16
ಕೋರಹ, ದಾತಾನ್ ಮತ್ತು ಅಬಾರೀಮ್
ಆಗ ಲೇವಿಯ ಮಗನಾದ ಕೊಹಾತನ ಮೊಮ್ಮಗ ಇಚ್ಹಾರನ ಮಗ ಕೋರಹನೂ ರೂಬೇನ್ ಗೋತ್ರದವರಾದ ಎಲೀಯಾಬನ ಮಕ್ಕಳಾದ ದಾತಾನನೂ ಅಬೀರಾಮನೂ ಮತ್ತು ಪೆಲೆತನ ಮಗನಾದ ಓನನೂ ಜನರನ್ನು ತೆಗೆದುಕೊಂಡು ಇಸ್ರಾಯೇಲರೊಳಗಿಂದ ಸಭೆಯ ಪ್ರಧಾನರಾಗಿಯೂ ಸಭೆಯ ಪ್ರಸಿದ್ಧರಾಗಿಯೂ ಹೆಸರು ಹೊಂದಿದವರಾಗಿಯೂ ಇರುವ ಇನ್ನೂರ ಐವತ್ತು ಮಂದಿಯೊಂದಿಗೆ ಮೋಶೆಗೆ ಎದುರಾಗಿ ತಿರುಗಿಬಿದ್ದರು. ಅವರು ಮೋಶೆಗೂ, ಆರೋನನಿಗೂ ವಿರೋಧವಾಗಿ ಕೂಡಿಕೊಂಡು, “ನೀವು ಹೆಚ್ಚು ಅಧಿಕಾರ ತೆಗೆದುಕೊಳ್ಳುತ್ತೀರಿ, ಏಕೆಂದರೆ ಈ ಸಮೂಹದಲ್ಲಿರುವ ಎಲ್ಲರೂ ಪರಿಶುದ್ಧರು. ಯೆಹೋವ ದೇವರು ಅವರ ಮಧ್ಯದಲ್ಲಿದ್ದಾರೆ. ಹೀಗಿರಲಾಗಿ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವುದು ಏಕೆ?” ಎಂದು ಅವರಿಗೆ ಕೇಳಿದರು.
ಮೋಶೆಯು ಇದನ್ನು ಕೇಳಿದಾಗ, ಬೋರಲು ಬಿದ್ದು, ಕೋರಹನಿಗೂ, ಅವನ ಸಮಸ್ತ ಸಮೂಹಕ್ಕೂ, “ಯೆಹೋವ ದೇವರು ತಮ್ಮ ಹತ್ತಿರ ಬರಮಾಡಿಕೊಳ್ಳುವ ಹಾಗೆ ತನ್ನವರು ಯಾರಾರೆಂಬುದನ್ನು ಮತ್ತು ಪರಿಶುದ್ಧ ಯಾರು ಎಂಬುದನ್ನು ನಾಳೆ ತೋರಿಸುವರು. ಅವರು ಯಾರನ್ನು ಆಯ್ದುಕೊಳ್ಳುವರೋ, ಅವರನ್ನು ಹತ್ತಿರ ಬರಮಾಡಿಕೊಳ್ಳುವರು. ನೀವು ಇದನ್ನು ಮಾಡಿರಿ: ಕೋರಹನೂ, ಅವನ ಸಮೂಹವೆಲ್ಲವೂ ಧೂಪ ಸುಡುವ ಪಾತ್ರೆಗಳನ್ನು ತೆಗೆದುಕೊಂಡು, ನಾಳೆ ಅವುಗಳಲ್ಲಿ ಬೆಂಕಿಯನ್ನು ಹಾಕಿ, ಅವುಗಳ ಮೇಲೆ ಧೂಪವನ್ನು ಯೆಹೋವ ದೇವರ ಮುಂದೆ ಹಾಕಿರಿ. ಆಗ ಯೆಹೋವ ದೇವರು ಯಾವನನ್ನು ಆಯ್ದುಕೊಳ್ಳುವರೋ ಅವನೇ ಪರಿಶುದ್ಧನಾಗಿರುವನು. ಲೇವಿಯರೇ, ನೀವು ಬಹಳ ಮಿತಿಮೀರಿ ಹೋಗುತ್ತಿರುವಿರಿ,” ಎಂದನು.
ಮೋಶೆಯು ಕೋರಹನಿಗೆ, “ಲೇವಿಯ ಪುತ್ರರೇ, ಈಗ ಕೇಳಿರಿ. ಯೆಹೋವ ದೇವರ ಗುಡಾರದ ಸೇವೆಯನ್ನು ಮಾಡುವುದಕ್ಕೂ, ಸಮೂಹದ ಮುಂದೆ ಇರುವ ಅವರ ಸೇವೆಯಲ್ಲಿ ನಿಲ್ಲುವುದಕ್ಕೂ ಇಸ್ರಾಯೇಲರ ದೇವರು ನಿಮ್ಮನ್ನು ಹತ್ತಿರ ಬರಮಾಡಿಕೊಳ್ಳುವ ವಿಷಯದಲ್ಲಿ ಇಸ್ರಾಯೇಲರೊಳಗಿಂದಲೇ ನಿಮ್ಮನ್ನು ಪ್ರತ್ಯೇಕಿಸಿದ್ದು, ನಿಮಗೆ ಅಲ್ಪವಾಗಿ ತೋರಿತೋ? 10 ದೇವರು ನಿನ್ನನ್ನೂ, ನಿನ್ನ ಸಂಗಡ ಲೇವಿಯ ಪುತ್ರರಾದ ನಿನ್ನ ಸಹೋದರರೆಲ್ಲರನ್ನೂ ತಮ್ಮ ಹತ್ತಿರ ಬರಮಾಡಿಕೊಂಡಿದ್ದಾರೆ. ನೀವು ಯಾಜಕತ್ವವನ್ನು ಸಹ ಹುಡುಕುತ್ತೀರೋ? 11 ಈ ಕಾರಣದಿಂದ ನೀನೂ, ನಿನ್ನ ಸಮಸ್ತ ಗುಂಪು ಯೆಹೋವ ದೇವರಿಗೆ ವಿರೋಧವಾಗಿ ಒಟ್ಟಾಗಿ ಕೂಡಿಕೊಂಡಿರಿ. ನೀವು ಆರೋನನಿಗೆ ವಿರೋಧವಾಗಿ ಗೊಣಗುಟ್ಟುವುದು ಯಾಕೆ?” ಎಂದು ಹೇಳಿದನು.
12 ಆಗ ಮೋಶೆ ಎಲೀಯಾಬನ ಪುತ್ರರಾದ ದಾತಾನನನ್ನೂ, ಅಬೀರಾಮನನ್ನೂ ಕರೆಯಕಳುಹಿಸಿದನು. ಆದರೆ ಅವರು, “ನಾವು ಬರುವುದಿಲ್ಲ. 13 ನೀನು ಮರುಭೂಮಿಯಲ್ಲಿ ನಮ್ಮನ್ನು ಸಾಯಿಸುವುದಕ್ಕೆ ಹಾಲೂ ಜೇನೂ ಹರಿಯುವ ದೇಶದೊಳಗಿಂದ ನಮ್ಮನ್ನು ಹೊರಕ್ಕೆ ಕರೆದುಕೊಂಡು ಬಂದದ್ದು ನಿನಗೆ ಸಾಕಾಗಲಿಲ್ಲವೋ? ನೀನು ಅರಸನಾಗಿ ನಮ್ಮನ್ನು ಆಳಬೇಕೋ? 14 ಅಷ್ಟುಮಾತ್ರವಲ್ಲದೆ, ನೀನು ನಮ್ಮನ್ನು ಹಾಲೂ ಜೇನೂ ಹರಿಯುವ ದೇಶಕ್ಕೆ ತೆಗೆದುಕೊಂಡು ಬರಲಿಲ್ಲ. ಹೊಲಗಳನ್ನೂ ದ್ರಾಕ್ಷಿತೋಟಗಳನ್ನೂ ನಮಗೆ ಸ್ವಾಧೀನಕ್ಕೆ ಕೊಡಲಿಲ್ಲ. ಈ ಮನುಷ್ಯರ ಕಣ್ಣಿಗೆ ಮಣ್ಣು ಹಾಕಬೇಕೆಂದಿದ್ದೀಯೋ? ನಾವು ಬರುವುದಿಲ್ಲ!” ಎಂದರು.
15 ಆಗ ಮೋಶೆಯು ಬಹಳವಾಗಿ ಕೋಪಿಸಿಕೊಂಡು ಯೆಹೋವ ದೇವರಿಗೆ, “ಅವರ ಬಲಿಯನ್ನು ನೀವು ಗೌರವಿಸಬೇಡಿ, ನಾನು ಅವರಿಂದ ಒಂದು ಕತ್ತೆಯನ್ನಾದರೂ ತೆಗೆದುಕೊಳ್ಳಲಿಲ್ಲ. ಅವರಲ್ಲಿ ಒಬ್ಬನಿಗಾದರೂ ಕೇಡು ಮಾಡಲಿಲ್ಲ,” ಎಂದು ಹೇಳಿದನು.
16 ಮೋಶೆಯು ಕೋರಹನಿಗೆ, “ನೀನೂ, ನಿನ್ನ ಸಮೂಹವೆಲ್ಲವೂ ಯೆಹೋವ ದೇವರ ಎದುರಿನಲ್ಲಿ ಇರಬೇಕು. ನೀನೂ, ಅವರೂ, ಆರೋನನೂ ನಾಳೆ ಬಂದು, 17 ಒಬ್ಬೊಬ್ಬನು ತನ್ನ ತನ್ನ ಧೂಪ ಪಾತ್ರೆಯನ್ನು ತೆಗೆದುಕೊಂಡು ಅವುಗಳಲ್ಲಿ ಧೂಪವನ್ನು ಹಾಕಿ, ಒಬ್ಬನಿಗೆ ಒಂದರ ಪ್ರಕಾರ ಇನ್ನೂರ ಐವತ್ತು ಧೂಪ ಪಾತ್ರೆಗಳಾದ ನಿಮ್ಮ ಧೂಪ ಪಾತ್ರೆಗಳನ್ನು ಯೆಹೋವ ದೇವರ ಎದುರಿಗೆ ತನ್ನಿರಿ. ನೀನೂ, ಆರೋನನೂ, ನಿಮ್ಮ ನಿಮ್ಮ ಧೂಪದ ಪಾತ್ರೆಗಳನ್ನು ತೆಗೆದುಕೊಂಡು ಬನ್ನಿರಿ,” ಎಂದನು. 18 ಆಗ ಅವರು ತಮ್ಮ ತಮ್ಮ ಧೂಪ ಪಾತ್ರೆಗಳನ್ನು ತೆಗೆದುಕೊಂಡು ಅವುಗಳ ಮೇಲೆ ಬೆಂಕಿಯನ್ನು ಹಾಕಿ, ಧೂಪವನ್ನು ಅದರ ಮೇಲೆ ಹಾಕಿ, ದೇವದರ್ಶನ ಗುಡಾರದ ಬಾಗಿಲಿನ ಮುಂದೆ ಮೋಶೆ ಆರೋನರ ಸಂಗಡ ನಿಂತರು. 19 ಕೋರಹನು ಅವರಿಗೆ ಎದುರಾಗಿ ಸಮಸ್ತ ಸಮೂಹವನ್ನು ದೇವದರ್ಶನ ಗುಡಾರದ ಬಾಗಿಲಿನ ಹತ್ತಿರ ಕೂಡಿಸಿದನು. ಆಗ ಯೆಹೋವ ದೇವರ ಮಹಿಮೆಯು ಸಮಸ್ತ ಸಮೂಹಕ್ಕೆ ತೋರಿಬಂತು. 20 ಯೆಹೋವ ದೇವರು ಮೋಶೆ ಆರೋನನ ಸಂಗಡ ಮಾತನಾಡಿ, 21 “ಈ ಜನರ ಮಧ್ಯದೊಳಗಿಂದ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ. ನಾನು ಅವರನ್ನು ಕ್ಷಣಮಾತ್ರದಲ್ಲಿ ದಹಿಸಿಬಿಡುತ್ತೇನೆ,” ಎಂದರು.
22 ಆಗ ಅವರು ಬೋರಲು ಬಿದ್ದು, “ದೇವರೇ, ಎಲ್ಲಾ ಮಾನವರ ಆತ್ಮಗಳ ದೇವರೇ, ಒಬ್ಬ ಮನುಷ್ಯನ ಪಾಪದ ದೆಸೆಯಿಂದ ನೀವು ಸಮಸ್ತ ಸಭೆಯ ಮೇಲೆ ಕೋಪಿಸಿಕೊಳ್ಳುತ್ತೀರೋ?” ಎಂದರು.
23 ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, 24 “ನೀನು ಜನರ ಸಮೂಹಕ್ಕೆ, ‘ಕೋರಹ, ದಾತಾನ್, ಅಬೀರಾಮರ ನಿವಾಸದ ಸುತ್ತಲಿಂದ ದೂರವಿರಬೇಕು,’ ಎಂದು ಅವರಿಗೆ ಆಜ್ಞಾಪಿಸು,” ಎಂದರು.
25 ಮೋಶೆಯು ಎದ್ದು ದಾತಾನ್, ಅಬೀರಾಮರ ಬಳಿಗೆ ಹೋದನು. ಇಸ್ರಾಯೇಲರ ಹಿರಿಯರು ಅವನ ಹಿಂದೆ ಹೋದರು. 26 ಅವನು ಸಮೂಹದವರಿಗೆ, “ನೀವು ಈ ದುಷ್ಟ ಮನುಷ್ಯರ ಡೇರೆಗಳ ಬಳಿಯಿಂದ ತೊಲಗಿಹೋಗಿರಿ. ನೀವು ಅವರ ಎಲ್ಲಾ ಪಾಪಗಳ ದೆಸೆಯಿಂದ ನಾಶವಾಗದಂತೆ ಅವರಿಗಿರುವ ಯಾವುದನ್ನು ಮುಟ್ಟಬೇಡಿರಿ,” ಎಂದನು. 27 ಆಗ ಅವರು ಕೋರಹನ ದಾತಾನ್, ಅಬೀರಾಮರ ಡೇರೆಗಳ ಸುತ್ತಲಿಂದ ದೂರ ಹೋದರು. ದಾತಾನನೂ, ಅಬೀರಾಮನೂ ತಮ್ಮ ಹೆಂಡತಿಯರೂ, ಪುತ್ರರೂ, ಚಿಕ್ಕ ಮಕ್ಕಳೂ ತಮ್ಮ ಗುಡಾರಗಳ ಬಾಗಿಲುಗಳಲ್ಲಿ ನಿಂತುಕೊಂಡರು.
28 ಆಗ ಮೋಶೆಯು, “ಈ ಕಾರ್ಯಗಳನ್ನೆಲ್ಲಾ ಮಾಡುವುದಕ್ಕೆ ಯೆಹೋವ ದೇವರು ನನ್ನನ್ನು ಕಳುಹಿಸಿದ್ದಾರೆ, ಅವುಗಳು ನನ್ನ ಸ್ವಂತ ಆಲೋಚನೆಗಳಂತೆ ಮಾಡಲಿಲ್ಲ ಎಂದು ನೀವು ಇದರಿಂದ ತಿಳಿದುಕೊಳ್ಳುವಿರಿ. 29 ಇವರು ಎಲ್ಲಾ ಮನುಷ್ಯರ ಹಾಗೆ ಸತ್ತರೆ, ಇಲ್ಲವೆ ಎಲ್ಲಾ ಮನುಷ್ಯರ ಶಿಕ್ಷೆ ಇವರಿಗೂ ಪ್ರಾಪ್ತವಾದರೆ ಯೆಹೋವ ದೇವರು ನನ್ನನ್ನು ಕಳುಹಿಸಲಿಲ್ಲ. 30 ಆದರೆ ಯೆಹೋವ ದೇವರು ಹೊಸದನ್ನು ಮಾಡಿ, ಭೂಮಿಯು ತನ್ನ ಬಾಯಿತೆರೆದು, ಇವರನ್ನೂ, ಇವರಿಗಿರುವ ಎಲ್ಲದನ್ನೂ ನುಂಗಿ, ಇವರು ತೀವ್ರವಾಗಿ ಪಾತಾಳಕ್ಕೆ ಇಳಿಯುವಂತೆ ಮಾಡಿ, ಈ ಮನುಷ್ಯರು ಯೆಹೋವ ದೇವರನ್ನು ರೇಗಿಸಿದ್ದಾರೆಂದು ನೀವು ತಿಳಿದುಕೊಳ್ಳುವಿರಿ,” ಎಂದನು.
31 ಅವನು ಹೇಳ ಬೇಕಾದವುಗಳನ್ನೆಲ್ಲಾ ಹೇಳಿ ಮುಗಿಸಿದಾಗಲೇ, ಅವರ ಕೆಳಗಿರುವ ನೆಲವು ಸೀಳಿ 32 ಭೂಮಿಯು ತನ್ನ ಬಾಯಿತೆರೆದು, ಅವರನ್ನೂ, ಅವರ ಮನೆಗಳನ್ನೂ, ಕೋರಹನಿಗೆ ಸಂಬಂಧಪಟ್ಟ ಸಕಲ ಜನರನ್ನೂ, ಅವರಿಗಿದ್ದದ್ದನ್ನೆಲ್ಲಾ ನುಂಗಿಬಿಟ್ಟಿತು. 33 ಅವರು ತಮಗೆ ಸಂಬಂಧಪಟ್ಟವುಗಳೆಲ್ಲವುಗಳ ಸಂಗಡ ಸಜೀವಿಗಳಾಗಿ ಪಾತಾಳಕ್ಕೆ ಇಳಿದರು. ಭೂಮಿಯು ಅವರ ಮೇಲೆ ಮುಚ್ಚಿಕೊಂಡಿತು. ಹೀಗೆ ಅವರು ಸಭೆಯ ಮಧ್ಯದೊಳಗಿಂದ ನಾಶವಾದರು. 34 ಆಗ ಅವರ ಸುತ್ತಲಿದ್ದ ಇಸ್ರಾಯೇಲರೆಲ್ಲರೂ ಓಡಿಹೋದರು, ಏಕೆಂದರೆ ಅವರು, “ಭೂಮಿಯು ನಮ್ಮನ್ನು ಸಹ ನುಂಗಿಬಿಟ್ಟೀತು,” ಎಂದು ಹೆದರಿದರು.
35 ಯೆಹೋವ ದೇವರ ಬಳಿಯಿಂದ ಬೆಂಕಿಯು ಹೊರಟು, ಧೂಪವನ್ನು ಅರ್ಪಿಸಿದ ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು.
36 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, 37 “ಯಾಜಕನಾದ ಆರೋನನ ಮಗ ಎಲಿಯಾಜರನಿಗೆ, ಧೂಪದ ಪಾತ್ರೆಗಳು ಪರಿಶುದ್ಧವಾಗಿರುವುದರಿಂದ ಸುಟ್ಟುಹೋದವರ ಮಧ್ಯದಿಂದ ಅವನು ಅವುಗಳನ್ನು ಎತ್ತಬೇಕು. ಆ ಬೆಂಕಿಯನ್ನು ದೂರ ಚೆಲ್ಲು. 38 ತಮ್ಮ ಪ್ರಾಣಕ್ಕೆ ವಿರೋಧವಾಗಿ ಪಾಪಮಾಡಿದ ಮನುಷ್ಯರ ಧೂಪದ ಪಾತ್ರೆಗಳನ್ನು ಬಲಿಪೀಠವನ್ನು ಮುಚ್ಚತಕ್ಕ ಅಗಲವಾದ ತಗಡುಗಳನ್ನಾಗಿ ಮಾಡಬೇಕು. ಏಕೆಂದರೆ ಅವುಗಳನ್ನು ಯೆಹೋವ ದೇವರ ಸಮ್ಮುಖದಲ್ಲಿ ಅರ್ಪಿಸಿದ ಕಾರಣ ಅವು ಪರಿಶುದ್ಧವಾದವುಗಳು. ಇಸ್ರಾಯೇಲರಿಗೆ ಅವು ಗುರುತುಗಳಾಗಿರಬೇಕು,” ಎಂದರು.
39 ಆಗ ಯಾಜಕನಾದ ಎಲಿಯಾಜರನು ಯೆಹೋವ ದೇವರು ಮೋಶೆಯ ಮೂಲಕ ಹೇಳಿದ ಅಪ್ಪಣೆಯ ಪ್ರಕಾರ ಸುಟ್ಟು ಹೋದವರು ಅರ್ಪಿಸಿದ ಕಂಚಿನ ಧೂಪದ ಪಾತ್ರೆಗಳನ್ನು ತೆಗೆದುಕೊಂಡು, ಬಲಿಪೀಠವನ್ನು ಮುಚ್ಚುವುದಕ್ಕಾಗಿ ಅವುಗಳನ್ನು ಅಗಲವಾದ ತಗಡುಗಳನ್ನಾಗಿ ಮಾಡಿದನು. 40 ಆರೋನನ ಸಂತಾನವಲ್ಲದ ಪರಕೀಯನು ಯೆಹೋವ ದೇವರ ಸಮ್ಮುಖದಲ್ಲಿ ಧೂಪವನ್ನು ಅರ್ಪಿಸಬಾರದು, ಅರ್ಪಿಸಿದರೆ ಕೋರಹ ಮತ್ತು ಅವನ ಸಮೂಹಕ್ಕೆ ಆದ ಸ್ಥಿತಿಯೇ ಇವರಿಗೂ ಉಂಟಾಗುವುದೆಂಬುದನ್ನು ಇಸ್ರಾಯೇಲರಿಗೆ ಜ್ಞಾಪಿಸುವದಕ್ಕಾಗಿ ಅದು ಗುರುತಾಯಿತು.
41 ಆದರೆ ಮರುದಿನದಲ್ಲಿ ಇಸ್ರಾಯೇಲರ ಸಮೂಹವೆಲ್ಲಾ ಮೋಶೆಗೆ ವಿರೋಧವಾಗಿಯೂ ಆರೋನನಿಗೆ ವಿರೋಧವಾಗಿಯೂ ಗೊಣಗುಟ್ಟುತ್ತಾ, “ನೀವು ಯೆಹೋವ ದೇವರ ಜನರನ್ನು ಕೊಂದುಹಾಕಿದ್ದೀರಿ,” ಎಂದರು.
42 ಜನರು ಮೋಶೆಗೂ ಆರೋನನಿಗೂ ವಿರೋಧವಾಗಿ ಕೂಡಿಕೊಂಡಾಗ, ಅವರು ದೇವದರ್ಶನ ಗುಡಾರದ ಕಡೆಗೆ ನೋಡಲಾಗಿ, ಮೇಘವು ಅದನ್ನು ಮುಚ್ಚಿಕೊಂಡು, ಯೆಹೋವ ದೇವರ ಮಹಿಮೆಯು ಕಾಣಬಂತು. 43 ಮೋಶೆಯೂ ಆರೋನನೂ ದೇವದರ್ಶನ ಗುಡಾರದ ಮುಂದೆ ಬಂದರು. 44 ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, 45 “ನೀನು ಈ ಜನರ ಮಧ್ಯದಿಂದ ಎದ್ದು ಬಾ. ನಾನು ಅವರನ್ನು ಕ್ಷಣಮಾತ್ರದಲ್ಲಿ ದಹಿಸಿಬಿಡುತ್ತೇನೆ,” ಎಂದರು. ಆಗ ಅವರಿಬ್ಬರು ಬೋರಲು ಬಿದ್ದರು.
46 ಮೋಶೆಯು ಆರೋನನಿಗೆ, “ನೀನು ಧೂಪದ ಪಾತ್ರೆಯನ್ನು ತೆಗೆದುಕೊಂಡು, ಅದರ ಮೇಲೆ ಬಲಿಪೀಠದ ಬೆಂಕಿಯನ್ನು ಇಟ್ಟು, ಧೂಪ ಹಾಕಿ, ಶೀಘ್ರವಾಗಿ ಜನರೊಳಗೆ ಹೋಗಿ, ಅವರಿಗೋಸ್ಕರ ಪ್ರಾಯಶ್ಚಿತ್ತವನ್ನು ಮಾಡು. ಏಕೆಂದರೆ ಯೆಹೋವ ದೇವರ ಸಮ್ಮುಖದಿಂದ ಕೋಪವು ಹೊರಟು, ಅವರೊಳಗೆ ವ್ಯಾಧಿಯು ಪ್ರಾರಂಭವಾಯಿತು,” ಎಂದನು. 47 ಆರೋನನು, ಮೋಶೆಯು ಹೇಳಿದ ಹಾಗೆ ಅದನ್ನು ತೆಗೆದುಕೊಂಡು, ಜನಸಮೂಹದ ಮಧ್ಯಕ್ಕೆ ಓಡಿಬಂದನು. ಆಗ ವ್ಯಾಧಿಯು ಜನರೊಳಗೆ ಪ್ರಾರಂಭವಾಗಿತ್ತು. ಅವನು ಧೂಪವನ್ನು ಇಟ್ಟು, ಜನರಿಗೋಸ್ಕರ ಪ್ರಾಯಶ್ಚಿತ್ತ ಮಾಡಿದನು. 48 ಅವನು ಸತ್ತವರಿಗೂ ಜೀವವುಳ್ಳವರಿಗೂ ಮಧ್ಯ ನಿಂತುಕೊಂಡದ್ದರಿಂದ ವ್ಯಾಧಿಯು ಶಮನವಾಯಿತು. 49 ಕೋರಹನ ನಿಮಿತ್ತ ಸತ್ತು ಹೋದವರ ಹೊರತಾಗಿ ವ್ಯಾಧಿಯಲ್ಲಿ ಸತ್ತವರು ಹದಿನಾಲ್ಕು ಸಾವಿರ ಏಳು ನೂರು ಮಂದಿಯಾಗಿದ್ದರು. 50 ಆ ವ್ಯಾಧಿಯು ನಿಂತು ಹೋದಾಗ ಆರೋನನು ದೇವದರ್ಶನ ಗುಡಾರದ ಬಾಗಿಲಿನ ಬಳಿಯಲ್ಲಿದ್ದ ಮೋಶೆಯ ಬಳಿಗೆ ಹಿಂದಿರುಗಿ ಬಂದನು.