6
ಪ್ರವಾದಿಗೆ ಸ್ವಜನರಲ್ಲಿ ಗೌರವವಿಲ್ಲ
ಯೇಸು ಅಲ್ಲಿಂದ ಹೊರಟು ಶಿಷ್ಯರೊಡನೆ ತಮ್ಮ ಸ್ವಂತ ಊರಿಗೆ ಬಂದರು. ಸಬ್ಬತ್ ದಿನ ಬಂದಾಗ, ಯೇಸು ಸಭಾಮಂದಿರದಲ್ಲಿ ಬೋಧಿಸಲಾರಂಭಿಸಿದರು.
ಅದನ್ನು ಕೇಳಿದ ಅನೇಕರು ವಿಸ್ಮಯಗೊಂಡು, “ಈತನು ಇವೆಲ್ಲವನ್ನು ಎಲ್ಲಿಂದ ಪಡೆದಿದ್ದಾನೆ? ಈತನ ಕೈಗಳಿಂದ ಇಂಥ ಅದ್ಭುತಕಾರ್ಯಗಳನ್ನು ಮಾಡುವ ಜ್ಞಾನವು ಈತನಿಗೆ ಎಲ್ಲಿಂದ ಬಂತು? ಈತನು ಬಡಗಿಯಲ್ಲವೇ? ಈತನು ಮರಿಯಳ ಮಗನಲ್ಲವೇ? ಈತನು ಯಾಕೋಬ, ಯೋಸೆ, ಯೂದ ಮತ್ತು ಸೀಮೋನರ ಅಣ್ಣನಲ್ಲವೇ? ಈತನ ತಂಗಿಯರು ನಮ್ಮಲ್ಲಿ ಇದ್ದಾರಲ್ಲವೇ?” ಎಂದು ಹೇಳಿ, ಯೇಸುವಿನ ವಿಷಯವಾಗಿ ಬೇಸರಗೊಂಡರು.
ಯೇಸು ಅವರಿಗೆ, “ಪ್ರವಾದಿಗೆ ತನ್ನ ಸ್ವಂತ ಊರಿನಲ್ಲಿ, ತನ್ನ ಸಂಬಂಧಿಕರ ನಡುವೆ ಹಾಗೂ ತನ್ನ ಸ್ವಂತ ಮನೆಯಲ್ಲಿ ಮಾತ್ರ ಮರ್ಯಾದೆ ಇರುವುದಿಲ್ಲ,” ಎಂದರು. ಅಲ್ಲಿ ಯೇಸು ಕೆಲವು ರೋಗಿಗಳ ಮೇಲೆ ಕೈಗಳನ್ನಿಟ್ಟು ಅವರನ್ನು ಗುಣಪಡಿಸಿದ್ದಲ್ಲದೆ ಬೇರೆ ಯಾವ ಅದ್ಭುತಗಳನ್ನೂ ಮಾಡಲಿಲ್ಲ. ಯೇಸು ಅವರ ಅಪನಂಬಿಕೆಯನ್ನು ಕಂಡು ಆಶ್ಚರ್ಯಪಟ್ಟರು.
ಯೇಸು ತಮ್ಮ ಹನ್ನೆರಡು ಶಿಷ್ಯರನ್ನು ಕಳುಹಿಸಿದ್ದು
ಆಮೇಲೆ ಯೇಸು ಸುತ್ತಮುತ್ತಲಿನ ಊರುಗಳಲ್ಲಿ ಬೋಧಿಸಿದರು. ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಕರೆದು, ಅವರಿಗೆ ಅಶುದ್ಧಾತ್ಮಗಳನ್ನು ಹೊರಗಟ್ಟುವ ಅಧಿಕಾರವನ್ನು ಕೊಟ್ಟು ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದರು.
ಯೇಸು ಅವರಿಗೆ, “ಪ್ರಯಾಣಕ್ಕಾಗಿ ಕೇವಲ ಕೋಲು ಒಂದನ್ನು ಬಿಟ್ಟು, ರೊಟ್ಟಿ, ಚೀಲ ಅಥವಾ ಜೇಬಿನಲ್ಲಿ ಹಣವನ್ನು ತೆಗೆದುಕೊಳ್ಳಬೇಡಿರಿ. ಪಾದರಕ್ಷೆಗಳನ್ನು ಮೆಟ್ಟಿಕೊಳ್ಳಿರಿ. ಆದರೆ ಹೆಚ್ಚು ಅಂಗಿಗಳನ್ನು ತೆಗೆದುಕೊಳ್ಳಬೇಡಿರಿ,” ಎಂದು ಆಜ್ಞಾಪಿಸಿದರು. 10 ಇದಲ್ಲದೆ ಯೇಸು ಅವರಿಗೆ, “ನೀವು ಯಾವುದಾದರೊಂದು ಮನೆಗೆ ಹೋದಾಗ, ಅಲ್ಲೇ ಇದ್ದು ಆ ಪಟ್ಟಣದಿಂದ ಹೋಗುವವರೆಗೆ ಆ ಮನೆಯಲ್ಲೇ ವಾಸವಾಗಿದ್ದು, ಅಲ್ಲಿಂದಲೇ ಹೊರಡಿರಿ. 11 ಯಾರಾದರೂ ನಿಮ್ಮನ್ನು ಸ್ವಾಗತಿಸದೆ ಹೋದರೆ ಅಥವಾ ನಿಮ್ಮ ಮಾತುಗಳನ್ನು ಕೇಳದಿದ್ದರೆ, ನೀವು ಹೊರಡುತ್ತಿರುವಾಗ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ,” ಎಂದರು.
12 ಶಿಷ್ಯರು ಹೊರಟುಹೋಗಿ ಜನರಿಗೆ ದೇವರ ಕಡೆ ತಿರುಗಿಕೊಳ್ಳಿರಿ ಎಂದು ಸಾರಿ ಹೇಳಿದರು. 13 ಅವರು ಅನೇಕರಿಂದ ದೆವ್ವಗಳನ್ನೋಡಿಸಿ, ಅನೇಕ ರೋಗಿಗಳಿಗೆ ಎಣ್ಣೆ ಹಚ್ಚಿ ಅವರನ್ನು ಗುಣಪಡಿಸಿದರು.
ಸ್ನಾನಿಕನಾದ ಯೋಹಾನನ ಶಿರಚ್ಛೇದನ
14 ಯೇಸುವಿನ ಹೆಸರು ಪ್ರಸಿದ್ಧಿಗೆ ಬಂದಿದ್ದರಿಂದ ಅರಸನಾದ ಹೆರೋದನಿಗೆ ಈ ವಿಷಯ ತಿಳಿಯಿತು. “ಈತನು ಸ್ನಾನಿಕನಾದ ಯೋಹಾನನೇ, ಸತ್ತವರೊಳಗಿಂದ ಅವನು ತಿರುಗಿ ಬದುಕಿ ಬಂದಿದ್ದಾನೆ. ಆದ್ದರಿಂದಲೇ ಈತನಲ್ಲಿ ಅದ್ಭುತಕಾರ್ಯಗಳನ್ನು ನಡೆಸುವ ಶಕ್ತಿಗಳಿವೆ,” ಎಂದು ಕೆಲವರು ಹೇಳುತ್ತಿದ್ದರು.
15 ಇನ್ನು ಕೆಲವರು, “ಈತನು ಎಲೀಯನು,” ಎಂದರು.
ಮತ್ತೆ ಕೆಲವರು, “ಈತನು ಹಿಂದಿನ ಕಾಲದ ಪ್ರವಾದಿಗಳಂತೆ ಒಬ್ಬ ಪ್ರವಾದಿಯಾಗಿರಬೇಕು,” ಎಂದರು.
16 ಆದರೆ ಹೆರೋದನು ಇದನ್ನು ಕೇಳಿ, “ನಾನು ಶಿರಚ್ಛೇದನ ಮಾಡಿದ ಯೋಹಾನನೇ, ತಿರುಗಿ ಜೀವಂತವಾಗಿ ಬಂದಿದ್ದಾನೆ,” ಎಂದು ಹೇಳಿದನು.
17 ಏಕೆಂದರೆ, ಯೋಹಾನನನ್ನು ಬಂಧಿಸಿ ಸೆರೆಮನೆಗೆ ಹಾಕಬೇಕೆಂದು ಹೆರೋದನು ತಾನೇ ಕಳುಹಿಸಿದ್ದನು. ತನ್ನ ಸಹೋದರನಾದ ಫಿಲಿಪ್ಪನ ಹೆಂಡತಿ ಹೆರೋದ್ಯಳನ್ನು ಮದುವೆ ಮಾಡಿಕೊಂಡದ್ದರಿಂದ ಅವನು ಹೀಗೆ ಮಾಡಿದ್ದನು. 18 ಏಕೆಂದರೆ ಯೋಹಾನನು ಹೆರೋದನಿಗೆ, “ನೀನು ನಿನ್ನ ಸಹೋದರನ ಹೆಂಡತಿಯನ್ನು ಇಟ್ಟುಕೊಂಡಿರುವುದು ನ್ಯಾಯವಲ್ಲ,” ಎಂದು ಹೇಳುತ್ತಿದ್ದನು. 19 ಇದರಿಂದ ಹೆರೋದ್ಯಳು ಯೋಹಾನನ ಮೇಲೆ ಹಗೆಯಿಟ್ಟುಕೊಂಡು, ಅವನನ್ನು ಕೊಲ್ಲಿಸಬೇಕೆಂದಿದ್ದರೂ ಸಾಧ್ಯವಾಗಲಿಲ್ಲ. 20 ಏಕೆಂದರೆ, ಯೋಹಾನನು ನೀತಿವಂತನು ಮತ್ತು ಪವಿತ್ರ ಮನುಷ್ಯನು ಎಂದು ತಿಳಿದು ಹೆರೋದನು ಭಯಪಟ್ಟು ಅವನನ್ನು ಸುರಕ್ಷಿತವಾಗಿಟ್ಟಿದ್ದನು. ಯೋಹಾನನು ಹೇಳಿದ್ದನ್ನು ಹೆರೋದನು ಕೇಳಿದಾಗಲೆಲ್ಲಾ ಅವನಿಗೆ ಗಲಿಬಿಲಿಯಾಗುತ್ತಿತ್ತು. ಆದರೂ ಅವನ ಮಾತನ್ನು ಕೇಳಲು ಇಷ್ಟಪಡುತ್ತಿದ್ದನು.
21 ಕೊನೆಗೆ ಅನುಕೂಲವಾದ ಸಮಯ ಸಿಕ್ಕಿತು. ತನ್ನ ಜನ್ಮ ದಿನದಂದು ಹೆರೋದನು ತನ್ನ ಉನ್ನತ ಅಧಿಕಾರಿಗಳಿಗೆ, ಸೇನಾಧಿಪತಿಗಳಿಗೆ ಹಾಗೂ ಗಲಿಲಾಯದ ಪ್ರಮುಖರಿಗೆ ಔತಣವನ್ನು ಏರ್ಪಡಿಸಿದನು. 22 ಹೆರೋದ್ಯಳ ಮಗಳು ಒಳಗೆ ಬಂದು ನೃತ್ಯ ಮಾಡಿ, ಹೆರೋದನನ್ನೂ ಊಟಕ್ಕೆ ಬಂದ ಅವನ ಅತಿಥಿಗಳನ್ನೂ ಸಂತೋಷಪಡಿಸಿದಳು.
ರಾಜನು ಆ ಹುಡುಗಿಗೆ, “ನಿನಗೆ ಏನು ಬೇಕಾದರೂ ಕೇಳು, ನಾನು ಕೊಡುತ್ತೇನೆ,” ಎಂದು ಹೇಳಿ, 23 “ನೀನೇನು ಕೇಳಿದರೂ ಕೊಡುತ್ತೇನೆ, ನನ್ನ ರಾಜ್ಯದಲ್ಲಿ ಅರ್ಧದಷ್ಟು ಕೇಳಿಕೊಂಡರೂ ಕೊಡುತ್ತೇನೆ,” ಎಂದು ಪ್ರಮಾಣ ಮಾಡಿದನು.
24 ಆಕೆ ತನ್ನ ತಾಯಿಯ ಬಳಿಗೆ ಹೋಗಿ, “ನಾನು ಏನನ್ನು ಕೇಳಲಿ?” ಎಂದು ಕೇಳಲು, ಆಕೆಯು,
“ಸ್ನಾನಿಕನಾದ ಯೋಹಾನನ ತಲೆಯನ್ನು ಕೇಳು,” ಎಂದು ಉತ್ತರಕೊಟ್ಟಳು.
25 ಕೂಡಲೇ ಆ ಹುಡುಗಿ ಅವಸರವಾಗಿ ರಾಜನ ಮುಂದೆ ಬಂದು, “ನನಗೆ ಈಗಲೇ ಸ್ನಾನಿಕನಾದ ಯೋಹಾನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿ ಕೊಡಬೇಕು,” ಎಂದು ಕೇಳಿಕೊಂಡಳು.
26 ಇದರಿಂದ ಅರಸನಿಗೆ ಬಹಳ ದುಃಖವಾದರೂ ತನ್ನ ಪ್ರಮಾಣದ ನಿಮಿತ್ತವಾಗಿ ಮತ್ತು ಭೋಜನಕ್ಕೆ ಬಂದ ಅತಿಥಿಗಳ ನಿಮಿತ್ತವಾಗಿ ಆಕೆಯ ಕೋರಿಕೆಯನ್ನು ನಿರಾಕರಿಸಲಿಲ್ಲ. 27 ಕೂಡಲೇ ಅರಸನು ಯೋಹಾನನ ತಲೆಯನ್ನು ತರಬೇಕೆಂದು ಒಬ್ಬ ಕಾವಲುಗಾರನಿಗೆ ಅಪ್ಪಣೆಕೊಟ್ಟು ಕಳುಹಿಸಿದನು. ಅವನು ಹೋಗಿ ಸೆರೆಮನೆಯಲ್ಲಿದ್ದ ಯೋಹಾನನ ಶಿರಚ್ಛೇದನ ಮಾಡಿದನು. 28 ಅವನ ತಲೆಯನ್ನು ತಟ್ಟೆಯಲ್ಲಿಟ್ಟುಕೊಂಡು ಬಂದು ಅದನ್ನು ಆ ಹುಡುಗಿಗೆ ಕೊಟ್ಟನು. ಆಕೆಯು ಅದನ್ನು ತನ್ನ ತಾಯಿಗೆ ಕೊಟ್ಟಳು. 29 ಇದನ್ನು ಕೇಳಿ ಯೋಹಾನನ ಶಿಷ್ಯರು ಬಂದು ಅವನ ಶವವನ್ನು ತೆಗೆದುಕೊಂಡುಹೋಗಿ ಸಮಾಧಿಯಲ್ಲಿ ಇಟ್ಟರು.
ಯೇಸು ಐದು ಸಾವಿರ ಜನರಿಗೆ ಊಟಮಾಡಿಸಿದ್ದು
30 ಅಪೊಸ್ತಲರು ಹಿಂದಿರುಗಿ ಯೇಸುವಿನ ಬಳಿಗೆ ಬಂದು ತಾವು ಮಾಡಿದ್ದನ್ನೂ ಬೋಧಿಸಿದ ಎಲ್ಲವನ್ನೂ ಕುರಿತು ಅವರಿಗೆ ವರದಿಮಾಡಿದರು. 31 ಬಹಳ ಜನರು ಎಡೆಬಿಡದೆ ಬರುತ್ತಾ ಹೋಗುತ್ತಾ ಇದ್ದುದರಿಂದ ಅವರಿಗೆ ಊಟಮಾಡುವುದಕ್ಕೂ ಸಮಯವಿರಲಿಲ್ಲ. ಯೇಸು ಅವರಿಗೆ, “ನೀವು ಏಕಾಂತವಾದ ಸ್ಥಳಕ್ಕೆ ಬಂದು ಸ್ವಲ್ಪ ವಿಶ್ರಮಿಸಿಕೊಳ್ಳಿರಿ,” ಎಂದು ಹೇಳಿದರು.
32 ಆಗ ಅವರು ದೋಣಿಯಲ್ಲಿ ಏಕಾಂತ ಸ್ಥಳಕ್ಕೆ ಹೋದರು. 33 ಆದರೆ ಅವರು ಹೋಗುವುದನ್ನು ಕಂಡ ಅನೇಕರು ಅವರನ್ನು ಗುರುತಿಸಿ ಎಲ್ಲಾ ಊರುಗಳಿಂದ ಕಾಲ್ದಾರಿಯಲ್ಲಿ ಓಡಿ ಅವರಿಗಿಂತ ಮುಂಚೆ ಅಲ್ಲಿ ಸೇರಿದ್ದರು. 34 ಯೇಸು ದೋಣಿಯಿಂದ ಇಳಿದಾಗ ದೊಡ್ಡ ಜನಸಮೂಹವನ್ನು ಕಂಡು ಅವರ ಮೇಲೆ ಕನಿಕರಪಟ್ಟರು. ಏಕೆಂದರೆ ಅವರು ಕುರುಬನಿಲ್ಲದ ಕುರಿಗಳಂತಿದ್ದರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಕುರಿತು ಬೋಧಿಸಲಾರಂಭಿಸಿದರು.
35 ಅಷ್ಟರೊಳಗೆ ಸಂಜೆಯಾಯಿತು. ಶಿಷ್ಯರು ಯೇಸುವಿನ ಬಳಿಗೆ ಬಂದು, “ಇದು ನಿರ್ಜನಪ್ರದೇಶ, ಈಗಲೇ ಹೊತ್ತು ಮೀರಿದೆ, 36 ಈ ಜನರು ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ತಿನ್ನುವುದಕ್ಕಾಗಿ ಏನಾದರೂ ಕೊಂಡುಕೊಳ್ಳುವಂತೆ ಇವರನ್ನು ಕಳುಹಿಸಿಬಿಡು,” ಎಂದು ಹೇಳಿದರು.
37 ಆದರೆ ಯೇಸು, “ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ,” ಎಂದರು.
ಶಿಷ್ಯರು, “ನಾವು ಹೋಗಿ ಅವರಿಗೆ ಊಟಕ್ಕಾಗಿ ಆರು ತಿಂಗಳ ಸಂಬಳದಷ್ಟು* ಖರ್ಚುಮಾಡಿ, ಆಹಾರವನ್ನು ಕೊಂಡುಕೊಂಡು ಬರಬೇಕೆ?” ಎಂದು ಕೇಳಿದರು.
38 ಯೇಸು ಅವರಿಗೆ, “ನಿಮ್ಮ ಬಳಿಯಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿರಿ,” ಎಂದು ಕೇಳಿದರು.
ಅವರು ವಿಚಾರಿಸಿ, “ಐದು ರೊಟ್ಟಿ ಮತ್ತು ಎರಡು ಮೀನುಗಳಿವೆ,” ಎಂದು ಉತ್ತರಕೊಟ್ಟರು.
39 ಆಮೇಲೆ ಯೇಸು ಹಸಿರು ಹುಲ್ಲಿನ ಮೇಲೆ ಸಾಲುಸಾಲಾಗಿ ಕುಳಿತುಕೊಳ್ಳುವಂತೆ ಜನರಿಗೆ ಆಜ್ಞಾಪಿಸಿದರು. 40 ಅವರು ನೂರರಂತೆ, ಐವತ್ತರಂತೆ ಸಾಲಾಗಿ ಕುಳಿತರು. 41 ಯೇಸು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ, ರೊಟ್ಟಿಗಳನ್ನು ಆಶೀರ್ವದಿಸಿ ಮುರಿದು, ತಮ್ಮ ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚುವಂತೆ ತಿಳಿಸಿದರು. ಅದರಂತೆಯೇ ಎರಡು ಮೀನುಗಳನ್ನು ಜನರೆಲ್ಲರಿಗೆ ಹಂಚಿಸಿದರು. 42 ಅವರೆಲ್ಲರೂ ತಿಂದು ತೃಪ್ತರಾದರು. 43 ಶಿಷ್ಯರು ಉಳಿದ ರೊಟ್ಟಿ ಮತ್ತು ಮೀನಿನ ತುಂಡುಗಳನ್ನು ಕೂಡಿಸಲು ಹನ್ನೆರಡು ಬುಟ್ಟಿ ತುಂಬಿದವು. 44 ಊಟಮಾಡಿದವರಲ್ಲಿ ಐದು ಸಾವಿರ ಮಂದಿ ಗಂಡಸರಿದ್ದರು.
ಯೇಸು ನೀರಿನ ಮೇಲೆ ನಡೆದದ್ದು
45 ಇದಾದ ಕೂಡಲೇ ಯೇಸು ಜನರ ಗುಂಪನ್ನು ಕಳುಹಿಸಿಬಿಡುವಷ್ಟರಲ್ಲಿ, ತಮ್ಮ ಶಿಷ್ಯರು ದೋಣಿಯನ್ನು ಹತ್ತಿ ತಮಗಿಂತ ಮುಂದಾಗಿ ಬೇತ್ಸಾಯಿದಕ್ಕೆ ಹೋಗಬೇಕೆಂದು ಆಜ್ಞಾಪಿಸಿದರು. 46 ಯೇಸು ಜನಸಮೂಹವನ್ನು ಕಳುಹಿಸಿದ ಮೇಲೆ ಪ್ರಾರ್ಥನೆಮಾಡಲು ಬೆಟ್ಟಕ್ಕೆ ಹೋದರು.
47 ಸಂಜೆಯಾದಾಗ, ದೋಣಿಯು ಸರೋವರದ ಮಧ್ಯದಲ್ಲಿತ್ತು. ಯೇಸು ದಡದಲ್ಲಿ ಒಬ್ಬರೇ ಇದ್ದರು. 48 ಎದುರುಗಾಳಿ ಬಲವಾಗಿ ಬೀಸುತ್ತಿದ್ದುದರಿಂದ ಶಿಷ್ಯರು ದೋಣಿಯನ್ನು ನಿಯಂತ್ರಿಸಲು ದಣಿದು ಹೋದದ್ದನ್ನು ಯೇಸು ಕಂಡು, ಮುಂಜಾನೆ ಸುಮಾರು ಮೂರು ಗಂಟೆಯಲ್ಲಿ ಅವರ ಬಳಿಗೆ ಸರೋವರದ ಮೇಲೆ ನಡೆಯುತ್ತಾ ಬಂದರು. ಯೇಸು ಅವರನ್ನು ದಾಟಿ ಹೋಗುವುದರಲ್ಲಿದ್ದರು. 49 ಆದರೆ ಯೇಸು ಸರೋವರದ ಮೇಲೆ ನಡೆಯುವುದನ್ನು ಕಂಡಾಗ, ಅವರು ಯೇಸುವನ್ನು ಭೂತವೆಂದು ಭಾವಿಸಿ, ಕಿರುಚಿದರು. 50 ಅವರೆಲ್ಲರೂ ಯೇಸುವನ್ನು ಕಂಡು ದಿಗಿಲುಗೊಂಡಿದ್ದರು.
ಕೂಡಲೇ ಯೇಸು ಅವರಿಗೆ, “ಧೈರ್ಯವಾಗಿರಿ, ನಾನೇ! ಭಯಪಡಬೇಡಿರಿ,” ಎಂದರು. 51 ಆಮೇಲೆ ಯೇಸು ದೋಣಿಯನ್ನು ಹತ್ತಿ ಅವರ ಬಳಿಗೆ ಬರಲು ಗಾಳಿ ನಿಂತುಹೋಯಿತು. ಅವರು ಬಹು ಆಶ್ಚರ್ಯಗೊಂಡರು. 52 ರೊಟ್ಟಿಗಳ ಅದ್ಭುತವನ್ನು ಅವರು ಇನ್ನೂ ಗ್ರಹಿಸಿಕೊಂಡಿಲ್ಲವಾದ್ದರಿಂದ ಆಶ್ಚರ್ಯಚಕಿತರಾದರು. ಏಕೆಂದರೆ ಅವರ ಹೃದಯ ಕಠಿಣವಾಗಿತ್ತು.
53 ಅವರು ಸರೋವರವನ್ನು ದಾಟಿ, ಗೆನೆಜರೇತ್ ಸೀಮೆಯ ದಡ ಸೇರಿದರು. 54 ಅವರು ದೋಣಿಯಿಂದ ಇಳಿದ ಕೂಡಲೇ ಅಲ್ಲಿಯ ಜನರು ಯೇಸುವಿನ ಗುರುತು ಹಿಡಿದರು. 55 ಅವರು ಆ ಪ್ರದೇಶದಲ್ಲೆಲ್ಲಾ ಓಡಾಡಿ, ಕಾಯಿಲೆಯಾಗಿದ್ದವರನ್ನು ಚಾಪೆಗಳ ಮೇಲೆ ಹಾಕಿಕೊಂಡು ಯೇಸು ಎಲ್ಲಿದ್ದಾರೆಂದು ಕೇಳಿದರೋ ಅಲ್ಲಿಗೆ ಬರಲಾರಂಭಿಸಿದರು. 56 ಯೇಸು ಹಳ್ಳಿ, ಪಟ್ಟಣ ಊರುಗಳಲ್ಲಿ ಎಲ್ಲೆಲ್ಲಿ ಹೋದರೋ ಅಲ್ಲಿ ಜನರು ರೋಗಿಗಳನ್ನು ತಂದು ಪೇಟೆಗಳಲ್ಲಿ ಇಟ್ಟು, ಯೇಸುವಿನ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಅವರನ್ನು ಬೇಡಿಕೊಂಡರು. ಯೇಸುವನ್ನು ಮುಟ್ಟಿದವರೆಲ್ಲರೂ ಗುಣಹೊಂದಿದರು.
* 6:37 6:37 ಗ್ರೀಕ್ ಭಾಷೆಯಲ್ಲಿ ಇನ್ನೂರು ದಿನಾರ್. ಇದು ಒಬ್ಬ ಕೂಲಿಯವನ ಅರ್ಧವರ್ಷದ ಕೂಲಿಯಾಗಿತ್ತು.