4
ಪುನಃ ಕಟ್ಟುವುದಕ್ಕೆ ವಿರೋಧ
ನಾವು ಗೋಡೆಯನ್ನು ಪುನಃ ಕಟ್ಟುವ ವರ್ತಮಾನವನ್ನು ಸನ್ಬಲ್ಲಟನು ಕೇಳಿದಾಗ, ಅವನು ಕೋಪಗೊಂಡು, ಯೆಹೂದ್ಯರಿಗೆ ಗೇಲಿಮಾಡಿ, ತಮ್ಮ ಜೊತೆ ಕೆಲಸ ಮಾಡುವವರ ಮುಂದೆಯೂ ಸಮಾರ್ಯದಲ್ಲಿರುವ ಸೈನ್ಯದ ಮುಂದೆಯೂ, “ಈ ಬಲಹೀನರಾದ ಯೆಹೂದ್ಯರು ಮಾಡುವುದೇನು? ಅವರು ತಮ್ಮ ಗೋಡೆಯನ್ನು ಪುನಃ ಕಟ್ಟುತ್ತಾರೆಯೇ? ಬಲಿಯನ್ನು ಅರ್ಪಿಸುವರೋ? ಪಟ್ಟಣವು ಬೆಂಕಿಯಲ್ಲಿ ಸುಟ್ಟುಹೋದಾಗ, ಕಲ್ಲಿನ ತುಂಡುಗಳ ರಾಶಿಯಿಂದ ಕಟ್ಟಡಕ್ಕೆ ಸೂಕ್ತವಾದ ಕಲ್ಲುಗಳನ್ನು ಹೊರತೆಗೆಯಲು ಅವರಿಗೆ ಸಾಧ್ಯವಾಗುತ್ತದೆಯೇ?” ಎಂದು ಹೇಳಿದನು.
ಅವನ ಬಳಿಯಲ್ಲೇ ನಿಂತಿದ್ದ ಅಮ್ಮೋನಿಯನಾದ ಟೋಬೀಯನು, “ಅವರು ಕಟ್ಟುವ ಕಲ್ಲು ಗೋಡೆಯ ಮೇಲೆ ನರಿ ಹಾರಿದರೆ, ಅದು ಬಿದ್ದುಹೋಗುವುದು!” ಎಂದು ಅಣಕಿಸಿದನು.
 
ನಮ್ಮ ದೇವರೇ, ಆಲಿಸಿರಿ; ಅವರು ನಮ್ಮನ್ನು ಎಷ್ಟು ಹೀಯಾಳಿಸುತ್ತಾರೆ. ನೀವು ಅವರ ನಿಂದೆಯನ್ನು ಅವರ ತಲೆಗಳ ಮೇಲೆ ಬರಮಾಡಿ, ಸೆರೆಯ ದೇಶದಲ್ಲಿ ಅವರನ್ನು ಸೂರೆಯಾಗಿ ಒಪ್ಪಿಸಿರಿ. ಅವರು ಕಟ್ಟುವವರ ಮುಂದೆ ನಿಮ್ಮನ್ನು ಕೆಣಕಿದ್ದರಿಂದ ನೀವು ಅವರ ಅಪರಾಧವನ್ನು ಮುಚ್ಚಬೇಡಿರಿ. ನಿಮ್ಮ ಮುಂದೆ ಇರುವ ಅವರ ಪಾಪಗಳನ್ನು ಅಳಿಸಿಬಿಡಬೇಡಿರಿ ಎಂದು ನಾನು ಪ್ರಾರ್ಥಿಸಿದೆ.
 
ಹೀಗೆ ನಾವು ಪುನಃ ಗೋಡೆ ಕಟ್ಟುವುದನ್ನು ಮುಂದುವರಿಸಿದೆವು. ಗೋಡೆ ಅರ್ಧ ಎತ್ತರದವರೆಗೂ ಆಯಿತು. ಏಕೆಂದರೆ ಜನರು ಕೆಲಸ ಮಾಡುವುದಕ್ಕೆ ಮನಸ್ಸುಳ್ಳವರಾಗಿದ್ದರು.
ಯೆರೂಸಲೇಮಿನ ಗೋಡೆಯ ದುರಸ್ತಿಕಾರ್ಯ ಮುಂದುವರಿದಿದೆ ಹಾಗು ಅದರ ಸಂದುಗಳು ಮತ್ತೆ ಮುಚ್ಚಿಕೊಳ್ಳುತ್ತಿವೆ ಎಂದು ಸನ್ಬಲ್ಲಟನೂ ಟೋಬೀಯನೂ ಅರಬಿಯರೂ ಅಮ್ಮೋನ್ಯರೂ ಅಷ್ಡೋದ್ಯರೂ ಕೇಳಿದಾಗ ಬಹು ಕೋಪಗೊಂಡರು. ಅವರು ಯೆರೂಸಲೇಮಿಗೆ ವಿರೋಧವಾಗಿ ಯುದ್ಧ ಮಾಡುವುದಕ್ಕೂ, ಅಭ್ಯಂತರಿಸುವುದಕ್ಕೂ ಬರಲು ಏಕವಾಗಿ ಒಳಸಂಚು ಮಾಡಿದರು. ಆದರೆ ನಾವು ನಮ್ಮ ದೇವರಿಗೆ ಪ್ರಾರ್ಥನೆಮಾಡಿ, ಅವರಿಗೆ ಎದುರಾಗಿ ರಾತ್ರಿ ಹಗಲು ಕಾವಲು ಇಟ್ಟೆವು.
10 ಆಗ ಯೆಹೂದದವರು, “ಹೊರೆ ಹೊರುವವರ ಬಲವು ಕುಂದಿಹೋಯಿತು; ಕಲ್ಲುಮಣ್ಣಿನ ರಾಶಿ ಬಹಳವಾಗಿದೆ; ಈ ಗೋಡೆಯನ್ನು ಪುನಃ ಕಟ್ಟುವುದು ನಮ್ಮಿಂದಾಗದು,” ಎಂದರು.
11 ನಮ್ಮ ವೈರಿಗಳು, “ಅವರು ತಿಳಿಯದ ಹಾಗೆಯೂ, ನೋಡದ ಹಾಗೆಯೂ ನಾವು ಅವರ ನಡುವೆ ಬಂದು, ಅವರನ್ನು ಕೊಂದುಹಾಕಿ, ಕೆಲಸವನ್ನು ನಿಲ್ಲಿಸಿಬಿಡೋಣ,” ಎಂದುಕೊಳ್ಳುತ್ತಿದ್ದರು.
12 ಅವರ ಬಳಿಯಲ್ಲಿ ವಾಸವಾಗಿರುವ ಯೆಹೂದ್ಯರು ನಮ್ಮ ಬಳಿಗೆ ಬಂದು, “ನೀವು ತಿರುಗಿಕೊಳ್ಳುವ ಎಲ್ಲಾ ಸ್ಥಳಗಳಿಂದ ನಮ್ಮ ಮೇಲೆ ಯುದ್ಧಕ್ಕೆ ಬಂದಾರು,” ಎಂದು ನಮಗೆ ಹತ್ತು ಬಾರಿ ಹೇಳಿದರು.
13 ಆದಕಾರಣ ನಾನು ಗೋಡೆಯ ಹಿಂದೆ ಇರುವ ತಗ್ಗಿನ ಸ್ಥಳಗಳಲ್ಲಿಯೂ, ಎತ್ತರವಾದ ಸ್ಥಳಗಳಲ್ಲಿಯೂ ಜನರನ್ನು ನಿಲ್ಲಿಸಿದೆನು. ತಮ್ಮ ಖಡ್ಗಗಳನ್ನೂ, ತಮ್ಮ ಈಟಿಗಳನ್ನೂ, ತಮ್ಮ ಬಿಲ್ಲುಗಳನ್ನೂ ಹಿಡಿದುಕೊಂಡಿರುವ ಜನರನ್ನು, ಅವರವರ ವಂಶಗಳ ಪ್ರಕಾರ ನಿಲ್ಲಿಸಿದೆನು. 14 ನಾನು ಅವರನ್ನು ಸಂದರ್ಶಿಸಿ, ಅವರ ಮುಂದೆ ನಿಂತು ಶ್ರೇಷ್ಠರಿಗೂ, ಅಧಿಕಾರಸ್ಥರಿಗೂ, ಇತರ ಜನರಿಗೂ ಸಂಬೋಧಿಸಿ, “ನೀವು ಅವರಿಗೋಸ್ಕರ ಭಯಪಡಬೇಡಿರಿ. ದೊಡ್ಡವನಾಗಿಯೂ, ಭಯಂಕರನಾಗಿಯೂ ಇರುವ ಯೆಹೋವ ದೇವರನ್ನು ಜ್ಞಾಪಕಮಾಡಿಕೊಂಡು, ನಿಮ್ಮ ಪುತ್ರರಿಗೋಸ್ಕರ, ಪುತ್ರಿಯರಿಗೋಸ್ಕರ, ನಿಮ್ಮ ಹೆಂಡತಿಯರಿಗೋಸ್ಕರ, ನಿಮ್ಮ ಮನೆಗಳಿಗೋಸ್ಕರ ಯುದ್ಧಮಾಡಿರಿ,” ಎಂದೆನು.
15 ನಿಮ್ಮ ಶತ್ರುಗಳು ಅವರ ಕುತಂತ್ರವು ನಮಗೆ ಗೊತ್ತಾಯಿತೆಂದು ದೇವರು ಅದನ್ನು ವ್ಯರ್ಥ ಮಾಡಿದನೆಂದು ತಿಳಿದುಕೊಂಡರು. ನಮ್ಮನ್ನು ಬಿಟ್ಟುಹೋದರು. ನಾವೆಲ್ಲರು ನಮ್ಮ ನಮ್ಮ ಗೋಡೆಯ ಕೆಲಸಕ್ಕೆ ಮತ್ತೆ ಕೈಹಾಕಿದೆವು.
16 ಅಂದಿನಿಂದ ನನ್ನ ಸೇವಕರಲ್ಲಿ ಅರ್ಧ ಜನರು ಕೆಲಸದಲ್ಲಿ ನಿರತರಾದರು; ಮಿಕ್ಕ ಅರ್ಧ ಜನರು ಈಟಿಗಳನ್ನೂ, ಗುರಾಣಿಗಳನ್ನೂ, ಬಿಲ್ಲುಗಳನ್ನೂ, ಕವಚಗಳನ್ನೂ ಧರಿಸಿದರು. ಪ್ರಧಾನರು ಗೋಡೆ ಕಟ್ಟುವವರಾದ ಯೆಹೂದ ಮನೆಯವರ ಹಿಂದೆ ನಿಂತರು. 17 ಹೊರೆ ಹೊರುವವರು ಒಂದು ಕೈಯಿಂದ ಹೊರೆಹೊತ್ತು, ಇನ್ನೊಂದು ಕೈಯಿಂದ ಈಟಿ ಹಿಡಿದುಕೊಳ್ಳುತ್ತಾ ಇದ್ದರು. 18 ಕಟ್ಟುವವರಲ್ಲಿ ಪ್ರತಿಯೊಬ್ಬರೂ ತಮ್ಮ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡು ಕಟ್ಟುತ್ತಿದ್ದರು. ತುತೂರಿ ಊದುವವನು ನನ್ನ ಬಳಿಯಲ್ಲಿದ್ದನು.
19 ಆಗ ನಾನು ಶ್ರೇಷ್ಠರಿಗೂ, ಅಧಿಕಾರಿಗಳಿಗೂ, ಇತರ ಜನರಿಗೂ, “ಕೆಲಸವು ದೊಡ್ಡದೂ, ವಿಸ್ತಾರವೂ ಆದದ್ದು. ನಾವು ಗೋಡೆಯ ಮೇಲೆ ಚದರಿ, ಒಬ್ಬರಿಗೊಬ್ಬರು ದೂರವಾಗಿದ್ದೇವೆ. 20 ನಿಮಗೆ ಕೊಂಬಿನ ಧ್ವನಿಯು ಯಾವ ಸ್ಥಳದಿಂದ ಕೇಳಿಬರುವುದೋ, ಆ ಸ್ಥಳಕ್ಕೆ ನಮ್ಮ ಹತ್ತಿರ ಕೂಡಿಬನ್ನಿರಿ. ನಮ್ಮ ದೇವರು ನಮಗೋಸ್ಕರ ಯುದ್ಧಮಾಡುವರು,” ಎಂದು ಹೇಳಿದೆನು.
21 ಹೀಗೆ ನಾವು ಅರುಣೋದಯದಿಂದ ನಕ್ಷತ್ರಗಳು ಮೂಡುವವರೆಗೂ ಕೆಲಸ ಮಾಡುತ್ತಿದ್ದೆವು. ನನ್ನ ಸೇವಕರಲ್ಲಿ ಅರ್ಧಮಂದಿ ಭರ್ಜಿ ಹಿಡಿದುಕೊಂಡಿದ್ದರು. 22 ಇದಲ್ಲದೆ ನಾನು ಆ ಸಮಯದಲ್ಲಿ ಜನರಿಗೆ, “ನಿಮ್ಮ ಆಳುಗಳು ರಾತ್ರಿಯಲ್ಲಿ ನಮಗೆ ಕಾವಲಾಗಿರುವಂತೆಯೂ, ಹಗಲಿನಲ್ಲಿ ಕೆಲಸ ನಡೆಸುವಂತೆಯೂ ನೀವು ನಿಮ್ಮ ನಿಮ್ಮ ಆಳುಗಳೊಡನೆ ಯೆರೂಸಲೇಮಿನಲ್ಲೇ ವಾಸಮಾಡಬೇಕು,” ಎಂದು ಅಪ್ಪಣೆ ಮಾಡಿದೆನು. 23 ನಾನೂ, ನನ್ನ ಸಹೋದರರೂ, ಸೇವಕರೂ, ಮೈಗಾವಲಿನವರೂ ಸ್ನಾನದ ಸಮಯದಲ್ಲಿ ಹೊರತು, ಬೇರೆ ಸಮಯದಲ್ಲಿ ನಮ್ಮ ವಸ್ತ್ರಗಳನ್ನು ತೆಗೆದುಹಾಕಲಿಲ್ಲ.