4
ಯೇಸುವಿನ ಶೋಧನೆ
ಆಮೇಲೆ ಸೈತಾನನಿಂದ ಶೋಧಿತರಾಗಲೆಂದು ಪವಿತ್ರಾತ್ಮರು ಯೇಸುವನ್ನು ಅರಣ್ಯಕ್ಕೆ ನಡೆಸಿದರು. ನಲವತ್ತು ದಿನ ಹಗಲೂ ರಾತ್ರಿ ಉಪವಾಸವಿದ್ದ ಮೇಲೆ ಯೇಸುವಿಗೆ ಹಸಿವಾಯಿತು. ಆಗ ಶೋಧಕನು ಯೇಸುವಿನ ಬಳಿ ಬಂದು, “ನೀನು ದೇವರ ಪುತ್ರನಾಗಿದ್ದರೆ, ಈ ಕಲ್ಲುಗಳು ರೊಟ್ಟಿಗಳಾಗುವಂತೆ ಆಜ್ಞಾಪಿಸು,” ಎಂದನು.
ಅದಕ್ಕೆ ಯೇಸು, “ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ, ‘ಮನುಷ್ಯನು ಜೀವಿಸುವುದು ರೊಟ್ಟಿಯಿಂದ ಮಾತ್ರವಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಜೀವಿಸುತ್ತಾನೆ,’*” ಎಂದರು.
ಆಮೇಲೆ ಸೈತಾನನು ಯೇಸುವನ್ನು ಪವಿತ್ರ ನಗರಕ್ಕೆ ಕರೆದುಕೊಂಡು ಹೋಗಿ ದೇವಾಲಯದ ಅತಿ ಎತ್ತರವಾದ ಶಿಖರದ ಮೇಲೆ ನಿಲ್ಲಿಸಿ, “ನೀನು ದೇವರ ಪುತ್ರನಾಗಿದ್ದರೆ, ಕೆಳಕ್ಕೆ ಧುಮುಕು. ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ:
“ ‘ದೇವರು ನಿನ್ನ ವಿಷಯವಾಗಿ ತಮ್ಮ ದೂತರಿಗೆ ಆಜ್ಞಾಪಿಸುವರು,
ನಿನ್ನ ಪಾದಗಳು ಕಲ್ಲಿಗೆ ತಗಲದಂತೆ
ದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು,’
ಎಂದನು.
ಅದಕ್ಕೆ ಯೇಸು, “ ‘ನಿನ್ನ ದೇವರಾದ ಕರ್ತದೇವರನ್ನು ಪರೀಕ್ಷಿಸಬಾರದು’ ಎಂಬುದನ್ನು ಸಹ ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.
ಅನಂತರ ಸೈತಾನನು ಯೇಸುವನ್ನು ಬಹಳ ಎತ್ತರವಾದ ಪರ್ವತಕ್ಕೆ ಕರೆದುಕೊಂಡು ಹೋಗಿ, ಲೋಕದ ಎಲ್ಲಾ ರಾಜ್ಯಗಳನ್ನೂ ಅವುಗಳ ಮಹಿಮೆಯನ್ನೂ ಅವರಿಗೆ ತೋರಿಸಿ, “ನೀನು ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವೆಲ್ಲವನ್ನು ನಿನಗೆ ಕೊಡುವೆನು,” ಎಂದನು.
10 ಯೇಸು ಅವನಿಗೆ, “ಸೈತಾನನೇ, ತೊಲಗು. ಏಕೆಂದರೆ, ‘ನಿನ್ನ ಕರ್ತದೇವರನ್ನು ಆರಾಧಿಸಿ, ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು,’§ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.
11 ಆಗ ಸೈತಾನನು ಯೇಸುವನ್ನು ಬಿಟ್ಟುಹೋದನು. ದೇವದೂತರು ಬಂದು ಅವರಿಗೆ ಉಪಚಾರ ಮಾಡಿದರು.
ಯೇಸುವಿನ ಉಪದೇಶದ ಪ್ರಾರಂಭ
12 ಯೋಹಾನನು ಬಂಧಿತನಾದನೆಂದು ಕೇಳಿ, ಯೇಸು ಗಲಿಲಾಯಕ್ಕೆ ಹಿಂದಿರುಗಿದರು. 13 ಬಳಿಕ ನಜರೇತನ್ನು ಬಿಟ್ಟು, ಜೆಬುಲೂನ್ ಮತ್ತು ನೆಫ್ತಲೀಮ್ ಪ್ರಾಂತಗಳಿಗೆ ಬಂದು ಸರೋವರದ ಬಳಿಯಲ್ಲಿದ್ದ ಕಪೆರ್ನೌಮ್ ಎಂಬ ಊರಿನಲ್ಲಿ ವಾಸಮಾಡಿದರು. 14 ಹೀಗೆ ಪ್ರವಾದಿ ಯೆಶಾಯನ ಮುಖಾಂತರ ಹೇಳಿಸಿರುವ ಈ ಮಾತು ನೆರವೇರಿತು. ಅದೇನೆಂದರೆ:
15 “ಜೆಬುಲೂನ್ ನಾಡು ಮತ್ತು ನೆಫ್ತಲೀಮ್ ನಾಡು,
ಯೊರ್ದನ್ ನದಿಯ ಆಚೆ ಸರೋವರದ ಕಡೆ,
ಯೆಹೂದ್ಯರಲ್ಲದವರಿರುವ ಗಲಿಲಾಯ ನಾಡು,
16 ಕತ್ತಲಲ್ಲಿ ವಾಸಿಸಿದ ಈ ಸ್ಥಳಗಳ ಜನರಿಗೆ
ಮಹಾ ಬೆಳಕು ಕಾಣಿಸಿತು;
ಮರಣ ಛಾಯೆಯ ಈ ಪ್ರದೇಶದಲ್ಲಿ ವಾಸಿಸುವವರಿಗೆ
ಬೆಳಕು ಉದಯಿಸಿತು.”*
17 ಅಂದಿನಿಂದ ಯೇಸು, “ದೇವರ ಕಡೆಗೆ ತಿರುಗಿಕೊಳ್ಳಿರಿ, ಪರಲೋಕ ರಾಜ್ಯವು ಸಮೀಪಿಸಿದೆ,” ಎಂದು ಬೋಧಿಸತೊಡಗಿದರು.
ಯೇಸು ಪ್ರಥಮ ಶಿಷ್ಯರನ್ನು ಕರೆದದ್ದು
18 ಯೇಸು ಗಲಿಲಾಯ ಸರೋವರದ ತೀರದಲ್ಲಿ ನಡೆದುಹೋಗುತ್ತಿರುವಾಗ, ಪೇತ್ರ ಎನಿಸಿಕೊಂಡ ಸೀಮೋನನನ್ನೂ ಅವನ ಸಹೋದರ ಅಂದ್ರೆಯನನ್ನೂ ಕಂಡರು. ಬೆಸ್ತರಾಗಿದ್ದ ಅವರು ಸರೋವರದಲ್ಲಿ ಬಲೆ ಬೀಸುತ್ತಿದ್ದರು. 19 ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿರಿ. ನಾನು ನಿಮ್ಮನ್ನು, ಮನುಷ್ಯರನ್ನು ದೇವರ ಮಾರ್ಗದಲ್ಲಿ ನಡೆಸುವವರನ್ನಾಗಿ ಮಾಡುವೆನು,” ಎಂದು ಹೇಳಿದರು. 20 ತಕ್ಷಣವೇ, ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
21 ಯೇಸು ಅಲ್ಲಿಂದ ಮುಂದೆ ಹೋಗುತ್ತಿದ್ದಾಗ ಇನ್ನಿಬ್ಬರು ಅಣ್ಣತಮ್ಮಂದಿರನ್ನು ಅಂದರೆ, ಜೆಬೆದಾಯನ ಮಗ ಯಾಕೋಬ ಮತ್ತು ಅವನ ಸಹೋದರ ಯೋಹಾನನನ್ನು ಕಂಡರು. ಅವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯೊಳಗೆ ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಅವರನ್ನೂ ಕರೆದರು. 22 ಕೂಡಲೇ, ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
ಯೇಸು ಅಸ್ವಸ್ಥರನ್ನು ಗುಣಪಡಿಸಿದ್ದು
23 ಯೇಸು ಗಲಿಲಾಯದಲ್ಲೆಲ್ಲಾ ಸಂಚರಿಸಿ, ಯೆಹೂದ್ಯರ ಸಭಾಮಂದಿರಗಳಲ್ಲಿ ಬೋಧಿಸುತ್ತಾ, ರಾಜ್ಯದ ಸುವಾರ್ತೆಯನ್ನು ಸಾರುತ್ತಾ, ಜನರಲ್ಲಿದ್ದ ಸಕಲ ವಿಧವಾದ ವ್ಯಾಧಿಗಳನ್ನೂ ಸಕಲ ವಿಧವಾದ ಬೇನೆಗಳನ್ನೂ ಗುಣಪಡಿಸುತ್ತಾ ಬಂದರು. 24 ಯೇಸುವಿನ ಸುದ್ದಿ ಸಿರಿಯಾ ದೇಶದಲ್ಲೆಲ್ಲಾ ಹಬ್ಬಿದ್ದರಿಂದ, ಜನರು ವಿವಿಧ ವ್ಯಾಧಿಗಳಿಂದಲೂ ತೀವ್ರ ವೇದನೆಯಿಂದಲೂ ಅಸ್ವಸ್ಥರಾದವರನ್ನೂ ದೆವ್ವ ಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯು ಪೀಡಿತರನ್ನೂ ಅವರ ಬಳಿಗೆ ಕರೆದುಕೊಂಡು ಬಂದರು; ಯೇಸು ಅವರನ್ನೆಲ್ಲಾ ಗುಣಪಡಿಸಿದರು. 25 ಗಲಿಲಾಯ, ದೆಕಪೊಲಿ, ಯೆರೂಸಲೇಮ್, ಯೂದಾಯ ಹಾಗೂ ಯೊರ್ದನ್ ನದಿಯ ಆಚೆಕಡೆಯಿಂದಲೂ ಜನರು ದೊಡ್ಡ ಗುಂಪಾಗಿ ಯೇಸುವನ್ನು ಹಿಂಬಾಲಿಸಿದರು.
* 4:4 4:4 ಧರ್ಮೋ 8:3 4:6 4:6 ಕೀರ್ತನೆ 91:11,12 4:7 4:7 ಧರ್ಮೋ 6:16 § 4:10 4:10 ಧರ್ಮೋ 6:13 * 4:16 4:16 ಯೆಶಾಯ 9:1,2 4:25 4:25 ಅಂದರೆ, ಹತ್ತು ಪಟ್ಟಣಗಳು