28
ಯೇಸುವಿನ ಪುನರುತ್ಥಾನ
ಸಬ್ಬತ್ ಮುಗಿದ ಮೇಲೆ, ವಾರದ ಮೊದಲನೆಯ ದಿನ ಬೆಳಗಾಗುವಾಗ ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಬಂದರು.
ಆಗ ಮಹಾ ಭೂಕಂಪವಾಯಿತು. ಕರ್ತನ ದೂತನು ಪರಲೋಕದಿಂದ ಇಳಿದುಬಂದು, ಬಾಗಿಲಿನಿಂದ ಬಂಡೆಯನ್ನು ಉರುಳಿಸಿ ಅದರ ಮೇಲೆ ಕುಳಿತುಕೊಂಡನು. ಅವನ ರೂಪವು ಮಿಂಚಿನಂತೆಯೂ ಅವನ ಉಡುಪು ಹಿಮದಂತೆಯೂ ಬಿಳುಪಾಗಿತ್ತು. ಕಾವಲುಗಾರರು ಅವನಿಗೆ ಭಯಪಟ್ಟು ನಡುಗುತ್ತಾ ಸತ್ತಂತಾದರು.
ಆ ದೂತನು ಸ್ತ್ರೀಯರಿಗೆ, “ನೀವು ಭಯಪಡಬೇಡಿರಿ. ಶಿಲುಬೆಗೇರಿಸಿದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು. ಅವರು ಇಲ್ಲಿ ಇಲ್ಲ. ಅವರು ಹೇಳಿದಂತೆಯೇ ಜೀವಂತರಾಗಿ ಎದ್ದಿದ್ದಾರೆ. ಕರ್ತನನ್ನು ಇಟ್ಟಿದ್ದ ಸ್ಥಳವನ್ನು ಬಂದು ನೋಡಿರಿ. ಬೇಗನೆ ಹೋಗಿ ಅವರ ಶಿಷ್ಯರಿಗೆ, ‘ಅವರು ಮರಣದಿಂದ ಎದ್ದಿದ್ದಾರೆ. ಅವರು ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುತ್ತಾರೆ. ನೀವು ಅಲ್ಲಿಯೇ ಅವರನ್ನು ಕಾಣುವಿರಿ,’ ಎಂದು ತಿಳಿಸಿರಿ. ಇದೇ ನಾನು ನಿಮಗೆ ತಿಳಿಸಬೇಕಾದ ಸಂಗತಿ,” ಎಂದನು.
ಅವರು ಭಯದಿಂದಲೂ ಮಹಾ ಸಂತೋಷದಿಂದಲೂ ಸಮಾಧಿಯಿಂದ ಬೇಗನೆ ಹೊರಟು, ಶಿಷ್ಯರಿಗೆ ತಿಳಿಸುವುದಕ್ಕಾಗಿ ಓಡಿಹೋದರು. ಅವರು ಶಿಷ್ಯರಿಗೆ ತಿಳಿಸುವುದಕ್ಕೆ ಹೋಗುತ್ತಿದ್ದಾಗ, ಯೇಸು ಅವರನ್ನು ಸಂಧಿಸಿ, “ಶುಭವಾಗಲಿ” ಎಂದರು. ಅವರು ಬಂದು ಯೇಸುವಿನ ಪಾದಗಳನ್ನು ಹಿಡಿದು ಅವರನ್ನು ಆರಾಧಿಸಿದರು. 10 ಆಗ ಯೇಸು ಅವರಿಗೆ, “ಭಯಪಡಬೇಡಿರಿ, ನನ್ನ ಸಹೋದರರು ಗಲಿಲಾಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವರೆಂದೂ ಹೋಗಿ ಅವರಿಗೆ ಹೇಳಿರಿ,” ಎಂದರು.
ಕಾವಲುಗಾರರ ವರದಿ
11 ಅವರು ಹೋಗುತ್ತಿರುವಾಗ, ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ಮುಖ್ಯಯಾಜಕರಿಗೆ ನಡೆದ ಸಂಗತಿಗಳನ್ನೆಲ್ಲಾ ಹೇಳಿದರು. 12 ಇವರು ಹಿರಿಯರೊಂದಿಗೆ ಕೂಡಿಬಂದು ಆಲೋಚನೆ ಮಾಡಿ ಸೈನಿಕರಿಗೆ ಬಹಳ ಹಣಕೊಟ್ಟು, 13 “ ‘ನಾವು ನಿದ್ರೆ ಮಾಡುತ್ತಿದ್ದಾಗ ಅವನ ಶಿಷ್ಯರು ರಾತ್ರಿಯಲ್ಲಿ ಬಂದು ಅವನನ್ನು ಕದ್ದುಕೊಂಡು ಹೋದರು,’ ಎಂದು ನೀವು ಹೇಳಿರಿ. 14 ಇದು ರಾಜ್ಯಪಾಲನ ಕಿವಿಗೆ ಬಿದ್ದರೆ, ನೀವು ತಪ್ಪಿಸಿಕೊಳ್ಳುವ ಹಾಗೆ ನಾವು ಅವನನ್ನು ಸಮಾಧಾನಪಡಿಸುವೆವು,” ಎಂದರು. 15 ಹೀಗೆ ಅವರು ಆ ಹಣವನ್ನು ತೆಗೆದುಕೊಂಡು ತಮಗೆ ಕಲಿಸಿದಂತೆ ವರದಿಮಾಡಿದರು. ಈ ಕಥೆಯು ಈ ದಿನದವರೆಗೂ ಯೆಹೂದ್ಯರಲ್ಲಿ ಹಬ್ಬಿದೆ.
ಮಹಾ ಆದೇಶವು
16 ಆಗ ಹನ್ನೊಂದು ಮಂದಿ ಶಿಷ್ಯರು ಯೇಸು ತಮಗೆ ನೇಮಿಸಿದ ಗಲಿಲಾಯದಲ್ಲಿರುವ ಬೆಟ್ಟಕ್ಕೆ ಹೋದರು. 17 ಅವರು ಯೇಸುವನ್ನು ಕಂಡು ಆರಾಧಿಸಿದರು. ಆದರೆ ಕೆಲವರು ಸಂದೇಹ ಪಟ್ಟರು. 18 ಯೇಸು ಬಂದು ಅವರೊಂದಿಗೆ ಮಾತನಾಡಿ, “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ ನನಗೆ ಕೊಡಲಾಗಿದೆ. 19 ಆದ್ದರಿಂದ ನೀವು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ, 20 ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಅನುಸರಿಸುವ ಹಾಗೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಎಲ್ಲಾ ದಿವಸ ನಾನು ನಿಮ್ಮ ಸಂಗಡ ಇರುತ್ತೇನೆ,” ಎಂದರು.