ನಹೂಮ
1
ನಿನೆವೆಯ ವಿಷಯವಾದ ಪ್ರವಾದನೆ: ಎಲ್ಕೋಷಿನವನಾದ ನಹೂಮನ ದರ್ಶನದ ಪುಸ್ತಕವು.
 
ನಿನೆವೆ ಮೇಲೆ ಯೆಹೋವ ದೇವರ ರೌದ್ರ
ಯೆಹೋವ ದೇವರು ಅಸೂಯೆಪಡುವ ಮತ್ತು ಸೇಡು ತೀರಿಸಿಕೊಳ್ಳುವ ದೇವರು.
ಅವರು ತಮ್ಮನ್ನು ಎದುರಿಸುವವರನ್ನು ಎದುರಿಸುತ್ತಾರೆ.
ಯೆಹೋವ ದೇವರು ರೋಷದಿಂದ ಮುಯ್ಯಿಗೆ ಮುಯ್ಯಿ ತೀರಿಸುತ್ತಾರೆ.
ಯೆಹೋವ ದೇವರು ತಮ್ಮ ವೈರಿಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ,
ತಮ್ಮ ಶತ್ರುಗಳ ಮೇಲೆ ಕೋಪವನ್ನು ಪ್ರಕಟಿಸಿಕೊಳ್ಳುತ್ತಾರೆ.
ಯೆಹೋವ ದೇವರು ಕೋಪಗೊಳ್ಳುವುದರಲ್ಲಿ ಶಾಂತಿಸ್ವರೂಪರು. ಆದರೂ ಶಕ್ತಿಯಲ್ಲಿ ಮಹತ್ತಾದವರು.
ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ಶಿಕ್ಷಿಸದೆ ಇರರು.
ಯೆಹೋವ ದೇವರ ಮಾರ್ಗವು ಸುಳಿಗಾಳಿಯಲ್ಲಿಯೂ, ಬಿರುಗಾಳಿಯಲ್ಲಿಯೂ ಇದೆ.
ಮೇಘಗಳು ಅವರ ಕಾಲುಗಳ ಧೂಳೇ.
ಅವರು ಸಮುದ್ರವನ್ನು ಗದರಿಸಿ, ಅದನ್ನು ಒಣಗುವಂತೆ ಮಾಡುತ್ತಾರೆ.
ಸಕಲನದಿಗಳನ್ನು ಬತ್ತಿಸುತ್ತಾರೆ.
ಬಾಷಾನು, ಕರ್ಮೆಲು ಬಾಡಿ ಹೋಗುತ್ತವೆ
ಮತ್ತು ಲೆಬನೋನಿನ ಹೂವು ಬಾಡಿ ಹೋಗುತ್ತದೆ.
ಬೆಟ್ಟಗಳು ಅವರ ಮುಂದೆ ಕಂಪಿಸುತ್ತವೆ;
ಗುಡ್ಡಗಳು ಕರಗುತ್ತವೆ;
ಭೂಮಿಯೂ, ಲೋಕವೂ, ಅದರ ನಿವಾಸಿಗಳೆಲ್ಲವೂ
ಅವರ ಮುಂದೆ ನಡುಗುತ್ತವೆ.
ಅವರ ರೌದ್ರದ ಎದುರಿಗೆ ಯಾರು ನಿಲ್ಲುವರು?
ಅವರ ರೋಷಾಗ್ನಿಯಲ್ಲಿ ಯಾರು ನಿಂತುಕೊಳ್ಳುವರು?
ಅವರ ಕೋಪಾಗ್ನಿ ಬೆಂಕಿಯ ಹಾಗೆ ಸುರಿಸಲಾಗಿದೆ;
ಬಂಡೆಗಳು ಆತನ ಮುಂದೆ ಕೆಡವಲಾಗಿವೆ.
 
ಯೆಹೋವ ದೇವರು ಒಳ್ಳೆಯವರು.
ಇಕ್ಕಟ್ಟಿನ ದಿವಸದಲ್ಲಿ ಆಶ್ರಯದಾತರಾಗಿದ್ದಾರೆ.
ತಮ್ಮಲ್ಲಿ ನಂಬಿಕೆ ಇಡುವವರನ್ನು ಅವರು ಪರಿಪಾಲಿಸುತ್ತಾರೆ.
ಆದರೆ ಮೇರೆ ಮೀರುವ ಪ್ರಳಯದಿಂದ
ನಿನೆವೆಯನ್ನು ಮುಗಿಸಿಬಿಡುವರು.
ಕತ್ತಲೆ ಅವರ ಶತ್ರಗಳನ್ನು ಹಿಂದಟ್ಟುವುದು.
 
ಯೆಹೋವ ದೇವರಿಗೆ ವಿರೋಧವಾಗಿ ಅವರು ಏನೇನು ಯೋಚಿಸಿರುವರೋ,
ಅದನ್ನು ಅವರು ಅಂತ್ಯಗೊಳಿಸುವರು.
ತೊಂದರೆಯು ಎರಡು ಸಾರಿ ಏಳದು.
10 ಅವರು ಮುಳ್ಳುಗಳಲ್ಲಿ ಸಿಕ್ಕಿಕೊಳ್ಳುವರು,
ತಮ್ಮ ದ್ರಾಕ್ಷಾರಸದಿಂದ ಮತ್ತರಾಗುವರು.
ಪೂರ್ಣವಾಗಿ ಒಣಗಿದ ಕೂಳೆಯಂತೆ ಅವರು ಸುಟ್ಟು ಹೋಗುವರು.
11 ನಿನೆವೆಯೇ ಯೆಹೋವ ದೇವರಿಗೆ
ವಿರೋಧವಾಗಿ ದುರಾಲೋಚನೆ ಮಾಡಿ,
ಕೇಡನ್ನು ಯೋಚಿಸುವವನು ನಿನ್ನೊಳಗಿಂದ ಹೊರಟಿದ್ದಾನೆ.
12 ಯೆಹೋವ ದೇವರು ಹೀಗೆ ಹೇಳುತ್ತಾರೆ:
ಅವರೊಂದಿಗೆ ಒಪ್ಪಂದ ಮಾಡಿಕೊಂಡವರಿದ್ದರೂ,
ಅವರು ಬಹುಮಂದಿಯಾಗಿದ್ದರೂ ನಾಶಕ್ಕೆ ಒಳಗಾಗುವರು.
ಯೆಹೂದವೇ, ನಾನು ನಿನ್ನನ್ನು ಕಷ್ಟಪಡಿಸಿದಾಗ್ಯೂ,
ಇನ್ನು ಮೇಲೆ ಕಷ್ಟಪಡಿಸೆನು.
13 ನಾನು ಈಗ ನಿನ್ನ ಮೇಲಿನ ಅವರ ನೊಗವನ್ನು ಮುರಿದು,
ನಿನ್ನ ಬಂಧನಗಳನ್ನು ಹರಿದುಬಿಡುವೆನು.
 
14 ನಿನೆವೆಯೇ, ನಿನ್ನ ವಿಷಯವಾಗಿ ಯೆಹೋವ ದೇವರು ಆಜ್ಞಾಪಿಸುವುದೇನೆಂದರೆ:
ಹೆಸರೆತ್ತಲು ನಿನಗೆ ಸಂತಾನವಿಲ್ಲದಂತೆ ಮಾಡುವೆನು.
ನಿನ್ನ ದೇವರ ಮಂದಿರದಲ್ಲಿರುವ ಕೆತ್ತಿದ ವಿಗ್ರಹವನ್ನೂ,
ಎರಕ ಬೊಂಬೆಯನ್ನೂ ನಾಶಮಾಡುವೆನು.
ನೀನು ತುಚ್ಛನಾದದ್ದರಿಂದ
ನಿನಗೆ ಸಮಾಧಿಯನ್ನು ಸಿದ್ಧಮಾಡುವೆನು.
 
15 ಇಗೋ, ಪರ್ವತಗಳ ಮೇಲೆ ಶುಭಸಮಾಚಾರವನ್ನು ತಂದು,
ಸಮಾಧಾನವನ್ನು ತಿಳಿಸುವವನ ಪಾದಗಳನ್ನು ನೋಡು.
ಯೆಹೂದವೇ, ನಿನ್ನ ಪರಿಶುದ್ಧ ಹಬ್ಬಗಳನ್ನು ನಡೆಸು,
ನಿನ್ನ ಹರಕೆಗಳನ್ನು ಸಲ್ಲಿಸು.
ಏಕೆಂದರೆ ಇನ್ನು ಮೇಲೆ ದುಷ್ಟರು ನಿನ್ನ ಮೇಲೆ ಮುತ್ತಿಗೆ ಹಾಕರು.
ಅವರು ಸಂಪೂರ್ಣವಾಗಿ ನಾಶವಾಗುವರು.