19
ವಿವಾಹ ವಿಚ್ಛೇದನದ ವಿಷಯ
ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ಮೇಲೆ, ಗಲಿಲಾಯದಿಂದ ಹೊರಟು ಯೊರ್ದನ್ ನದಿಯ ಆಚೆಯ ಯೂದಾಯ ಪ್ರಾಂತಕ್ಕೆ ಬಂದರು. ಜನರ ದೊಡ್ಡ ಸಮೂಹಗಳು ಅವರನ್ನು ಹಿಂಬಾಲಿಸಿದವು, ಯೇಸು ಅವರನ್ನು ಅಲ್ಲಿ ಸ್ವಸ್ಥಮಾಡಿದರು.
ಫರಿಸಾಯರಲ್ಲಿ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಅವರ ಬಳಿಗೆ ಬಂದು, “ಒಬ್ಬ ಪುರುಷನು ಯಾವ ಕಾರಣದಿಂದಾದರೂ ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?” ಎಂದು ಕೇಳಿದರು.
ಯೇಸು ಉತ್ತರವಾಗಿ ಅವರಿಗೆ, “ಆದಿಯಿಂದಲೇ ಸೃಷ್ಟಿಕರ್ತ, ‘ಅವರನ್ನು ಗಂಡು ಹೆಣ್ಣಾಗಿ ಮಾಡಿದರು.* ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಶರೀರವಾಗಿರುವರು,’ ಎಂದು ಹೇಳಿದ್ದನ್ನು ನೀವು ಓದಲಿಲ್ಲವೇ? ಆದ್ದರಿಂದ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದಕಾರಣ ದೇವರು ಕೂಡಿಸಿದ್ದನ್ನು, ಮನುಷ್ಯನು ಅಗಲಿಸಬಾರದು,” ಎಂದು ಹೇಳಿದರು.
ಅದಕ್ಕೆ ಅವರು ಯೇಸುವಿಗೆ, “ಹಾಗಾದರೆ ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಆಕೆಯನ್ನು ಬಿಟ್ಟು ಬಿಡಬಹುದೆಂದು ಮೋಶೆಯು ಏಕೆ ಅಪ್ಪಣೆಕೊಟ್ಟನು?” ಎಂದು ಕೇಳಿದರು.
ಯೇಸು ಉತ್ತರವಾಗಿ ಅವರಿಗೆ, “ಮೋಶೆಯು ನಿಮ್ಮ ಹೃದಯ ಕಾಠಿಣ್ಯದ ದೆಸೆಯಿಂದ ಹೆಂಡತಿಯನ್ನು ಬಿಟ್ಟುಬಿಡುವುದಕ್ಕೆ ನಿಮಗೆ ಅನುಮತಿ ಕೊಟ್ಟನು. ಆದರೆ ಆದಿಯಿಂದ ಅದು ಹಾಗೆ ಇರಲಿಲ್ಲ. ನಾನು ನಿಮಗೆ ಹೇಳುವುದೇನೆಂದರೆ, ಹಾದರದ ಕಾರಣದಿಂದಲ್ಲದೆ, ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟು, ಮತ್ತೊಬ್ಬಳನ್ನು ಮದುವೆಯಾಗುವವನು ವ್ಯಭಿಚಾರ ಮಾಡುವವನಾಗಿದ್ದಾನೆ,” ಎಂದರು.
10 ಆಗ ಶಿಷ್ಯರು ಯೇಸುವಿಗೆ, “ಸತಿಪತಿಯರ ಸಂಬಂಧ ಹೀಗಿರುವುದಾದರೆ, ಮದುವೆ ಆಗದಿರುವುದೇ ಒಳ್ಳೆಯದು,” ಎಂದರು.
11 ಆದರೆ ಯೇಸು ಅವರಿಗೆ, “ಯಾರಿಗೆ ಇದು ಅನುಮತಿಸಲಾಗಿದೆಯೋ ಅವರೇ ಹೊರತು ಎಲ್ಲರೂ ಈ ಮಾತನ್ನು ಸ್ವೀಕರಿಸಲಾರರು. 12 ತಮ್ಮ ತಾಯಿಯ ಗರ್ಭದಿಂದ ಹುಟ್ಟಿದಾಗಲೇ ಕೆಲವರು ನಪುಂಸಕರಾದವರಿದ್ದಾರೆ, ಕೆಲವರು ಮನುಷ್ಯರಿಂದ ಮಾಡಲಾದ ನಪುಂಸಕರು ಇದ್ದಾರೆ. ಇನ್ನು ಕೆಲವರು ಪರಲೋಕ ರಾಜ್ಯದ ನಿಮಿತ್ತವಾಗಿ ತಮ್ಮನ್ನು ತಾವೇ ನಪುಂಸಕರಾಗಿ ಮಾಡಿಕೊಂಡವರೂ ಇದ್ದಾರೆ. ಇದನ್ನು ಸ್ವೀಕರಿಸಬಲ್ಲವನು ಸ್ವೀಕರಿಸಲಿ,” ಎಂದರು.
ಯೇಸುವಿನ ಬಳಿಗೆ ಬಂದ ಚಿಕ್ಕಮಕ್ಕಳು
13 ಯೇಸು ತಮ್ಮ ಕೈಗಳನ್ನಿಟ್ಟು ಪ್ರಾರ್ಥಿಸುವಂತೆ ಕೆಲವು ಜನರು ಚಿಕ್ಕಮಕ್ಕಳನ್ನು ಯೇಸುವಿನ ಬಳಿಗೆ ತಂದರು. ಆದರೆ ಶಿಷ್ಯರು ಅವರನ್ನು ಗದರಿಸಿದರು.
14 ಆದರೆ ಯೇಸು, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿರಿ, ಅವುಗಳಿಗೆ ಅಡ್ಡಿಮಾಡಬೇಡಿರಿ, ಪರಲೋಕ ರಾಜ್ಯವು ಇಂಥವರದೇ,” ಎಂದರು. 15 ತರುವಾಯ ಯೇಸು ಮಕ್ಕಳ ಮೇಲೆ ತಮ್ಮ ಕೈಯಿಟ್ಟು ಆಶೀರ್ವದಿಸಿ ಅಲ್ಲಿಂದ ಹೊರಟು ಹೋದರು.
ಧನಿಕ ಯುವಕನು
16 ಆಗ ಒಬ್ಬನು ಬಂದು ಯೇಸುವಿಗೆ, “ಒಳ್ಳೆಯ ಬೋಧಕರೇ, ನಾನು ನಿತ್ಯಜೀವವನ್ನು ಹೊಂದುವುದಕ್ಕೆ ಯಾವ ಒಳ್ಳೆಯ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು.
17 “ನೀನು ಒಳ್ಳೆಯದನ್ನು ಕುರಿತು ನನ್ನನ್ನು ಕೇಳುವುದೇಕೆ? ಒಬ್ಬಾತನೇ ಒಳ್ಳೆಯವನು. ಆದರೆ ನೀನು ಜೀವದಲ್ಲಿ ಪ್ರವೇಶಿಸಬೇಕಾದರೆ ದೇವರ ಆಜ್ಞೆಗಳನ್ನು ಅನುಸರಿಸಿ ನಡೆದುಕೋ,” ಎಂದು ಯೇಸು ಉತ್ತರಕೊಟ್ಟರು.
18 ಅವನು ಯೇಸುವಿಗೆ, “ಅವು ಯಾವುವು?” ಎಂದು ಕೇಳಿದನು.
ಅದಕ್ಕೆ ಯೇಸು, “ನರಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, 19 ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು. ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು,” ಎಂದು ಹೇಳಿದರು.
20 ಆ ಯೌವನಸ್ಥನು ಯೇಸುವಿಗೆ, “ಇವೆಲ್ಲವನ್ನೂ ನಾನು ಕೈಗೊಂಡಿದ್ದೇನೆ, ಇನ್ನು ನನಗೇನು ಕಡಿಮೆಯಾಗಿದೆ?” ಎಂದು ಕೇಳಿದನು.
21 ಯೇಸು ಅವನಿಗೆ, “ನೀನು ಸಂಪೂರ್ಣನಾಗಲು ಅಪೇಕ್ಷಿಸಿದರೆ, ಹೋಗಿ ನಿನ್ನ ಆಸ್ತಿಯನ್ನೆಲ್ಲಾ ಮಾರಿ ಬಡವರಿಗೆ ಕೊಡು; ನಿನಗೆ ಪರಲೋಕದಲ್ಲಿ ಸಂಪತ್ತಿರುವುದು. ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದು ಹೇಳಿದರು.
22 ಆದರೆ ಆ ಯುವಕನು ಯೇಸು ಹೇಳಿದ್ದನ್ನು ಕೇಳಿ, ದುಃಖದಿಂದ ಹೊರಟುಹೋದನು. ಏಕೆಂದರೆ ಅವನಿಗೆ ಬಹಳ ಆಸ್ತಿ ಇತ್ತು.
23 ಆಗ ಯೇಸು ತಮ್ಮ ಶಿಷ್ಯರಿಗೆ, “ಐಶ್ವರ್ಯವಂತನು ಪರಲೋಕ ರಾಜ್ಯದಲ್ಲಿ ಸೇರುವುದು ಕಷ್ಟ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 24 ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ ಎಂದು ಪುನಃ ನಿಮಗೆ ಹೇಳುತ್ತೇನೆ,” ಎಂದರು.
25 ಇದನ್ನು ಕೇಳಿದಾಗ ಯೇಸುವಿನ ಶಿಷ್ಯರು ಅತ್ಯಂತ ವಿಸ್ಮಯಗೊಂಡು, “ಹಾಗಾದರೆ ಯಾರು ರಕ್ಷಣೆಹೊಂದುವರು?” ಎಂದು ಕೇಳಿದರು.
26 ಅದಕ್ಕೆ ಯೇಸು ಅವರನ್ನು ದೃಷ್ಟಿಸಿ ನೋಡಿ ಅವರಿಗೆ, “ಮನುಷ್ಯರಿಗೆ ಇದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ,” ಎಂದು ಹೇಳಿದರು.
27 ಪೇತ್ರನು ಯೇಸುವಿಗೆ, “ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ! ನಮಗೆ ಏನು ದೊರೆಯುವುದು?” ಎಂದು ಕೇಳಿದನು.
28 ಯೇಸು ಅವರಿಗೆ, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಸಮಸ್ತವೂ ನವೀಕರಣವಾಗುವಾಗ, ಮನುಷ್ಯಪುತ್ರನಾದ ನಾನು ನನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಂಡಿರಲು, ನನ್ನನ್ನು ಹಿಂಬಾಲಿಸಿದವರಾದ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯತೀರಿಸುವಿರಿ. 29 ತನ್ನ ಮನೆಗಳನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆಯನ್ನಾಗಲಿ, ತಾಯಿಯನ್ನಾಗಲಿ, ಮಕ್ಕಳನ್ನಾಗಲಿ, ಹೊಲವನ್ನಾಗಲಿ, ನನ್ನ ಹೆಸರಿನ ನಿಮಿತ್ತವಾಗಿ ಬಿಟ್ಟುಬಿಡುವ ಪ್ರತಿಯೊಬ್ಬನು ನೂರರಷ್ಟು ಪಡೆದುಕೊಳ್ಳುವನು ಮತ್ತು ನಿತ್ಯಜೀವಕ್ಕೆ ಬಾಧ್ಯನಾಗುವನು. 30 ಆದರೆ ಮೊದಲನೆಯವರಾದ ಅನೇಕರು ಕಡೆಯವರಾಗುವರು, ಕಡೆಯವರಾದವರು ಮೊದಲನೆಯವರಾಗುವರು.
* 19:4 19:4 ಆದಿ 1:27 19:5 19:5 ಆದಿ 2:24 19:19 19:19 ವಿಮೋ 20:12-16; ಧರ್ಮೋ 5:16-20; ಯಾಜಕ 19:18