3
ಯೇಸು ಯೆಹೂದ್ಯರ ಸಬ್ಬತ್ ದಿನದಂದು ಸ್ವಸ್ಥಪಡಿಸಿದ್ದು
ಇನ್ನೊಂದು ಸಾರಿ ಯೇಸು ಸಭಾಮಂದಿರಕ್ಕೆ ಹೋದರು. ಅಲ್ಲಿ ಕೈ ಬತ್ತಿದ ಒಬ್ಬ ಮನುಷ್ಯನಿದ್ದನು. ಕೆಲವರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು, ಸಬ್ಬತ್* ದಿನದಲ್ಲಿ ಅವನನ್ನು ಯೇಸು ಗುಣಪಡಿಸುವರೋ ಏನೋ ಎಂದು ಲಕ್ಷವಿಟ್ಟು ನೋಡುತ್ತಿದ್ದರು. ಯೇಸು ಕೈಬತ್ತಿದವನಿಗೆ, “ಎದ್ದು ಮುಂದೆ ಬಾ,” ಎಂದರು.
ಆಗ ಯೇಸು ಅವರನ್ನು, “ಸಬ್ಬತ್ ದಿನದಲ್ಲಿ ಒಳ್ಳೆಯದನ್ನು ಮಾಡುವುದು ನಿಯಮಕ್ಕೆ ಸಮ್ಮತವೋ ಅಥವಾ ಕೆಟ್ಟದ್ದನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಥವಾ ತೆಗೆಯುವುದೋ?” ಎಂದು ಕೇಳಿದರು. ಅದಕ್ಕೆ ಅವರು ಸುಮ್ಮನಿದ್ದರು.
ಆಗ ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ನೋಡಿ, ಅವರ ಹೃದಯಕಾಠಿಣ್ಯಕ್ಕಾಗಿ ದುಃಖಪಟ್ಟು, ಆ ಮನುಷ್ಯನಿಗೆ, “ನಿನ್ನ ಕೈಚಾಚು,” ಎಂದು ಹೇಳಿದರು. ಅವನು ಕೈಚಾಚಿದಾಗ, ಅವನ ಕೈ ಸಂಪೂರ್ಣವಾಗಿ ಗುಣವಾಯಿತು. ಫರಿಸಾಯರು ಅಲ್ಲಿಂದ ಹೊರಗೆ ಹೋಗಿ ಕೂಡಲೇ ಹೆರೋದ್ಯರೊಂದಿಗೆ ಸೇರಿಕೊಂಡು ಯೇಸುವನ್ನು ಹೇಗೆ ಕೊಲ್ಲಬೇಕೆಂದು ಅವರ ವಿರೋಧವಾಗಿ ಒಳಸಂಚು ಮಾಡಿದರು.
ಜನರ ಗುಂಪುಗಳು ಯೇಸುವನ್ನು ಹಿಂಬಾಲಿಸಿದ್ದು
ಯೇಸು ತಮ್ಮ ಶಿಷ್ಯರೊಂದಿಗೆ ಸರೋವರದ ಬಳಿಗೆ ಹೊರಟು ಹೋದರು. ಗಲಿಲಾಯದಿಂದ ಬಂದ ಒಂದು ದೊಡ್ಡ ಜನರ ಗುಂಪು ಯೇಸುವನ್ನು ಹಿಂಬಾಲಿಸಿತು. ಯೇಸು ಮಾಡುತ್ತಿದ್ದ ಎಲ್ಲವನ್ನು ಕೇಳಿ, ಬಹುಜನರು ಯೂದಾಯದಿಂದಲೂ ಯೆರೂಸಲೇಮ್ ನಗರದಿಂದಲೂ ಇದುಮಾಯದಿಂದಲೂ ಯೊರ್ದನ್ ನದಿಯ ಆಚೆಕಡೆಯಿಂದಲೂ ಟೈರ್, ಸೀದೋನ್ ಪಟ್ಟಣಗಳ ಸುತ್ತಲಿನಿಂದಲೂ ಯೇಸುವಿನ ಬಳಿಗೆ ಬಂದರು. ಜನರ ಗುಂಪು ಹೆಚ್ಚಾಗುತ್ತಿದ್ದುದರಿಂದ ಅವರು ತಮ್ಮ ಮೈಮೇಲೆ ಬಿದ್ದಾರೆಂದು ಯೇಸು ತಮಗಾಗಿ ಒಂದು ಚಿಕ್ಕ ದೋಣಿಯನ್ನು ಸಿದ್ಧವಾಗಿಡಲು ತಮ್ಮ ಶಿಷ್ಯರಿಗೆ ಹೇಳಿದರು. 10 ಯೇಸು ಅನೇಕರನ್ನು ಗುಣಪಡಿಸಿದ್ದರಿಂದ ರೋಗಿಗಳೆಲ್ಲರೂ ಯೇಸುವನ್ನು ಮುಟ್ಟಬೇಕೆಂದು ನುಗ್ಗುತ್ತಿದ್ದರು. 11 ದುರಾತ್ಮಗಳು ಯೇಸುವನ್ನು ಕಂಡಾಗಲೆಲ್ಲಾ ಅವರ ಮುಂದೆ ಬಿದ್ದು, “ನೀವು ದೇವರ ಪುತ್ರ,” ಎಂದು ಕಿರುಚಿದವು. 12 ಆದರೆ ಯೇಸು, ತಾನು ಯಾರೆಂದು ಯಾರಿಗೂ ಪ್ರಕಟಿಸಬಾರದೆಂದು ಅವುಗಳಿಗೆ ಕಟ್ಟಪ್ಪಣೆ ಮಾಡಿದರು.
ಯೇಸು ಹನ್ನೆರಡು ಮಂದಿ ಶಿಷ್ಯರನ್ನು ನೇಮಿಸಿದ್ದು
13 ಯೇಸು ಬೆಟ್ಟವನ್ನೇರಿ ತಮಗೆ ಬೇಕಾದವರನ್ನು ಕರೆದರು. ಅವರು ಯೇಸುವಿನ ಬಳಿಗೆ ಬಂದರು. 14 ಯೇಸು ಹನ್ನೆರಡು ಮಂದಿಯನ್ನು ತಮ್ಮ ಸಂಗಡ ಇರಲು ಮತ್ತು ಅವರನ್ನು ಉಪದೇಶಮಾಡಲು ನೇಮಿಸಿ, ಅವರಿಗೆ “ಅಪೊಸ್ತಲರು” ಎಂದು ಕರೆದರು. 15 ಅವರಿಗೆ ದೆವ್ವಗಳನ್ನು ಓಡಿಸುವ ಅಧಿಕಾರ ಕೊಟ್ಟರು.
 
16 ಯೇಸು ನೇಮಿಸಿದ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಇಂತಿವೆ:
 
ಸೀಮೋನನಿಗೆ ಯೇಸು “ಪೇತ್ರ” ಎಂಬ ಹೆಸರನ್ನು ಕೊಟ್ಟರು.
17 ಜೆಬೆದಾಯನ ಮಗ ಯಾಕೋಬ ಮತ್ತು ಅವನ ತಮ್ಮ ಯೋಹಾನ ಇವರಿಗೆ ಯೇಸು “ಬೊವನೆರ್ಗೆಸ್” ಎಂದರೆ ಗುಡುಗಿನ ಪುತ್ರರು ಎಂಬ ಹೆಸರಿಟ್ಟರು.
18 ಅಂದ್ರೆಯ,
ಫಿಲಿಪ್ಪ,
ಬಾರ್ತೊಲೊಮಾಯ,
ಮತ್ತಾಯ,
ತೋಮ,
ಅಲ್ಫಾಯನ ಮಗ ಯಾಕೋಬ,
ತದ್ದಾಯ,
ಕಾನಾನ್ಯನಾದ ಸೀಮೋನನು.
19 ಯೇಸುವಿಗೆ ದ್ರೋಹಮಾಡಿದ ಇಸ್ಕರಿಯೋತ ಯೂದ.
ಯೇಸು ಮತ್ತು ಬೆಲ್ಜೆಬೂಲನು
20 ಯೇಸು ಒಂದು ಮನೆಯೊಳಗೆ ಹೋದಾಗ, ಜನರು ತಿರುಗಿ ಗುಂಪಾಗಿ ನೆರೆದು ಬಂದದ್ದರಿಂದ ಯೇಸುವಿಗೂ ಅವರ ಶಿಷ್ಯರಿಗೂ ಊಟಮಾಡುವುದಕ್ಕೂ ಸಾಧ್ಯವಾಗಲಿಲ್ಲ. 21 ಯೇಸುವಿನ ಕುಟುಂಬದವರು ಇದನ್ನು ಕೇಳಿದಾಗ, “ಆತನಿಗೆ ಹುಚ್ಚುಹಿಡಿದಿದೆ,” ಎಂದು ಹೇಳಿ, ಯೇಸುವನ್ನು ಹಿಡಿದು ತರಲು ಹೊರಟರು.
22 ಯೆರೂಸಲೇಮಿನಿಂದ ಬಂದ ನಿಯಮ ಬೋಧಕರು, “ಈತನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ! ದೆವ್ವಗಳ ಅಧಿಪತಿಯ ಸಹಾಯದಿಂದಲೇ ಈತನು ದೆವ್ವಗಳನ್ನು ಓಡಿಸುತ್ತಾನೆ,” ಎಂದರು.
23 ಆಗ ಯೇಸು ಅವರನ್ನು ಹತ್ತಿರಕ್ಕೆ ಕರೆದು ಸಾಮ್ಯರೂಪದಲ್ಲಿ ಹೇಳಿದ್ದೇನೆಂದರೆ: “ಸೈತಾನನು ಸೈತಾನನನ್ನು ಓಡಿಸುವುದು ಹೇಗೆ? 24 ಒಂದು ರಾಜ್ಯ ತನಗೆ ವಿರೋಧವಾಗಿ ವಿಭಾಗಿಸಿಕೊಂಡರೆ ಆ ರಾಜ್ಯವು ನಿಲ್ಲುವುದಿಲ್ಲ. 25 ಒಂದು ಕುಟುಂಬ ತನಗೆ ವಿರೋಧವಾಗಿ ವಿಭಾಗಿಸಿಕೊಂಡರೆ ಆ ಕುಟುಂಬವು ನಿಲ್ಲುವುದಿಲ್ಲ. 26 ಸೈತಾನನು ತನಗೆ ವಿರೋಧವಾಗಿ ತಾನೇ ಎದ್ದು ವಿಭಾಗಿಸಿಕೊಂಡರೆ, ಅವನು ನಿಲ್ಲಲಾರದೆ ನಾಶವಾಗುವನು. 27 ಒಬ್ಬನು ಬಲಿಷ್ಠನ ಮನೆಗೆ ನುಗ್ಗಿ ಮೊದಲು ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆ ಮಾಡಲಾಗುವುದಿಲ್ಲ. ಮೊದಲು ಅವನನ್ನು ಕಟ್ಟಿದ ನಂತರ ಅವನ ಮನೆಯನ್ನು ಕೊಳ್ಳೆ ಹೊಡೆಯಬಹುದು. 28 ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೆ ಮತ್ತು ದೂಷಣೆಗಳಿಗೆ ಕ್ಷಮಾಪಣೆ ದೊರೆಯುವುದು. 29 ಆದರೆ ಪವಿತ್ರಾತ್ಮರನ್ನು ದೂಷಿಸುವವನಿಗೆ ಎಂದಿಗೂ ಕ್ಷಮಾಪಣೆ ದೊರೆಯುವುದಿಲ್ಲ. ಅವನು ನಿತ್ಯ ಪಾಪದ ಅಪರಾಧಿಯಾಗಿದ್ದಾನೆ,” ಎಂದರು.
30 “ಆತನಲ್ಲಿ ಅಶುದ್ಧಾತ್ಮವಿದೆ,” ಎಂದು ಅವರು ಹೇಳುತ್ತಿದ್ದುದರಿಂದ ಯೇಸು ಹೀಗೆ ಹೇಳಿದರು.
31 ಆಗ ಯೇಸುವಿನ ತಾಯಿ ಮತ್ತು ಸಹೋದರರು ಬಂದು ಹೊರಗೆ ನಿಂತುಕೊಂಡು, ಯೇಸುವನ್ನು ಕರೆಯಲು ಹೇಳಿ ಕಳುಹಿಸಿದರು. 32 ಯೇಸುವಿನ ಸುತ್ತಲೂ ಗುಂಪಾಗಿ ಕುಳಿತಿದ್ದ ಜನರು ಅವರಿಗೆ, “ನಿಮ್ಮ ತಾಯಿಯೂ ಸಹೋದರರೂ ನಿಮಗಾಗಿ ಹೊರಗೆ ಕಾದಿದ್ದಾರೆ,” ಎಂದು ಹೇಳಿದರು.
33 ಅದಕ್ಕೆ ಯೇಸು, “ನನ್ನ ತಾಯಿ ಮತ್ತು ಸಹೋದರರು ಯಾರು?” ಎಂದು ಕೇಳಿದರು.
34 ಅನಂತರ ತಮ್ಮ ಸುತ್ತಲೂ ಕುಳಿತ್ತಿದ್ದವರನ್ನು ನೋಡಿ, “ಇಗೋ, ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು! 35 ದೇವರ ಚಿತ್ತದಂತೆ ಮಾಡುವವರೇ ನನ್ನ ಸಹೋದರ, ಸಹೋದರಿ ಮತ್ತು ತಾಯಿ ಆಗಿದ್ದಾರೆ,” ಎಂದು ಹೇಳಿದರು.
* 3:2 3:2 ಸಬ್ಬತ್ ಅಂದರೆ ವಿಶ್ರಾಂತಿ ದಿನ