಂದ ಹಾದು ಹೋಗುತ್ತಿರುವಾಗ, ಸೈನಿಕರು ಯೇಸುವಿನ ಶಿಲುಬೆಯನ್ನು ಹೊರುವಂತೆ ಅವನನ್ನು ಬಲವಂತ ಮಾಡಿದರು. 22 ತರುವಾಯ “ತಲೆಬುರುಡೆಯ ಸ್ಥಳ” ಎಂದು ಅರ್ಥವಿದ್ದ “ಗೊಲ್ಗೊಥಾ” ಎಂಬ ಸ್ಥಳಕ್ಕೆ ಅವರು ಯೇಸುವನ್ನು ತೆಗೆದುಕೊಂಡು ಬಂದರು. 23 ಆಗ ಅವರು ಯೇಸುವಿಗೆ ರಕ್ತಬೋಳ* ಬೆರೆಸಿದ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಆದರೆ ಯೇಸು ಅದನ್ನು ತೆಗೆದುಕೊಳ್ಳಲಿಲ್ಲ. 24 ಅವರು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರ ಬಟ್ಟೆಗಳನ್ನು ಪಾಲುಮಾಡಿಕೊಂಡರು. ಯಾರಿಗೆ ಯಾವುದು ಬರುವುದೋ ಎಂದು ಚೀಟುಹಾಕಿದರು.
25 ಯೇಸುವನ್ನು ಶಿಲುಬೆಗೆ ಹಾಕಿದಾಗ ಮುಂಜಾನೆ ಒಂಬತ್ತು ಗಂಟೆಯಾಗಿತ್ತು. 26 ಯೇಸುವಿನ ಮೇಲೆ ಹೊರಿಸಿದ ದೋಷಾರೋಪಣೆ ಹೀಗೆ ಬರೆದಿತ್ತು:
ಈತನು ಯೆಹೂದ್ಯರ ಅರಸನು.
27 ಯೇಸುವಿನೊಂದಿಗೆ ಇಬ್ಬರು ಕಳ್ಳರನ್ನು ತಂದು, ಒಬ್ಬನನ್ನು ಬಲಗಡೆಯಲ್ಲಿ ಇನ್ನೊಬ್ಬನನ್ನು ಎಡಗಡೆಯಲ್ಲಿ ಶಿಲುಬೆಗೆ ಹಾಕಿದರು. 28  ಹೀಗೆ, “ಆತನನ್ನು ಅಪರಾಧಿಗಳೊಂದಿಗೆ ಸೇರಿಸಿದರು,” ಎಂಬ ಪವಿತ್ರ ವೇದದ ವಾಕ್ಯವು ನೆರವೇರಿತು. 29 ಅಲ್ಲಿ ಹಾದು ಹೋಗುತ್ತಿದ್ದವರು ಯೇಸುವನ್ನು ದೂಷಿಸಿ, ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ, “ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ, 30 ನಿನ್ನನ್ನು ರಕ್ಷಿಸಿಕೊಂಡು ಶಿಲುಬೆಯಿಂದ ಕೆಳಗಿಳಿದು ಬಾ,” ಎಂದು ಯೇಸುವನ್ನು ಅಪಹಾಸ್ಯ ಮಾಡಿದರು. 31 ಅದೇ ಪ್ರಕಾರ ಮುಖ್ಯಯಾಜಕರು ನಿಯಮ ಬೋಧಕರೂ ಯೇಸುವನ್ನು ಅಪಹಾಸ್ಯಮಾಡಿ, “ಈತನು ಇತರರನ್ನು ರಕ್ಷಿಸಿದನು, ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು! 32 ಇಸ್ರಾಯೇಲರ ಅರಸನಾದ ಈ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಆಗ ನಾವು ಕಂಡು ನಂಬುತ್ತೇವೆ,” ಎಂದು ತಮ್ಮಲ್ಲಿ ಪರಸ್ಪರ ಮಾತನಾಡಿಕೊಂಡರು. ಯೇಸುವಿನೊಂದಿಗೆ ಶಿಲುಬೆಗೆ ಹಾಕಲಾಗಿದ್ದವರೂ ಅವರನ್ನು ನಿಂದಿಸಿದರು.
ಯೇಸುವಿನ ಮರಣ
33 ಮಧ್ಯಾಹ್ನದಿಂದ ಮೂರು ಗಂಟೆಯವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು. 34 ಮೂರು ಗಂಟೆಯ ಸಮಯದಲ್ಲಿ ಯೇಸು, “ಎಲೋಹಿ, ಎಲೋಹಿ, ಲಮಾ ಸಬಕ್ತಾನೀ?” ಎಂದರೆ, “ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ?” ಎಂದು ಮಹಾಧ್ವನಿಯಿಂದ ಕೂಗಿದರು.
35 ಹತ್ತಿರ ನಿಂತಿದ್ದವರಲ್ಲಿ ಕೆಲವರು ಅದನ್ನು ಕೇಳಿ, “ಇಗೋ, ಈತನು ಎಲೀಯನನ್ನು ಕರೆಯುತ್ತಿದ್ದಾನೆ,” ಎಂದರು.
36 ಆಗ ಒಬ್ಬನು ಓಡಿಹೋಗಿ ಹೀರುವ ವಸ್ತುವಿನಿಂದ ಹುಳಿರಸದಲ್ಲಿ ಅದ್ದಿ ಒಂದು ಕೋಲಿಗೆ ಸಿಕ್ಕಿಸಿ ಯೇಸುವಿಗೆ ಕುಡಿಯಲು ಕೊಟ್ಟು, “ಬಿಡಿರಿ, ಈತನನ್ನು ಕೆಳಗೆ ಇಳಿಸುವುದಕ್ಕೆ ಎಲೀಯನು ಬರುವನೋ ನೋಡೋಣ,” ಎಂದನು.
37 ಆದರೆ ಯೇಸು ಮಹಾಧ್ವನಿಯಿಂದ ಕೂಗಿ ಪ್ರಾಣಬಿಟ್ಟರು.
38 ಆಗ ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೆ ಹರಿದು ಎರಡು ಭಾಗವಾಯಿತು. 39 ಯೇಸು ಹೀಗೆ ಕೂಗಿ ಪ್ರಾಣಬಿಟ್ಟಿದ್ದನ್ನು ಅವರ ಎದುರಿಗೆ ನಿಂತಿದ್ದ ಶತಾಧಿಪತಿಯು ಕಂಡು, “ನಿಜವಾಗಿಯೂ ಈ ಮನುಷ್ಯನು ದೇವಪುತ್ರ,” ಎಂದನು.
40 ಅಲ್ಲಿ ಸ್ತ್ರೀಯರು ದೂರದಿಂದ ನೋಡುತ್ತಿದ್ದರು. ಅವರಲ್ಲಿ ಮಗ್ದಲದ ಮರಿಯಳು, ಚಿಕ್ಕ ಯಾಕೋಬನ ಮತ್ತು ಯೋಸೆಯ ತಾಯಿ ಮರಿಯಳು, ಸಲೋಮೆಯು ಇದ್ದರು. 41 ಯೇಸು ಗಲಿಲಾಯದಲ್ಲಿದ್ದಾಗ ಈ ಸ್ತ್ರೀಯರು ಅವರನ್ನು ಹಿಂಬಾಲಿಸಿ, ಉಪಚರಿಸಿದರು. ಯೇಸುವಿನೊಂದಿಗೆ ಯೆರೂಸಲೇಮಿಗೆ ಬಂದಿದ್ದ ಇನ್ನೂ ಬೇರೆ ಅನೇಕ ಸ್ತ್ರೀಯರೂ ಅಲ್ಲಿದ್ದರು.
ಯೇಸುವಿನ ದೇಹವನ್ನು ಸಮಾಧಿಯಲ್ಲಿಟ್ಟದ್ದು
42 ಸಂಜೆ ಸಮೀಪಿಸುತ್ತಿದ್ದಾಗ, ಅದು ಸಬ್ಬತ್ ದಿನದ ಸಿದ್ಧತೆಯ ಹಿಂದಿನ ದಿವಸವಾಗಿತ್ತು. 43 ಗೌರವವುಳ್ಳವನೂ ಆಲೋಚನಾಸಭೆಯ ಸದಸ್ಯನೂ ದೇವರ ರಾಜ್ಯಕ್ಕಾಗಿ ಕಾಯುತ್ತಿದ್ದವನೂ ಆದ ಅರಿಮಥಾಯದ ಯೋಸೇಫನು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹಕ್ಕಾಗಿ ಬೇಡಿಕೊಂಡನು. 44 ಯೇಸು ಅಷ್ಟು ಬೇಗ ಮರಣಹೊಂದಿದ್ದಾರೆಂದು ತಿಳಿದು ಪಿಲಾತನು ಆಶ್ಚರ್ಯಪಟ್ಟು ಶತಾಧಿಪತಿಯನ್ನು ತನ್ನ ಬಳಿಗೆ ಕರೆದು, “ಯೇಸು ಆಗಲೇ ಮೃತನಾದನೋ?” ಎಂದು ವಿಚಾರಿಸಿ 45 ತಿಳಿದುಕೊಂಡ ಮೇಲೆ ಪಾರ್ಥಿವ ಶರೀರವನ್ನು ಯೋಸೇಫನಿಗೆ ಒಪ್ಪಿಸಿದನು. 46 ಅವನು ಶುಭ್ರವಾದ ನಾರುಬಟ್ಟೆಯನ್ನು ಕೊಂಡುಕೊಂಡು ಬಂದು ಯೇಸುವನ್ನು ಶಿಲುಬೆಯಿಂದ ಇಳಿಸಿ ಆ ನಾರುಬಟ್ಟೆಯಲ್ಲಿ ಅದನ್ನು ಸುತ್ತಿ ಬಂಡೆಯಲ್ಲಿ ತೋಡಿಸಿದ್ದ ಸಮಾಧಿಯಲ್ಲಿಟ್ಟು ಯೇಸುವಿನ ಸಮಾಧಿಯ ದ್ವಾರಕ್ಕೆ ಒಂದು ಬಂಡೆಯನ್ನು ಉರುಳಿಸಿದನು. 47 ಮಗ್ದಲದ ಮರಿಯಳು ಮತ್ತು ಯೋಸೆಯ ತಾಯಿಯಾದ ಮರಿಯಳು ಯೇಸುವನ್ನು ಇಟ್ಟಿದ್ದ ಸ್ಥಳವನ್ನು ನೋಡಿದರು.
* 15:23 15:23 ರಕ್ತಬೋಳ ಒಂದು ವಿಧವಾದ ಅರಬ್ ದೇಶದ ಮರದ ರಸಗಂಧ 15:28 15:28 ಕೆಲವು ಮೂಲ ಹಸ್ತಪ್ರತಿಗಳಲ್ಲಿ ಈ ವಾಕ್ಯ ಸೇರ್ಪಡೆಯಾಗಿರುವುದಿಲ್ಲ. 15:34 15:34 ಕೀರ್ತನೆ 22:1